Homeಮುಖಪುಟಪಕ್ಷಾಂತರದ ‘ಮಹಿಮೆ’: ಬಂಗಾಳದ ಬಿಜೆಪಿ ಕಚೇರಿಗಳಲ್ಲಿ ಹೊಡೆದಾಟ, ಬೀದಿ ರಂಪಾಟ, ವಾಹನಗಳಿಗೆ ಬೆಂಕಿ!

ಪಕ್ಷಾಂತರದ ‘ಮಹಿಮೆ’: ಬಂಗಾಳದ ಬಿಜೆಪಿ ಕಚೇರಿಗಳಲ್ಲಿ ಹೊಡೆದಾಟ, ಬೀದಿ ರಂಪಾಟ, ವಾಹನಗಳಿಗೆ ಬೆಂಕಿ!

ಟಿಎಂಸಿಯಿಂದ ಬಿಜೆಪಿಗೆ ಸೇರ್ಪಡೆಗೊಂಡವರು ಮತ್ತು ಅಲ್ಲಿನ ಮೂಲ ಬಿಜೆಪಿಗರ ನಡುವೆ ಕಿತ್ತಾಟ ನಡೆಯುತ್ತಿದ್ದು, ಸದ್ಯ ಎರಡು ಬಿಜೆಪಿ ಕಚೇರಿಗಳಲ್ಲಿ ಇದು ತಾರಕಕ್ಕೆ ಮುಟ್ಟಿದ ಘಟನೆ ಗುರುವಾರ ನಡೆದಿದೆ.

- Advertisement -
- Advertisement -

ಪಶ್ಚಿಮ ಬಂಗಾಳದ ಅಸಾನ್‌ಸೋಲ್‌ನಲ್ಲಿ ಬಿಜೆಪಿ ಪಕ್ಷದ ಕಚೇರಿಯಲ್ಲಿ ಬಾಗಿಲು ಮುಚ್ಚಿ ನಡೆಸಿದ ವಿಶೇಷ ಸಭೆಯಲ್ಲಿ ಟಿಎಂಸಿಯಿಂದ ಬಂದವರು ಮತ್ತು ಮೂಲ ಬಿಜೆಪಿಗರ ನಡುವೆ ಹೊಡೆದಾಟ ಸಂಭವಿಸಿದೆ. ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಮತ್ತು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅತುಲ್ ಮೆನನ್ ಸಮ್ಮುಖದಲ್ಲೇ ಈ ಬಡಿದಾಟ ನಡೆದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಬುರ್ದ್ವಾನ್ ಪಟ್ಟಣದಲ್ಲಿ ಬಿಜೆಪಿ ಕಚೇರಿ ಹೊರಗೆ ಬೀದಿಯಲ್ಲಿಯೇ ಕಾರ್ಯಕರ್ತರ ನಡುವೆ ಬಡಿದಾಟ ನಡೆದಿದ್ದು, ಪಾರ್ಟಿ ಕಚೇರಿಯ ಮೇಲೆ ಕಲ್ಲು ತೂರಲಾಗಿದೆ ಮತ್ತು ಕಚೇರಿ ಹೊರಗೆ ನಿಲ್ಲಿಸಿದ್ದ ಬೈಕ್ ಮತ್ತು ಇತರ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಮಧ್ಯಪ್ರವೇಶಿಸಿದ ಪೊಲೀಸರ ಜೊತೆಯೂ ಘರ್ಷಣೆ ನಡೆದಿದೆ.

ಮೂರು ತಿಂಗಳಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ಇರುವ ಕಾರಣ, ಆಂತರಿಕ ದ್ವೇಷವು ಪಕ್ಷದ ಉನ್ನತ ನಾಯಕರಿಗೆ ಕಳವಳ ಮೂಡಿಸಿದೆ. ಇದು ಪಕ್ಷದ ಶಿಸ್ತನ್ನು ಹಾಳು ಮಾಡುವುದಷ್ಟೇ ಅಲ್ಲ, “ಬಿಜೆಪಿಯ ಟಿಎಂಸಿಕರಣ”ದ ಪ್ರಕ್ರಿಯೆಯಿಂದ ನಷ್ಟವೂ ಸಂಭವಿಸಬಹುದು ಎಂದು ಬಿಜೆಪಿ ನಾಯಕರು ಆತಂಕಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.

“ಬಿಜೆಪಿ ಟಿಎಂಸಿ ಜನರಿಂದ ತುಂಬಿ ಹೋದರೆ, ನಮ್ಮ ಬಿಜೆಪಿ ಟಿಎಂಸಿ ‘ಟೀಮ್ ಬಿ’ಯಂತೆ ಕಾಣಲು ಪ್ರಾರಂಭಿಸಿದರೆ, ಟಿಎಂಸಿಯನ್ನು ತಿರಸ್ಕರಿಸಲು ಮತ್ತು ಬಿಜೆಪಿಗೆ ಮತ ಚಲಾಯಿಸಲು ಬಯಸುವ ಮತದಾರರು ಎರಡು ಬಾರಿ ಯೋಚಿಸಬಹುದು” ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ. ಮುಂಬರುವ ಚುನಾವಣೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 200 ಸ್ಥಾನಗಳ ಗುರಿಯನ್ನು ರಾಜ್ಯ ಬಿಜೆಪಿಗೆ ನಿಗದಿಪಡಿಸಿದ್ದನ್ನು ಇಲ್ಲಿ ಗಮನಿಸಬೇಕು.

ದೆಹಲಿಯಲ್ಲಿ ಇತ್ತೀಚೆಗೆ ನಡೆದ ಪಕ್ಷದ ಸಭೆಗಳಲ್ಲಿ, ಬಿಜೆಪಿಗೆ ಯಾರು ಸೇರಬಹುದು ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಗುರುವಾರ ಪೂರ್ವ ಬುರ್ದ್ವಾನ್‌ನ ಕಾಂಕ್ಸಾ, ಆಸ್ಗ್ರಾಮ್, ಮಂಗಲ್‌ಕೋಟ್, ಕಟ್ವಾ ಮತ್ತು ಇತರ ಸ್ಥಳಗಳಿಂದ ಹಲವಾರು ಬಿಜೆಪಿ ಕಾರ್ಯಕರ್ತರು ಪಕ್ಷದ ಬುರ್ದ್ವಾನ್ ಪಟ್ಟಣ ಕಚೇರಿಯ ಮುಂದೆ ಜಮಾಯಿಸಿ ಜಿಲ್ಲಾ ಮುಖ್ಯಸ್ಥ ಸಂದೀಪ್ ನಂದಿ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು ಮತ್ತು ಸಂದೀಪ್ ನಂದಿಯವರನ್ನು ತಕ್ಷಣ ತೆಗೆದುಹಾಕುವಂತೆ ಒತ್ತಾಯಿಸಿದರು. ಆಗ ಬುರ್ದ್ವಾನ್‌ನಲ್ಲಿ ಗೊಂದಲ ಉಂಟಾಯಿತು.

ಮೂಲಗಳ ಪ್ರಕಾರ, ಕಚೇರಿಯೊಳಗಿದ್ದ ನಂದಿಗೆ ನಿಷ್ಠರಾಗಿರುವ ಬಣವು ಕಚೇರಿಯ ಮಾಳಿಗೆ ಹತ್ತಿ ಪ್ರತಿಭಟಿಸುತ್ತಿದ್ದ ಭಿನ್ನಮತೀಯರ ಮೇಲೆ ಕಲ್ಲುಗಳನ್ನು ಎಸೆದರು. ಭಿನ್ನಮತೀಯ ಗುಂಪು ಕೂಡ ಕಚೇರಿಯ ಮೇಲೆ ಕಲ್ಲು ತೂರಾಟ ನಡೆಸಿ, ಕಚೇರಿಯ ಕಿಟಕಿಗಳನ್ನು ಒಡೆದಿದೆ. ಕೆಲವು ಬಿಜೆಪಿ ಕಾರ್ಯಕರ್ತರು ವಾಹನಗಳಿಗೆ ಬೆಂಕಿ ಹಚ್ಚಿದರು.

ಪಕ್ಷವನ್ನು ಕಟ್ಟಲು ತಾವು ರಕ್ತ ಮತ್ತು ಬೆವರು ನೀಡಿದ್ದೇವೆ ಎಂದು ಭಿನ್ನಮತೀಯರ ಗುಂಪು ಹೇಳಿಕೊಂಡಿದೆ. ಆದರೆ ತೃಣಮೂಲದಿಂದ ಬಂದ ಪಕ್ಷಾಂತರಿಗಳನ್ನು ಪ್ರೋತ್ಸಾಹಿಸುತ್ತಿರುವ ಜಿಲ್ಲಾಧ್ಯಕ್ಷ ನಂದಿ ತಮ್ಮನ್ನು ಬದಿಗೊತ್ತಿದ್ದಾರೆ ಎಂದು ಭಿನ್ನಮತೀಯರ ಗುಂಪು (ಮೂಲ ಬಿಜೆಪಿಗರ ಗುಂಪು) ಆರೋಪಿಸಿದೆ.

ಎರಡು ವಾರಗಳ ಹಿಂದೆ ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಬುರ್ದ್ವಾನ್‌ಗೆ ಭೇಟಿ ನೀಡಿ ಬೃಹತ್ ರೋಡ್ ಶೋ ನಡೆಸಿದ್ದರು. ಅವರು ಕಳೆದ ತಿಂಗಳು ಬುರ್ದ್ವಾನ್ ಕಚೇರಿಯನ್ನು ಉದ್ಘಾಟಿಸಿದ್ದರು. ಇದು ಬಣಗಳ ಘರ್ಷಣೆ ಎಂಬುದನ್ನು ಬಿಜೆಪಿ ನಿರಾಕರಿಸಿದೆ.

“ಜೆ.ಪಿ.ನಡ್ಡಾ ಅವರ ಬೃಹತ್ ರ‍್ಯಾಲಿಯನ್ನು ನೀವು ನೋಡಿದ್ದೀರಿ. ತೃಣಮೂಲವು ಈಗ ಭಯಭೀತವಾಗಿದೆ, ಆದ್ದರಿಂದ ಅವರು ಈ ತೊಂದರೆಯನ್ನು ಸೃಷ್ಟಿಸಲು ಸಂಚು ಮಾಡಿದ್ದಾರೆ. ಸ್ಥಳೀಯ ಮುಖಂಡರು ಇದನ್ನು ಯೋಜಿಸಿದ್ದಾರೆ, ಈ ಕಾರ್ಯಾಚರಣೆಯನ್ನು ನಡೆಸಲು ಜನರನ್ನು ನೇಮಿಸಿಕೊಂಡಿದ್ದಾರೆ. ಮಮತಾ ಬ್ಯಾನರ್ಜಿ ಮತ್ತು ‘ಪಿಕೆ’ ತಂಡ ಇದನ್ನು ಮಾಡಿದ್ದಾರೆ. ಆಡಳಿತವು ತನಿಖೆ ನಡೆಸಿ ತಪ್ಪಿಸ್ಥರನ್ನು ಬಂಧಿಸಬೇಕೆಂದು ನಾವು ಬಯಸುತ್ತೇವೆ”ಎಂದು ಬಿಜೆಪಿ ಮುಖಂಡ ರಾಜು ಬ್ಯಾನರ್ಜಿ ಹೇಳಿದ್ದಾರೆ. ತೃಣಮೂಲ ಸಚಿವ ಮತ್ತು ಬುರ್ದ್ವಾನ್ ಜಿಲ್ಲಾ ನಾಯಕ ಸ್ವಪನ್ ದೇಬ್ನಾಥ್ ಇದನ್ನು ನಿರಾಕರಿಸಿದ್ದಾರೆ.

ಇದನ್ನೂ ಓದಿ: ಪ.ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರು ಪೊಲೀಸರ ನಡುವೆ ಘರ್ಷಣೆ: ಒಬ್ಬ ಕಾರ್ಯಕರ್ತನ ಸಾವು – ಬಿಜೆಪಿ ಆರೋಪ

ಅಸಾನ್‌ಸೋಲ್‌ನಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿತ್ತು ಎಂದು ಬಾಬುಲ್ ಸುಪ್ರಿಯೋ ಒಪ್ಪಿಕೊಂಡಿದ್ದಾರೆ. “ಯಾವುದೇ ಕುಟುಂಬದಲ್ಲಿ, ಸಮಸ್ಯೆಗಳಿರುತ್ತವೆ, ಕೋಪವಿರುತ್ತದೆ, ಭಿನ್ನಾಭಿಪ್ರಾವಿದ್ದೇ ಇರುತ್ತದೆ. ನಮ್ಮ ಕಾರ್ಯಕರ್ತರು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅರವಿಂದ್ ಮೆನನ್ ಮತ್ತು ನನ್ನನ್ನು ಒಟ್ಟಿಗೆ ಭೇಟಿಯಾದರು. ಇಂತಹ ಸಭೆ ಆಗಾಗ್ಗೆ ಆಗುವುದಿಲ್ಲ. ಆದ್ದರಿಂದ 10 ರಿಂದ 30 ಜನರು ಒಂದೇ ಸಮಯದಲ್ಲಿ ಮಾತನಾಡಲು ಪ್ರಾರಂಭಿಸಿದಾಗ, ಸ್ವಾಭಾವಿಕವಾಗಿ ಗೊಂದಲ ಏರ್ಪಡುತ್ತದೆ’ ಎಂದ ಕೇಂದ್ರ ಸಚಿವ ಬಾಬುಲ್ ಹೇಳಿದ್ದಾರೆ.

ಆದರೆ ಮೂಲಗಳು ಹೇಳುವಂತೆ, ಇಲ್ಲಿಯೂ ತೃಣಮೂಲದಿಂದ ಬಂದವರೊಂದಿಗೆ ಸಂಘರ್ಷದಲ್ಲಿದ್ದ ಹಳೆಯ ಬಿಜೆಪಿ ಕಾರ್ಯಕರ್ತರು ಮತದಾನ ತಂತ್ರ ಮಾತುಕತೆಗಾಗಿ ಕಚೇರಿಗೆ ಬಂದಿದ್ದರು. ಆದರೆ ಹೊಸದಾಗಿ ನೇಮಕಗೊಂಡ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಅರಿಜಿತ್ ರಾಯ್ ಅವರ ಬಗ್ಗೆ ವಿವಾದ ಭುಗಿಲೆದ್ದಿತು. ಅವರು ಭಾರತೀಯ ಜನತಾ ಯುವ ಮೋರ್ಚಾ ಜಿಲ್ಲಾ ಸಮಿತಿಯಿಂದ ಹಳೆಯ ಬಿಜೆಪಿ ಕಾರ್ಯಕರ್ತರನ್ನು ಹೊರಹಾಕಿದ್ದರು ಎಂದು ಆರೋಪಿಸಲಾಗಿದೆ.

ಬಿಜೆಪಿಯಲ್ಲಿ ಬಣಗಳ ಕಾದಾಟದ ಮೊದಲ ಘಟನೆಗಳೇನೂ ಇವಲ್ಲ. ಜನವರಿ 8 ರಂದು ನಂದಿಗ್ರಾಮದಲ್ಲಿ ಕೂಡ ಇಂಥದ್ದು ನಡೆದಿತ್ತು. ಟಿಎಂಸಿಯಿಂದ ಬಿಜೆಪಿಗೆ ಪಕ್ಷಾಂತರಗೊಂಡ ಸುವೆಂಡು ಅಧಿಕಾರಿ ಮತ್ತು ಬಿಜೆಪಿ ಉನ್ನತ ನಾಯಕರಾದ ದಿಲೀಪ್ ಘೋಷ್, ಕೈಲಾಶ್ ವಿಜಯವರ್ಗಿಯಾ ಅವರು ಭಾಗವಹಿಸಿದ ರ‍್ಯಾಲಿಯಲ್ಲಿ, ಮೂಲ ಬಿಜೆಪಿ ಕಾರ್ಯಕರ್ತರಲ್ಲಿ ಒಂದು ಭಾಗವು ಕಲ್ಲು ತೂರಾಟ ನಡೆಸಿತ್ತು. ಅಲ್ಲಿ ತೃಣಮೂಲ ಕಾರ್ಯಕರ್ತರು ವಿದ್ಯುಕ್ತವಾಗಿ ಬಿಜೆಪಿಗೆ ಸೇರಲು ಕಾಯುತ್ತಿದ್ದರು. “ನಮ್ಮನ್ನು (ಬಿಜೆಪಿ ಕಾರ್ಯಕರ್ತರನ್ನು) ಹಿಂಸಿಸಿದ ತೃಣಮೂಲದ ಜನರು ಈಗ ನಮ್ಮ ಪಕ್ಷಕ್ಕೆ ಸೇರಲು ಹೊರಟಿದ್ದಾರೆ. ಅದನ್ನು ಸಹಿಸಲು ನಾವು ಸಿದ್ಧರಿಲ್ಲ” ಎಂದು ಹಳೆಯ ಬಿಜೆಪಿ ಕಾರ್ಯಕರ್ತರೊಬ್ಬರು ಹೇಳಿದ್ದರು.


ಇದನ್ನೂ ಓದಿ: ಗೋಲಿ ಮಾರೋ ಸಾಲೋಂಕೋ’ ಘೋಷಣೆ – ಬಿಜೆಪಿ ಮುಖಂಡ ಸೇರಿ 3 ಕಾರ್ಯಕರ್ತರ ಬಂಧನಪ.ಬಂಗಾಳ: 'ಗೋಲಿ ಮಾರೋ ಸಾ***ಕೋ' ಘೋಷಣೆ ಕೂಗಿದ 3 ಬಿಜೆಪಿ ಕಾರ್ಯಕರ್ತರ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...