Homeಮುಖಪುಟ‘ಸಾಮಾಜಿಕ ನ್ಯಾಯದ ಸಾಧನ ಇಂಗ್ಲಿಷ್ ಕಲಿಕೆ': ವಿ.ಎಲ್.ನರಸಿಂಹಮೂರ್ತಿ

‘ಸಾಮಾಜಿಕ ನ್ಯಾಯದ ಸಾಧನ ಇಂಗ್ಲಿಷ್ ಕಲಿಕೆ’: ವಿ.ಎಲ್.ನರಸಿಂಹಮೂರ್ತಿ

ಎಲ್ಲಿಯವರೆಗೂ ಸಮಾನ ಶಿಕ್ಷಣ ಜಾರಿಯಾಗುವುದಿಲ್ಲವೋ ಅಲ್ಲಿವರೆಗೆ ಎಲ್ಲ ಶಾಲೆಗಳಲ್ಲಿ ಇಂಗ್ಲಿಷ್ ಕಲಿಕೆಯನ್ನು ಜಾರಿಗೊಳಿಸಲಿ.

- Advertisement -
- Advertisement -

ಯಾವುದೇ ಭಾಷೆಯು ಆ ಭಾಷೆಯನ್ನಾಡುವ ಸಮುದಾಯದ ಅಭಿವೃದ್ಧಿಯ ಸಾಧನವಾಗಬೇಕೇ ಹೊರತು ಕೇವಲ ಸಮುದಾಯದ ಭಾವನಾತ್ಮಕವಾದ ಅಂಗವಾಗಿ ಉಳಿಯಬಾರದು. ನಮ್ಮ ರಾಜ್ಯದಲ್ಲಿ ಕನ್ನಡದ ಬಗೆಗಿನ ಭಾವನಾತ್ಮಕ ಒಲವಿನಿಂದಾಗಿ ಶಾಲಾ ಶಿಕ್ಷಣದಲ್ಲಿ ಇಂಗ್ಲಿಷ್ ಕಲಿಸುವುದರ ಕುರಿತು ಇವತ್ತಿಗೂ ಅಪಾರ ಗೊಂದಲವಿದೆ. ಕಳೆದ ಕೆಲವು ವರ್ಷಗಳಲ್ಲಿ ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸುವ ಮತ್ತು ಒಂದು ಸಾವಿರ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಪ್ರಾರಂಭಿಸುವ ನಿರ್ಧಾರಗಳನ್ನು ಸರ್ಕಾರಗಳು ಕೈಗೊಂಡ ತಕ್ಷಣ ಕನ್ನಡಪರ ಸಂಘಟನೆಗಳು ಮತ್ತು ಕನ್ನಡದ ಸಾಹಿತಿಗಳು ತೀವ್ರವಾದ ವಿರೋಧವನ್ನು ವ್ಯಕ್ತಪಡಿಸಿದರು. ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುವುದನ್ನು ಶುರುಮಾಡಿದರೆ ಕನ್ನಡವು ಒಂದು ಭಾಷೆಯಾಗಿ ಅಳಿಯುತ್ತದೆ ಎನ್ನುವುದು ಇವರ ವಾದ. ನಮ್ಮ ರಾಜ್ಯದಲ್ಲಿ ಗಣನೀಯ ಮಕ್ಕಳು ವ್ಯಾಸಂಗ ಮಾಡುತ್ತಿರುವ ಖಾಸಗಿ ಶಾಲೆಗಳು ಅಧಿಕೃತವಾಗಿ, ಕೆಲವು ಕಡೆ ಅನಧಿಕೃತವಾಗಿ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವುದನ್ನು ಇವರು ಗಂಭೀರವಾಗಿ ತೆಗೆದುಕೊಂಡ ಹಾಗೆ ಕಾಣುವುದಿಲ್ಲ.

ಸರ್ಕಾರಿ ಶಾಲೆಗಳನ್ನ ಕಬಳಿಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಡಿವಾಣ ಹಾಕುವುದಕ್ಕಾಗಲೀ, ಕಡಿಮೆ ವಿದ್ಯಾರ್ಥಿಗಳಿದ್ದಾರೆ ಎನ್ನುವ ಕಾರಣ ನೀಡಿ ಸರ್ಕಾರಿ ಶಾಲೆಗಳನ್ನು ಮುಚ್ಚುವ, ವಿಲೀನಗೊಳಿಸುವ ಪ್ರಕ್ರಿಯೆಯನ್ನು ತಡೆಗಟ್ಟುವುದಕ್ಕಾಗಲೀ, ಅಷ್ಟೇ ಏಕೆ ಇರುವ ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿ, ಗುಣಮಟ್ಟ ಸುಧಾರಣೆಯ ಬಗ್ಗೆಯಾಗಲೀ ಯಾವತ್ತೂ ಧ್ವನಿ ಎತ್ತದವರು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುವುದಕ್ಕೆ ಮಾತ್ರ ವಿರೋಧ ವ್ಯಕ್ತಪಡಿಸುತ್ತಾರೆ.

ಬಾಲ್ಯದಲ್ಲಿ ಮಕ್ಕಳಲ್ಲಿ ಸಹಜವಾಗಿರುವ ‘ಲಿಂಗ್ವಿಸ್ಟಿಕ್ ಪ್ಲಾಸಿಸಿಟಿ'(ಭಾಷಾ ಕಲಿಕೆಯ ಸಾಮರ್ಥ್ಯ)ದಿಂದಾಗಿ ಮಕ್ಕಳು ನಾಲ್ಕು ಭಾಷೆಗಳನ್ನು ಸುಲಭವಾಗಿ ಕಲಿಯುತ್ತವೆ ಎನ್ನುವ ಅಂಶ ಸಂಶೋಧನೆಗಳಿಂದ ತಿಳಿದುಬಂದಿದ್ದರೂ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಕೆಯನ್ನು ಇವರು ವಿರೋಧಿಸುವುದರಲ್ಲಿ ಯಾವುದೇ ಅರ್ಥವಿಲ್ಲ.

ಇವತ್ತು ಇಂಗ್ಲಿಷ್ ಕಲಿಕೆಯನ್ನು ಕೇವಲ ನಮ್ಮ ಭಾಷೆಯ ಅಳಿವು ಉಳಿವಿನ ಪ್ರಶ್ನೆಯಾಗಿ ಮಾತ್ರ ನೋಡದೆ ಅದಕ್ಕಿರುವ ಸಾಮಾಜಿಕ ಮುಖವನ್ನು ಗಮನಿಸಿದರೆ ಇಂಗ್ಲಿಷ್ ಕಲಿಕೆಯನ್ನು ವಿರೋಧಿಸುವವರ ಹಿಫೊಕ್ರಸಿಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಏಕೆಂದರೆ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಲ್ಲಿ ಬಹುತೇಕ ಮಕ್ಕಳು ದಲಿತ, ಹಿಂದುಳಿದ, ಅಲ್ಪಸಂಖ್ಯಾತರು ಮತ್ತು ಆದಿವಾಸಿ ಸಮುದಾಯಗಳ ಬಡ ಮಕ್ಕಳು. ಬಹುತೇಕ ಬಡತನ ರೇಖೆಗಿಂತ ಕೆಳಗಿರುವ ಈ ಜನ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಓದಿಸುವಷ್ಟು ಆರ್ಥಿಕವಾಗಿ ಶಕ್ತರಾಗಿರುವುದಿಲ್ಲ ಮತ್ತು ಮುಕ್ಕಾಲು ಭಾಗ ಖಾಸಗಿ ಶಾಲೆಗಳು ಕಳಪೆಯಾಗಿರುವುದರಿಂದ ಅಂತಹ ಶಾಲೆಗಳಗೆ ಅಪಾರ ಶುಲ್ಕ ತೆತ್ತು ಓದುವುದು ಕೂಡ ನಿರರ್ಥಕ. ಹಾಗಾಗಿ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲೆ ಇಂಗ್ಲಿಷ್ ಕಲಿಸುವುದು ಸೂಕ್ತ. ರಾಜ್ಯದ ಖಾಸಗಿ ಶಾಲೆಗಳಲ್ಲಿ ಓದುವ ಉಳ್ಳವರ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೆ ನಾಶವಾಗದ ಕನ್ನಡ ಈ ಬಡವರ ಮಕ್ಕಳು ಇಂಗ್ಲಿಷ್ ಓದಿದರೆ ಅದು ಹೇಗೆ ನಾಶವಾಗುತ್ತದೆ ಎನ್ನುವುದನ್ನ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಸೇರಿಸಿ ತಾವು ಕನ್ನಡ ಶಾಲೆಗಳ ಉಳಿವಿಗೆ ಹೋರಾಡುವ ಹೋರಾಟಗಾರರು, ಸಾಹಿತಿಗಳನ್ನು ಕೇಳಬೇಕು! ಅಥವಾ ನಾಡು, ನುಡಿಯನ್ನು ಉಳಿಸುವ ಜವಾಬ್ದಾರಿಯನ್ನು ಸಮಾಜದ ದುರ್ಬಲ ವರ್ಗಗಳು ಮಾತ್ರ ಹೊರಬೇಕು ಎನ್ನುವುದು ಇವರ ವಾದವಿರಬಹುದೇ?

ಇನ್ನು ನಮ್ಮ ಇತಿಹಾಸವನ್ನು ನೋಡಿದರೆ ಶತಮಾನಗಳ ಕಾಲ ಈ ದೇಶದ ತಳ ಸಮುದಾಯಗಳು ಅಕ್ಷರ ಕಲಿಯುವಿಕೆಯಿಂದಲೇ ವಂಚಿತವಾಗಿದ್ದವು. ಇತಿಹಾಸದುದ್ದಕ್ಕೂ ತಾವು ಮಾತ್ರ ಅಕ್ಷರ ಕಲಿತು ದಲಿತರು, ಹಿಂದುಳಿದವರು, ಆದಿವಾಸಿಗಳನ್ನು ಶಿಕ್ಷಣ ವ್ಯವಸ್ಥೆಯಿಂದ ಸಂಪೂರ್ಣವಾಗಿ ದೂರ ಇಟ್ಟವರ ವ್ಯವಸ್ಥಿತವಾದ ಸಂಚಿಗೆ ಇವತ್ತು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುವ ಪ್ರಕ್ರಿಯೆ ಬಲಿಯಾಗುತ್ತಿದೆ. ಆಯಾ ಕಾಲಕ್ಕೆ ತಕ್ಕಂತೆ ಆಯಾ ಕಾಲದ ‘ಅಧಿಕಾರದ ಭಾಷೆ’ಯನ್ನು ವಶಪಡಿಸಿಕೊಳ್ಳುವ ವಿದ್ಯೆಯನ್ನು ಕರಗತಮಾಡಿಕೊಂಡಿರುವ ಈ ದೇಶದ ಮೇಲ್ವರ್ಗ ಮೊದಲು ಸಂಸ್ಕೃತ, ಆಮೇಲೆ ಪರ್ಷಿಯನ್, ಈಗ ಇಂಗ್ಲಿಷನ್ನು ತನ್ನ ಸ್ವತ್ತಾಗಿಸಿಕೊಂಡಿದೆ. ದಲಿತ, ಹಿಂದುಳಿದ ಮತ್ತು ಆದಿವಾಸಿ ಸಮುದಾಯಗಳ ಮಕ್ಕಳು ಇಂಗ್ಲಿಷ್ ಶಿಕ್ಷಣ ಪಡೆದರೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿರುವ ತಮ್ಮ ಪ್ರಾಬಲ್ಯವನ್ನು ಕಳೆದುಕೊಳ್ಳುವ ಭಯದಿಂದ ಈ ಮೇಲ್ವರ್ಗ ಸರ್ಕಾರಿ ಶಾಲೆಗಳು ಹಿಂದುಳಿದಿರುವಂತೆ ನೋಡಿಕೊಂಡು ಖಾಸಗಿ ಶಾಲೆಗಳನ್ನ ಬಲಪಡಿಸುತ್ತಿದೆ. ಆ ಮೂಲಕ ಸಮಾಜದ ಬಹುಸಂಖ್ಯಾತರಾಗಿರುವ ದಲಿತ, ಹಿಂದುಳಿದ, ಆದಿವಾಸಿ ಸಮುದಾಯಗಳು ಸೇರಿದಂತೆ ಎಲ್ಲ ಬಡವರನ್ನು ಅಭಿವೃದ್ಧಿಯಿಂದ ವಂಚಿತರನ್ನಾಗಿಸಲಾಗುತ್ತಿದೆ.

ಇವತ್ತು ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು, ವೃತ್ತಿಪರ ಶಿಕ್ಷಣ ಪಡೆಯಲು ಇಂಗ್ಲಿಷ್ ಅನಿವಾರ್ಯವಾಗಿದೆ. ಖಾಸಗೀ ಶಾಲೆಗಳಲ್ಲಿ ಓದಿಸುವ ಶಕ್ತಿಯಿಲ್ಲದ ಬಡವರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದಿ ಖಾಸಗೀ ಶಾಲೆಗಳಲ್ಲಿ ಓದಿದ ಮಕ್ಕಳ ಜೊತೆ ಸ್ಪರ್ಧಿಸಲಾರದೆ ಎಷ್ಟೋ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇಂಗ್ಲಿಷ್ ಭಾಷೆಯಲ್ಲಿ ಮಾತಾಡಲು ಬಾರದ ಎಷ್ಟೋ ಬುದ್ಧಿವಂತ ವಿದ್ಯಾರ್ಥಿಗಳು ಕೀಳರಿಮೆ ಅನುಭವಿಸುತ್ತಿದ್ದಾರೆ, ಖಿನ್ನತೆಗೆ ಒಳಗಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿನ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಕೋರ್ಸ್‍ಗಳನ್ನು ಓದುತ್ತಿರುವ ದಲಿತ, ಹಿಂದುಳಿದ, ಆದಿವಾಸಿ ಮಕ್ಕಳ ಸಂಖ್ಯೆ ತೀರಾ ಕಡಿಮೆ ಇದೆ ಮತ್ತು ಇಂತಹ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ತಳ ಸಮುದಾಯದ ಪ್ರತಿಭಾವಂತರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸನ್ನಿವೇಶವನ್ನು ಸೃಷ್ಟಿಸಲಾಗುತ್ತಿದೆ. ಇವತ್ತಿಗೂ ಮೇಲುಜಾತಿಗಳ ಹಿಡಿತದಲ್ಲಿರುವ ಸರ್ಕಾರದ ಉನ್ನತ ಹುದ್ದೆಗಳು, ಖಾಸಗಿ ವಲಯದ ಉದ್ಯೋಗಗಳನ್ನು ಪಡೆಯಬೇಕಾದರೆ ತಳ ಸಮುದಾಯಗಳಿಗೆ ಇಂಗ್ಲಿಷ್ ಶಿಕ್ಷಣದ ಅಗತ್ಯವಿದೆ. ಬರೀ ಉದ್ಯೋಗದ ದೃಷ್ಟಿಯಿಂದ ಮಾತ್ರವಲ್ಲದೆ ಜಗತ್ತಿನ ಜ್ಞಾನ ಪಡೆಯುವುದಕ್ಕೆ ಕೂಡ ಈ ಸಮುದಾಯಗಳ ಮಕ್ಕಳು ಇಂಗ್ಲಿಷ್ ಶಿಕ್ಷಣ ಪಡೆಯುವಂತಾಗಬೇಕಿದೆ. ಇಂಗ್ಲಿಷ್ ಕಲಿಯುವುದರ ಮೂಲಕ ಆತ್ಮವಿಶ್ವಾಸ ಬೆಳಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ಸರ್ಕಾರಿ ಶಾಲೆಗಳಲ್ಲಿ ಸೂಕ್ತ ತರಬೇತಿ ಪಡೆದ ಶಿಕ್ಷಕರು ಸಮರ್ಪಕವಾಗಿ ಇಂಗ್ಲಿಷ್ ಕಲಿಸುವುದನ್ನ ಬೆಂಬಲಿಸಬೇಕಿದೆ.

ಒಂದು ಭಾಷೆಯನ್ನು ಉಳಿಸಿಕೊಳ್ಳುವುದು ಎಷ್ಟು ಮುಖ್ಯವೋ ಆ ಭಾಷೆಯನ್ನಾಡುವ ಜನರು ಉಳಿಯುವುದು ಕೂಡ ಅಷ್ಟೇ ಮುಖ್ಯ. ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುವುದರಿಂದ ಕನ್ನಡ ಅಳಿಯುವುದಾದರೆ ಖಾಸಗಿ ಶಾಲೆಗಳು ಸೇರಿದಂತೆ ನಮ್ಮ ಇಡೀ ಶಿಕ್ಷಣ ವ್ಯವಸ್ಥೆ ಏಕರೂಪವಾದ ಸಮಾನ ಶಿಕ್ಷಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಿ. ಅದಾಗದಿದ್ದರೇ ಎಲ್ಲಿಯವರೆಗೂ ಸಮಾನ ಶಿಕ್ಷಣ ಜಾರಿಯಾಗುವುದಿಲ್ಲವೋ ಅಲ್ಲಿವರೆಗೆ ಎಲ್ಲ ಶಾಲೆಗಳಲ್ಲಿ ಇಂಗ್ಲಿಷ್ ಕಲಿಕೆಯನ್ನು ಜಾರಿಗೊಳಿಸಲಿ. ಈ ದೇಶದಲ್ಲಿ ಇಂಗ್ಲಿಷ್ ಕೇವಲ ಒಂದು ಜ್ಞಾನದ ಭಾಷೆಯಾಗಿ ಅಷ್ಟೇ ಅಲ್ಲದೆ ಸಾಮಾಜಿಕ ಅಸಮಾನತೆಯ ವಿಮೋಚನೆಯ ಅಸ್ತ್ರವಾಗಿ ಕೂಡ ದಲಿತ, ಹಿಂದುಳಿದ, ಆದಿವಾಸಿಗಳಿಗೆ ನೆರವಾಗಬಲ್ಲದು ಎನ್ನುವುದನ್ನ ಮಾತೃಭಾಷಾ ರಕ್ಷಕರು ಅರ್ಥಮಾಡಿಕೊಳ್ಳಲಿ.

  • ವಿ.ಎಲ್.ನರಸಿಂಹಮೂರ್ತಿ

(ಹೊಸ ತಲೆಮಾರಿನ ಚಿಂತಕ, ಖಾಸಗಿ ಪದವಿ ಪೂರ್ವ ಕಾಲೇಜೊಂದರಲ್ಲಿ ಇಂಗ್ಲಿಷ್ ಉಪನ್ಯಾಸಕರು)


ಇದನ್ನೂ ಓದಿ: ಮಗು ಕನಸು ಕಾಣುವ-ಚಿಂತಿಸುವ ಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂಬ ಹೋರಾಟದ ಸುತ್ತ..
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ತಾಯಿನುಡಿಯ/ ಮಾತೃಭಾಷೆಯ ಮಹತ್ವವನ್ನು ಅರಿತಿರುವ ರಾಜಕಾರಣಿಗಳು ಮತ್ತು ರಾಜಕಾರಣಿಗಳು ಹಾಗೂ ಖಾಸಗಿ ಶಾಲಾ ಕಾಲೇಜುಗಳ ಶಿಕ್ಷಣ ಸಂಸ್ಥೆಗಳ ಮಾಲೀಕರು ದುಡ್ಡು ಮಾಡುವ ದಂದೆಗಾಗಿ ಪರಭಾಷಾ ಇಂಗ್ಲೀಷ್ಗೆ ಆಡಳಿತ ಭಾಷೆ ಹಿಂದಿಗೆ ಶರಣಾಗಿದ್ದಾರೆ.

    ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ

LEAVE A REPLY

Please enter your comment!
Please enter your name here

- Advertisment -

ಬಿಸಿಲಿನ ಬೆಂಕಿಗೆ ‘ಎಲ್ ನಿನೊ’ ತುಪ್ಪ: 2026ರ ಮುಂಗಾರು ಕಥೆ ಏನು?

ದೇಶಾದ್ಯಂತ ತಾಪಮಾನ ದಿನೇ ದಿನೇ ಏರುತ್ತಿದ್ದು, ಭೀಕರ ಶಾಖದ ಅಲೆಗಳಿಗೆ (Heatwaves) ಜನ ತತ್ತರಿಸಿ ಹೋಗಿದ್ದಾರೆ. ಈ ಹೊತ್ತಿನಲ್ಲಿ ಎಲ್ಲರ ಕಣ್ಣುಗಳು ಸಾವಿರಾರು ಕಿಲೋಮೀಟರ್ ದೂರದ ಪೆಸಿಫಿಕ್ ಮಹಾಸಾಗರದಲ್ಲಿ ಸಂಭವಿಸುತ್ತಿರುವ ಹವಾಮಾನ ಬದಲಾವಣೆಯ...

ಸುಮಾರು 1 ಲಕ್ಷ ಶಾಲೆಗಳಲ್ಲಿ ಬಾಲಕಿಯರಿಗೆ ಶೌಚಾಲಯವಿಲ್ಲ, 61,000 ಶಾಲೆಗಳಲ್ಲಿ ಕ್ರಿಯಾತ್ಮಕ ಶೌಚಾಲಯಗಳಿಲ್ಲ: ನೀತಿ ಆಯೋಗ

ಶಿಕ್ಷಣವು ಒಂದು ದೇಶದ ಅಭಿವೃದ್ಧಿಯ ಬೆನ್ನೆಲುಬು ಅಂತಲೇ ಹೇಳಲಾಗುತ್ತದೆ. ಆದರೆ, ಭಾರತದ ಶಾಲಾ ಶಿಕ್ಷಣದ ಮೂಲಭೂತ ಸೌಕರ್ಯಗಳು ಮತ್ತು ವ್ಯವಸ್ಥೆಯ ಕುರಿತಾಗಿ ನೀತಿ ಆಯೋಗ ಹಾಗೂ ಯುಡಿಐಎಸ್ಇ+ (UDISE+ 2024–25) ಇತ್ತೀಚೆಗೆ ಬಿಡುಗಡೆ...

CJI ಹೇಳಿಕೆಯಿಂದ ರಾತ್ರೋರಾತ್ರಿ ಹುಟ್ಟಿಕೊಂಡ ‘ಕಾಕ್‌ರೋಚ್ ಜನತಾ ಪಾರ್ಟಿ’

ಒಂದು ರಾಜಕೀಯ ಪಕ್ಷವನ್ನು ಕಟ್ಟಿ, ಅದಕ್ಕೊಂದು ರೂಪ ಕೊಡಲು ಎಷ್ಟು ಸಮಯ ಬೇಕಾಗಬಹುದು? ಕೇವಲ 48 ಗಂಟೆಗಳು! ಹೌದು, ಕಳೆದ ಭಾನುವಾರ ನೀವು ಸಾಮಾಜಿಕ ಜಾಲತಾಣಗಳಲ್ಲಿ ಸ್ವಲ್ಪ ಸಮಯ ಕಳೆದಿದ್ದರೆ ನಿಮಗಿದು ಖಂಡಿತ...

ಬೆಂಗಳೂರು: ಗಂಗಸಂದ್ರ ದಲಿತರ ಭೂಮಿ ಕಿತ್ತುಕೊಳ್ಳಲು ಮುಗಿಬಿದ್ದ ಅರಣ್ಯ ಇಲಾಖೆ: ಮಿತಿಮೀರಿದ ಅಧಿಕಾರಿಗಳ ದರ್ಪ

ಕೆಂಗೇರಿ ಬಳಿಯ ಗಂಗಸಂದ್ರ ಗ್ರಾಮದಲ್ಲಿನ ದಲಿತರ ಭೂಮಿಯನ್ನು ಅರಣ್ಯ ಭೂಮಿಯೆಂದು ಅರಣ್ಯ ಇಲಾಖೆಯ ವಶಕ್ಕೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ. 2026 ಮೇ 19ರ, ಮಂಗಳವಾರ  ಬೆಳ್ಳಂಬೆಳಗ್ಗೆಯೇ ಅಧಿಕಾರಿಗಳ ದರ್ಪ ತಾರಕಕ್ಕೇರಿದೆ. ದಲಿತ ನಿವಾಸಿಗಳ...

ಜನಾಂಗೀಯ ದ್ವೇಷ: ಅಮೆರಿಕಾದ ಸ್ಯಾನ್ ಡಿಯಾಗೋ ಮಸೀದಿ ಸಂಕೀರ್ಣದಲ್ಲಿ ಗುಂಡಿನ ದಾಳಿ: ಮೂವರು ಸಾವು

ಸ್ಯಾನ್ ಡಿಯಾಗೋ: ಅಮೆರಿಕದ ಸ್ಯಾನ್ ಡಿಯಾಗೋ ನಗರದ ಇಸ್ಲಾಮಿಕ್ ಸೆಂಟರ್ ಆಫ್ ಸ್ಯಾನ್ ಡಿಯಾಗೋ (ICSD) ಮಸೀದಿ ಸಂಕೀರ್ಣದಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಈ ಘಟನೆಯನ್ನು ಸಂಭಾವ್ಯ...

ರಸ್ತೆಗಳಲ್ಲಿ ಮುಕ್ತವಾಗಿ ಓಡಾಡುವುದು ಜನರ ಹಕ್ಕು: ಬೀದಿ ನಾಯಿಗಳ ದಯಾಮರಣಕ್ಕೂ ಸುಪ್ರೀಂ ಅಸ್ತು

ಸುಪ್ರೀಂ ಕೋರ್ಟ್ ಇಂದು (ಮೇ 19, ಮಂಗಳವಾರ) ಬೀದಿ ನಾಯಿಗಳ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿ ಮಹತ್ವದ ತೀರ್ಪು ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳ ದಾಳಿಯಿಂದಾಗಿ ಸಾರ್ವಜನಿಕರು...

ಹರಿಯಾಣದ ಕಾರ್ಮಿಕ ನಾಯಕ ಅಜಿತ್ ಸಿಂಗ್ ಬಂಧನ ‘ಅಕ್ರಮ’ ಎಂದ ಕೋರ್ಟ್; ಜಾಮೀನು ಮಂಜೂರು

ಬೆಲ್ಸೋನಿಕಾ ಆಟೋ ಕಾಂಪೊನೆಂಟ್ ಇಂಡಿಯಾ ಎಂಪ್ಲಾಯೀಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಅಜಿತ್ ಸಿಂಗ್ ಅವರಿಗೆ ಗುರುಗ್ರಾಮ್ ಜಿಲ್ಲಾ ನ್ಯಾಯಾಲಯವು (ಮೇ 18) ಜಾಮೀನು ನೀಡಿದೆ. ಅವರು ಮಾನೇಸರ್ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ಪ್ರತಿಭಟನೆಗಳ...

ಉಮರ್, ಶಾರ್ಜೀಲ್‌ಗೆ ಜಾಮೀನು ನಿರಾಕರಿಸಿದ್ದಕ್ಕೆ ಆಕ್ಷೇಪ : ತನ್ನದೇ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ದೆಹಲಿ ಗಲಭೆ (2020ರ ಪ್ರಕರಣ) ಹಿಂದಿನ ದೊಡ್ಡ ಮಟ್ಟದ ಪಿತೂರಿ ಆರೋಪದಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ನಿರಾಕರಿಸಿ, 2026ರ ಜನವರಿಯಲ್ಲಿ ತನ್ನದೇ ಮತ್ತೊಂದು ದ್ವಿಸದಸ್ಯ ಪೀಠ...

ಮುತ್ತುರಾಜ್ ‘ರಾಜಕುಮಾರ್‍’ ಆದ ಕಥೆ

’ಬೇಡರ ಕಣ್ಣಪ್ಪ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದ ಸಮಯದಲ್ಲಿ ಒಂದು ದಿನ ನಾನು ಅಂದಿನ ಪತ್ರಿಕೆಯಲ್ಲಿ ಚಿತ್ರಸುದ್ದಿಯನ್ನು ಓದುತ್ತಿದ್ದಾಗ ಗುಬ್ಬಿ ಕರ್ಣಾಟಕ ಸಂಸ್ಥೆಯವರು ನಿರ್ಮಿಸುತ್ತಿರುವ ಬೇಡರ ಕಣ್ಣಪ್ಪ ಚಿತ್ರ ಎಂದು ಸುದ್ದಿ ಪ್ರಾರಂಭವಾಗಿ...

ಬಂಗಾಳ ಎಸ್‌ಐಆರ್ ಅವಾಂತರ ಹಕ್ಕು ಕಳೆದುಕೊಂಡ ಮತದಾರ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್ ಪೂರ್ಣಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...