Homeಮುಖಪುಟಜೈಲು ಕಾಣಿಸುವ ಇನ್ನೊಂದು ಸತ್ಯ : ಡಾ.ರಹಮತ್ ತರೀಕೆರೆ

ಜೈಲು ಕಾಣಿಸುವ ಇನ್ನೊಂದು ಸತ್ಯ : ಡಾ.ರಹಮತ್ ತರೀಕೆರೆ

ಮಂಡೇಲಾ ಅವರನ್ನು ಬಂಧಿಸಿಟ್ಟಿದ್ದ ದ್ವೀಪದ ಸೆರೆಮನೆಯಲ್ಲಿ, ಹೊಯ್ದಾಡುವ ಕಡಲು ಬಿಟ್ಟರೆ ಏನೂ ಕಾಣುತ್ತಿರಲಿಲ್ಲ. ಆದರೆ ಕಾಲುಶತಮಾನ ಸೆರೆಯಲ್ಲಿಟ್ಟರೂ ಅವರ ಕನಸನ್ನು ನಾಶಗೊಳಿಸಲು ಸಾಧ್ಯವಾಗಲಿಲ್ಲ.

- Advertisement -
- Advertisement -

ಜಗತ್ತಿನ ಪ್ರಜಾಪ್ರಭುತ್ವವುಳ್ಳ ದೇಶಗಳಲ್ಲಿ ಒಂದಾದ ಅಮೆರಿಕದಲ್ಲಿ ಸ್ವಾತಂತ್ಯ್ರ ದೇವಿ ಪ್ರತಿಮೆ ಖ್ಯಾತವಾಗಿದೆ. ಅದು ಇಂಗ್ಲೆಂಡಿನ ವಸಾಹತುಶಾಹಿ ರಾಜಕೀಯ ಬಂಧನದಿಂದ ದೇಶವು ವಿಮೋಚನೆಗೊಂಡ ಪ್ರತೀಕ. ಆದರೆ ಈ ಪ್ರತಿಮೆ ಸ್ಥಾಪಿಸುವ ಕಾಲಕ್ಕೆ ಅಮೆರಿಕದ ಬಿಳಿಯರು ಆಫ್ರಿಕದಿಂದ ಸೆರೆಹಿಡಿದು ತಂದ ಕಪ್ಪುಜನರನ್ನು ಗುಲಾಮರಾಗಿ ಇಟ್ಟುಕೊಂಡಿದ್ದರು. ಅವರಿಗೆ ಮತದಾನದ ಹಕ್ಕು ಸಿಕ್ಕಿದ್ದು 1965ರಲ್ಲಿ. ಈಗಲೂ ಅಮೆರಿಕ, ತನ್ನ ಜನಸಂಖ್ಯೆಯ ಪ್ರಮಾಣಕ್ಕೆ ಹೋಲಿಸಿದರೆ, ಜಗತ್ತಿನ ಅತಿಹೆಚ್ಚು ಸೆರೆಮನೆ ಮತ್ತು ಸೆರೆಯಾಳನ್ನು ಇರಿಸಿಕೊಂಡಿರುವ ದೇಶ. ಅಲ್ಲಿರುವ ಹೆಚ್ಚಿನ ಕೈದಿಗಳು ಕಪ್ಪುಜನರು. ಈಚೆಗೆ ಬಿಳಿಯ ಪೋಲಿಸನು ಕಪ್ಪು ವ್ಯಕ್ತಿಯ ಕೈಕಟ್ಟಿ ಕುತ್ತಿಗೆಯ ಮೇಲೆ ಮೊಣಕಾಲೂರಿ ಸಾಯಿಸಿದ್ದು, ವರ್ಣಭೇದದ ಸಾಮಾಜಿಕ ಸೆರೆಮನೆ ಇನ್ನೂ ಇದೆಯೆಂಬುದಕ್ಕೆ ಸಾಕ್ಷಿ.

ಇಂತಹ ವೈರುಧ್ಯಗಳು ಎಲ್ಲ ದೇಶಗಳಲ್ಲೂ ಬೇರೆಬೇರೆ ಸ್ವರೂಪದಲ್ಲಿದೆ. ಧಾರ್ಮಿಕ ಸಂಪ್ರದಾಯವು ತಮ್ಮಿಚ್ಛೆಯಂತೆ ಬದುಕಲು ಅಡ್ಡಿಯಾಗಿವೆ ಎಂದು ಬಂಡೇಳುವ ಸವಲತ್ತುಳ್ಳ ವರ್ಗಕ್ಕೆ, ತಮ್ಮ ವರ್ಗ ಜಾತಿ ಪುರುಷವಾದಗಳು ಬಡವರನ್ನು ದಲಿತರನ್ನು ಮಹಿಳೆಯರನ್ನು ಬಂಧಿಸಿರುವ ಬಗ್ಗೆ ಸಂವೇದನೆ ಇರುವುದಿಲ್ಲ. ಬಹುಸಂಖ್ಯಾತವಾದದ ಆಳಿಕೆಯ ದೇಶದಲ್ಲಿ, ತಮ್ಮ ನಾಗರಿಕ ಹಕ್ಕುಗಳ ಬಗ್ಗೆ ಕಳವಳಿಸುವ ಮುಸ್ಲಿಂ ಗಂಡಸರಿಗೆ, ತಮ್ಮದೇ ಮಹಿಳೆಯರು ಬಂಧಿಗಳಾಗಿರುವ ಬಗ್ಗೆ ಪರಿವೆ ಇರುವುದಿಲ್ಲ. ತಮ್ಮ ದೇಶಗಳಲ್ಲಿ ವ್ಯಕ್ತಿ ಸ್ವಾತಂತ್ಯ್ರಗಳ ಬಗ್ಗೆ ಹೋರಾಡುತ್ತಿದ್ದ ಯೂರೋಪಿನ ನಾಗರಿಕ ಸಮಾಜದ ಎಷ್ಟೊ ಚಿಂತಕರಿಗೆ, ತಮ್ಮ ದೇಶದ ಪ್ರಭುತ್ವಗಳು ಆಫ್ರಿಕಾ ಏಶ್ಯಾ ಲ್ಯಾಟಿನ್ ಅಮೆರಿಕ ದೇಶಗಳನ್ನು ಆಕ್ರಮಿಸಿಕೊಂಡು, ಬಯಲು ಸೆರೆಮನೆಯಲ್ಲಿಟ್ಟಿವೆ ಎಂಬುದು ಸಮಸ್ಯೆಯಾಗಿ ತೋರಲಿಲ್ಲ.

ಈ ವೈರುಧ್ಯವು ಅಪರಾಧ, ಕಾಯಿದೆ, ನ್ಯಾಯಾಂಗ, ವಿಚಾರಣೆ, ಶಿಕ್ಷೆ, ಸೆರೆಮನೆ ಮುಂತಾದವು, ಏಕಪಕ್ಷೀಯವಾಗಿ ಗ್ರಹಿಸಬೇಕಾದ ನಿರಪೇಕ್ಷ ಸಂಗತಿಗಳಲ್ಲ ಎನ್ನುವುದನ್ನು ಸೂಚಿಸುತ್ತಿದೆ. ಸೆರೆಮನೆ ಎನ್ನುವುದು ಅಪರಾಧ ಮತ್ತು ಶಿಕ್ಷೆ ಕುರಿತು ಪ್ರಭುತ್ವ ಮತ್ತು ನಾಗರಿಕ ಸಮಾಜಗಳು ರೂಪಿಸಿಕೊಂಡಿರುವ ದೃಷ್ಟಿಕೋನ ಕುರಿತ ಒಂದು ಮೂರ್ತ ಹೇಳಿಕೆ. `ಕಳ್ಳರು ಕೊಲೆಗಾರರು ವಂಚಕರು ನಾಗರಿಕ ಸಮಾಜದಿಂದ ಬೇರೆ ಮತ್ತು ದೂರವಾಗಿರಬೇಕು; ಅವರನ್ನು ಶಿಕ್ಷಿಸಿದರೆ ಅಂತಹ ಅಪರಾಧಗಳು ಹೆಚ್ಚದಂತೆ ಭಯವೊಂದು ಸೃಷ್ಟಿಯಾಗುತ್ತದೆ. ಆಗ ನಾಗರಿಕ ಸಮಾಜ ನೆಮ್ಮದಿಯಾಗಿರುತ್ತದೆ’- ಇದು ಜೈಲಿನ ಪರಿಕಲ್ಪನೆಯ ಹಿಂದಿನ ಪ್ರಭುತ್ವದ ತರ್ಕ. ಪ್ರಶ್ನೆಯೆಂದರೆ, ಅಪರಾಧ ಎಂದರೆ ಯಾವುದು ಮತ್ತು ಯಾವುದಲ್ಲ? ಇದನ್ನು ನಿರ್ಣಯ ಮಾಡುವವರು ಯಾರು? ಈ ಪ್ರಶ್ನೆಯು, ಮತಧರ್ಮದ ಹೆಸರಲ್ಲಿ ಜನರನ್ನು ಕೊಂದವರು ಧರ್ಮರಕ್ಷಕರಾಗಿ ಮೆರೆಯುವ; ರಾಷ್ಟ್ರೀಯತೆಯ ಹೆಸರಲ್ಲಿ ಕೆಲವು ಸಮುದಾಯ ಇಲ್ಲವೇ ಪ್ರಾಂತ್ಯಗಳ ಸಹಜ ಹಕ್ಕುಗಳನ್ನು ಮೊಟಕುಗೊಳಿಸುವ; ನಾಗರಿಕ ಹಕ್ಕು ಸ್ವಾತಂತ್ಯ್ರಗಳಿಗೆ ದನಿಯೆತ್ತಿದ್ದವರನ್ನು ಸೆರೆಗಟ್ಟುವ ಸನ್ನಿವೇಶಗಳಲ್ಲಿ, ಮುಖ್ಯವಾಗುತ್ತದೆ.

ಹೀಗಾಗಿ ಸೆರೆಮನೆಯ ಸ್ಥಾಪಿತ ಮತ್ತು ಜನಪ್ರಿಯ ವ್ಯಾಖ್ಯೆಗೆ ಇನ್ನೊಂದು ಮುಖವಿದೆ. ಅದನ್ನು ಕಾಣಬೇಕಾದರೆ, ಪ್ರಭುತ್ವದ ಕಣ್ಣಿಂದ ನೋಡುವುದಲ್ಲ. ಸೆರೆಮನೆಯ ಒಳಗಿರುವ ಕಣ್ಣಿಂದ ಪ್ರಭುತ್ವ, ಅದು ರೂಪಿಸಿದ ಕಾನೂನು, ನ್ಯಾಯಾಲಯ, ಧರ್ಮ, ನಾಗರಿಕ ಸಮಾಜಗಳತ್ತ ನೋಡಬೇಕು. ಆಗ ಅಪರಾಧ-ಶಿಕ್ಷೆಯ ಅರ್ಥಗಳೇ ಬೇರೆಯಾಗುತ್ತವೆ. ಸೆರೆಮನೆಯಲ್ಲಿ ಇರುವವರೆಲ್ಲ ಅಪರಾಧಿಗಳಲ್ಲ. ತಮ್ಮ ಸಮಾಜದ ನಾಡಿನ ಬಿಡುಗಡೆಗಾಗಿ ದನಿಯೆತ್ತಿದ ಕನಸುಗಾರರೂ ಅಲ್ಲಿದ್ದಾರೆ; ಸಮಾಜ ಕಂಟಕರು ಸೆರೆಮನೆಯ ಹೊರಗಿದ್ದಾರೆ; ಅವರ ಕೈಯಲ್ಲಿ ಅಧಿಕಾರವಿದೆ ಎಂದು ಗೋಚರವಾಗುವುದು. ಪ್ರಜಾಪ್ರಭುತ್ವ, ನ್ಯಾಯಾಲಯ, ಸಂಸತ್ತು, ಕಾನೂನು ಮತ್ತು ನಾಗರಿಕ ಸಮಾಜವೆಂದು ನಾವು ಕಟ್ಟಿಕೊಂಡಿರುವ ಪವಿತ್ರೀಕರಣಗೊಂಡ ಸಂಗತಿಗಳ ಪೊಳ್ಳುತನವೂ ಕಾಣುವುದು. ಹೀಗಾಗಿ ಸೆರೆಮನೆಗಳು, ನಮ್ಮ ಡೆಮಾಕ್ರಸಿಯ ಜೀವಂತಿಕೆಯನ್ನು ಹಾಗೂ ನಾಗರಿಕ ಸಮಾಜದ ಸ್ಪಂದನಶೀಲತೆಯನ್ನು ಅಳೆವ ಮಾನದಂಡವಾಗಬಲ್ಲವು.

ಈ ವೈರುಧ್ಯವು ಅಪರಾಧಿ ಮನೋಭಾವದ ವ್ಯಕ್ತಿ, ಪಕ್ಷ, ಸಿದ್ಧಾಂತಗಳು ಅಧಿಕಾರ ಹಿಡಿದಾಗೆಲ್ಲ ಮತ್ತಷ್ಟು ಆಳವಾಗಿ ಪರಿಣಮಿಸುತ್ತದೆ. ಚರಿತ್ರೆಯಲ್ಲಿ ಫ್ಯಾಸಿಸ್ಟರು, ಧರ್ಮಾಂಧರು, ವರ್ಣಭೇದವಾದಿಗಳು ಅಧಿಕಾರ ಹಿಡಿದಾಗಲೆಲ್ಲ ಹೀಗಾಗಿದೆ. ಕಮ್ಯುನಿಸ್ಟರೆಂದು ಹೇಳಿಕೊಂಡು ಕಮ್ಯುನಿಸಂನ ಮೂಲಭೂತ ತಿರುಳಿಗೆ ವಿರುದ್ಧವಾಗಿ ಆಳಿದ ಸರ್ವಾಧಿಕಾರಿಗಳು ಬಂದಾಗಲೂ ಹೀಗಾಗಿದೆ. ವಸಾಹತುಶಾಹಿ ಆಳ್ವಿಕೆಗಳಲ್ಲಿ ಇದಾಗಿದೆ. ಅನೇಕ `ಪ್ರಜಾಪ್ರಭುತ್ವ’ ಎಂದು ಕರೆದುಕೊಳ್ಳುವ ರಾಷ್ಟ್ರಗಳಲ್ಲಿ ಈಗಲೂ ಆಗುತ್ತಿದೆ.

ಕಾರಾಗೃಹ, ಸೆರೆಮನೆ, ತುರಂಗ ಎಂದೆಲ್ಲ ಹೆಸರಿದ್ದರೂ ಜೈಲು ಎಂಬ ಶಬ್ದವೇ ಕನ್ನಡದಲ್ಲಿ ಚಾಲ್ತಿಯಲ್ಲಿದೆ. ರಾಜದ್ರೋಹ ಎಂಬ ಹೆಸರಿನ ಕರಾಳ ಕಾನೂನು ರೂಪಿಸಿ, ಬಲಿಷ್ಠವಾದ ಕಲ್‌ಕಟ್ಟಡಗಳನ್ನು ಕಟ್ಟಿ, ತಮ್ಮ ವಿರುದ್ಧ ದನಿಯೆತ್ತಿದವರನ್ನೆಲ್ಲ ಜೈಲಿಗೆ ತಳ್ಳಿದವರು ಆಂಗ್ಲರೇ ಆಗಿದ್ದರಿಂದ, ಈ ಶಬ್ದಕ್ಕೆ ಚಾರಿತ್ರಿಕ ಹಿನ್ನೆಲೆಯೂ ಇದೆ. ಆದರೆ ಜೈಲು ಶಬ್ದದಲ್ಲಿಲ್ಲದ ಅರ್ಥಚ್ಛಾಯೆ ಕನ್ನಡದ ಸೆರೆಮನೆ ಕಾರಾಗೃಹಗಳಲ್ಲಿದೆ. ಕೈದಿಗಳಿಗೆ ಊಟ ವಸತಿ ಕೊಡುವ ಕಾರಣಕ್ಕೆ ಜೈಲೂ `ಮನೆ’ ಅಥವಾ `ಗೃಹ’ವೇ. ಆದರೆ ಅದು ವ್ಯಕ್ತಿಯನ್ನು ಮನೆಯಿಂದ ಮನೆಯವರಿಂದ ಸಮಾಜದಿಂದ ಬೇರೆಮಾಡುತ್ತದೆ, ದೂರಗೊಳಿಸುತ್ತದೆ. ಎಂತಲೇ ಜೈಲನ್ನು ಕಟ್ಟುವ ಜಾಗ ಊರಾಚೆ, ದೂರ ದ್ವೀಪಗಳಲ್ಲಿ ಅಥವಾ ಹೆಪ್ಪುಗಟ್ಟುವ ಚಳಿ ಪ್ರದೇಶದಲ್ಲಿರುತ್ತದೆ. ಇದರ ಇರಾದೆ ಚಳುವಳಿಗಾರ ಕೈದಿಗಳನ್ನು ಸಮಾಜದಿಂದ ದೈಹಿಕವಾಗಿ ದೂರವಿಡುವುದು ಮಾತ್ರವಲ್ಲ; ಸಮಾಜದ ಜತೆ ಅವರಿಗಿರುವ ಜೀವಂತ ಸಂಬಂಧವನ್ನು ಕತ್ತರಿಸುವುದು. ಅವರನ್ನು ಏಕಾಂಗಿಗೊಳಿಸಿ ಚೈತನ್ಯ ಕುಗ್ಗಿಸುವುದು. ಅವರ ಕನಸನ್ನು ಭಗ್ನಗೊಳಿಸುವುದು.

ಪ್ರಭುತ್ವಕ್ಕೆ ಚಳುವಳಿಗಾರರನ್ನು ಚಿಂತಕರನ್ನು ಜೈಲಿಗೆ ಹಾಕುವ ಉದ್ದೇಶ ಅವರನ್ನು ಮಾತ್ರ ಶಿಕ್ಷಿಸುವುದಲ್ಲ. ಅವರಂತೆ ಚಿಂತನೆ ಮಾಡುವ ಬೆಂಬಲಿಸುವ ಎಲ್ಲರನ್ನೂ ಎಚ್ಚರಿಸುವುದು. ಭೂಮಾಲೀಕರು ಒಬ್ಬ ಜೀತದಾಳಿಗೆ ಕಂಬಕ್ಕೆ ಕಟ್ಟಿ ಹೆಚ್ಚಾಗಿ ಬಡಿಯುವುದು, ಉಳಿದವರಿಗೆ ಎಚ್ಚರಿಕೆ ರವಾನಿಸಲು. ಪ್ರಭುತ್ವಕ್ಕೆ ನಿಜವಾದ ಗುರಿ ಜೈಲಿನಾಚೆ ಇರುವ ನಾಗರಿಕ ಸಮಾಜವೇ ಆಗಿರುತ್ತದೆ. ಕಳೆದ ಕೆಲವು ವರ್ಷಗಳಿಂದ ಲೇಖಕ-ಪತ್ರಕರ್ತ-ಮಾನವಹಕ್ಕು ಕಾರ್ಯಕರ್ತ-ಚಿಂತಕರ ಕೊಲೆಗಳ ಹಿಂದೆಯೂ ಇದೇ ತರ್ಕ ಕೆಲಸ ಮಾಡಿದೆ. ಜೈಲಿನ ಅನುಭವ ಕಥನಗಳಲ್ಲಿ ಕಂಡುಬರುವ ಘಾತಕ ವಿಷಯವೆಂದರೆ, ವ್ಯಕ್ತಿಗೆ ಕೊಡಲಾಗುವ ದೈಹಿಕ ಹಿಂಸೆಯದಲ್ಲ. ಅನಿಶ್ಚಿತ ಅವಧಿಯವರೆಗೆ ವ್ಯಕ್ತಿಯನ್ನು ಕೊಳೆಯಲು ಬಿಡುವುದು. ಅಪರಾಧವೇನೆಂದು ತಿಳಿಸಿದರೆ, ಶಿಕ್ಷೆಯ ಪ್ರಮಾಣ ಖಚಿತವಾದರೆ, ಬಿಡುಗಡೆಯ ದಿನವನ್ನು ಗುರಿಯಾಗಿಟ್ಟುಕೊಂಡು ಕಾಲಕಳೆಯಬಹುದು. ಅದು ಬೆಳಕಿನ ಭರವಸೆಯಲ್ಲಿ ಕತ್ತಲಸುರಂಗದಲ್ಲಿ ನಡೆದಂತೆ. ಆದರೆ ವಿಚಾರಣೆಯಿಲ್ಲದೆ ಸುಮ್ಮನೆ ಕೂಡಿಹಾಕುವುದು ನಿಜವಾದ ಯಾತನೆ. ಎಂತಲೇ ವಿಚಾರಣಾಧೀನ ಕೈದಿಗಳು ಹುಚ್ಚರಾಗುವರು, ಆತ್ಮಹತ್ಯೆ ಮಾಡಿಕೊಳ್ಳುವರು. ಯಾವುದಾದರೂ ಸರಿ, ತೀರ್ಪುಕೊಡಿ ಎಂದು ನ್ಯಾಯಾಲಯದಲ್ಲಿ ಚಪ್ಪಲಿ ತೂರುವವರ ಹಿಂದೆಯೂ ಈ ಅನಿಶ್ಚಿತತೆ ತಂದ ಹತಾಶೆಯೇ ಇರುವುದು.

ಜೈಲೆಂದರೆ, `ಅಪರಾಧಿ’ ಎಂದು ಕರೆಯಲಾದವರನ್ನು ಕೂಡಿಹಾಕಿರುವ ಎತ್ತರದ ಗೋಡೆಯುಳ್ಳ, ಸುತ್ತೆಲ್ಲ ಕಾವಲುಗಾರರ ಪಹರೆಯಿರುವ ಕಟ್ಟಡ ಎಂಬುದು ಅರ್ಧಸತ್ಯ. ಬೇರೆಬೇರೆ ಬಗೆಯ ಸೆರೆಮನೆಗಳು ಸಮಾಜದಲ್ಲಿವೆ ಎನ್ನುವುದು ಇನ್ನರ್ಧ ಸತ್ಯ. ರೈತರಿಗೆ ಮುಕ್ತ ಮಾರುಕಟ್ಟೆಯ ನಿಯಮಗಳು, ಮಹಿಳೆಯರಿಗೆ ಪುರುಷವಾದಿ ಮೌಲ್ಯಗಳ ವಿವಾಹ ಕುಟುಂಬಗಳು, ದಲಿತರಿಗೆ ಜಾತಿವ್ಯವಸ್ಥೆ, ಅಲ್ಪಸಂಖ್ಯಾತರಿಗೆ ಬಹುಸಂಖ್ಯಾತವಾದಿ ರಾಷ್ಟ್ರಿಯತೆ, ಮಕ್ಕಳಿಗೆ ಅವರ ಮೇಲೆ ಹೇರಲಾದ ಶಿಕ್ಷಣ, ಲೇಖಕರಿಗೆ ಸಾಂಪ್ರದಾಯಿಕ ಸಾಹಿತ್ಯದ ನಿಯಮಗಳು, ಜೈಲಂತೆ ತೋರುತ್ತವೆ. ಆದರೆ ಇಂತಹ ಬಹುರೂಪೀ ಸೆರೆಮನೆಗಳನ್ನು ಒಡೆದು ಹೊರಬಂದು ಹೊಸ ಕಾವ್ಯ, ಹೊಸ ಸಮಾಜ, ಹೊಸ ಬದುಕು, ಹೊಸನಾಡು ಕಟ್ಟುವ ಕೆಲಸವು ಕೂಡ ಜೀವಂತ ಸಮಾಜದಲ್ಲಿ ನಡೆದಿರುತ್ತದೆ. ಯಾರು ಯಾವ ಬಗೆಯ ಬಂಧನವನ್ನು ಹೇಗೆ ಮುರಿಯುತ್ತಾರೆ ಎನ್ನುವುದರ ಮೇಲೆ ಅವರ ಸ್ವಾತಂತ್ಯ್ರದ ಮತ್ತು ಪರ್ಯಾಯ ಸೃಷ್ಟಿಯ ಸ್ವರೂಪ ನಿಶ್ಚಿತವಾಗುತ್ತದೆ.

ರೈತರಿಗೆ ಮುಕ್ತ ಮಾರುಕಟ್ಟೆಯ ನಿಯಮಗಳು, ಮಹಿಳೆಯರಿಗೆ ಪುರುಷವಾದಿ ಮೌಲ್ಯಗಳ ವಿವಾಹ ಕುಟುಂಬಗಳು, ದಲಿತರಿಗೆ ಜಾತಿವ್ಯವಸ್ಥೆ, ಅಲ್ಪಸಂಖ್ಯಾತರಿಗೆ ಬಹುಸಂಖ್ಯಾತವಾದಿ ರಾಷ್ಟ್ರಿಯತೆ, ಮಕ್ಕಳಿಗೆ ಅವರ ಮೇಲೆ ಹೇರಲಾದ ಶಿಕ್ಷಣ, ಲೇಖಕರಿಗೆ ಸಾಂಪ್ರದಾಯಿಕ ಸಾಹಿತ್ಯದ ನಿಯಮಗಳು, ಜೈಲಂತೆ ತೋರುತ್ತವೆ.

ಸಂವೇದನಶೀಲ ಸಾಹಿತ್ಯ ಕೃತಿಗಳು, ಬಲಿಷ್ಠರ ಪರವಾದ ಅಪರಾಧ ಮತ್ತು ಶಿಕ್ಷೆಯ ವ್ಯಾಖ್ಯೆಯ ಪರಿಣಾಮಗಳನ್ನು, ಅದರ ಭಾಗವಾದ ಪ್ರಭುತ್ವ ಜೈಲು ನ್ಯಾಯಾಲಯಗಳ ಟೊಳ್ಳುತನವನ್ನು ಕಾಣಿಸುತ್ತಲೇ ಚರಿತ್ರೆಯುದ್ದಕ್ಕೂ ಬಂದಿವೆ. ಮುಮ್ಮಡಿಯವರ ಕಾಲದ ರಾಜಕೀಯ ಅರಾಜಕತೆಯನ್ನು ಬಿಂಬಿಸುವ ‘ಮಾಡಿದ್ದುಣ್ಣೊ ಮಹಾರಾಯ’ ಕಾದಂಬರಿಯ ಕೊನೆಯ ದೃಶ್ಯ ನೆನಪಾಗುತ್ತದೆ. ಅದರಲ್ಲಿ ಸಿರಿವಂತರ ಮನೆಯನ್ನು ದೋಚುತ್ತಿದ್ದ ವೃತ್ತಿಪರ ಕಳ್ಳನೊಬ್ಬ ತನ್ನ ಪ್ರಾಮಾಣಿಕ ಮತ್ತು ಮಾನವೀಯ ವರ್ತನೆಯಿಂದ ಬಿಡುಗಡೆಯಾಗಿ ಹೊರಬರುತ್ತಿದ್ದರೆ; ದೊರೆಗೆ ನಿಷ್ಠವಾಗಿದ್ದ ದೊಡ್ಡದೊಡ್ಡ ಅಧಿಕಾರಿಗಳೂ ಧಾರ್ಮಿಕ ನಾಯಕರೂ ಮಾಡಬಾರದ ಅನ್ಯಾಯ ಮಾಡಿದ್ದಕ್ಕೆ ಜೈಲಿನೊಳಗೆ ಪ್ರವೇಶಿಸುವರು.

ಜೈಲುಗಳು ಅನೇಕ ಕನಸುಗಾರರನ್ನು ಕೊಂದಿವೆ, ದಿಟ. ಆದರೆ ಎಲ್ಲರನ್ನು ಅಲ್ಲ. ಮಂಡೇಲಾ ಅವರನ್ನು ಬಂಧಿಸಿಟ್ಟಿದ್ದ ದ್ವೀಪದ ಸೆರೆಮನೆಯಲ್ಲಿ, ಹೊಯ್ದಾಡುವ ಕಡಲು ಬಿಟ್ಟರೆ ಏನೂ ಕಾಣುತ್ತಿರಲಿಲ್ಲ. ಆದರೆ ಕಾಲುಶತಮಾನ ಸೆರೆಯಲ್ಲಿಟ್ಟರೂ ಅವರ ಕನಸನ್ನು ನಾಶಗೊಳಿಸಲು ಸಾಧ್ಯವಾಗಲಿಲ್ಲ. ಯಾಕೆಂದರೆ ಅವರ ಕನಸಿನ ಭಾಗವಾಗಿ ಜೈಲಿನ ಹೊರಗೆ ತಪಿಸುವ ಜನಸಾಗರವಿತ್ತು. ತನ್ನ ಹೋರಾಟಕ್ಕೆ ಘನ ಉದ್ದೇಶವಿದ್ದಾಗ, ಅದಕ್ಕೆ ಬೆಂಬಲವಾಗಿ ಸಮಾಜವೂ ಮಿಡಿಯುತ್ತಿದ್ದಾಗ, ಜೈಲು ವ್ಯಕ್ತಿಯ ಆತ್ಮಸ್ಥೈರ್ಯ ಕುಂದಿಸುವುದಿಲ್ಲ. ದೊಡ್ಡ ಧ್ಯೇಯಕ್ಕಾಗಿ ಜೈಲಿಗೆ ಹೋಗುವುದು ಹೊಸಶಕ್ತಿ ಪಡೆದುಕೊಳ್ಳುವ ಕ್ರಿಯೆಯೇ. ಆಗ ಜೈಲು ವ್ಯಕ್ತಿತ್ವವನ್ನು ಕಟೆವ ಶಿಲ್ಪಿಯಾಗುತ್ತದೆ. ಗಾಂಧಿ ಮಂಡೇಲಾ ಹೋರಾಟಕ್ಕೆ, ಕೀನ್ಯಾ ಚಿಂತಕ ಗೂಗಿಯವರ ಬರೆಹಕ್ಕೆ, ತಾತ್ವಿಕ ಖಚಿತತೆ ಒದಗಿದ್ದು ಸೆರೆಮನೆಗಳಿಂದ. ಆದರೆ ದಮನಿತ ಸಮಾಜದ ಒಳಿತಿಗಾಗಿ ಪ್ರಭುತ್ವವನ್ನು ಎದುರುಹಾಕಿಕೊಂಡು ಜೈಲುಪಾಲಾದ ಚೈತನ್ಯಶೀಲ ವ್ಯಕ್ತಿಗಳು ಸೆರೆಮನೆಯಲ್ಲಿ
ದೈಹಿಕ-ಮಾನಸಿಕ ಕಷ್ಟ ಅನುಭವಿಸುವುದು ದಿಟ. ಆದರೆ ಆಗ ಜೈಲಿನ ಹೊರಗಿದ್ದೂ ಅಪರಾಧಿಯ ಸ್ಥಾನದಲ್ಲಿ ಪ್ರಭುತ್ವ, ನ್ಯಾಯಾಲಯ ಕಾಯಿದೆಗಳು ನಿಲ್ಲುತ್ತವೆ; ಅವಕ್ಕಿಂತಲೂ ನಿರ್ಲಿಪ್ತವಾಗಿರುವ ನಾಗರಿಕ ಸಮಾಜ ಅಪರಾಧಿಯಾಗುತ್ತದೆ.

ಬೆಂಗಳೂರಿನ ಹಳೇ ಸೆಂಟ್ರಲ್‌ಜೈಲು ನೆನಪಾಗುತ್ತಿದೆ. ಅಲ್ಲೀಗ ಜೈಲನ್ನು ಕೆಡವಿ ಸ್ವಾತಂತ್ಯ್ರ ಉದ್ಯಾನವನ ಮಾಡಲಾಗಿದೆ. ಅದರ ಮುಂದೆ ಸಾಮಾಜಿಕ ಜೈಲುಗಳಿಂದ ಹೇಗೆ ಬಿಡಿಸಿಕೊಂಡು ಜನ ನಿರಂಕುಶಮತಿಗಳಾಗಬೇಕು ಅನಿಕೇತನವಾಗಬೇಕು ಎಂದು ಹೇಳಿದ ಕುವೆಂಪು ಪ್ರತಿಮೆಯಿದೆ. ಇದು ಅರ್ಥಪೂರ್ಣವಾಗಿದೆ. ಆದರೆ ದೇಶದಲ್ಲಿ ಹಿಂದೆಂದೂ ಇಲ್ಲದಷ್ಟು ಪ್ರಮಾಣದಲ್ಲಿ ಚಿಂತಕರು ಕೊಲೆಯಾಗುತ್ತ, ಜೈಲುಪಾಲಾಗುತ್ತ ಇರುವುದನ್ನು ನೋಡುವಾಗ, ಕವಿಯ ಆಶಯಗಳು ಪ್ರತಿಮೆಯ ಕೆಳಗಿನ ಫಲಕದಲ್ಲಷ್ಟೆ ಉಳಿಯಲಿದೆಯೇ ಎಂಬ ಆತಂಕ ಕಾಡುತ್ತದೆ. ನೈತಿಕ ಪತನಹೊಂದಿದ ಪ್ರತಿರೋಧದ ಬೆನ್ನೆಲುಬಿಲ್ಲದ ನಾಗರಿಕ ಸಮಾಜದಲ್ಲಿ ಇಂತಹ ಆತಂಕಗಳು ನಿಜವೂ ಆಗುತ್ತವೆ. ಆಗ ಜೈಲುಗಳು ನಿರಾಂತಕವಾಗಿ ಜನರನ್ನು ತುಂಬಿಸಿಕೊಳ್ಳುತ್ತವೆ.

– ರಹಮತ್ ತರೀಕೆರೆ
ರಹಮತ ತರೀಕೆರೆ ಕನ್ನಡ ನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕಗಳನ್ನು ರಚಿಸಿದ್ದಾರೆ. ತರೀಕೆರೆ ಅವರ ವಿಮರ್ಶಾ ಸಂಕಲನ ‘ಕತ್ತಿಯಂಚಿನ ದಾರಿ’ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ


ಇದನ್ನೂ ಓದಿ: ಪಿತೃಪ್ರಧಾನ ಪ್ರಭುತ್ವದಲ್ಲಿ ಜಡ್ಡುಗಟ್ಟಿದ ಸಮಾಜಕ್ಕೆ ಸವಾಲೆಸೆದ ಶೋಮಾ ಸೇನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...