ಕೊರೊನಾ ಹಿನ್ನೆಲೆಯಲ್ಲಿ ನೌಕರರು/ಕಾರ್ಮಿಕರನ್ನು ಕೆಲಸದಿಂದ ತೆಗೆಯಬೇಡಿ, ಅವರಿಗೆ ಪೂರ್ತಿ ಸಂಬಳ ನೀಡಿ ಎಂದು ಸರ್ಕಾರದ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಪಿ ಕ್ಯಾಪ್ಟನ್ ಮಣಿವಣ್ಣನ್ರವರು ಇಂದು ಆದೇಶ ಹೊರಡಿಸಿದ್ದಾರೆ.
COVID -19 ತುರ್ತು ಪರಿಸ್ಥಿತಿಯ ಸನ್ನಿವೇಶದಲ್ಲಿ ಎಲ್ಲಾ ಸಾರ್ವಜನಿಕ/ಖಾಸಗಿ ಸಂಸ್ಥೆಗಳ ಉದ್ಯೋಗದಾತರು ತಮ್ಮ ಉದ್ಯೋಗಿಗಳನ್ನು, ವಿಶೇಷವಾಗಿ casual ಕೆಲಸಗಾರರರನ್ನು ಅಥವಾ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಬಾರದೆಂದು ಮತ್ತು ಅವರ ವೇತನವನ್ನು ಕಡಿತಗೊಳಿಸಬಾರದೆಂದು ವಿಪತ್ತು ನಿರ್ವಹಣೆ ಕಾಯ್ದೆ 2005 ಸೆಕ್ಷನ್ 69ರಡಿ ಪ್ರದತ್ತವಾದ ಅಧಿಕಾರವನ್ನು ಬಳಸಿಕೊಂಡು ಆದೇಶ ಹೊರಡಿಸಲಾಗಿದೆ.
ಯಾವುದೇ ಪರಿಣಾಮಕಾರಿ ಕಡಿತವಿಲ್ಲದೇ, ಅಂತಹ ಕೆಲಸಗಾರರನ್ನು ಕರ್ತವ್ಯದಲ್ಲಿದ್ದಾರೆಂದು ಪರಿಗಣಿಸುವುದು. ಇದಲ್ಲದೇ COVID-19 ಕಾರಣದಿಂದಾಗಿ ಉದ್ಯೋಗದ ಸ್ಥಳದಲ್ಲಿ ಕಾರ್ಯನಿರ್ವಹಿಸದಿರುವ ಸಂದರ್ಭ ಉಂಟಾದಲ್ಲಿ ಅಂತಹ ಘಟಕದ (Working Unit) ನೌಕರರು ಕರ್ತವ್ಯದಲ್ಲಿದ್ದಾರೆಂದು ಪರಿಗಣಿಸುವುದು. ಈ ಸಂಬಂಧ ಮಾಡುವ ಯಾವುದೇ ಉಲ್ಲಂಘನೆಗಳು ವಿಪತ್ತು ನಿರ್ವಹಣೆ ಕಾಯ್ದೆ 2005 ರಡಿ ದಂಡನೆಯ ಕ್ರಮಕ್ಕೆ ಒಳಪಟ್ಟಿರುತ್ತದೆ ಎಂದು ಆದೇಶದಲ್ಲಿ ಎಚ್ಚರಿಸಲಾಗಿದೆ.
ಕಾರ್ಮಿಕ ಇಲಾಖೆಯು ಈ ನಿಟ್ಟಿನಲ್ಲಿ 48 ಗಂಟೆಯೊಳಗಾಗಿ ಸಹಾಯವಾಣಿಯನ್ನು ಸ್ಥಾಪಿಸಲು ಕ್ರಮ ಕೈಗೊಳ್ಳುವುದು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಆದೇಶ ಪ್ರತಿಯನ್ನು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಕಾರ್ಮಿಕ ಆಯುಕ್ತರು, ಕಾರ್ಮಿಕ ಭವನ, ಜನರುಘಟ್ಟ ರಸ್ತೆ, ಬೆಂಗಳೂರು ಮತ್ತು ಅಪರ ಕಾರ್ಮಿಕ ಆಯುಕ್ತರು, (ಆಡಳಿತ ಮತ್ತು ಲೆಕ್ಕಪತ್ರ) ಕಾರ್ಮಿಕ ಭವನ, ಬೆಂಗಳೂರು ಇವರಿಗೆ ಕಳಿಸಿಕೊಡಲಾಗಿದೆ.
ಇದರಿಂದ ಆತಂಕದಲ್ಲಿದ್ದ ಲಕ್ಷಾಂತರ ಗುತ್ತಿಗೆ ನೌಕರರು ಮತ್ತು ಕಾರ್ಮಿಕರ ಆಂತಕ ಸ್ವಲ್ಪ ಮಟ್ಟಿಗೆ ನಿವಾರಣೆಯಾಗಲಿದ್ದು ಅವರೆಲ್ಲರೂ ನಿಟ್ಟುಸಿರು ಬಿಡಲಿದ್ದಾರೆ.