Homeಮುಖಪುಟಆಹಾರ ವೈವಿಧ್ಯತೆ; ಕರಾವಳಿಯ ಮೀನೂಟ ರುಚಿಗೂ ಸೈ, ಆರೋಗ್ಯದ ದೃಷ್ಟಿಯಲ್ಲೂ ಮೇಲುಗೈ

ಆಹಾರ ವೈವಿಧ್ಯತೆ; ಕರಾವಳಿಯ ಮೀನೂಟ ರುಚಿಗೂ ಸೈ, ಆರೋಗ್ಯದ ದೃಷ್ಟಿಯಲ್ಲೂ ಮೇಲುಗೈ

- Advertisement -
- Advertisement -

ಮನುಷ್ಯನ ನಾಗರಿಕತೆಯ ಸುದೀರ್ಘ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿರುವುದು ಆಹಾರ. ಹವಾಗುಣ-ಪರಿಸರ, ಲಭ್ಯವಿರುವ ಸಂಪನ್ಮೂಲಗಳಿಗೆ ಅನುಗುಣವಾಗಿ ಜಗತ್ತಿನ ವಿವಿಧ ಸ್ಥಳೀಯ ಆಹಾರ ವ್ಯವಸ್ಥೆಗಳು ವಿಭಿನ್ನ ಶೈಲಿಯಲ್ಲಿ ರೂಪುಗೊಂಡಿದೆ. ಭಾರತದಂತಹ ವಿಶಾಲ ದೇಶದಲ್ಲಿಯೂ ವಿಭಿನ್ನ ರೀತಿಯ ಮತ್ತು ಬಹುತ್ವದ ಆಹಾರ ಸಂಸ್ಕೃತಿಯ ವೈಶಿಷ್ಟತೆ ಇದೆ.

ಭಾರತದ ಅಸಂಖ್ಯಾತ ಆಹಾರ ವೈಶಿಷ್ಟ್ಯತೆಗಳಂತೆಯೇ ಕರ್ನಾಟಕವೂ ವಿಭಿನ್ನ ಆಹಾರ ಸಂಸ್ಕೃತಿಗಳ ತವರು. ಮಲೆನಾಡು, ಬಯಲುಸೀಮೆ, ಮಂಗಳೂರು ಹೀಗೆ ಕೆಲವೊಮ್ಮ ವಿಭಿನ್ನ ಪ್ರದೇಶಗಳಿಗೆ ಅನ್ವಯವಾಗುವಂತೆ ಇನ್ನೂ ಕೆಲವೊಮ್ಮೆ ವಿಭಿನ್ನ ಸಮುದಾಯಗಳ ವಿಶಿಷ್ಟತೆಯಾಗಿ ಹಲವು ಬಗೆಯ ಆಹಾರ ಪದ್ಧತಿಗಳಿವೆ. ಈ ಪೈಕಿ ಗಮನಾರ್ಹ ಎಂಬಂತೆ ಜನಪ್ರಿಯವಾಗಿರುವುದು ಮಂಗಳೂರು ಕರಾವಳಿಯ ಸಾಂಪ್ರದಾಯಿಕ ಮೀನೂಟ. ಕರಾವಳಿ ಭಾಗದಲ್ಲಿ ಬಹುಸಂಖ್ಯಾತ ಸಮಾಜವಾಗಿರುವ ಬೆಸ್ತರ ಪಾಲಿಗೆ ಮೀನು ಎಂಬುದು ಆದಾಯ ಮಾತ್ರವಲ್ಲ ಆಹಾರದಲ್ಲೂ ಬಹುಮುಖ್ಯವಾದ ಪಾತ್ರವನ್ನು ನಿಭಾಯಿಸುತ್ತದೆ. ತಮ್ಮ ಆಹಾರ ಪದ್ಧತಿಯಲ್ಲಿ ಮೀನನ್ನೇ ಪ್ರಧಾನವಾಗಿಸಿಕೊಂಡಿರುವ ಈ ಕಾಯಕ ಸಮಾಜ ಎಲ್ಲ ಕರಾವಳಿ ತೀರಗಳನ್ನೂ ಸೇರಿದಂತೆ, ನೀರಿನ ನೆಲೆ ಇರುವ ಎಲ್ಲಾ ಭಾಗಗಳಲ್ಲೂ ಹರಡಿಕೊಂಡಿದೆ.

ವಿಭಿನ್ನ ನಾಗರಿಕತೆಗಳು ಬೆಳವಣಿಗೆಗಳ ಜೊತೆಗೆ ಮನುಷ್ಯ ಉಭಯಾಹಾರಿಯಾಗಿ ಬೆಳೆಯುತ್ತಾ ಹೋದ. ಕಲ್ಲುಗಳಿಂದ ಆಯುಧಗಳನ್ನು ರೂಪಿಸಿದ ನಂತರ ಮಾನವ ಬೇಟೆಯಾಡಲು ಮುಂದಾಗಿದ್ದ. ಕಾಡುಪ್ರಾಣಿಗಳನ್ನು ಬೇಟೆಯಾಡುವುದಕ್ಕೆ ಮುಂಚೆಯೇ ಮನುಷ್ಯ ಮೀನಿನ ಬೇಟೆಯನ್ನು ಕಲಿತಿದ್ದ ಎನ್ನುತ್ತವೆ ನಾಗರಿಕತಗೆ ಸಂಬಂಧಿಸಿದ ಮಾನವಶಾಸ್ತ್ರ ಸಂಶೋಧನೆಗಳು. ಹಾಗೆ ನೋಡಿದರೆ ಕಾಯಕ ಸಮಾಜವಾದ ಬೆಸ್ತ ಸಮುದಾಯಕ್ಕೂ ಸಾವಿರಾರು ವರ್ಷಗಳ ಇತಿಹಾಸವಿದೆ. ನೈದಲ್ ಎಂದು ಕರೆಯಲ್ಪಡುವ ಸಮುದ್ರ ಮತ್ತು ಅದಕ್ಕೆ ಹೊಂದಿಕೊಂಡಂತಿರುವ ಕರಾವಳಿ ತೀರ ಪ್ರದೇಶಗಳಲ್ಲಿ ತನ್ನ ಕಬಂಧಬಾಹುಗಳನ್ನು ವಿಸ್ತರಿಸಿ ಅಲ್ಲೇ ಮೀನು ಕೃಷಿ ಮಾಡುತ್ತಾ ಬೆಳದ ಈ ಬೆಸ್ತ ಸಮಾಜ ಸಾಂಪ್ರದಾಯಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಇತರೆ ಸಮಾಜಗಳಿಂದ ಸಾಕಷ್ಟು ಭಿನ್ನವಾಗಿದೆ. ಅಲ್ಲದೆ, ಇವರ ಜೀವನಶೈಲಿ ಮತ್ತು ಆಹಾರ ಪದ್ಧತಿ ಸಾಕಷ್ಟು ವೈವಿಧ್ಯತೆಯಿಂದ ಕೂಡಿರುತ್ತದೆ ಎಂದರೆ ತಪ್ಪಾಗಲಾರದು.

ಕಾಯಕ ಸಮಾಜವಾಗಿ ಬೆಸ್ತರು

ಮೊಗವೀರರು ಕರ್ನಾಟಕದ ಕರಾವಳಿ ಪ್ರದೇಶದ ಪ್ರಮುಖ ಮೀನುಗಾರಿಕೆ ಸಮುದಾಯ. ಅವರು ತುಳುನಾಡಿನಲ್ಲಿರುವ ಜನಾಂಗೀಯ ಗುಂಪುಳಲ್ಲಿ ದೊಡ್ಡ ಸಮುದಾಯವಾಗಿದೆ. ’ಮೊಗವೀರ’ ಎನ್ನುವ ಪದ ಹಳೆಯ ಪದ ’ಮೊಗೆಯರ್’ ಪದದ ಬದಲಾದ ಸ್ವರೂಪ ಕೂಡ ಎನ್ನಲಾಗುತ್ತದೆ. ಅವರು ಕರ್ನಾಟಕದ ಕರಾವಳಿ ಪ್ರದೇಶದ ಮೀನುಗಾರಿಕೆ ಮತ್ತು ಸಮುದ್ರ ವ್ಯಾಪಾರದಲ್ಲಿ ತೊಡಗಿಕೊಂಡವರು.

ಉತ್ತರ ಕೇರಳ, ಕಾಸರಗೋಡು ಮತ್ತು ಕರ್ನಾಟಕದ ಕೆನರಾ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸ್ಥಳೀಯರೆನಿಸಿದ ಮೊಗವೀರರು ಮುಂಬೈ, ಬೆಂಗಳೂರು ಮತ್ತು ದುಬೈ ಇನ್ನಿತರ ಭಾಗಗಳಿಗೆ ವಲಸೆ ಹೋದದ್ದೂ ಇದೆ. ಇನ್ನೂ ಹಲವೆಡೆ ಮೀನು ಹಿಡಿಯುವ ಕಾಯಕವನ್ನು ಆಧರಿಸಿ ಹಲವರನ್ನು ಬೆಸ್ತರು ಎಂದು ಕೂಡ ಕರೆಯಲಾಗುತ್ತದೆ.

ಬೆಸ್ತ ಸಮಾಜದಲ್ಲಿ ಮೀನು ಹಿಡಿಯುವ ಕೆಲಸವನ್ನು ಸಾಮಾನ್ಯವಾಗಿ ಬೇಟೆ ಎಂದೇ ಗುರುತಿಸಲಾಗುತ್ತದೆ. ಬೆಸ್ತರು ಸಮುದ್ರದಲ್ಲಿ ಒಮ್ಮೆ ಮೀನಿನ ಬೇಟೆಗೆ ಇಳಿದರೆ ವಾರಗಳ ಕಾಲ ಸಮುದ್ರದಲ್ಲೇ ಕಳೆಯುವುದಿದೆ. ಹೀಗೆ ಸಮುದ್ರಕ್ಕೆ ತೆರಳುವ ಬೆಸ್ತರು ದಡಕ್ಕೆ ಮರಳುವವರೆಗೆ ಪ್ರತಿ ಹೊತ್ತು ಊಟಕ್ಕಾಗಿ ಮೀನನ್ನೇ ಅವಲಂಬಿಸಿರುತ್ತಾರೆ. ಬೇಟೆಗೆ ತೆರಳುವಾಗಲೇ ಮೀನಿನ ಅಡಿಗೆಗೆ ಬೇಕಾಗುವ ಎಲ್ಲಾ ಅಡಿಗೆ ವಸ್ತುಗಳನ್ನು, ಮಸಾಲೆಗಳನ್ನು ತಮ್ಮ ಬಳಿ ತೆಗೆದುಕೊಂಡೇ ಹೋಗುತ್ತಾರೆ.

ಇನ್ನೂ ನೀರಿನ ನೆಲೆ ಇರುವ ಬಹುತೇಕ ಎಲ್ಲಾ ಭಾಗದಲ್ಲೂ ಮೀನಿನ ಬೇಟೆ ಎಂಬುದು ಸರ್ವೇಸಾಮಾನ್ಯ. ಕರ್ನಾಟಕ ಲಿಂಗನಮಕ್ಕಿ, ಭದ್ರಾ ಜಲಾಶಯ, ಆಲಮಟ್ಟಿ ಜಲಾಶಯ ಸೇರಿದಂತೆ
ಹಿನ್ನೀರಿನ ಪ್ರದೇಶದ ಎಲ್ಲಾ ಭಾಗದಲ್ಲೂ ಹೀಗೆ ಹಲವರು ಮೀನಿನ ಬೇಟೆ ನಡೆಸುತ್ತಾರೆ. ಕುಟುಂಬದಿಂದ ದೂರಾಗಿ ತಿಂಗಳುಗಟ್ಟಲೆ ಹಿನ್ನೀರಿನ ವನ ಪ್ರದೇಶಗಳಲ್ಲೇ ಠಿಕಾಣಿ ಹೂಡುವ ಬೆಸ್ತರಿಗೂ ಪ್ರತಿದಿನ ತರಹೇವಾರಿ ಮೀನೆ ಆಹಾರ.

ಬೆಸ್ತ ಸಮುದಾಯದ ಆಹಾರ

ಬೆಸ್ತರ ಪ್ರಮುಖ ಆಹಾರ ಮೀನು. ಮೀನಿನ ಹುಳಿ ಸಾರು ಮತ್ತು ಮೀನಿನ ರೋಸ್ಟ್ ಬೆಸ್ತರು ಮನೆಯಲ್ಲಿ ಮಾಡುವ ಪ್ರಮುಖ ಮತ್ತು ಪರಿಚಿತ ಖಾದ್ಯ. ಇದಲ್ಲದೆ, ವಿಶೇಷ ಕಾಲಗಳಲ್ಲಿ ಅಥವಾ ಹಬ್ಬ ಹರಿದಿನಗಳಲ್ಲಿ ಸೀಗಡಿ ಮೀನಿನ ಬಿರಿಯಾನಿ ಅಥವಾ ಸೀಗಡಿ ಸುಕ್ಕ ಮಾಡುವುದು ವಾಡಿಕೆ. ಇನ್ನೂ ಮೀನುಗಳನ್ನು ಶುಚಿಗೊಳಿಸಿ ಅದಕ್ಕೆ ಉಪ್ಪನ್ನು ಸವರಿ ಹುರಿಯಾಗುವಂತೆ ಒಣಗಿಸಲಾಗುತ್ತದೆ.

ಹೀಗೆ ಬಿಸಿಲಿಗೆ ಹುರಿಯಾದ ಮಾಂಸ ಎಷ್ಟು ದಿನವಾದರೂ ಕೆಡುವುದಿಲ್ಲ. ಇಂತಹ ಉಪ್ಪಿನ ಒಣ ಮೀನಿನಿಂದಲೂ ಸಹ ಸಾರು ಮತ್ತು ಸುಕ್ಕ ಮಾಡಲಾಗುತ್ತದೆ. ಸಮುದ್ರದ ತೀರದಲ್ಲೇ ವಾಸ್ತವ್ಯ ಹೊಂದಿರುವ ಜನ ತೆಂಗಿನಮರದಿಂದ ಸೇಂಧಿ ಇಳಿಸಿದರೆ ಸೇಂಧಿಗೆ ಒಣ ಮೀನನ ಸುಕ್ಕಾಗಿಂತ ಒಳ್ಳೆಯ ಸ್ನೇಹಿತನಿಲ್ಲ ಎಂಬ ಮಾತು ಕರಾವಳಿ ಭಾಗದಲ್ಲೆಲ್ಲಾ ಈಗಲೂ ಚಾಲ್ತಿಯಲ್ಲಿದೆ. ಕಪ್ಪೆಚಿಪ್ಪಿನ ಹುಳವನ್ನೂ ಸಹ ವಿವಿಧ ಖಾದ್ಯಗಳನ್ನಾಗಿ ಅಡಿಗೆ ಮಾಡುವ ವಾಡಿಕೆ ಇದೆ. ಕರ್ನಾಟಕ ಕರಾವಳಿಯ ಪುಳಿಮುಂಚಿ ಎಲ್ಲರೂ ಸಾಮಾನ್ಯವಾಗಿ ಕೇಳಿರಬಹುದಾದ ಸುಪ್ರಸಿದ್ಧ ಖಾದ್ಯ.

ಇನ್ನು ಸೀಫುಡ್ ಎಂದರೆ ಕೇವಲ ಕರಾವಳಿ ಶೈಲಿಯದ್ದಕ್ಕೆ ಸೀಮಿತಗೊಳ್ಳಬೇಕಾಗಿಲ್ಲ. ಸೀಫುಡ್‌ಗಳ ರುಚಿ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ದಕ್ಷಿಣ ಕನ್ನಡ ಕರಾವಳಿಯಲ್ಲಿ ತಯಾರಿಸುವ ಕಡಲ ಖಾದ್ಯದ ರುಚಿ ಉತ್ತರ ಕನ್ನಡದ ಪ್ರದೇಶಗಳಿಗೆ ಬರುವಾಗ ಭಿನ್ನವಾಗಿರುತ್ತದೆ. ಇನ್ನು ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ ಮಹಾರಾಷ್ಟ್ರಿಯನ್ ಶೈಲಿಯ ಮೀನೂಟಗಳು ತುಂಬಾ ಫೇಮಸ್. ಬೆಂಗಳೂರು ಮತ್ತು ಮೈಸೂರು ಕಡೆಯ ಮೀನೂಟ ಇನ್ನೂ ವಿಭಿನ್ನವಾಗಿರುತ್ತದೆ. ಕೆಲವರು ಕರಾವಳಿ ಶೈಲಿಯ ಸೀಫುಡ್‌ಗಳನ್ನು ಮಾತ್ರವಲ್ಲದೆ, ಕೇರಳ ಶೈಲಿ, ಗೋವಾ ಶೈಲಿ, ಬೆಂಗಾಲಿ ಶೈಲಿಯ ಸೀಫುಡ್‌ಗಳನ್ನೂ ಇಷ್ಟಪಟ್ಟು ತಿನ್ನುತ್ತಾರೆ. ಒಟ್ಟಿನಲ್ಲಿ ಸಾಂಪ್ರದಾಯಿಕ ಸೀಫುಡ್ ಕೂಡಾ ಈಗಿನ ಫುಡ್ ಟ್ರೆಂಡ್‌ಗೆ ಹೊಂದಿಕೊಂಡು ಜನಪ್ರಿಯವಾಗುತ್ತಿರುವ ಪರಿ ಅಚ್ಚರಿ ಮೂಡಿಸುತ್ತದೆ.

ಜನಸಾಮಾನ್ಯರ ಆಹಾರವಾಗಿ ಮೀನು

ಭಾರತೀಯರ ಆಹಾರ ಪದ್ಧತಿಯಲ್ಲಿ ಸೀಫುಡ್ ಎಂದು ಕರೆಯಲ್ಪಡುವ ಮೀನೂಟಕ್ಕೆ ಸಾಕಷ್ಟು ಮಹತ್ವದ ಸ್ಥಾನವಿದೆ. ಕಡಲ ಖಾದ್ಯಗಳು ತುಂಬಾ ರುಚಿಕಟ್ಟು ಹಾಗೂ ಆರೋಗ್ಯಕ್ಕೂ ಒಳ್ಳೆಯದು. ಈ ಕಾರಣಗಳಿಗಾಗಿ ಇವುಗಳ ಸೇವನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸೀಫುಡ್ ಸೇವನೆ ಈಗ ನಗರವಾಸಿಗಳ ಪ್ರಮುಖ ಫುಡ್ ಟ್ರೆಂಡ್ ಆಗಿ ಜನಪ್ರಿಯವಾಗಿದೆ.

ಕಡಲ ಖಾದ್ಯಗಳು ಮಾಂಸಾಹಾರಕ್ಕೆ ಸೇರುತ್ತವಾದರೂ ಮಾಂಸದೂಟಕ್ಕಿಂತ ಮೀನಿನೂಟಕ್ಕೆ ಜನರು ಹೆಚ್ಚು ಆದ್ಯತೆ ನೀಡುತ್ತಾರೆ. ಚಿಕನ್, ಮಟನ್ ಇತ್ಯಾದಿಗಳ ಆಹಾರ ತುಂಬಾ ಉಷ್ಣ ಎಂದು ಕೆಲವರು ಬಗೆಯುವುದರಿಂದಲೂ ಹಾಗೂ ಕ್ಯಾಲರಿಗಳ ಬಗ್ಗೆ ಎಚ್ಚರಿಕೆ ವಹಿಸುವುದರಿಂದಲೂ ಸಮುದ್ರ ಖಾದ್ಯಗಳತ್ತಲೇ ಹೆಚ್ಚು ಮುಖ ಮಾಡುತ್ತಿದ್ದಾರೆ. ಇತರ ಮಾಂಸಾಹಾರಗಳಿಗೆ ಹೋಲಿಸಿದರೆ ಸೀಫುಡ್‌ನಲ್ಲಿ ಕ್ಯಾಲರಿ ಪ್ರಮಾಣ ಕಡಿಮೆ ಇದೆ. ಮೀನಿನ ಸೇವನೆಯಿಂದ ಮೆದುಳು ಶಕ್ತಿ ಚುರುಕುಗೊಳ್ಳುತ್ತದೆ ಮತ್ತು ಕಣ್ಣು ಚುರುಕಾಗುತ್ತದೆ ಎಂಬ ಕಾರಣಕ್ಕೂ ಜನರಿಗೆ ಮೀನೂಟ ತುಂಬಾ ಇಷ್ಟ. ಮೀನಿನಲ್ಲಿರುವ ವಿವಿಧ ಪೌಷ್ಟಿಕಾಂಶಗಳು ದೇಹಕ್ಕೆ ಅತ್ಯಂತ ಉಪಯುಕ್ತವಾಗಿ ಪರಿಣಮಿಸಿರುವ ಕಾರಣ ಈಗಿನ ಮಕ್ಕಳು, ಯುವಕರು ಮತ್ತು ತೂಕ, ಕ್ಯಾಲರಿ ಹಾಗೂ ಹೆಲ್ತ್ ಕಾನ್ಷಿಯಸ್ ಇರುವ ಜನರು ಸೀಫುಡ್‌ಗಳನ್ನು ನೆಚ್ಚಿಕೊಳ್ಳುತ್ತಿದ್ದಾರೆ. ಆದ್ದರಿಂದ ಸೀಫುಡ್‌ಅನ್ನು ನ್ಯೂ ಏಜ್ ಫುಡ್ ಎಂದೂ ಕರೆಯಬಹುದು.

ಸಮುದ್ರ ಖಾದ್ಯಗಳಲ್ಲಿನ ವೈವಿಧ್ಯತೆ

ಸೀಫುಡ್‌ನಲ್ಲಿ ಮೀನೇ ಪ್ರಧಾನವಾಗಿದ್ದರೂ ಅದರಷ್ಟೇ ಮಹತ್ವ ಪ್ರಾನ್, ಏಡಿ, ಕಪ್ಪೆ ಚಿಪ್ಪು, ಲಾಬ್ಸ್ಟರ್‌ಗಳಿಗೂ ಇದೆ. ಇವುಗಳಿಂದ ತಯಾರಿಸಿದ ಬಗೆಬಗೆಯ ಖಾದ್ಯಗಳು ಅತ್ಯಂತ ರುಚಿಕರವಾದವು. ಫಿಶ್ ಫ್ರೈ, ಮೀನು ಸಾರು, ಫಿಶ್ ರವಾ ಫ್ರೈಗಳಂತೆ ಪ್ರಾನ್ ಸುಕ್ಕ, ಪ್ರಾನ್ ತವಾ ಫ್ರೈ, ಕ್ರ್ಯಾಬ್ ಚಿಲ್ಲಿ, ತಂದೂರಿ ಕ್ರ್ಯಾಬ್, ಮರ್ವಾಯಿ ಸುಕ್ಕ, ಸ್ಕ್ವಿಡ್ ಚಿಲ್ಲಿ ಇವುಗಳೂ ಸೀಫುಡ್ ಪ್ರಿಯರ ನೆಚ್ಚಿನ ಆಯ್ಕೆಗಳಾಗಿವೆ.

ಮೀನು ಸೇವನೆ ಮತ್ತು ಆರೋಗ್ಯದ ಗುಟ್ಟು

ಮೀನಿನಲ್ಲಿ ಇರುವ ಒಮೆಗಾ 3 ಅಂಶ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದು ದೇಹದಲ್ಲಿ ಒಳ್ಳೆಯ ಕೊಬ್ಬಿನಂಶವನ್ನು ಹೆಚ್ಚು ಮಾಡುತ್ತದೆ. ಮೀನಿನಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಗಳು ಶೇ.30 ರಿಂದ 50ರಷ್ಟು ಆರೋಗ್ಯ ಅಪಾಯವನ್ನು ಕಡಿಮೆಗೊಳಿಸುತ್ತದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಒಮೆಗಾ 3 ಆಮ್ಲಗಳು ರೆಟಿನಾದ ಅಂಗಾಂಶಗಳ ಬೆಳವಣಿಗೆಗೂ ಸಹಾಯ ಮಾಡುತ್ತವೆ. ದೃಷ್ಟಿಶಕ್ತಿ ವೃದ್ಧಿಗೆ ಕೂಡ ಮೀನು ಸೇವನೆ ಸಹಕಾರಿ. ಮೀನಿನ ಎಣ್ಣೆ ಅಧಿಕ ರಕ್ತದೊತ್ತಡವನ್ನು ತಡೆಗಟ್ಟುತ್ತದೆ. ದೇಹದಲ್ಲಿ ರಕ್ತ ಸಂಚಲನಕ್ಕೆ ಸಹಾಯಮಾಡುವುದು. ಸಾಲ್ಮನ್ ಮೀನನ್ನು ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಂಡು, ನಿಯಮಿತವಾದ ವ್ಯಾಯಾಮ ಮಾಡಿದರೆ ಬೇಗನೆ ತೂಕ ಕಡಿಮೆ ಮಾಡಿಕೊಳ್ಳಲು ಸಾಧ್ಯ ಎನ್ನಲಾಗುತ್ತದೆ.

ಮೀನು ಸೇವನೆಯಿಂದ ಅಸ್ತಮಾ ದೂರ ಮಾಡಬಹುದು. ಇದರಲ್ಲೂ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಅಸ್ತಮಾ ರೋಗಕ್ಕೆ ಇದು ಉತ್ತಮ ಪರಿಹಾರ ಎನ್ನಲಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಮತ್ತು ಡಯಾಬೆಟಿಸ್‌ಅನ್ನು ನಿರ್ವಹಿಸಲು ಮೀನು ಎಣ್ಣೆ ಸಹಾಯ ಮಾಡುತ್ತದೆ. ಮೀನಿನ ಕೊಬ್ಬಿನ ಆಮ್ಲ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ, ಇದು ಸಂಧಿವಾತ, ಸೋರಿಯಾಸಿಸ್ (ಚರ್ಮದ ಸ್ಥಿತಿ), ಮತ್ತು ಸ್ವಯಂ ಇಮ್ಯೂನ್ ರೋಗಗಳಂತಹ ವಿವಿಧ ಉರಿಯೂತದ ಪರಿಸ್ಥಿತಿಗಳಿಗೆ ಸಹಾಯ ಮಾಡುತ್ತದೆ ಎನ್ನಲಾಗಿದೆ.

ಮೀನು ಸೇವನೆ ಉತ್ತಮ ಲೈಫ್‌ಸ್ಟೈಲ್‌ಗೆ ಕೂಡ ಸಹಕರಿಸುತ್ತದೆ. ಕೂದಲು ಉದ್ದವಾಗಿ ಬೆಳೆಯಲು, ಕೂದಲು ಉದುರುವುದನ್ನು ಮತ್ತು ಚರ್ಮ ಸುಕ್ಕುಗಟ್ಟುವುದನ್ನು ತಡೆಯಲು ಮೀನು ಖಾದ್ಯ ಸಹಕರಿಸುತ್ತದೆ. ಸಾಲ್ಮನ್ ಅಥವಾ ಟ್ಯೂನ ಮೀನುಗಳ ಸೇವನೆಯಿಂದ ಮಿದುಳಿನ ಬೆಳವಣಿಗೆಯಾಗಿ ಸ್ಮರಣಶಕ್ತಿ ವೃದ್ಧಿಗೆ ಸಹಕಾರಿ. ಇದು ಮಕ್ಕಳಿಗೆ ಬಹಳ ಉಪಯುಕ್ತ.

ಅಶೋಕ್ ಕುಮಾರ್

ಅಶೋಕ್ ಕುಮಾರ್
ಮೂಲತಃ ಭದ್ರಾವತಿಯವರಾದ ಅಶೋಕ್ ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವಿ ಯುವ ಪತ್ರಕರ್ತರು.


ಇದನ್ನೂ ಓದಿ: ಆಹಾರ ಶ್ರೇಷ್ಠತೆಯ ರಾಜಕೀಯದ ವಿವಿಧ ಮುಖಗಳು

ಇದನ್ನೂ ಓದಿ: ಬರಿದೇ ಬಾರಿಸದಿರು ತಂಬೂರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬಿಜೆಪಿಗೆ ಮತ ಹಾಕುವಂತೆ...

0
ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಿರಿಯ ರಾಜಕಾರಣಿ ಅಧೀರ್ ರಂಜನ್ ಚೌಧರಿ ಅವರಿ ಬಿಜೆಪಿ ಪರ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ " ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಕ್ಕೆ ಮತ...