Homeಮುಖಪುಟಇಡಿ ನಿರ್ದೇಶಕ ಸಂಜಯ್ ಮಿಶ್ರಾ ಅಧಿಕಾರವಧಿ ಸೆಪ್ಟಂಬರ್‌ವರೆಗೆ ವಿಸ್ತರಣೆ: ಇದೇ ಕೊನೆ ಬಾರಿ ಎಂದ ಸುಪ್ರೀಂ

ಇಡಿ ನಿರ್ದೇಶಕ ಸಂಜಯ್ ಮಿಶ್ರಾ ಅಧಿಕಾರವಧಿ ಸೆಪ್ಟಂಬರ್‌ವರೆಗೆ ವಿಸ್ತರಣೆ: ಇದೇ ಕೊನೆ ಬಾರಿ ಎಂದ ಸುಪ್ರೀಂ

- Advertisement -
- Advertisement -

ಜಾರಿ ನಿರ್ದೇಶನಾಲಯದ ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರ ಅಧಿಕಾರಾವಧಿಯನ್ನು ಸೆಪ್ಟಂಬರ್‌ವರೆಗೂ ವಿಸ್ತರಿಸಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದ್ದು, ಇದು ಕೊನೆಯ ಬಾರಿ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಜುಲೈ 31ಕ್ಕೆ ಅವರ ಅಧಿಕಾರವಧಿ ಮುಗಿಯುತ್ತಿದ್ದು, ಅಕ್ಟೋಬರ್ 15ರವರೆಗೂ ವಿಸ್ತರಿಸುವಂತೆ ಕೇಂದ್ರ ಸರ್ಕಾರ ಮನವಿ ಮಾಡಿತ್ತು.

ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ವಿಕ್ರಮ್ ನಾಥ್ ಮತ್ತು ಸಂಜಯ್ ಕರೋಲ್ ಅವರ ಪೀಠವು “ಮಹತ್ತರ ಸಾರ್ವಜನಿಕ ಮತ್ತು ರಾಷ್ಟ್ರೀಯ ಹಿತಾಸಕ್ತಿ”ಗಾಗಿ ವಿಸ್ತರಣೆಯನ್ನು ನೀಡುತ್ತಿದ್ದೇವೆ. ಆದರೆ ಮಿಶ್ರಾ ಸೆಪ್ಟೆಂಬರ್ 15 ರ ಮಧ್ಯರಾತ್ರಿಯಿಂದ ಇಡಿ ಮುಖ್ಯಸ್ಥರಾಗಿ ಇರುವುದಿಲ್ಲ ಎಂದು ಹೇಳಿದೆ.

ಇಡೀ ಇಲಾಖೆಯು ಮಿಶ್ರಾ ಒಬ್ಬರನ್ನು ಹೊರತುಪಡಿಸಿ ಅಸಮರ್ಥರಿಂದ ತುಂಬಿದೆಯೇ? ಎಂದು ಸುಪ್ರೀಂ ಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

ಸಂಸ್ಥೆಯಲ್ಲಿ ಈ ಕೆಲಸವನ್ನು ಮಾಡುವ ಇನ್ನೊಬ್ಬ ವ್ಯಕ್ತಿ ಇಲ್ಲವೇ? ಒಬ್ಬ ವ್ಯಕ್ತಿ ಇಷ್ಟೊಂದು ಅನಿವಾರ್ಯವಾಗಬಹುದೇ? ಇಡಿಯಲ್ಲಿ ಸಮರ್ಥರು ಬೇರೆ ಯಾರೂ ಇಲ್ಲವೇ? ಎಂದು ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾರನ್ನು ಸುಪ್ರೀಂ ಪ್ರಶ್ನಿಸಿದೆ.

ಜುಲೈ 11 ರಂದು ಇದೇ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಮಿಶ್ರಾ ಅವರಿಗೆ ಮೂರನೇ ಅವಧಿಗೆ ಅಧಿಕಾರ ವಿಸ್ತರಿಸುವ ಕೇಂದ್ರ ಸರ್ಕಾರದ ಆದೇಶವನ್ನು ಕಾನೂನುಬಾಹಿರ ಎಂದು ಕರೆದಿತ್ತು. ಅಲ್ಲದೇ ಜುಲೈ 31ರ ಒಳಗೆ ಇಡಿ ಮುಖ್ಯಸ್ಥರ ಹುದ್ದೆಗೆ ಬೇರೊಬ್ಬರನ್ನು ನೇಮಕ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿತ್ತು.

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ, ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಮತ್ತು ಇತರರು ಮಿಶ್ರಾ ಅವರ ಅಧಿಕಾರ ವಿಸ್ತರಣೆಯನ್ನು ಪ್ರಶ್ನಿಸಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.

ನವೆಂಬರ್ 19, 2018ರಂದು 1984-ಬ್ಯಾಚ್ ಭಾರತೀಯ ಕಂದಾಯ ಸೇವಾ ಅಧಿಕಾರಿ ಮಿಶ್ರಾ ಅವರನ್ನು ಮೊದಲು 2 ವರ್ಷಗಳ ಅವಧಿಗೆ ಜಾರಿ ನಿರ್ದೇಶನಾಲಯದ ನಿರ್ದೇಶಕರಾಗಿ ನೇಮಿಸಲಾಯಿತು. 2020ರಲ್ಲಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಅವರ ಅಧಿಕಾರಾವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಿತು.

ಆ ಬಳಿಕ ಸೆಪ್ಟೆಂಬರ್ 2021 ರಲ್ಲಿ, ಮಿಶ್ರಾ ಅವರ ಅಧಿಕಾರಾವಧಿಯನ್ನು ಇನ್ನು ಮುಂದೆ ವಿಸ್ತರಿಸದಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿತು.

ಜಾರಿ ನಿರ್ದೇಶನಾಲಯ ಮತ್ತು ಕೇಂದ್ರೀಯ ತನಿಖಾ ದಳದ ನಿರ್ದೇಶಕರು ಐದು ವರ್ಷಗಳವರೆಗೆ ಅಧಿಕಾರಾವಧಿಯನ್ನು ಹೊಂದಿರಬಹುದು ಎಂದು ಸರ್ಕಾರವು ನವೆಂಬರ್ 2021ರಲ್ಲಿ ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯ್ದೆ ಮತ್ತು ಕೇಂದ್ರ ವಿಜಿಲೆನ್ಸ್ ಕಮಿಷನ್ ಕಾಯಿದೆ ಸುಗ್ರೀವಾಜ್ಞೆಗಳನ್ನು ತಂದಿತು. ಇದರಿಂದ ಮಿಶ್ರಾ ಅವರು ಇನ್ನೊಂದು ವರ್ಷ ಮುಂದುವರಿಯಲು ಸಾಧ್ಯವಾಯಿತು.

ಇತ್ತೀಚಿನ ತೀರ್ಪಿನಲ್ಲಿ ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯ್ದೆ ಮತ್ತು ಕೇಂದ್ರ ವಿಜಿಲೆನ್ಸ್ ಕಮಿಷನ್ ಕಾಯಿದೆಯಲ್ಲಿನ ತಿದ್ದುಪಡಿಗಳನ್ನು ಸುಪ್ರೀಂ ಕೋರ್ಟ್ ದೃಢಪಡಿಸಿತು. ಸಿಬಿಐ ಮುಖ್ಯಸ್ಥ ಮತ್ತು ಇಡಿ ನಿರ್ದೇಶಕರ ಅಧಿಕಾರಾವಧಿಯನ್ನು ಅವರ ಕಡ್ಡಾಯ ಎರಡು ವರ್ಷಗಳ ನಂತರ ಸಂಭವನೀಯ ಮೂರು ವರ್ಷಗಳವರೆಗೆ ವಿಸ್ತರಿಸುವ ಅಧಿಕಾರವನ್ನು ಕೇಂದ್ರಕ್ಕೆ ನೀಡಿದೆ. ಆದರೆ ಆನಂತರ ಮತ್ತೆ ಅಧಿಕಾರ ಅವಧಿ ವಿಸ್ತರಿಸುವುದು ಕಾನೂನು ಬಾಹಿರ ಎಂದು ಅಭಿಪ್ರಾಯಪಟ್ಟಿದೆ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ರಾಜಕೀಯ ಎದುರಾಳಿಗಳನ್ನು ಸಂಕಷ್ಟಕ್ಕೆ ಸಿಲುಕಿಸಲು ಇಡಿ, ಸಿಬಿಐ ನಂತಹ ತನಿಖಾ ಸಂಸ್ಥೆಗಳ ಸ್ವಾಯುತ್ತತೆ ಕಸಿದುಕೊಂಡು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಇದನ್ನೂ ಓದಿ: ಇಡಿ ಮುಖ್ಯಸ್ಥ ಮಿಶ್ರಾ ಅವಧಿ ವಿಸ್ತರಣೆ: ಬೇರೆ ಯಾರೂ ಸಮರ್ಥರು ಇಲ್ಲವೇ?; ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆರ್‌ಟಿಐ ಕಾರ್ಯಕರ್ತ ಅಮಿತ್ ಜೇತ್ವಾ ಹತ್ಯೆ ಪ್ರಕರಣ: ಬಿಜೆಪಿಯ ಮಾಜಿ ಸಂಸದ ಸೇರಿ ಎಲ್ಲಾ...

0
ಆರ್‌ಟಿಐ ಕಾರ್ಯಕರ್ತ ಮತ್ತು ಪರಿಸರವಾದಿ ಅಮಿತ್ ಜೇತ್ವಾ ಹತ್ಯೆ ಪ್ರಕರಣದಲ್ಲಿ ಜುನಾಗಡದ ಬಿಜೆಪಿಯ ಮಾಜಿ ಸಂಸದ ದಿನು ಬೋಘಾ ಸೋಲಂಕಿ ಮತ್ತು ಇತರ ಆರು ಜನರನ್ನು ಗುಜರಾತ್ ಹೈಕೋರ್ಟ್‌ ಖುಲಾಸೆಗೊಳಿಸಿದೆ. ನ್ಯಾಯಮೂರ್ತಿಗಳಾದ ಎಎಸ್ ಸುಪೇಹಿಯಾ...