ದಲಿತರು ಒಗ್ಗಟ್ಟಾದರೆ ಒಂದು ಕೋಟಿ, ಛಿದ್ರಗೊಂಡರೆ ಕಾಯುತ್ತಿದೆ ಚಾಟಿ.. ಹೋಗೋಣ ಬೆಂಗಳೂರಿಗೆ, ಅಂಬೇಡ್ಕರ್ ದಾರಿಗೆ, ಹೋರಾಟದ ತೇರಿಗೆ, ಸಮಾನತೆಯ ಬೆಳಕಿಗೆ… ಕೋಮುವಾದಿ ಕೂಟದಿಂದ ಸಂವಿಧಾನಕ್ಕೆ ಆಪತ್ತು, ದಮನಿತರ ಒಗ್ಗಟ್ಟಿನಿಂದ ಭಾರತಕ್ಕೆ ತಾಕತ್ತು.. ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ, ನೊಂದವರ ಐಕ್ಯ ಹೋರಾಟ, ಇಂದಲ್ಲ ನಾಳೆ ಫಲ ಕೊಡುತ್ತದೆ.. ಸಂಬಂಜ ಅನ್ನೋದು ದೊಡ್ಡದು ಕನಾ.. ಈ ರೀತಿಯ ವೈವಿಧ್ಯಮಯ, ವಿಚಾರಪೂರ್ಣ ಮಾಹಿತಿಗಳುಳ್ಳ ಪೋಸ್ಟರ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಕರ್ನಾಟಕದ ಎಲ್ಲಾ ದಲಿತ ಸಂಘಟನೆಗಳೂ ಒಗ್ಗೂಡಿ ಹೋರಾಡುವ ಐತಿಹಾಸಿಕ ಸಂದರ್ಭ ಸನ್ನಿಹಿತವಾಗಿದೆ. ಹಲವು ಹಂತದ ಮಾತುಕತೆ, ಚರ್ಚೆ ಮೂಲಕ 12 ಪ್ರಮುಖ ದಲಿತ ಸಂಘಟನೆಗಳ ಮುಖಂಡರು ನಡೆಸಿದ ಪ್ರಯತ್ನದ ಭಾಗವಾಗಿ ‘ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ’ ರೂಪುಗೊಂಡಿದೆ ಎಂದು ಹಿರಿಯ ಚಿಂತಕರಾದ ಇಂದೂಧರ ಹೊನ್ನಾಪುರರವರು ಘೋಷಿಸಿದ್ದರು. ಸಮಿತಿಯ ಮೊದಲ ಐಕ್ಯ ಕಾರ್ಯಕ್ರಮ ಡಿಸೆಂಬರ್ 6 ರಂದು ಡಾ.ಬಿ.ಆರ್ ಅಂಬೇಡ್ಕರ್ರವರ 66ನೇ ಪರಿನಿಬ್ಬಾಣದ ದಿನದಂದು ನಡೆಯಲಿದೆ.
ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ ಆಶಯಗಳನ್ನು ನಾಶ ಮಾಡುತ್ತಿರುವ ಆರ್ಎಸ್ಎಸ್-ಬಿಜೆಪಿ ದುರಾಡಳಿತದ ವಿರುದ್ಧ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ‘ದಲಿತರ ಸಾಂಸ್ಕೃತಿಕ ಪ್ರತಿರೋಧ – ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶ’ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜರುಗಲಿದೆ.
ದಲಿತ ಮುಖಂಡರಾದ ಎನ್, ವೆಂಕಟೇಶ್, ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರಗೋಡು, ವಿ.ನಾಗರಾಜ್, ಡಾ.ಡಿ.ಜಿ ಸಾಗರ್, ಲಕ್ಷ್ಮೀನಾರಾಯಣ ನಾಗವಾರ, ಅಣ್ಣಯ್ಯ, ಅರ್ಜುನ ಭದ್ರೆ, ಎನ್ ಮುನಿಸ್ವಾಮಿ, ಎಂ.ಸೋಮಶೇಖರ್, ಜಿಗಣಿ ಶಂಕರ್ ಮತ್ತು ಎಸ್.ಆರ್ ಕೊಲ್ಲೂರುರವರು ಸಮಾವೇಶದ ಮುಂದಾಳತ್ವ ವಹಿಸಿದ್ದಾರೆ.
ಅಲ್ಲದೆ ದೇವನೂರ ಮಹಾದೇವ, ಎಸ್.ಮರಿಸ್ವಾಮಿ, ಇಂದೂಧರ ಹೊನ್ನಾಪುರ, ರಾಮದೇವ ರಾಕೆ, ಕೆ.ರಾಮಯ್ಯ, ಶಿವಾಜಿ ಗಣೇಶನ್, ಹೆಚ್.ಎಂ ರುದ್ರಸ್ವಾಮಿ, ಲಕ್ಷ್ಮೀಪತಿ ಕೋಲಾರ, ಮಂಗ್ಳೂರ ವಿಜಯ, ಹುಲ್ಕೆರೆ ಮಹಾದೇವ, ಬಾಬು ಬಂಡಾರಿಗಲ್, ಕೆ.ದೊರೈರಾಜ್, ಸಿ.ಬಸವಲಿಂಗಯ್ಯ, ಹೆಚ್, ಜನಾರ್ಧನ್ ಜನ್ನಿ, ಕುಪ್ಪೆ ನಾಗರಾಜ್, ಗಂಗಮ್ಮ ತುಮಕೂರು, ಭಾರತಿ ರಾಜಣ್ಣ, ಪುರುಷೋತ್ತಮ್ ದಾಸ್, ಸಿ.ಜಿ ಶ್ರೀನಿವಾಸ್, ಪಿಚ್ಚಳ್ಳಿ ಶ್ರೀನಿವಾಸ್ ಮತ್ತು ಗೊಲ್ಲಹಳ್ಳಿ ಶಿವಪ್ರಸಾದ್ರವರು ಸಮಿತಿಯ ಜೊತೆಗಿದ್ದಾರೆ.
ಖಾಸಗೀಕರಣ, ಕಾರ್ಪೊರೇಟ್ ಕಂಪನಿಗಳ ಹಿಡಿತದಿಂದ ಮೀಸಲಾತಿಯ ಅಸ್ತಿತ್ವ ನಾಶವಾಗುತ್ತಿದ್ದರೆ, ಮತ್ತೊಂದೆಡೆ ದಲಿತ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಕಡಿತ, ಪಠ್ಯಗಳ ಕೇಸರಿಕರಣ ನಡೆಯುತ್ತಿದೆ. ಅದೇ ಸಮಯದಲ್ಲಿ ಪ್ರಬುದ್ಧ ಭಾರತವನ್ನು ಕಟ್ಟಿ ಬೆಳೆಸಿದ ತಳ ಸಮುದಾಯಗಳ ವೈವಿಧ್ಯಮತ ಸಂಸ್ಕೃತಿ, ಆಚರಣೆಗಳನ್ನು ಬಲಿಕೊಟ್ಟು ಬ್ರಾಹ್ಮಣ್ಯ ತಾರತಮ್ಯ ಮೆರೆಯುತ್ತಿದೆ. ಇಂತಹ ಸಮಯದಲ್ಲಿ ಬ್ರಾಹ್ಮಣ್ಯವಾದ ಮತ್ತು ಬಂಡವಾಳವಾದವನ್ನು ಧಿಕ್ಕರಿಸುವುದಕ್ಕಾಗಿ, ಅಂಬೇಡ್ಕರ್ರವರ ಹೋರಾಟದ ಫಲವಾಗಿ ದಕ್ಕಿದ ಹಕ್ಕುಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಡಿ.6 ರಂದು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನಲ್ಲಿ ದಲಿತರ ಸಾಂಸ್ಕೃತಿಕ ಪ್ರತಿರೋಧ ಕಾರ್ಯಕ್ರಮ ನಡೆಯುತ್ತಿದೆ.
ಇದನ್ನೂ ಓದಿ: ಮೀಸಲಾತಿಯ ಉದ್ದೇಶ ಬಡತನ ನಿರ್ಮೂಲನೆಯಲ್ಲ: EWS ಮೀಸಲಾತಿ ವಿರುದ್ಧ ದಸಂಸ ಖಂಡನೆ