ದಿನ ಬೆಳಗಾದರೆ ನಮ್ಮ ಕನ್ನಡ ಟಿ.ವಿ. ಚಾನೆಲ್ಗಳು ನರೇಂದ್ರ ಮೋದಿಯ ಗುಣಗಾನ ಮಾಡುತ್ತ ಚೀನಾವನ್ನು ಬಗ್ಗು ಬಡಿಯುವ ಧೀರ, ಶೂರ ಎಂಬೆಲ್ಲ ಉಪಮೆಗಳನ್ನು ಬಳಸುತ್ತಿರುವ ಈ ಪ್ರಸ್ತುತ ಸಂದರ್ಭದಲ್ಲಿ ಜೂನ್ 21ರ The Week ನಿಯತ ಕಾಲಿಕೆಯ ಒಂದು ಲೇಖನ ಓದುಗರನ್ನು ಬೆಚ್ಚಿಬೀಳುಸುತ್ತಿದೆ. ಗಾಲ್ವಾನ್ ನದಿ ಕಣಿವೆ ಮತ್ತು ಪಾನ್ಗಾಂಗ್ ಸರೋವರದ ಪ್ರದೇಶದೊಳಗಡೆಗೆ ಚೀನಾದ PLA (People Libration Army) ನುಗ್ಗಿ ಭಾರತದ ಸುಮಾರು 60 ಚ.ಕಿ.ಮೀ. ಪ್ರದೇಶ ಆಕ್ರಮಿಸಿಕೊಂಡಿದೆ ಎಂದು ಮಾಜಿ ಲೆಫ್ಟಿನೆಂಟ್ ಜನರಲ್ ಹೆಚ್.ಎಸ್. ಪನಾಗ್ ಹೇಳಿರುವರು. ಅಂತೆಯೇ ಮಾಜಿ ವಿದೇಶಾಂಗ ಕಾರ್ಯದರ್ಶಿ ಶ್ಯಾಮ್ಸರಣ್ ಹೇಳಿಕೆಯಂತೆ 2013ರ ವೇಳೆಗೆ ಭಾರತ, ಚೀನಾಕ್ಕೆ ಕಳೆದುಕೊಂಡ ತನ್ನ ಭೂಪ್ರದೇಶ ಸುಮಾರು 640 ಚ.ಕಿ.ಮೀ. ಈಗಿದು 1300 ಚ.ಕಿ.ಮೀ.ನಷ್ಟಾಗಿದೆ ಎನ್ನುತ್ತಾರೆ ಶ್ಯಾಮ್ಸರಣ್.
ಇದು ಭಾರತ ಸರ್ಕಾರಕ್ಕೆ ಹಾಗೂ ಭಾರತೀಯ ಸೇನೆಗೆ ನಿಬ್ಬೆರಗುಗೊಳಿಸುವ ಸಂಗತಿ. ಉಪಗ್ರಹಗಳ ಮೂಲಕ ಭೂಚಿತ್ರಣದ ದೃಶ್ಯ ನಮ್ಮ ಬೆರಳ ತುದಿಯಲ್ಲೇ ಲಭ್ಯವಿರುವ ಸಂದರ್ಭದಲ್ಲಿ! ಹೀಗೇಕಾಯಿತು ಎಂಬುದೇ ನಿಗೂಢ. ಕನ್ನಡ ಟಿ.ವಿ. ಮಾಧ್ಯಮಗಳ ಬಹು ಆಪ್ತಮಿತ್ರ ನಮ್ಮ ನರೇಂದ್ರ ಮೋದಿಯವರು 2019 ಅಕ್ಟೋಬರ್ 11,12ರಂದು ಚೀನಾದ ಅಧ್ಯಕ್ಷರನ್ನು ತಮಿಳುನಾಡಿನ ಮಮ್ಮಲಪುರಂಗೆ ಆಹ್ವಾನಿಸಿ ಬಹುಪಚಾರದ ಮಾತುಕತೆ ಆಡಿದ ಸಂದರ್ಭದಲ್ಲಿ ಆತ ಭಾರತ ಸದರಿ ಕಣಿವೆಯಲ್ಲಿ ಕೈಗೊಂಡಿದ್ದ ಮೂಲಭೂತ ವ್ಯವಸ್ಥೆಗಳ ಬಗ್ಗೆ ಆಕ್ಷೇಪಣೆ ಎತ್ತಿದ್ದು, ಓದುಗರಿಗೆ ನೆನಪಿರಬಹುದು. ಸಿಯಾಚಿನ್ ನಿರ್ಗಲ್ಲು ತಲುಪಲು ಸೇನಾ ಸರಬರಾಜಿಗೆ ಅನುಕೂಲವಾಗಲೆಂದು ಭಾರತ, ದೌಲತ್ ಬೇಗ್ ಓಲ್ಡಿ ಮತ್ತು ದುರ್ಬುಕ್ಗಳಲ್ಲಿ ರಸ್ತೆ ನಿರ್ಮಾಣ ಹಾಗೂ ಶೈಯೋಕ್ ನದಿಗೆ ಸೇತುವೆ ನಿರ್ಮಿಸಿದ್ದು ಚೀನಾದ ಕಣ್ಣು ಕುಕ್ಕಿಸಿತು.
ಈಗೇನು ಚೀನಾ ಬಂದಿಳಿದಿದೆಯೋ ಆ ಪ್ರದೇಶಕ್ಕೆ ಅವರಿಗಿಂತ ಮುಂಚೆ ಪೂರ್ವಭಾವಿಯಾಗಿ ಬೇಸಿಗೆ ಆರಂಭಕ್ಕೂ ಮುನ್ನ ಬೇಕಾದ ಮಿಲಿಟರಿ ಸಲಕರಣೆಗಳೊಂದಿಗೆ ಹೋಗಿ ತಲುಪಲು ಭಾರತಕ್ಕೆ ಆರು ತಿಂಗಳ ಕಾಲಾವಕಾಶ ಲಭ್ಯವಿತ್ತು. ಆದರೆ ಅದು ಆಯಿತೆ? ಚೀನಾದ ಆಕ್ರಮಣಕ್ಕೆ ಎದುರಾಡುವ ಸಾಮರ್ಥ್ಯ ಇಂಡಿಯಾಕ್ಕೆ…?
ಕೇವಲ ಸಹಿಸಿಕೊಂಡು ಹೋಗುವ ಚಿತ್ತವುಳ್ಳ ಭಾರತ ಸರ್ಕಾರ ರಾಜತಾಂತ್ರಿಕತೆಯನ್ನಷ್ಟೇ ನಂಬಿ ಕುಳಿತಿದೆ. ನಮ್ಮ ಸೇನೆಗೆ ಶತೃವಿನ ಮೇಲೆ ಆಕ್ರಮಣವೆಸಗುವ ಮನೋಭಾವವಾಗಲಿ, ಯುದ್ಧೋಪ ಸಾಧನಗಳಾಗಲಿ, ಸಹಿಷ್ಣುತೆಯಾಗಲಿ ಇಲ್ಲ. ಈ ಸ್ಥಿತಿ ಚೀನಿಯರಿಗೆ ವರದಾನವೆನಿಸಿದ್ದು ಅದು ನಿರ್ಧಯತೆಯಿಂದ ವಾಸ್ತವಿಕ ಗಡಿ ರೇಖೆಯನ್ನು ದಿನದಿಂದ ದಿನಕ್ಕೆ ಭಾರತದ ಒಳಕ್ಕೆ ತಳ್ಳುತ್ತ ಬಂದಿದೆ. ಚೀನಾದ ದುರಾಸೆಗೆ, ಅದರ ಹೊಸ ಹೊಸ ವಾಸ್ತವಿಕ ಗಡಿರೇಖೆಗೆ, ಭಾರತ ಆಸ್ಪದವೀಯ್ಯುತ್ತಿದೆ. ಇದು ಚೀನಾದ ರಾಜಕೀಯ ನೀತಿಯೂ ಹೌದು! ತಮ್ಮ ದುರ್ಬುದ್ಧಿ ಸಮರ್ಥಿಸಿಕೊಳ್ಳಲು ಚೀನಾ ಪ್ರತಿಸಲವು ಮಾತುಕತೆಯ ದಿನಾಂಕವನ್ನು ಮುಂದು ಮುಂದಕ್ಕೆ ತಳ್ಳುತ್ತಾ ಮತ್ತಷ್ಟು ಭಾರತ ಭೂಭಾಗಕ್ಕೆ ಬೇಲಿ ಹಾಕುತ್ತ ಬರುತ್ತಿದೆ. ಭಾರತವೂ ಈ ಹಗ್ಗ ಜಗ್ಗಾಟಕ್ಕೆ ಬಲಿಯಾಗುತ್ತಿದ್ದು ಪ್ರತಿ ಮಾತುಕತೆಯ ನಂತರ ‘ಭಾರತ-ಚೀನಾ ಗಡಿ ಮಾತುಕತೆ ಫಲಪ್ರದ’ವೆಂದು ಹೇಳುತ್ತ ತನ್ನ ನೂರಾರು ಚ.ಕಿ.ಮೀ. ಭೂಪ್ರದೇಶವನ್ನು ನಿಷ್ಕರುಣೆ ಚೀನಾಕ್ಕೆ ಬಿಟ್ಟುಕೊಡುತ್ತ ಬಂದಿದೆ. ಈ ವಂಚನೆಯನ್ನು ಆದಷ್ಟು ಬೇಗ ಪ್ರಸ್ತುತ ಮೋದಿ ಸರ್ಕಾರ ಅರ್ಥ ಮಾಡಿಕೊಂಡರೆ ಒಳಿತು. ಈಗಲಾದರೂ ಭಾರತ ಸಕಲ ಯುದ್ಧೋಪಕರಣಗಳನ್ನು ವಾಸ್ತವಿಕ ಗಡಿರೇಖೆಯಲ್ಲಿ ಶಾಶ್ವತವಾಗಿರುವಂತೆ ಸ್ಥಾಪಿಸಿ ಚೀನಾಕ್ಕೆ ಬುದ್ಧಿ ಕಲಿಸುವ ಸದಾವಕಾಶ ಎದುರಾಗಿದೆ.
-ಸೊಂದಲಗೆರೆ ಲಕ್ಷ್ಮೀಪತಿ
(ಲೇಖಕರು ಬರಹಗಾರರು. ಅಭಿಪ್ರಾಯಗಳು ವೈಯಕ್ತಿಕವಾದವುಗಳು)
ಇದನ್ನೂ ಓದಿ: ಮಾತುಕತೆ ನಂತರ ಚೀನೀ ಸೈನ್ಯದಿಂದ 4 ಅಧಿಕಾರಿಗಳು ಸೇರಿ 10 ಸೈನಿಕರ ಬಿಡುಗಡೆ