Homeಚಳವಳಿಪಿತೃಪ್ರಧಾನ ಪ್ರಭುತ್ವದಲ್ಲಿ ಜಡ್ಡುಗಟ್ಟಿದ ಸಮಾಜಕ್ಕೆ ಸವಾಲೆಸೆದ ಶೋಮಾ ಸೇನ್

ಪಿತೃಪ್ರಧಾನ ಪ್ರಭುತ್ವದಲ್ಲಿ ಜಡ್ಡುಗಟ್ಟಿದ ಸಮಾಜಕ್ಕೆ ಸವಾಲೆಸೆದ ಶೋಮಾ ಸೇನ್

ಶಿಕ್ಷಣ ಕ್ಷೇತ್ರಕ್ಕೆ ಶೋಮಾ ನೀಡಿದ ಅದ್ಭುತ ಕೊಡುಗೆಗಳು, ಜನರನ್ನು ಅದರಲ್ಲೂ ವಿವಿಧ ಪ್ರದೇಶಗಳ ಮಹಿಳೆಯರನ್ನು ಸಂಘಟಿಸುವ ಅವರ ಶಕ್ತಿಯಿಂದ ಪ್ರಭುತ್ವ ಇವರ ಮೇಲೆ ಕಣ್ಣಿಡುವುದಕ್ಕೆ ಕಾರಣವಾಯಿತು.

- Advertisement -
- Advertisement -

ಹೆಸರಾಂತ ಶಿಕ್ಷಣ ತಜ್ಞೆ, ದಲಿತರ ಮತ್ತು ಮಹಿಳೆಯರ ಹಕ್ಕುಗಳ ಚಳುವಳಿಗಾರ್ತಿ, ಶಿಕ್ಷಕಿ ಮತ್ತು ಹೋರಾಟಗಾರ್ತಿ – ಶೋಮಾ ಸೇನ್ ಇವೆಲ್ಲವೂ ಹೌದು ಮತ್ತು ಇವೆಲ್ಲವಕ್ಕಿಂತ ದೊಡ್ಡ ವ್ಯಕ್ತಿತ್ವದವರು. ಮುಂಬೈ ನಗರದಲ್ಲಿ ಹುಟ್ಟಿ ಬೆಳೆದ ಶೋಮಾ ಸಮಾಜದ ಆಂಚಿನಲ್ಲಿರುವ ದುರ್ಬಲ ಜನರ ಪ್ರಜಾಪ್ರಭುತ್ವ ಹಕ್ಕುಗಳನ್ನು ರಕ್ಷಿಸುವ ಧೃಡ ನಿರ್ಧಾರದೊಂದಿಗೆ ತನ್ನ ಸಂಗಾತಿ ಮತ್ತು ಮಗಳೊಂದಿಗೆ ನಾಗಪುರಕ್ಕೆ ಹೋಗುತ್ತಾರೆ.

ಹೆಚ್ಚು ಕಡಿಮೆ ಮೂರು ದಶಕಗಳ ಕಾಲ ಶೋಮಾ ಗೌರವಾನ್ವಿತ ಶಿಕ್ಷಣ ತಜ್ಞೆಯಾಗಿದ್ದಾರೆ. ವಾರ್ಧ ವಿಶ್ವವಿದ್ಯಾಲಯದ ಮಹಿಳೆಯರ ವಿಭಾಗದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಶೋಮಾ ನಾಗಪುರದ ವಿವಿಧ ಕಾಲೇಜುಗಳಲ್ಲಿ ಪಾಠ ಮಾಡುತ್ತಿದ್ದರು. ಬಂಧನಕ್ಕೊಳಗಾದ ಸಮಯದಲ್ಲಿ ಶೋಮಾ ರಾಷ್ಟ್ರಸಂತ್ ತುಕದೋಜಿ ಮಹಾರಾಜ್ ನಾಗಪುರ ವಿಶ್ವವಿದ್ಯಾನಿಲಯದಲ್ಲಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ವಸಾಹತುಶಾಹಿಯ ನಂತರದ ದಿನಗಳ ಕುರಿತು ಮತ್ತು ಮಹಿಳಾ ಅಧ್ಯಯನದ ಕುರಿತು ಹಲವಾರು ಪ್ರಮುಖ ಲೇಖನಗಳನ್ನು ದಶಕಗಳಿಂದ ಶೋಮಾ ಬರೆದಿದ್ದಾರೆ.

 

ದಲಿತ ಮತ್ತು ಆದಿವಾಸಿ ಮಹಿಳೆಯರ ಮೇಲೆ ನಡೆಯುವ ಹಲವು ವಿಧದ ಸ್ತರದ ದೌರ್ಜನ್ಯಗಳ ಕುರಿತಾಗಿ ಸ್ತ್ರೀವಾದಿ ದೃಷ್ಟಿಕೋನಗಳನ್ನು ಶೋಮಾ ತಮ್ಮ ಬರವಣಿಗೆಯಲ್ಲಿ ಚರ್ಚಿಸಿದ್ದಾರೆ. ಮಹಿಳೆಯರ ರಾಜಕೀಯ ಪ್ರತಿಪಾದನೆ-ಸಮರ್ಥನೆಗಳ ಕುರಿತು ಮತ್ತು ಸ್ತ್ರೀಶಕ್ತಿಯ ಬಗ್ಗೆ ಅವರ ಬರಹಗಳು ಬೆಳಕು ಚೆಲ್ಲಿವೆ. ತಮ್ಮ ಬರಹಗಳ ಜೊತೆಗೆ, ಅವರ ಚಳುವಳಿಯ ಕೆಲಸಗಳು ರಾಜಕೀಯ ಮತ್ತು ಸಾಮಾಜಿಕ ಮಾರ್ಪಾಟಿಗೆ ಅಪಾರ ಕೊಡುಗೆ ನೀಡಿದೆ. 1970ರ ಸಮಯದಲ್ಲಿ ಮುಂಬೈಯಲ್ಲಿ ಓದುವ ಸಮಯದಲ್ಲಿ ಅವರು ವಿದ್ಯಾರ್ಥಿ ಪ್ರಗತಿ ಸಂಘಟನೆಯ ಭಾಗವಾಗಿದ್ದರು. 1980ರಲ್ಲಿ ವಿದ್ಯಾರ್ಥಿಗಳ ಪತ್ರಿಕೆಯಾದ ’ಕಲಂ’ನ ಸಂಪಾದಕರಾಗಿದ್ದರು. ಬಟ್ಟೆ ಉದ್ದಿಮೆಯ ಕಾರ್ಮಿಕರ ಮುಷ್ಕರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಇದನ್ನೂ ಓದಿ: ವಿದ್ಯಾರ್ಥಿಗಳ ನೆಚ್ಚಿನ, ಜನಪ್ರಿಯ ಪ್ರಾಧ್ಯಾಪಕ ಡಾ. ಹನಿ ಬಾಬು ಬಂಧನದಲ್ಲಿ…

ನಾಗಪುರಕ್ಕೆ ಹೋದ ನಂತರ ಶೋಮಾ ಪ್ರಜಾಪ್ರಭುತ್ವ ಹಕ್ಕುಗಳ ಕುರಿತಾದ ತಮ್ಮ ಹೋರಾಟವನ್ನು ಮುಂದುವರಿಸಿದರು. ಕಮಿಟಿ ಫಾರ್ ಪ್ರೊಟೆಕ್ಷನ್ ಆಫ್ ಡೆಮಾಕ್ರೆಟಿಕ್ ರೈಟ್ಸ್ (ಸಿಪಿಡಿಆರ್ – ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಾಗಿ ಸಮಿತಿ) ಸಂಘಟನೆಯ ಚಟುವಟಿಕೆಯಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ಸಿಪಿಡಿಆರ್ ಸಂಸ್ಥೆಯ ಮೂಲಕ ಪ್ರಜಾಪ್ರಭುತ್ವ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ಜನರನ್ನು ಸಂಘಟಿಸುತ್ತಿದ್ದರು. ಮಹಿಳೆಯರ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಕಮಿಟಿ ವಿಮೆನ್ಸ್ ಎಗೇನ್ಸ್ಟ್ ಸೆಕ್ಷುಯಲ್ ವಯಲೆನ್ಸ್ ಅಂಡ್ ಸ್ಟೇಟ್ ರಿಪ್ರೆಷನ್ (ಸಿಎವಿಒಡಬ್ಲ್ಯು – ಲೈಂಗಿಕ ದೌರ್ಜನ್ಯ ಮತ್ತು ಪ್ರಭುತ್ವ ದಮನದ ವಿರುದ್ಧ ಮಹಿಳೆಯರ ಸಮಿತಿ) ಮತ್ತು ಸ್ತ್ರೀ ಚೇತನ ಸಂಘಟನೆಗಳ ಭಾಗವಾಗಿದ್ದರು. ಕಮಿಟಿ ವಿಮೆನ್ಸ್ ಎಗೇನ್ಸ್ಟ್ ಸೆಕ್ಷುಯಲ್ ವಯಲೆನ್ಸ್ ಅಂಡ್ ಸ್ಟೇಟ್ ರಿಪ್ರೆಷನ್ ಸಂಘಟನೆಯನ್ನು ಕಟ್ಟಿ ಬೆಳೆಸಿದರು. ಶೋಮಾ ಕಟ್ಟಿದ ಸಂಘಟನೆಯು ಪ್ರಭುತ್ವದ ಹಿಂಸೆಗೆ ಗುರಿಯಾಗಿದ್ದ ಮಣಿಪುರ ಮತ್ತು ಚತ್ತೀಸ್‌ಗಡದ ಪ್ರದೇಶದಲ್ಲಿ ಸತ್ಯಶೋಧನ ಕೆಲಸದಲ್ಲಿ ತೊಡಗಿಸಿಕೊಂಡಿತ್ತು. ಮಹಿಳಾ ರಾಜಕೀಯ ಖೈದಿಗಳಿಗೆ ಕಾನೂನಾತ್ಮಕ ಸಹಾಯ ಒದಗಿಸಲೂ ಶೋಮಾ ನಿರಂತರವಾಗಿ ಕೆಲಸ ಮಾಡಿದರು. ಪ್ರಜಾಪ್ರಭುತ್ವದ ಪ್ರಕ್ರಿಯೆಗಳಲ್ಲಿ ಮಹಿಳೆಯರ ಪಾತ್ರ ಹೆಸರಿಗಷ್ಟೇ ಅಂತಾಗಬಾರದು, ಮಹಿಳೆಯರು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುವಂತಹ ವಾತಾವರಣವಿರಬೇಕು ಎಂದು ಶೋಮಾ ಧೃಡವಾಗಿ ನಂಬಿದ್ದರು. ಬ್ರಾಹ್ಮಣ್ಯ – ಪಿತೃಪ್ರಧಾನ ವ್ಯವಸ್ಥೆಯಿಂದ ದುಪ್ಪಟ್ಟು ಶೋಷಣೆಗೊಳಪಟ್ಟಿರುವ ದಲಿತ ಮಹಿಳೆಯರ ಹಕ್ಕುಗಳಿಗಾಗಿ ಅವಿರತವಾಗಿ ಹೋರಾಡುತ್ತಿದ್ದರು. ಮುಖ್ಯವಾಹಿನಿಯ ಸ್ತ್ರೀವಾದವು ಜಾತಿಯ ಕುರಿತು ಕುರುಡಾಗಿದೆ, ದಲಿತ ಮಹಿಳೆಯರು ಸಮುದಾಯದ ಒಳಗೆ ಮತ್ತು ಹೊರಗೆ ಅನುಭವಿಸುವ ದೌರ್ಜನ್ಯದ ಕುರಿತು ಮೌನವಾಗಿದೆ ಎಂದು ಶೋಮಾ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.

ಅರವತ್ತು ವರ್ಷದ ಶೋಮಾರನ್ನು ಪುಣೆಯ ಪೋಲೀಸರು ಜೂನ್ 8, 2018ರಲ್ಲಿ ಬಂಧಿಸುತ್ತಾರೆ. ಪ್ರಭುತ್ವವು ಮಾನವ ಹಕ್ಕುಗಳ ರಕ್ಷಣೆಗೆ ಹೋರಾಡುವವರ ವಿರುದ್ಧ ತೆಗೆದುಕೊಂಡ ಹಿಂಸಾತ್ಮಕ ಕ್ರಮಗಳ ಭಾಗವಾಗಿಯೇ ಈ ಬಂಧನವಾಗುತ್ತದೆ. ಜೈಲಿನಲ್ಲಿನ ಭೇಟಿಗಳ ಕುರಿತು ಶೋಮಾರ ಮಗಳು ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದಾರೆ. ಮಗಳಿಗೆ ಬರೆದ ಪತ್ರವೊಂದರಲ್ಲಿ ಶೋಮಾ “ಅವರು ನನ್ನನ್ನು ಬಂಧಿಸಿರಬಹುದು, ಆದರೆ ನನ್ನ ಆಲೋಚನೆಗಳು ಸ್ವತಂತ್ರವಾಗಿವೆ” ಎಂದು ಬರೆಯುತ್ತಾರೆ. ಈ ಸಾಲುಗಳು ಅವರ ಬತ್ತದ ಉತ್ಸಾಹಕ್ಕೆ ಕನ್ನಡಿಯಾಗಿದೆ. ಜೈಲಿನ ಅಧಿಕಾರಿಗಳು ಶೋಮಾರ ವಯಸ್ಸು, ಅವರ ಅಗತ್ಯಗಳು, ಕೀಲು ನೋವಿನ ಕುರಿತು ಅಸೂಕ್ಷ್ಮವಾಗಿ ವರ್ತಿಸಿದರೂ ಶೋಮಾರ ಉತ್ಸಾಹವನ್ನು ಕಡಿಮೆ ಮಾಡಲು ಸಾಧ್ಯವಾಗಿಲ್ಲ.

ಶಿಕ್ಷಣ ಕ್ಷೇತ್ರಕ್ಕೆ ಶೋಮಾ ನೀಡಿದ ಅದ್ಭುತ ಕೊಡುಗೆಗಳು, ಜನರನ್ನು ಅದರಲ್ಲೂ ವಿವಿಧ ಪ್ರದೇಶಗಳ ಮಹಿಳೆಯರನ್ನು ಸಂಘಟಿಸುವ ಅವರ ಶಕ್ತಿಯಿಂದ ಪ್ರಭುತ್ವ ಇವರ ಮೇಲೆ ಕಣ್ಣಿಡುವುದಕ್ಕೆ ಕಾರಣವಾಯಿತು. ಜಡ್ಡುಗಟ್ಟಿದ ಸಮಾಜಕ್ಕೆ ಸವಾಲೆಸೆದು ಅದನ್ನು ಬದಲಿಸುವ ಉದ್ದೇಶದಿಂದ ಹೋರಾಡುತ್ತಿದ್ದ ಮಹಿಳೆಯ ದನಿಯನ್ನು ಅಡಗಿಸುವ ಸ್ಪಷ್ಟ ಉದ್ದೇಶ ಪಿತೃಪ್ರಧಾನ ಪ್ರಭುತ್ವಕ್ಕಿರುವುದರಲ್ಲಿ ಅನುಮಾನವಿಲ್ಲ.

ಕೃಪೆ: ಮುಂಬೈ ರೈಸಸ್ ಟು ಸೇವ್ ಡೆಮಾಕ್ರಸಿ

ಅನುವಾದ: ಡಾ. ಕೆ. ಆರ್. ಅಶೋಕ್


ಇದನ್ನೂ ಓದಿ: ನ್ಯಾಯಕ್ಕಾಗಿ ಎದೆಯುಬ್ಬಿಸಿ ನಿಲ್ಲುವ ವರ್ನನ್ ಗೊನ್ಸಾಲ್ವೆಸ್ ಜೈಲಿನಲ್ಲಿ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...