90 ದಿನಗಳ ಒಳಗೆ ತನಿಖೆ ನಡೆಸಿ ಚಾರ್ಜ್ ಶೀಟ್ ಅನ್ನು ಪೊಲೀಸರು ಸಲ್ಲಿಸದೆ ಇದ್ದುದರಿಂದ, ಮ್ಯಾಜೆಸ್ಟ್ರೆಟ್ ನ್ಯಾಯಾಲಯ ಯುವತಿ ಅಮೂಲ್ಯ ಲಿಯೋನ್ ಅವರಿಗೆೆ ನಿನ್ನೆ ಜಾಮೀನು ಮಂಜೂರು ಮಾಡಿದೆ.
ಫೆಬ್ರವರಿಯಲ್ಲಿ ಬೆಂಗಳೂರು ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಸಿಎಎ ವಿರೋಧಿ ಕಾರ್ಯಕ್ರಮವೊಂದರಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದಕ್ಕೆ ದೇಶದ್ರೋಹದ ಆರೋಪವನ್ನು ಅಮೂಲ್ಯ ಎದುರಿಸುತ್ತಿದ್ದರು. ಕೆಲವು ದಾಖಲೆಗಳ ಪರಿಶೀಲನೆ ನಡೆಸಿದ ನಂತರ ಅಮೂಲ್ಯ ಬಿಡುಗಡೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.
ನಿನ್ನೆ ಮತ್ತೊಂದು ಕೋರ್ಟ್ನಲ್ಲಿ ಜಾಮೀನು ವಿಚಾರಣೆಯ ವೇಳೆ ಅಮೂಲ್ಯ ಅವರಿಗೆ ಜಾಮೀನನ್ನು ನಿರಾಕರಿಸಿತ್ತು. ಬಿಡುಗಡೆಯಾದರೆ ತಲೆಮರೆಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿ ಜಾಮೀನು ನೀಡಲು ಸಾಧ್ಯವಿಲ್ಲವೆಂದು ಸಿವಿಲ್ ಮತ್ತು ಸೆಶನ್ಸ್ ಕೋರ್ಟ್ ಹೇಳಿತ್ತು.
ಜಾಮೀನು ಅರ್ಜಿ ತಿರಸ್ಕರಿಸಿದ 60 ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರಾದ ವಿದ್ಯಾಧರ್ ಶಿರಹಟ್ಟಿ ಅವರು, ಅಮೂಲ್ಯ ಅವರಿಗೆ ಜಾಮೀನು ನೀಡಿದರೆ “ಶಾಂತಿ ಕದಡಬಲ್ಲ ಇಂತಹ ಅಪರಾಧಗಳಲ್ಲಿ ಮತ್ತೆ ಭಾಗಿಯಾಗುವ ಸಾಧ್ಯತೆ ಇದೆ” ಎಂದು ಹೇಳಿದ್ದರು.
ಸ್ವಾತಂತ್ರ್ಯ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ಸಿಎಎ ಮತ್ತು ಎನ್ಆರ್ಸಿ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಅಮೂಲ್ಯ ಅವರು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಿದಾ ಕೂಡಲೇ ‘ಹಿಂದೂಸ್ತಾನ್ ಜಿಂದಾಬಾದ್’ ಎಂದು ಕೂಡಾ ಕೂಗಿದ್ದರು. ಎಲ್ಲಾ ರಾಷ್ಟ್ರಗಳೂ ಒಂದೇ ಎಂದು ಹೇಳುವಷ್ಟರಲ್ಲಿ ಅವರಿಂದ ಮೈಕ್ರೋಫೋನ್ ಕಿತ್ತುಕೊಂಡಿದ್ದು ಕೂಡ ವಿಡಿಯೋದಲ್ಲಿ ಕಂಡುಬಂದಿತ್ತು.
ಲಾಕ್ ಡೌನ್ನಿಂದಾಗಿ ಬೆಂಗಳೂರು ಪೊಲೀಸರು ಚಾರ್ಜ್ ಶೀಟ್ ಸಲ್ಲಿಸುವುದು ತಡವಾಗಿದ್ದರಿಂದ ಅಮೂಲ್ಯ ಅವರ ಜಾಮೀನು ಅರ್ಜಿ ವಿಚಾರಣೆಗೆ ಬರುವುದು ತಡವಾಗಿತ್ತು. ಈಗ 90 ದಿನದ ಅವಧಿ ಮೀರಿ 98ನೆಯ ದಿನ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದು, ಈ ಆಧಾರದಲ್ಲಿ ಮ್ಯಾಜೆಸ್ಟ್ರೆಟ್ ನ್ಯಾಯಲಯದಲ್ಲಿ ಸಲ್ಲಿಸಿದ ಅರ್ಜಿ ವಿಚಾರಣೆಯಲ್ಲಿ ಅಮೂಲ್ಯ ಅವರಿಗೆ ಜಾಮೀನು ದೊರಕಿದೆ.
ಓದಿ: ಫ್ಯಾಸಿಜ಼ಮ್ನ ನಿಜವಾದ ಗೆಲುವು…ಗಾಬರಿ, ಗಾಸಿ, ಹೆಚ್ಚಿನ ವಿವೇಚನೆ