ಕಾಶ್ಮೀರದಲ್ಲಿ ಈಗ ಎಲ್ಲವೂ ಸರಿ ಹೋಗಿದೆ. ಅಲ್ಲಿನ ವಾತಾವರಣ, ಸ್ಥಿತಿ ಸಹಜಸ್ಥಿತಿಗೆ ಮರಳಿದೆ. ಶೀಘ್ರದಲ್ಲೇ ಇಂಟರ್ನೆಟ್ ಸೇವೆ ಮೇಲಿರುವ ನಿರ್ಬಂಧವನ್ನು ತೆಗೆದು ಹಾಕಿ, ಸೇವೆ ಕಲ್ಪಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ತಿಳಿಸಿದರು.
ಆಗಸ್ಟ್ 5ರ ನಂತರ ಪೊಲೀಸ್ ಫೈರಿಂಗ್ನಲ್ಲಿ ಒಬ್ಬೇ ಒಬ್ಬ ವ್ಯಕ್ತಿಯೂ ಕೂಡ ಮೃತಪಟ್ಟಿಲ್ಲ. ಆರ್ಟಿಕಲ್ 370 ರದ್ದಾದ ಬಳಿಕ ಎಲ್ಲವೂ ಸಹಜ ಸ್ಥಿತಿಗೆ ತಲುಪಿದೆ. ಪೊಲೀಸ್ ಫೈರಿಂಗ್ನಲ್ಲಿ ಒಬ್ಬೇ ಒಬ್ಬ ವ್ಯಕ್ತಿಯೂ ಸಾವನ್ನಪ್ಪಿಲ್ಲ. ಕಾಶ್ಮೀರದಲ್ಲಿ ಕಲ್ಲು ತೂರಾಟ ನಡೆಸಿ, ಸೈನಿಕರ ಮೇಲೆ ಹಲ್ಲೆ ನಡೆಸುತ್ತಿದ್ದ, ಕಲ್ಲು ತೂರಾಟಗಾರರ ಸದ್ದಡಗಿದೆ. ಈಗ ಅಲ್ಲಿ ಒಂದೇ ಕಲ್ಲು ತೂರಾಟದಂಥ ಘಟನೆ ನಡೆದಿಲ್ಲ.
ಕಳೆದ ವರ್ಷ 802ಕ್ಕೂ ಹೆಚ್ಚು ಕಲ್ಲು ತೂರಾಟ ಘಟನೆಗಳು ದಾಖಲಾಗಿದ್ದವು. ಈ ವರ್ಷದಲ್ಲಿ 544 ಘಟನೆಗಳು ನಡೆದಿರುವುದು ದಾಖಲಾಗಿದೆ ಎಂದು ಅಮಿತ್ ಶಾ ತಿಳಿಸಿದರು.
ಇದನ್ನೂ ಓದಿ: ಸಂಸ್ಕೃತ ಪ್ರಾಧ್ಯಾಪಕ ಫಿರೋಜ್ ಖಾನ್ ನೇಮಕಕ್ಕೆ ವಿರೋಧ: ವಿದ್ಯಾರ್ಥಿಗಳ ನಡೆಗೆ ಬಿಜೆಪಿಯ ಪರೇಶ್ ಖಂಡನೆ
ಇನ್ನು 765 ಮಂದಿ ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರಾಟ ನಡೆಸಲು ಮತ್ತು ಘಟನೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಗೃಹ ಸಚಿವಾಲಯ ವರದಿ ನೀಡಿದೆ ಎಂದು ಹೇಳಿದರು.
ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಇಂಟರ್ನೆಟ್ ಸೇವೆಯನ್ನು ಯಾವಾಗ ಮರು ಸ್ಥಾಪಿಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾ, ಸ್ಥಳೀಯ ಆಡಳಿತ ಅದನ್ನು ನಿರ್ಧರಿಸುತ್ತೆ ಎಂದರು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳು ನಿಂತಿಲ್ಲ. ಕಾಶ್ಮೀರವನ್ನು ತಮ್ಮದಾಗಿಸಿಕೊಳ್ಳಲು ಅಲ್ಲಿಯವರು ಕಾಯುತ್ತಿದ್ದಾರೆ. ಹೀಗಾಗಿ ಸ್ಥಳೀಯ ಸ್ಥಿತಿಗತಿಯನ್ನು ಆಧರಿಸಿ, ಕಾಶ್ಮೀರ ಆಡಳಿತ ಪ್ರಾಧಿಕಾರವು ಇಂಟರ್ನೆಟ್ ಸೇವೆ ಮರುಸ್ಥಾಪಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.
ಕಾಶ್ಮೀರದಲ್ಲಿ ಪೆಟ್ರೋಲ್, ಡೀಸೆಲ್, ಕೆರೋಸೇನ್, ಎಲ್ಪಿಜಿ, ಅಕ್ಕಿ ಸೇರಿದಂತೆ ಎಲ್ಲವೂ ಸಿಗುತ್ತಿದೆ. 22 ಲಕ್ಷ ಮೆಟ್ರಿಕ್ ಟನ್ನಷ್ಟು ಸೇಬು ಉತ್ಪಾದನೆಯಾಗುತ್ತಿದೆ. ಎಲ್ಲಾ ಲ್ಯಾಂಡ್ಲೈನ್ ಸೇವೆ ಆರಂಭವಾಗಿದೆ ಎಂದು ತಿಳಿಸಿದರು.
ಅಲ್ಲದೇ ಸ್ಥಳೀಯ ಮಟ್ಟದ ಪತ್ರಿಕೆಗಳು, ಟಿವಿ ಚಾನೆಲ್ಗಳು ಕೆಲಸ ನಿರ್ವಹಿಸುತ್ತಿವೆ. ಅವುಗಳ ಮೇಲೆ ನಿರ್ಬಂಧ ಹೇರಿದ್ದನ್ನು ವಾಪಸ್ ಪಡೆಯಲಾಗಿದೆ. ಈಗ ಯಾವುದೇ ನಿರ್ಬಂಧವಿಲ್ಲ. ಎಲ್ಲವೂ ಚೆನ್ನಾಗಿದ್ದು, ಕಾಶ್ಮೀರ ಸಹಜ ಸ್ಥಿತಿಗೆ ಮರಳಿದೆ. ಈ ಹಿಂದೆ ಕೆಲ ಗಂಟೆಗಳವರೆಗೆ ಮಾತ್ರ ಅಂಗಡಿ ತೆರೆಯುತ್ತಿದ್ದವರು, ಈಗ ಬೆಳಗ್ಗೆಯಿಂದ ಸಾಯಂಕಾಲದವರೆಗೂ ವ್ಯಾಪಾರ ನಡೆಸುತ್ತಿದ್ದಾರೆ. ಶ್ರೀನಗರದಲ್ಲಿ ಮುಕ್ತವಾಗಿ ವ್ಯಾಪಾರ ಚಟುವಟಿಕೆಗಳು ನಡೆದಿವೆ ಎಂದು ಹೇಳಿದರು.