Homeಮುಖಪುಟಶೋಷಿತರ ವಲಸೆ ಮತ್ತು ಪ್ರಭುತ್ವ; ಮರದೊಳಗಣ ಬೆಂಕಿ

ಶೋಷಿತರ ವಲಸೆ ಮತ್ತು ಪ್ರಭುತ್ವ; ಮರದೊಳಗಣ ಬೆಂಕಿ

- Advertisement -
- Advertisement -

ದೃಶ್ಯ 1: 18, ಫೆಬ್ರವರಿ 1983, ಅಸ್ಸಾಂನ ನೆಲ್ಲಿ ಹತ್ಯಾಕಾಂಡದ ಕೇವಲ ಆರು ತಾಸುಗಳ ಅವಧಿಯಲ್ಲಿ ಸುಮಾರು 2000 ಮುಸ್ಲಿಂರನ್ನು ಹತ್ಯೆ ಮಾಡಲಾಯಿತು. ಅವರು ’ಹೊರಗಿನವರು’, ’ಬಾಂಗ್ಲಾದಿಂದ ಅಕ್ರಮವಾಗಿ ನುಸುಳಿದವರು’ ಎನ್ನುವ ಆರೋಪವು ಈ ಹತ್ಯಾಕಾಂಡದಲ್ಲಿ ಪರ್ಯಾವಸಾನವಾಯಿತು. ಈ ನೆಲ್ಲಿ ಹತ್ಯಕಾಂಡ ದೇಶ ವಿಭಜನೆಯ ಸಾಮೂಹಿತ ಹತ್ಯಾಕಾಂಡದ ಭೀಕರತೆಯನ್ನು ನೆನಪಿಸಿತು. 1983ರ ಅಸ್ಸಾಂ ಚುನಾವಣೆಗೂ ಮುನ್ನ ಆಗ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರಕಾರವು ಮತಪಟ್ಟಿಯಿಂದ ’ವಿದೇಶಿಯರು’ ಎನ್ನುವ ಸೂಚಕವನ್ನು ತೆಗೆಯಲು ನಿರಾಕರಿಸಿತು. ಆಗ ಅಸ್ಸಾಂ ವಿದ್ಯಾರ್ಥಿ ಸಂಘಟನೆ (ಎಎಎಸ್‌ಯು) ಇದನ್ನು ವಿರೋಧಿಸಿ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ಹಮ್ಮಿಕೊಂಡಿತು. ವಿದೇಶಿ ಹೆಸರನ್ನು ತೆಗೆಯದೆ ಚುನಾವಣೆ ನಡೆಸಬಾರದೆಂದು ಈ ವಿದ್ಯಾರ್ಥಿ ಒಕ್ಕೂಟವು ಸ್ಥಳೀಯ ಅಸ್ಸಾಮೀಯರನ್ನು ಸಂಘಟಿಸತೊಡಗಿತು. ಆಗ ಕೇಂದ್ರ ಸರಕಾರವು ವಿದ್ಯಾರ್ಥಿ ನಾಯಕರಾದ ಪ್ರಫುಲ್ಲ ಮಹಂತ ಮತ್ತು ಫುಕನ್ ಅವರನ್ನು ಬಂಧಿಸಿ ಫೆಬ್ರವರಿ 1983ರಲ್ಲಿ ಚುನಾವಣೆಯನ್ನು ಘೋಷಿಸಿತು. ಎಎಎಸ್‌ಯು, ಗೌಹಾಟಿ ವಿದ್ಯಾರ್ಥಿ ಸಂಘಟನೆ, ಕಾಂರುಪ್ ಜಿಲ್ಲಾ ವಿದ್ಯಾರ್ಥಿ ಸಂಘಟನೆ ಚುನಾವಣಾ ವಿರೋಧಿ ಪ್ರತಿಭಟನೆ ಪ್ರಾರಂಭಿಸಿದವು. ಆದರೆ ಈ ಚಳವಳಿಯು
ಹಿಂಸಾಚಾರಕ್ಕೆ ತಿರುಗಿದ್ದರಿಂದ ಸೇತುವೆಗಳನ್ನು ಸುಡಲಾಯಿತು, ರಸ್ತೆಗಳನ್ನು ಬಂದ್ ಮಾಡಲಾಯಿತು. ಈ ಚಳವಳಿಯನ್ನು ನಿಗ್ರಹಿಸಲು ಮತ್ತು ಶಾಂತಿಪೂರ್ವಕ ಚುನಾವಣೆ ನಡೆಸಲು ಕೇಂದ್ರವು 150,000 ಸಶಸ್ತ್ರ ಸೈನಿಕರನ್ನು ನಿಯೋಜಿಸಿತು. ಆದರೆ ಈ ಪಡೆಗಳಿಗೆ ಈಶಾನ್ಯ ಭಾಗದ ಭೌಗೋಳಿಕ ಪರಿಚಯವಿರಲಿಲ್ಲ. ಈ ಸಿಆರ್‌ಪಿಎಫ್ ಸೈನಿಕರು ತಮ್ಮ ತುಕಡಿಗಳಿಂದ ಹೊರಬರಲು ಏಕಾಂಗಿಯಾಗಿ ನಿರಾಕರಿಸಿದರು

ಈ ಹಂತದಲ್ಲಿ ಅಸ್ಸಾಂನಲ್ಲಿ ಸ್ಥಳೀಯರು ವರ್ಸಸ್ ಹೊರಗಿನವರ ಗುದ್ದಾಟದ ಫಲವಾಗಿ ಹಿಂದೂ-ಮುಸ್ಲಿಂರ ನಡುವಿನ ಸಂಬಂಧ ಬಿಗಡಾಯಿಸಿತ್ತು. 18, ಫೆಬ್ರವರಿ 1983ರಂದು ನೆಲ್ಲಿ, ಬೋರರ್ಬೋರಿ ಮತ್ತಿತರ ಗ್ರಾಮಗಳನ್ನು ಬಂದೂಕು ಹಿಡಿದ ಸ್ಥಳೀಯ ಹಿಂದೂಗಳ ಗುಂಪುಗಳು ಸುತ್ತುವರೆದವು. ನಂತರ ನಡೆದ ಆ ರಕ್ತಪಾತದಲ್ಲಿ 2000 ಮುಸ್ಲಿಂರನ್ನು ಕೊಲೆ ಮಾಡಲಾಯಿತು. ಅನಧಿಕೃತ ಮಾಹಿತಿ ಪ್ರಕಾರ 5000ಕ್ಕೂ ಹೆಚ್ಚು ಮುಸ್ಲಿಂರ ಕೊಲೆಯಾಗಿದೆ. ಹಠಾತ್ ದಾಳಿಯಿಂದ ತಪ್ಪಿಸಿಕೊಳ್ಳಲು ವಿಫಲರಾದ ಮಹಿಳೆಯರು ಮತ್ತು ಮಕ್ಕಳು ಅತಿಹೆಚ್ಚಿನ ಸಂಖ್ಯೆಯಲ್ಲಿ ಹತರಾದರು. ಎರಡು ವರ್ಷಗಳ ನಂತರ 1985ರಲ್ಲಿ (24, ಮಾರ್ಚ್ 1971ರ ಬಾಂಗ್ಲಾ ವಿಮೋಚನೆ ಯುದ್ಧಕ್ಕಿಂತ ಮುನ್ನಾ ದಿನವನ್ನು ಆಧರಿಸಿ) ಅಸ್ಸಾಂ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಮತ್ತಷ್ಟು ವಿವರಗಳಿಗಾಗಿ ಮಕಿಕೋ ಕಿಮಾರ ಬರೆದ ಪುಸ್ತಕ: The Nellie Massacre of 1983: Agency of Rioters ಓದಿ

ದೃಶ್ಯ 2: ಮಯನ್ಮಾರ್‌ನ ಜನಾಂಗೀಯ ಅಲ್ಪಸಂಖ್ಯಾತರಾಗಿರುವ ರೋಹಿಂಗ್ಯಾ ಮುಸ್ಲಿಮರಿಗೆ
ಒಂದು ನಿರ್ದಿಷ್ಟ ಪ್ರದೇಶವಿಲ್ಲ. ಅವರನ್ನು ’ದೇಶರಹಿತ ಜನಸಂಖ್ಯೆ’ ಎಂದು ಕರೆಯುತ್ತಾರೆ. ದಶಕಗಳ ಕಾಲ ಲೈಂಗಿಕ ದೌರ್ಜನ್ಯ, ಹಲ್ಲೆ, ಹಿಂಸೆ, ಕೊಲೆಗಳಿಂದ ನಲುಗಿರುವ ರೋಹಿಂಗ್ಯಾ ಮುಸ್ಲಿಮರು 20ನೇ ಶತಮಾನದ ಅತ್ಯಂತ ಹೆಚ್ಚಿನ ಶೋಷಿತ ಸಮುದಾಯ. ಮಯನ್ಮಾರ್‌ನಲ್ಲಿನ ಸಶಸ್ತ್ರ ದಾಳಿಯಿಂದ ಉಂಟಾದ ಜನಾಂಗೀಯ ಹಿಂಸೆಯ ಕಾರಣದಿಂದ ಆಗಸ್ಟ್ 2017ರಲ್ಲಿ ಮುಸ್ಲಿಮರು ದೊಡ್ಡಮಟ್ಟದಲ್ಲಿ ವಲಸೆ ಹೋಗಲು ಪ್ರಾರಂಭಿಸಿದರು. ಸುಮಾರು 7 ಲಕ್ಷ ಜನ ಬಾಂಗ್ಲಾ ದೇಶದಲ್ಲಿ ನಿರಾಶ್ರಿತರಾಗಿ ಆಶ್ರಯ ಬಯಸಿದರು. ಇಂದು 9,80,000 ರೋಹಿಂಗ್ಯಾ ಮುಸ್ಲಿಮರು ಮಯನ್ಮಾರ್‌ನ ನೆರೆ ದೇಶಗಳಲ್ಲಿ ಆಶ್ರಯ ಬಯಸಿ ವಲಸೆ ಬರುತ್ತಿದ್ದಾರೆ

ರೋಹಿಂಗ್ಯಾ ಮುಸ್ಲಿಮರು ಅಲ್ಲಿಂದ ನಿರಾಶ್ರಿತರಾಗಿ ಪಕ್ಕದ ಭಾರತ ಮತ್ತು ಬಾಂಗ್ಲಾ ದೇಶಗಳಿಗೆ ವಲಸೆ ಬಂದರು. ಜೀವ ರಕ್ಷಣೆಗೋಸ್ಕರ ರಾತ್ರಿ, ಹಗಲೆನ್ನದೆ ಕಾಡು, ಬೆಟ್ಟಗಳನ್ನು ಕಾಲ್ನಡಿಗೆಯಲ್ಲಿ ದಾಟುತ್ತಾ ಸಾವಿರಾರು ಕಿ.ಮೀ. ನಡೆದುಕೊಂಡು ಬಂದ ಈ ರೋಹಿಂಗ್ಯಾ ಮುಸ್ಲಿಮರು ಬಿಜೆಪಿ ಪ್ರಕಾರ ’ಅಕ್ರಮ ನುಸುಳುಕೋರರು’. ತನ್ನ ಮತಾಂಧ ನೀತಿಗಳ ಕಾರಣದಿಂದ ಅವರಿಗೆ ಸೂಕ್ತ ರಕ್ಷಣೆ ಒದಗಿಸಲು ನಿರಾಕರಿಸಲಾಯಿತು. ದೇಶ ಬಿಟ್ಟು ಹೊರಡುವಂತೆ ಸೂಚಿಸಲಾಯಿತು. ಆದರೆ ಬಾಂಗ್ಲಾ ದೇಶದ ಕಾಕ್ಸ್ ಬಾಜಾರ್ ಪ್ರದೇಶದಲ್ಲಿ 8,90,000 ರೋಹಿಂಗ್ಯಾ ಮುಸ್ಲಿಮರು ಆಶ್ರಯ ಪಡೆದಿದ್ದಾರೆ. ಬಾಂಗ್ಲಾ ದೇಶವು ಜಗತ್ತಿನ ಅತಿ ದೊಡ್ಡ ನಿರಾಶ್ರಿತರ ಕ್ಯಾಂಪ್‌ನ ತಾಣ ಎಂದು ಕರೆಯಲಾಗುತ್ತದೆ. ವಿಶ್ವಸಂಸ್ಥೆಯು ರೋಹಿಂಗ್ಯಾ ಮುಸ್ಲಿಮರನ್ನು ’ಜಗತ್ತಿನಲ್ಲಿ ಅತಿ ಹೆಚ್ಚು ಚಿತ್ರಹಿಂಸೆಗೆ ಒಳಪಟ್ಟ ಅಲ್ಪಸಂಖ್ಯಾತರು’ ಎಂದು ಕರೆದಿದೆ. ಆದರೆ ಜಾಗತಿಕವಾಗಿ ದೊಡ್ಡ ಪ್ರಜಾಪ್ರಭುತ್ವ ದೇಶವೆಂದು ಬೀಗುವ ಭಾರತದಲ್ಲಿ ಬಹುಸಂಖ್ಯಾತವಾದದ ಮತಾಂಧತೆಯ ಫಲಶ್ರುತಿಯಿಂದ ಮತ್ತು ನಿರಾಶ್ರಿತರು ಮುಸ್ಲಿಂ ಎನ್ನುವ ಕಾರಣಕ್ಕೆ ರೋಹಿಂಗ್ಯಾ ಸಮುದಾಯದವರಿಗೆ ಸ್ಥಾನವಿಲ್ಲ. ವಿಶ್ವ ಸಂಸ್ಥೆಯ ನಿರಾಶ್ರಿತರ ಹೈಕಮಿಷನ್ (ಯುಎನ್‌ಎಚ್‌ಆರ್‌ಸಿ) ಮತ್ತು ಭಾರತದ ದತ್ತಾಂಶಗಳ ಪ್ರಕಾರ 1988-2001ರ ಅವಧಿಯಲ್ಲಿ 6324 ರೋಹಿಂಗ್ಯಾ ಮುಸ್ಲಿಮರು ಭಾರತವನ್ನು ಪ್ರವೇಶಿಸಿದ್ದಾರೆ. ಅವರಲ್ಲಿ 1,245 ಜನರಿಗೆ
ಯುಎನ್‌ಎಚ್‌ಆರ್‌ಸಿ ಆಶ್ರಯ ಕಲ್ಪಿಸಿದೆ. ಥೈಲ್ಯಾಂಡ್‌ಗೆ 92,000 ಮತ್ತು ಭಾರತಕ್ಕೆ 21,000 ರೋಹಿಂಗ್ಯ ನಿರಾಶ್ರಿತರು ವಲಸೆ ಬಂದರು. ಆದರೆ 1990ರ ದಶಕದ ಕಡೆಯ ಭಾಗದಿಂದ ಭಾರತವು ರೋಹಿಂಗ್ಯಾ ನಿರಾಶ್ರಿತರಿಗೆ ಬೆಂಬಲ ಕೊಡುವುದರಿಂದ ಹಿಂಜರಿಯತೊಡಗಿತು. ಇದಕ್ಕೆ ಚೀನಾ ಮತ್ತು ಮಯನ್ಮಾರ್ ದೇಶಗಳ ಮೈತ್ರಿ ಕಾರಣ ಮತ್ತು ಮಯನ್ಮಾರ್ ಸರ್ವಾಧಿಕಾರವು ತನ್ನ ಗಡಿ ಭಾಗದಲ್ಲಿ ಬಂಡುಕೋರರಿಗೆ ಪ್ರೋತ್ಸಾಹಿಸಬಹುದು ಎನ್ನುವ ಕಾರಣ ಕೊಡುತ್ತಾರೆ. ಇರಬಹುದು. ಆದರೆ ಮುಸ್ಲಿಂ ಸಮುದಾಯವನ್ನೇ ’ಅನ್ಯರು’ ಎಂದು ಪರಿಗಣಿಸಿರುವುದೇ ಮೂಲ ಕಾರಣ ಮತ್ತು ಇದನ್ನು ಈಗಿನ ಬಿಜೆಪಿ ಸಹ ನಿರಾಕರಿಸುವುದಿಲ್ಲ.

2017ರಲ್ಲಿ ಆಗಿನ ಬಿಎಸ್‌ಎಫ್‌ನ ನಿರ್ದೇಶಕ ಕೆ.ಕೆ.ಶರ್ಮ ಅವರು ’ಅವರನ್ನು (ರೋಹಿಂಗ್ಯಾ ಮುಸ್ಲಿಮರನ್ನು) ಒಳಗೆ ನುಸುಳದಂತೆ ಹಿಮ್ಮೆಟ್ಟಿಸುವುದು ನಮ್ಮ ಉದ್ದೇಶವಾಗಿದೆ. ಒಮ್ಮೆ ಒಳಬಿಟ್ಟುಕೊಂಡರೆ ಅವರ ಗುರುತು, ಪತ್ತೆಗಳನ್ನು ಪರಿಶೀಲಿಸಬೇಕು, ಇಲ್ಲವೇ ಬಂಧಿಸಬೇಕು’ ಎಂದು ಹೇಳಿದ್ದರು. 2021ರ ಏಪ್ರಿಲ್ ತಿಂಗಳಿನಿಂದ ಭಾರತವು ತನ್ನ ಜೈಲು ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ರೋಹಿಂಗ್ಯಾ ಮುಸ್ಲಿಮರನ್ನು ಹೊರಗಟ್ಟಲು ಸಿದ್ಧತೆ ನಡೆಸಿದೆ. ’ಅತಿ ಹೆಚ್ಚು ಚಿತ್ರಹಿಂಸೆಗೊಳಗಾದ ಅಲ್ಪಸಂಖ್ಯಾತ’ರಾದ ರೋಹಿಂಗ್ಯಾರನ್ನು ಭಾರತವು ’ಅಕ್ರಮ ವಲಸೆಗಾರರು’ ಎಂದು ಕರೆಯಿತು ಮತ್ತು ತನ್ನ ವಲಸೆ ನೀತಿಗಳನ್ನು ಮುಂದಿಟ್ಟುಕೊಂಡು ಗಡಿಪಾರು ಮಾಡಲು ನಿರ್ಧರಿಸಿದಾಗ ಮಾನವ ಹಕ್ಕುಗಳ ಸಂಘಟನೆಗಳು ಅದನ್ನು ವಿರೋಧಿಸಿದವು. ನ್ಯಾಯವಾದಿ ಫಜಲ್ ಅಬ್ದಾಲಿ ಅವರು ’ಮುಸ್ಲಿಮನಾಗಿ ರೋಹಿಂಗ್ಯಾ ನಿರಾಶ್ರಿತರ ಪರವಾಗಿ ಹೋರಾಡುವುದು ನನಗೆ ಪ್ರತಿಕೂಲವಾಗುತ್ತಿದೆ. ಪೊಲೀನ್ ಅಧಿಕಾರಿಯೊಬ್ಬರು ನೀವೇಕೆ ಕೇವಲ ರೋಹಿಂಗ್ಯಾರಂತಹ ಪ್ರಕರಣ ಮಾತ್ರ ಆಯ್ಕೆ ಮಾಡಿಕೊಳ್ಳುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಅದು ಹೇಗೆ ಮನುಷ್ಯರು ಅಕ್ರಮ ಎಂದೆನಿಸಿಕೊಳ್ಳುತ್ತಾರೆ? ಕಟ್ಟಲೆಗಳಿಲ್ಲದ ವಲಸಿಗರು, ದಾಖಲೆಗಳಿಲ್ಲದ ವಲಸಿಗರು ಇರಬಹುದು, ಆದರೆ ಮನುಷ್ಯರಲ್ಲದ ವಲಸಿಗರು ಹೇಗೆ ಇರಲು ಸಾಧ್ಯ’ ಎಂದು ಪ್ರಶ್ನಿಸುತ್ತಾರೆ. ಮಾನವಂತರು ಮಾತ್ರ ಇದಕ್ಕೆ ಉತ್ತರಿಸಬಹುದು. ಆದರೆ ಅಮಾನವೀಯ ಪ್ರಭುತ್ವಕ್ಕೆ ಈ ಪ್ರಶ್ನೆಗೆ ಉತ್ತರಿಸಲು ಸಾಧ್ಯವಿಲ್ಲ.

ಮಾರ್ಚ್ 2021ರಂದು ಮಾನವ ಹಕ್ಕುಗಳ ಕಾವಲು ದಳವು ’ಭಾರತ ಸರಕಾರವು ರೋಹಿಂಗ್ಯಾ ಮುಸ್ಲಿಮರನ್ನು ಗಡಿಪಾರು ಮಾಡಬಾರದು. ಅವರು ಮಯನ್ಮಾರ್‌ಗೆ ಮರಳಿ ಹೋದರೆ ಅಲ್ಲಿನ ಜುಂಟಾ ಮಿಲಿಟರಿಯಿಂದ ಮತ್ತೆ ಹಿಂಸೆ, ಹತ್ಯೆಗಳಿಗೆ ಒಳಗಾಗುತ್ತಾರೆ’ ಎಂದು ಎಚ್ಚರಿಸಿದೆ.

13, ಜನವರಿ, 2022ರ ಹಿಂದುಸ್ತಾನ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾದಂತೆ ಬಹಿರಂಗಗೊಳ್ಳಲು ಇಚ್ಚಿಸದ ಬಲ್ಲ ಮೂಲಗಳ ಪ್ರಕಾರ ಭಾರತ ಸರಕಾರವು ’ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ರೋಹಿಂಗ್ಯಾ ಮುಸ್ಲಿಮರನ್ನು ಒಳಗೊಂಡಂತೆ ಅಂತಾರಾಷ್ಟ್ರೀಯ ಅಕ್ರಮ ವಲಸೆಗಾರರ ರಾಕೆಟ್‌ಅನ್ನು ತನಿಖೆ ಮಾಡಲು ಸೂಚಿಸಿದೆ.

ಮತ್ತು ಇತರರಂತೆ ಆಕ್ರಮ ನುಸುಳುಕೋರರಾದ ರೋಹಿಂಗ್ಯಾ ಮುಸ್ಲಿಮರು ರಾಷ್ಟ್ರೀಯ ಭದ್ರತೆಗೆ ಅಪಾಯ ಎಂದು ಅಫಿಡವಿಟ್‌ನಲ್ಲಿ ತಿಳಿಸಿದೆ’ ಎಂಬ ಸುದ್ದಿಗಳು ತೇಲುತ್ತಿವೆ. ಇದು ಕೂಡ ನಿರೀಕ್ಷಿತವಾಗಿತ್ತು. ಇಲ್ಲಿನ ಚಿಂತಕರು, ನ್ಯಾಯವಾದಿಗಳು, ಕಲಾವಿದರು, ಶಿಕ್ಷಕರು, ವಿದ್ಯಾರ್ಥಿಗಳು, ಲೇಖಕರನ್ನೇ ಭಾರತದ ಭದ್ರತೆಗೆ ಅಪಾಯ ಎಂದು ಯುಎಪಿಎ ಅಡಿಯಲ್ಲಿ ಬಂಧಿಸಿರುವ, ದೇಶದ ಭದ್ರತೆಯ ನೆಪದಲ್ಲಿ ತನ್ನ ರಾಜಕೀಯ ವಿರೋಧಿಗಳ ಮೇಲೆ ಕಣ್ಗಾವಲಿಡಲು ಪೆಗಸಸ್ ತಂತ್ರಜ್ಞಾನ ಪ್ರಯೋಗಿಸಿರುವ ಮೋದಿ ಸರಕಾರವು (ಆರೋಪಗಳು ಕೇಳಿಬಂದಾಗ ಅದನ್ನು ನಿರಾಕರಿಸದಿರುವುದು ಇದನ್ನೇ ಸೂಚಿಸುವುದಿಲ್ಲವೇ?) ಪಕ್ಕದ ದೇಶದ
ಮುಸ್ಲಿಮರಿಗೆ ಅದರಲ್ಲಿಯೂ ’ಅತಿಹೆಚ್ಚು ದೌರ್ಜನ್ಯಕ್ಕೆ ಒಳಗಾದವರಿಗೆ’ ಆಶ್ರಯ ನೀಡುತ್ತದೆಂದು ನಿರೀಕ್ಷಿಸುವುದೂ ತಪ್ಪು. ’ಭಾರತವು ಆಕ್ರಮ ವಲಸಿಗರಿಗೆ ರಾಜಧಾನಿಯಲ್ಲ’ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿರುವ ಬಿಜೆಪಿ ಸರಕಾರವು ’ಧರ್ಮಾಧಾರಿತ ಆಯ್ಕೆ ಮಾಡಿಕೊಳ್ಳುವ ತನ್ನ ಸಿದ್ಧಾಂತಕ್ಕೆ ಬದ್ಧ’ ಎಂದು ಬಹಿರಂಗವಾಗಿ ಹೇಳಲಿಲ್ಲ ಅಷ್ಟೆ. ಏಕೆಂದರೆ ಜಗತ್ತಿನಲ್ಲಿ ಅತಿದೊಡ್ಡ ನಿರಾಶ್ರಿತರಾದ ರೋಹಿಂಗ್ಯಾ ಮುಸ್ಲಿಂ ವಲಸಿಗರಿಗೆ ಪ್ರಯಾಣದ ದಾಖಲೆಗೆಳು, ಪಾಸ್‌ಪೋರ್ಟ್ ಮತ್ತು ಜನನ ಪ್ರಮಾಣಪತ್ರ ಮುಂತಾದವುಗಳನ್ನು ತನಿಖೆ ಮಾಡುವ ಬಿಜೆಪಿ ಸರಕಾರವು ಸಹಜವಾಗಿಯೇ ಪಕ್ಕದ ಪಾಕಿಸ್ತಾನ, ಆಫ್ಘಾನಿಸ್ತಾನ, ಶ್ರೀಲಂಕಾದಿಂದ ಬರುವ ಹಿಂದೂ ನಿರಾಶ್ರಿತರಿಗೆ ಯಾವುದೇ ದಾಖಲೆಗಳನ್ನು ಕೇಳದೆ, ಅವರು ಯಾವ ಸಂದರ್ಭದಲ್ಲಿಯೂ ದೇಶದ ಭದ್ರತೆಗೆ ಅಪಾಯವಲ್ಲ ಎಂದೂ ಸಹ ಘಂಟಾಘೋಷವಾಗಿ ಹೇಳಲು ತಯಾರಿದೆ. ಇನ್ನು ಹೇಳದೆ ಉಳಿದ ಮಾತುಗಳನ್ನು ನಾವು ಸೇರಿಸಿಕೊಳ್ಳಬೇಕಷ್ಟೆ.

ಮಾನವ ಹಕ್ಕುಗಳ ಯುರೋಪ್ ಸಮಾವೇಶದ (ಇಎಚ್‌ಸಿಆರ್) ಪ್ರಕಾರ ಭಾರತದ ಗಡಿಗಳು ರೋಹಿಂಗ್ಯಾ ಮುಸ್ಲಿಮರ ವಿಷಯದಲ್ಲಿ ಅನುಚ್ಚೇದ 3ನ್ನು ಉಲ್ಲಂಘಿಸುತ್ತಿದೆ. ಆ ಉಲ್ಲಂಘನೆಗಳು..

1. ಕಿರುಕುಳ, ಚಿತ್ರಹಿಂಸೆ ಮತ್ತು ಹಲ್ಲೆಗಳಿಂದ ತಪ್ಪಿಸಿಕೊಂಡು ಓಡಿಬಂದ ನಿರಾಶ್ರಿತರನ್ನು ಗಡಿಗಳಿಂದ ಮರಳಿ ಅದೇ ದೇಶಕ್ಕೆ ಗಡೀಪಾರು ಮಾಡುವುದು.

2. ಗ್ರನೇಡ್‌ಗಳ ಮೂಲಕ ಅಮಾನವೀಯ ಪ್ರದರ್ಶನ.

3. ಸ್ಟನ್ ಗನ್‌ಗಳ ಮೂಲಕ ಅಮಾನವೀಯ ಪ್ರದರ್ಶನ.

ತನ್ನ ದೇಶದೊಗಿನನ ಮುಸ್ಲಿಮರಿಗೆ ಮತ್ತು ವಂಚಿತ ಸಮುದಾಯಗಳಿಗೆ ಈ ಬಗೆಯ ದೌರ್ಜನ್ಯ ಮಾಡುವ ಪ್ರಭುತ್ವವು ಗಡಿಗಳಲ್ಲಿರುವ ಮುಸ್ಲಿಂ ವಲಸೆಗಾರರನ್ನು ಮತ್ತಿನ್ನಾವ ರೀತಿಯಲ್ಲಿ ಸ್ವೀಕರಿಸುತ್ತದೆ ಎಂದು ಕೇಳುವುದು ಉದ್ಧಟತನವಂತೂ ಅಲ್ಲ.

ಕೆ.ಕೆ.ಶರ್ಮ

ದೃಶ್ಯ 3: ಪೌರತ್ವ ತಿದ್ದುಪಡಿ ಕಾಯಿದೆ, 2019 (ಸಿಎಎ) 11, ಡಿಸೆಂಬರ್ 2019ರಂದು ಸಂಸತ್ತಿನ ಎರಡೂ ಸದನಗಳಲ್ಲಿ ಅನುಮೋದನೆಗೊಂಡಿದೆ. 2003ರಲ್ಲಿ ಹುಟ್ಟಿನ ಆಧಾರದಲ್ಲಿ ಪೌರತ್ವ ನೀಡುವ ಸಂಬಂಧ ’ಅಕ್ರಮವಲಸಿಗರು’ ಎನ್ನುವುದನ್ನು ಸೇರಿಸಲಾಯಿತು. ಆಗಿನ ತಿದ್ದುಪಡಿ ಈಗಿನ ಕಾಯ್ದೆಗೆ ಮೂಲವಾಗಿದೆ. ಆದರೆ ಆಗಲೂ ಎಲ್ಲಿಯೂ ಇದಕ್ಕೆ ಧರ್ಮ ಆಧಾರವೆಂದು ಹೇಳಿರಲಿಲ್ಲ. ಆದರೆ ಧರ್ಮ ಆಧಾರಿತ ಶಾಸನ ಜಾರಿಗೆ ಬಂದಿದೆ. ಈ ಸಿಎಎ ಅನುಸಾರ ಭಾರತದೊಂದಿಗೆ ಗಡಿ ಹಂಚಿಕೊಂಡಿರುವ ಪಕ್ಕದ ಮೂರು ಮುಸ್ಲಿಂ ದೇಶಗಳಲ್ಲಿನ (ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾ) ಅಲ್ಪಸಂಖ್ಯಾತರಾಗಿರುವ ಹಿಂದೂ, ಸಿಖ್, ಜೈನ್, ಕ್ರಿಶ್ಚಿಯನ್, ಬೌದ್ದ, ಪಾರ್ಸಿ ಧರ್ಮೀಯ ನಿರಾಶ್ರಿತರಿಗೆ ಭಾರತದಲ್ಲಿ ಆಶ್ರಯ ನೀಡುತ್ತದೆ. ಅಲ್ಲಿನ ಮುಸ್ಲಿಂರಿಗೆ “ಗುಸ್‌ಪೈತೀಯ” ಎಂದು ಹೊಸ ಹಣೆಪಟ್ಟಿ ಹಚ್ಚಲಾಗಿದೆ. ಈ ಸಿಎಎ ಕಾಯಿದೆಗೂ ಎನ್‌ಆರ್‌ಸಿ (ರಾಷ್ಟ್ರೀಯ ಪೌರತ್ವ ನೊಂದಣಿ) ಕಾಯಿದೆಗೂ ಸಂಬಂಧವಿದೆ. ಅಂದರೆ ಎನ್‌ಆರ್‌ಸಿ ಅಡಿಯಲ್ಲಿ ಅಕ್ರಮ ವಲಸಿಗರು, ನುಸುಳುಕೋರರು, ವಿದೇಶಿಯರು ಎಂದು ಪರಿಗಣಿಸಲ್ಪಟ್ಟ ಹಿಂದೂಗಳು ಸಿಎಎ ಕಾಯಿದೆ ಅಡಿಯಲ್ಲಿ ಸಕ್ರಮಗೊಳ್ಳುತ್ತಾರೆ. ಅವರಿಗೆ ಆಶ್ರಯ ದೊರಕುತ್ತದೆ. ಆದರೆ ಅದೆ ಎನ್‌ಆರ್‌ಸಿ ಅಡಿಯಲ್ಲಿ ಅಕ್ರಮ ವಲಸಿಗರು ಎಂದು ಪರಿಗಣಿಸಲ್ಪಟ್ಟ ಮುಸ್ಲಿಮರು ಈ ಸಿಎಎ ಕಾಯಿದೆ ಅಡಿಯಲ್ಲಿಯೂ ಅಕ್ರಮ ವಲಸಿಗರಾಗುತ್ತಾರೆ ಮತ್ತು ನಿರಾಶ್ರಿತರ ಯಾತನಾ ಶಿಬಿರಗಳಲ್ಲಿ ನರಳಬೇಕಾಗುತ್ತದೆ.

ನಾಗರಿಕ ಕಾಯಿದೆ 1955ರ ಆಧಾರದಲ್ಲಿ 2003ರಲ್ಲಿ ನಾಗರಿಕತೆ (ಪೌರತ್ವ ನೋಂದಣಿ ಮತ್ತು ರಾಷ್ಟ್ರೀಯ ಗುರುತುಚೀಟಿಗಳ ವಿತರಣೆ) ನಿಯಮಗಳು 2003, ಮೊಟ್ಟಮೊದಲ ಬಾರಿಗೆ ಚಾಲ್ತಿಗೆ ಬಂದಿತು. ಇದರ ನಿಯಮ 2(1)ರ ಅನುಸಾರ ’ಜನಸಂಖ್ಯಾ ನೋಂದಣಿ ಎಂದರೆ ಈ ನೋಂದಣಿಯು ಗ್ರಾಮದಲ್ಲಿ, ಪಟ್ಟಣದಲ್ಲಿ, ವಾರ್ಡ್‌ನಲ್ಲಿ ವಾಸಿಸುತ್ತಿರುವ ವ್ಯಕ್ತಿಯೊಬ್ಬ/ಯೊಬ್ಬಳ ವಿವರಗಳ ದಾಖಲೆ’. ನೋಂದಣಿ ಮತ್ತು ಜನಗಣತಿ ಆಯುಕ್ತರ ಕಚೇರಿಯು ಎನ್‌ಪಿಆರ್‌ಅನ್ನು ’ಈ ದೇಶದಲ್ಲಿನ ಸಾಮಾನ್ಯ ನಿವಾಸಿಗಳ ನೋಂದಣಿ’ ಎಂದು ವಿವರಿಸುತ್ತದೆ.

ಕಳೆದ ಆರು ತಿಂಗಳು ಮತ್ತು ಅಥವಾ ಅದಕ್ಕಿಂತ ಹೆಚ್ಚು ಕಾಲ ಸ್ಥಳೀಯ ಪ್ರದೇಶಗಳಲ್ಲಿ ವಾಸಿಸುತ್ತಿರುವರು ಎಂದು ವಿವರಿಸಲಾಗಿದೆ. ಭಾರತದ ಪ್ರಜೆಗಳು 1987ಕ್ಕಿಂತ ಮೊದಲು ಜನಿಸಿದವರು, 1987-2004ರ ನಡುವೆ ಜನಿಸಿದವರು ಇವರ ಕನಿಷ್ಟ ಒಬ್ಬ ಪೋಷಕರು ಭಾರತೀಯ ನಾಗರಿಕರಾಗಿರಬೇಕು, 2004ರ ನಂತರ ಜನಿಸಿದವರಿಗೆ ಒಬ್ಬ ಪೋಷಕರು ಭಾರತದ ನಾಗರಿಕರು ಇನ್ನೊಬ್ಬರು ಅಕ್ರಮ ವಲಸಿಗರಾಗಿರಬಾರದು. ಇದರ ಸಂಕೀರ್ಣತೆ ಇಲ್ಲಿನ ಆದಿವಾಸಿಗಳು, ತಳ ಸಮುದಾಯಗಳು, ಗ್ರಾಮೀಣ ಭಾಗದ ಜನತೆಗೆ ಮಾರಕವಾಗಲಿದೆ. ಯಾವುದೇ ಸೂಕ್ತ ದಾಖಲೆಗಳಿಲ್ಲದೆ ನೂರಾರು ವರ್ಷಗಳಿಂದ ಈ ದೇಶದಲ್ಲಿ ಬದುಕುತ್ತಿದ್ದ ಇಲ್ಲಿನ ಮೂಲನಿವಾಸಿಗಳು ಆಸ್ತಿತ್ವದ ಬಿಕ್ಕಟ್ಟು ಎದುರಿಸಲಿದ್ದಾರೆ.

ದೃಶ್ಯ 4,5,6..: 1947ರ ದೇಶ ವಿಭಜನೆ ಸಂದರ್ಭದ ವಲಸೆಗಳ ಕಥನ ಮತ್ತು ಮಾರಣಹೋಮ, 1964ರ ಪೂರ್ವ ಪಾಕಿಸ್ತಾನದಿಂದ ಪೂರ್ವ ಭಾರತಕ್ಕೆ ವಲಸೆ, 1971ರ ಬಾಂಗ್ಲಾ ಸ್ವಾತಂತ್ರ್ಯದ ಸಂದರ್ಭದ ವಲಸೆ… ಹೀಗೆ ಪಟ್ಟಿ ಮುಂದುವರೆಯುತ್ತದೆ.

ಮೇಲಿನ ದೃಶ್ಯಗಳನ್ನು ಏಕಸೂತ್ರದ ಕ್ರಮದಲ್ಲಿ ಜೋಡಿಸಿಕೊಂಡರೆ ಸಮಗ್ರ ಚಿತ್ರಣ ದೊರಕುತ್ತದೆ. ಅದರ ಫಲಿತವನ್ನು ವಿಶ್ಲೇಷಣೆ ಮಾಡಲು ಯಾವುದೇ ಬೌದ್ಧಿಕ ಕಸರತ್ತಿನ ಅಗತ್ಯವಿಲ್ಲ. ಕನಿಷ್ಠ ಸಾಮಾನ್ಯ ಜ್ಞಾನವೇ ಎಲ್ಲವನ್ನೂ ವಿವರಿಸುತ್ತದೆ. ಆದರೆ ಕಾಶ್ಮೀರಿ ಪಂಡಿತರ ದೇಶದೊಳಗಿನ ಅಂತರಿಕ ವಲಸೆಯನ್ನು ಯಾವ ಆಯಾಮದಲ್ಲಿ ನಿರ್ವಚಿಸಬೇಕು ಎನ್ನುವ ಪ್ರಶ್ನೆ ಕೇಳಿಕೊಳ್ಳದ ’ಕಾಶ್ಮೀರಿ ಫೈಲ್ಸ್’ ನಿರ್ದೇಶಕರು ಬ್ರಾಹ್ಮಣ-ಹಿಂದುತ್ವದ ಪ್ರೊಪಗಂಡಾ ಸಿನಿಮಾ ತಯಾರಿಸಿ ಅದನ್ನು ಉಣಬಡಿಸುತ್ತಿರುವುದನ್ನು ಕಂಡಾಗ ಮತ್ತು ಈ ಹಸೀ ಸುಳ್ಳುಗಳನ್ನು ಪ್ರಚಾರ ಮಾಡುತ್ತಿರುವ ಸಂಘ ಪರಿವಾರವನ್ನು ಕಂಡಾಗ ಅವರಿಗೆ ಮೇಲಿನ ದೃಶ್ಯಗಳನ್ನು ಸಮಗ್ರವಾಗಿ ಮನದಟ್ಟು ಮಾಡಿಕೊಡಬೇಕು ನಿಜ. ಆದರೆ ಅದಕ್ಕೆ ಅಗತ್ಯವಾದ ನಿರೂಪಣೆಯ ಸ್ವರೂಪವೇ ನಮಗೆ ಗೊತ್ತಿಲ್ಲ. ಸಜ್ಜನರ ನಿರ್ಲಕ್ಷ್ಯ, ನಿಷ್ಕ್ರಿಯತೆಯಿಂದಾಗಿ “ಮುಸ್ಲಿಂರು ವಲಸೆ ಬಂದರೆ ’ನುಸುಳುಕೋರರು’ ಮತ್ತು ಹಿಂದೂಗಳ ವಲಸೆಯನ್ನು ’ನಿರಾಶ್ರಿತರು’” ಎನ್ನುವ ಮಿಥ್‌ಅನ್ನು ದುರ್ಜನರು ಯಶಸ್ವಿಯಾಗಿ ಬಿತ್ತಿ ಬೆಳೆಸಿದ್ದಾರೆ

ಉಪ ಸಂಹಾರ

ತಾವು ವಾಸಿಸುವ ದೇಶದೊಳಗಿನ ಹದಗೆಟ್ಟ ಕಾನೂನು ವ್ಯವಸ್ಥೆ, ಬಹುಸಂಖ್ಯಾತರ ದೌರ್ಜನ್ಯ, ಹಲ್ಲೆ ಮತ್ತು ನಿರಂತರ ಹಿಂಸೆಯ ಕಾರಣಕ್ಕೆ ವಲಸೆ ಬರುವ ನಿರಾಶ್ರಿತರನ್ನು ಒಳಗೆ ಸ್ವೀಕರಿಸಲ್ಪಡುವುದು ಅವರ ಧರ್ಮವನ್ನು ಆಧರಿಸಿರುತ್ತದೆ ಎಂದು ಭಾರತ ಸ್ಪಷ್ಟಪಡಿಸಿದರೆ, ಪಶ್ಚಿಮ ಯುರೋಪ್ ದೇಶಗಳು ಅದು ಅವರ ಪ್ರಾದೇಶಿಕ ಹಿನ್ನೆಲೆ ಮತ್ತು ಧರ್ಮ ಐಡೆಂಟಿಟಿಯನ್ನು ಆಧರಿಸಿರುತ್ತದೆ ಎಂದು ತೋರಿಸಿಕೊಟ್ಟರು. ಎರಡೂ ಸಂದರ್ಭದಲ್ಲಿ ಮುಸ್ಲಿಮರು ಬಹುಸಂಖ್ಯೆಯಲ್ಲಿ ಬಲಿಪಶುಗಳಾದರು. ಪ್ಯಾಲೆಸ್ಟೀನ್, ಸಿರಿಯಾ, ಇರಾಕ್, ಕುವೈತ್, ಟರ್ಕಿ ದೇಶಗಳಿಂದ ನಿರಾಶ್ರಿತರಾದವರನ್ನು ಪಶ್ಚಿಮ ದೇಶಗಳು ಪರಿಗಣಿಸಿದ ರೀತಿ ಅಮಾನವೀಯವಾಗಿದೆ.

ಫಜಲ್ ಅಬ್ದಾಲಿ

ಮತ್ತೊಂದೆಡೆ ಗ್ರಾಮದಿಂದ ಗ್ರಾಮಕ್ಕೆ, ಗ್ರಾಮದಿಂದ ನಗರಕ್ಕೆ, ನಗರದಿಂದ ನಗರಕ್ಕೆ, ನಗರದಿಂದ ಗ್ರಾಮಕ್ಕೆ, ರಾಜ್ಯದಿಂದ ರಾಜ್ಯಕ್ಕೆ ಹೊಟ್ಟೆಪಾಡಿಗಾಗಿ ನಡೆಯುವ ದೇಶದ ಒಳಗಿನ ಅಂತರಿಕ ವಲಸೆಯ ಸ್ವರೂಪಕ್ಕೂ ದೇಶದೇಶಗಳ ನಡುವೆ ನಡೆಯುವ ವಲಸೆಗೂ ಭಾರೀ ವ್ಯತ್ಯಾಸಗಳಿವೆ. ಪಕ್ಕದ ದೇಶದಿಂದ ಗಡಿ ದಾಟಿ ವಲಸೆ ಬಂದಾಗ ಆ ದೇಶದ ಗಡಿ ಭಾಗಗಳಲ್ಲಿ ಸಹಜವಾಗಿಯೇ ಉದ್ವಿಗ್ನತೆ, ಅಸ್ಥಿರತೆ, ಅಂತರಿಕ ಭದ್ರತೆಯ ಸಮಸ್ಯೆ, ’ಸ್ಥಳೀಯತೆ ವರ್ಸಸ್ ಅನ್ಯರು’ ಬಿಕ್ಕಟ್ಟುಗಳು ಎದುರಾಗುತ್ತವೆ. ಆದರೆ ಪ್ರಭುತ್ವಕ್ಕೆ ಪ್ರಾಮಾಣಿಕತೆಯಿದ್ದರೆ, ನೆರೆಯ ದೇಶದೊಂದಿಗೆ ಉತ್ತಮ ಸಂಬಂಧ ಹೊಂದಿದ್ದರೆ ಮತ್ತು ಮನುಷ್ಯರೆಲ್ಲರೂ ಒಂದು ಎನ್ನುವ ಮನಸ್ಥಿತಿಯಿದ್ದರೆ ಈ ವಲಸೆ ಬಿಕ್ಕಟ್ಟುಗಳನ್ನು ಪರಿಹರಿಸಿಕೊಳ್ಳಬಹುದು. ಆದರೆ ಸಂಘ ಪರಿವಾರದಂತಹ ಬಹುಸಂಖ್ಯಾತವಾದದ ಮತಾಂಧ ಸಿದ್ಧಾಂತ ಹೊಂದಿರುವವರು ಅಧಿಕಾರದಲ್ಲಿದ್ದರೆ ಈ ವಲಸೆ ಸಮಸ್ಯೆ ಮತ್ತಷ್ಟು ಕಗ್ಗಂಟಾಗುತ್ತದೆ. ಇಂದು ಭಾರತವು ಅಂತಹ ಕುಣಿಕೆಯಲ್ಲಿ ನೇತಾಡುತ್ತಿದೆ.

ಸಂಘ ಪರಿವಾರವು ಪ್ರತಿಯೊಂದು ವಲಸೆಯನ್ನು ರಾಜಕೀಕರಣಗೊಳಿಸುತ್ತದೆ ಮತ್ತು ಮುಸ್ಲಿಮರ ವಲಸೆಯನ್ನು ಅಪರಾಧೀಕರಣಗೊಳಿಸುತ್ತದೆ. ಅನೇಕ ಬಾರಿ ಈ ನೆರೆ ದೇಶದ ನಿರಾಶ್ರಿತರು ಬಿಜೆಪಿ ಪಕ್ಷದ ಗೆಲುವಿಗಾಗಿ ವಲಸೆ ಬಂದರೇನೊ ಎಂಬಂತಹ ವಿದ್ಯಾಮಾನಗಳು ನಮ್ಮ ಕಣ್ಣೆದೆರುಗಿದೆ. ಉದಾಹರಣೆಗೆ ಕಳೆದ ಎಪ್ಪತ್ತು ವರ್ಷಗಳಿಂದಲೂ ಜ್ವಲಂತ ಸಮಸ್ಯೆಯಾಗಿರುವ ಅಸ್ಸಾಂನ ಬಾಂಗ್ಲಾ ದೇಶಿಗರ ವಲಸೆ ನಮ್ಮ ಕಣ್ಣೆದೆರುಗಿದೆ. ಅದೇ ಸಂದರ್ಭದಲ್ಲಿ ಅಸ್ಸಾಂನಲ್ಲಿ ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಸತತವಾಗಿ ಚುನಾವಣೆ ಗೆಲ್ಲುತ್ತಿದೆ. ಇದು ಅರ್ಥಮಾಡಿಕೊಳ್ಳಲು ಸರಳವೂ ಹೌದು, ಆದರೆ ಬಿಕ್ಕಟ್ಟನ್ನು ನ್ಯಾಯಯುತವಾಗಿ ಪರಿಹರಿಸಲು ಸಂಕೀರ್ಣವೂ ಹೌದು. ಭಾರತದ ಪಶ್ಚಿಮ ರಾಜ್ಯಗಳ ಗಡಿಗಳಲ್ಲಿ ಪಾಕಿಸ್ತಾನದಂತಹ ದೀರ್ಘಕಾಲದ ’ವಿರೋಧಿ’ ದೇಶವಿದ್ದರೂ ಸಹ ಅಲ್ಲಿ ಅಂತಹ ವಲಸೆಯ ಗಂಭೀರ ಸಮಸ್ಯೆಗಳಿಲ್ಲ. ಆದರೆ ಪೂರ್ವದಲ್ಲಿ ಬಾಂಗ್ಲಾ, ನೇಪಾಳ, ಭೂತಾನ, ಮಯಾನ್ಮಾರ್‌ದಂತಹ ಸ್ನೇಹಯುತ ದೇಶಗಳಿದ್ದರೂ ಸಹ ಆ ಭಾಗದ ಗಡಿ ಸಮಸ್ಯೆ ದಿನದಿನಕ್ಕೂ ಬಿಗಡಾಯಿಸುತ್ತಿದೆ. ಇದನ್ನು ಗ್ರಹಿಸಲು ವಿದೇಶಾಂಗ ನೀತಿಯ, ಕ್ಷೇತ್ರ ಅಧ್ಯಯನದ ಅವಶ್ಯಕತೆಯಿದೆ

ಮಾನವ ಚರಿತ್ರೆಯ ಜೊತೆಜೊತೆಗೆ ವಲಸೆಯ ಚರಿತ್ರೆಯನ್ನು ಅವಲೋಕಿಸಿದಾಗ ಎಲ್ಲಾ ಸಂದರ್ಭಗಳಲ್ಲಿ ಮತ್ತು ಎಲ್ಲಾ ಕಾಲಘಟ್ಟದಲ್ಲಿ ಹೀಗೆ ವಲಸೆ ಬಂದ ನಿರಾಶ್ರಿತರು ಅನ್ಯರಂತೆ ಬದುಕುವ ಅನಿವಾರ್ಯತೆ ಉಂಟಾಗಿರುವುದು ಸಾಬೀತಾಗಿದೆ. ವಲಸೆ ಬಂದ ದೇಶದಲ್ಲಿ ಬಹುಸಂಖ್ಯಾತರಿಂದ ದಿನನಿತ್ಯದ ಹಿಂಸೆಯನ್ನು ತಪ್ಪಿಸಿಕೊಳ್ಳಲು ಅಲ್ಪಸಂಖ್ಯಾತ ವಲಸಿಗರು ಅಗೋಚರರಾಗಿ/ಅಜ್ಞಾತರಾಗಿ ಜೀವಿಸಬೇಕಾಗುತ್ತದೆ. ಈ ನಿರಾಶ್ರಿತರು ಭೂಮಿ ಅತಿಕ್ರಮಣ ಮಾಡಿಕೊಳ್ಳುತ್ತಾರೆ, ಉದ್ಯೋಗ ಕಸಿಯುತ್ತಾರೆ, ಸಾಂಸ್ಕೃತಿಕವಾಗಿ ನಮ್ಮ ಮೇಲೆ ಅಧಿಪತ್ಯ ಸ್ಥಾಪಿಸುತ್ತಾರೆ ಎನ್ನುವ ಸ್ಥಳೀಯರ ಆಕ್ರೋಶಕ್ಕೆ, ಸಂಘ ಪರಿವಾರವು ಇವರು ನಮ್ಮ ಹೆಣ್ಣುಮಕ್ಕಳನ್ನು ಅಪಹರಿಸುತ್ತಾರೆ ಎನ್ನುವ ತುಪ್ಪ ಸುರಿದು ವಲಸೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಅಪರಾಧೀಕರಣಗೊಳಿಸುವಲ್ಲಿ ಯಶಸ್ವಿಯಾಗಿದೆ.

ದೇಶವೆಂದರೆ ಗಡಿಯೊಳಗೆ ಬದುಕುತ್ತಿರುವ ಜನರು ಎನ್ನುವ ವ್ಯಾಖ್ಯಾನವು ನಿರಾಶ್ರಿತರಿಗೋಸ್ಕರ ಗಡಿಯನ್ನು ಹಿಗ್ಗಿಸದಂತೆ ನಿಯಂತ್ರಿಸುತ್ತದೆ. ಇದು ಪ್ರತಿಯೊಂದು ನಾಗರಿಕ ದೇಶದ ಸಮಸ್ಯೆಯೂ ಹೌದು. ಮಾನವ ವಲಸೆಯ ಮಾನವಶಾಸ್ತ್ರೀಯ ಅಧ್ಯಯನ ನಡೆದಿರುವುದು ನಿಜವಾದರೂ ಸಹ ಅದು ಆಯಾ ಕಾಲದ ಸಂದರ್ಭಕ್ಕೆ ಪ್ರಸ್ತುತವಾಗಿದೆಯೇ ಎನ್ನುವುದು ಅನುಮಾನ. ಏಕೆಂದರೆ 80ರ ದಶಕದ ವಲಸೆ ಬಿಕ್ಕಟ್ಟಿಗೂ 21ನೆ ಶತಮಾನದ ವಲಸೆ ಬಿಕ್ಕಟ್ಟಿಗೂ ಅಂತರವಿದೆ. ಮುಸ್ಲಿಮರಾಗಿದ್ದರೂ ಸಹ ಬಾಂಗ್ಲಾ ನಿರಾಶ್ರಿತರ ಬಿಕ್ಕಟ್ಟಿಗೂ ರೋಹಿಂಗ್ಯಾ ಮುಸ್ಲಿಂರ ಬಿಕ್ಕಟ್ಟಿಗೂ ವ್ಯತ್ಯಾಸಗಳಿವೆ. ಮತ್ತು ಸದಾ ರಾಷ್ಟ್ರೀಯತೆಯ ಬೆಂಕಿಯುಗುಳುತ್ತಿರುವ ಬಿಜೆಪಿ ಅಧಿಕಾರದಲ್ಲಿದೆ. ಇದು ಮತ್ತೊಂದು ಬಗೆಯ ಅಧ್ಯಯನ, ಸಂಶೋಧನೆಯನ್ನು ಕೇಳುತ್ತದೆ. ವಲಸಿಗರಿಗೆ ತಾವು ವಲಸೆ ಬಂದ ದೇಶದ ಔದಾರ್ಯತೆ, ಅನುಕಂಪ ಮತ್ತು ಉದಾರತೆಯ ಅಗತ್ಯವಿದೆ ಮತ್ತು ಬಲಪಂಥೀಯ ರಾಷ್ಟ್ರೀಯವಾದಿ ಸರಕಾರಗಳಿದ್ದರೆ ಇವುಗಳನ್ನು ಸೃಷ್ಟಿಸಿಕೊಳ್ಳಬೇಕಾದ ಸಂಕಷ್ಟಗಳಿವೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಏಷ್ಯದಲ್ಲಿನ ಜಾತಿ, ವರ್ಣ, ಧರ್ಮ, ಜನಾಂಗೀಯತೆಗಳನ್ನೊಳಗೊಂಡ ವಲಸೆ ಪ್ರಕ್ರಿಯೆಯ ಮಾನವಶಾಸ್ತ್ರೀಯ ಅಧ್ಯಯನ ನಡೆಸಬೇಕಾದ ಅವಶ್ಯಕತೆಯಿದೆ.

ಬಿ. ಶ್ರೀಪಾದ ಭಟ್

ಬಿ. ಶ್ರೀಪಾದ ಭಟ್
ವೃತ್ತಿಯಲ್ಲಿ ಇಂಜಿನಿಯರ್ ಆದ ಬಿ.ಶ್ರೀಪಾದ್ ಭಟ್ ಹಿರಿಯ ಚಿಂತಕ, ಬರಹಗಾರ. ಹಲವು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮಾಜದ ಆಗುಹೋಗುಗಳಿಗೆ ನಿರಂತರ ಸ್ಪಂದಿಸುವ ಇವರು ಸಮಾನ ಶಿಕ್ಷಣಕ್ಕಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.


ಇದನ್ನೂ ಓದಿ: ಹುಸಿ ಕಾಳಜಿಯ, ಪಕ್ಷಪಾತ ಧೋರಣೆಯ, ದ್ವೇಷದ ಅಜೆಂಡಾವುಳ್ಳ ’ದ ಕಾಶ್ಮೀರ್ ಫೈಲ್ಸ್’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...