Homeಫ್ಯಾಕ್ಟ್‌ಚೆಕ್FACT CHECK : ಮುಸ್ಲಿಂ ಮಕ್ಕಳು ರೈಲ್ವೆ ಹಳಿಗೆ ಹಾನಿ ಮಾಡಿದ್ದಾರೆ ಎಂದು ಸುಳ್ಳು ವಿಡಿಯೋ...

FACT CHECK : ಮುಸ್ಲಿಂ ಮಕ್ಕಳು ರೈಲ್ವೆ ಹಳಿಗೆ ಹಾನಿ ಮಾಡಿದ್ದಾರೆ ಎಂದು ಸುಳ್ಳು ವಿಡಿಯೋ ಹಂಚಿಕೆ

- Advertisement -
- Advertisement -

ರೈಲು ಅಪಘಾತ ಉಂಟು ಮಾಡುವ ಉದ್ದೇಶದಿಂದ ಮುಸ್ಲಿಂ ಮಕ್ಕಳು ರೈಲು ಹಳಿಗಳಿಗೆ ಹಾನಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ 40 ಸೆಕೆಂಡ್ ಅವಧಿಯ ವಿಡಿಯೋವೊಂದು ವೈರಲ್ ಆಗಿದೆ.

ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಕೆಲವರು “ರೈಲು ಜಿಹಾದ್” ಎಂದು ಹ್ಯಾಷ್‌ಟ್ಯಾಗ್ ಕೊಟ್ಟಿದ್ದಾರೆ. ವೈರಲ್ ವಿಡಿಯೋದಲ್ಲಿ ಕುರ್ತಾ ಧರಿಸಿರುವ ಮೂವರು ಮಕ್ಕಳು ರೈಲು ಹಳಿಗಳಿಗೆ ಹಾನಿ ಮಾಡುತ್ತಿರುವ ದೃಶ್ಯವಿದೆ. ಅದರಲ್ಲಿ ಓರ್ವ ಹುಡುಗ ದೊಡ್ಡ ಸ್ಪ್ಯಾನರ್ ಹಿಡಿದು ರೈಲು ಹಳಿಯ ಬೋಲ್ಡ್‌ ತೆಗೆಯುತ್ತಿರುವುದು ಮತ್ತು ಇನ್ನೋರ್ವ ಹುಡುಗ ಅದನ್ನು ಚೀಲಕ್ಕೆ ತುಂಬಿಸುತ್ತಿರುವುನ್ನು ನೋಡಬಹುದು.

ಕೋಮು ವೈಷಮ್ಯದ ಸುದ್ದಿಗಳನ್ನು ಹರಡುವ ಬಲಪಂಥೀಯ ಸುದ್ದಿ ವಾಹಿನಿ ‘ಸುದರ್ಶನ್‌ ನ್ಯೂಸ್‌’ನ ಸಂಪಾದಕ ಸುರೇಶ್ ಚಾಂವಕೆ (@SureshChavhanke) ಆಗಸ್ಟ್ 30ರಂದು ವೈರಲ್ ವಿಡಿಯೋ ಹಂಚಿಕೊಂಡು “ಈ ವಯಸ್ಸಿನಲ್ಲಿ ಅವರು ರೈಲು ಹಳಿಗಳಿಗೆ ಹಾನಿ ಮಾಡುತ್ತಿದ್ದಾರೆ. ಊಹಿಸಿ, ಮುಂದಿನ 50 ವರ್ಷಗಳಲ್ಲಿ ಅವರು ಏನು ಮಾಡಬಹುದು? ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಏನು ಹೇಳಿದ್ದಾರೆ ಎಂಬುವುದನ್ನು ಸರ್ಕಾರ ಓದಿ ಅರ್ಥ ಮಾಡಿಕೊಳ್ಳಬೇಕು. ಕೇವಲ ಅವರ (ಬಾಬಾ ಸಾಹೇಬರ) ನಾಮವನ್ನು ಜಪಿಸುವುದರಿಂದ ಏನೂ ಆಗುವುದಿಲ್ಲ. ಅಶ್ವಿನಿ ವೈಷ್ಣವ್ (ರೈಲ್ವೆ ಸಚಿವ) ಅವರೇ ಇಂತವುಗಳು ಕಂಡಾಗ ತಕ್ಷಣ ಶೂಟ್ ಮಾಡಲು ಆರ್‌ಪಿಎಫ್‌ (ರೈಲ್ವೆ ರಕ್ಷಣಾ ದಳ)ಗೆ ಆದೇಶ ನೀಡಬೇಕು. ಆಗ ಭಯ ಹುಟ್ಟುತ್ತದೆ” ಎಂದು ಬರೆದುಕೊಂಡಿದ್ದರು.

ಇನ್ನೊಂದು ವೆರಿಫೈಡ್ ಎಕ್ಸ್‌ ಖಾತೆ ಎಕ್ಸ್ ಸೆಕ್ಯೂಲರ್ (@XSecular)ನಲ್ಲೂ ಆಗಸ್ಟ್ 29ರಂದು ವಿಡಿಯೋ ಹಂಚಿಕೊಂಡು ” ಈ ವಿಡಿಯೋ ಎಲ್ಲಿದ್ದು ಎಂದು ಗೊತ್ತಿಲ್ಲ. ಆದರೆ, ನೀವು ಈ ಹಂದಿ ಮರಿಗಳನ್ನು ಅವುಗಳ ಬಟ್ಟೆಯಿಂದ ಗುರುತಿಸಬಹುದು. ರೈಲ್ವೆ ಸಚಿವಾಲಯ ಮತ್ತು ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್ ಅವರೇ, ರೈಲ್ವೆ ಹಳಿಗಳ ಬಳಿ ಇರುವ ಕೊಳೆಗೇರಿಗಳಲ್ಲಿ ವಾಸಿಸುವ ಎಲ್ಲಾ ಮುಸ್ಲಿಮರನ್ನು ತೆರವುಗೊಳಿಸಿ. ಇಲ್ಲದಿದ್ದರೆ ಈ ಜಿಹಾದಿಗಳು ಒಂದು ದಿನ ದೊಡ್ಡ ಗಂಡಾಂತರವನ್ನು ಸೃಷ್ಟಿಸುತ್ತಾರೆ” ಎಂದು ಬರೆಯಲಾಗಿತ್ತು. ನಾವು ಈ ಸುದ್ದಿ ಬರೆಯುವ ವೇಳೆ ಈ ಪೋಸ್ಟ್ 6 ಲಕ್ಷದ 58 ಸಾವಿರ ವೀಕ್ಷಣೆ ಪಡೆದಿತ್ತು.

ಮತ್ತೊಂದು ವೆರಿಫೈಡ್ ಎಕ್ಸ್‌ ಖಾತೆ ಸ್ಕ್ವಿಂಟ್ ನಿಯಾನ್ (@TheSquind)ನಲ್ಲಿ ಆಗಸ್ಟ್ 29ರಂದು ವಿಡಿಯೋ ಹಂಚಿಕೊಂಡು “ಸುಳ್ಳು ಸುದ್ದಿ: ರೈಲು ಹಳಿಯಲ್ಲಿ ಸ್ಪ್ಯಾನರ್‌ಗಳೊಂದಿಗೆ ಆಟವಾಡುತ್ತಿರುವ ಮಕ್ಕಳು!” ಎಂದು ವ್ಯಂಗ್ಯವಾಗಿ ಬರೆದುಕೊಳ್ಳಲಾಗಿತ್ತು. ನಾವು ಈ ಸುದ್ದಿ ಬರೆಯುವ ಹೊತ್ತಿಗೆ ಈ ಪೋಸ್ಟ್ 1 ಲಕ್ಷದ 48 ಸಾವಿರ ವೀಕ್ಷಣೆ ಪಡೆದಿತ್ತು.

ಇನ್ನೂ ಹಲವು ಎಕ್ಸ್‌ ಖಾತೆಗಳಲ್ಲಿ ವಿಡಿಯೋ ಹಂಚಿಕೊಂಡು ಮುಸ್ಲಿಂ ಮಕ್ಕಳು ರೈಲು ಹಳಿಯನ್ನು ಹಾಳುಗೆಡವುತ್ತಿದ್ದಾರೆ ಎಂದು ಬರೆದುಕೊಳ್ಳಲಾಗಿದೆ.

ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋದ ಸತ್ಯಾಸತ್ಯತೆ ತಿಳಿಯುವ ಸಲುವಾಗಿ ನಾವು ಗೂಗಲ್ ರಿವರ್ಸ್‌ ಇಮೇಜ್‌ನಲ್ಲಿ ವಿಡಿಯೋ ಸ್ಕ್ರೀನ್‌ಶಾಟ್ ಹಾಕಿ ಸರ್ಚ್ ಮಾಡಿದ್ದೇವೆ. ಈ ವೇಳೆ ಡಿಸೆಂಬರ್ 5, 2023ರಂದು ಪಾಕಿಸ್ತಾನಿ ಟ್ರೈನ್ಸ್‌ (Pakistani Trains) ಎಂಬ ಫೇಸ್‌ಬುಕ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವುದು ಕಂಡು ಬಂದಿದೆ.

ವಿಡಿಯೋಗೆ ಉರ್ದು ಭಾಷೆಯಲ್ಲಿ ಕ್ಯಾಪ್ಶನ್ ಕೊಡಲಾಗಿತ್ತು. ನಾವು ಅದನ್ನು ಭಾ‍ಷಾಂತರಿಸಿ ನೋಡಿದಾಗ, “ಸರ್ತಾಜ್ ಖಾನ್ ಫಾಟಕ್, ಬೋಟ್ ಬೇಸಿನ್ ಚೌಕಿ ಬಳಿ ರೈಲ್ವೆ ಮಾರ್ಗದ ಬೆಲೆಬಾಳುವ ವಸ್ತುಗಳು ಸಾಕಷ್ಟು ಕಳ್ಳತನವಾಗುತ್ತಿವೆ. ಪಿ.ಎಸ್. ಬೋಟ್ ಬೇಸಿನ್ ಕ್ರಮ ಕೈಗೊಳ್ಳಲು ವಿನಂತಿಸಲಾಗಿದೆ” ಎಂದು ಬರೆದಿರುವುದು ತಿಳಿದು ಬಂದಿದೆ.

ಇದಲ್ಲದೆ, ಪ್ರೊಫೈಲ್‌ನ ಬಯೋ ನೋಡಿದಾಗ, ಅದನ್ನು ನಿರ್ವಹಿಸುತ್ತಿರುವವರು ಫಹಾದ್ ಆಸಿಫ್‌ ಎಂಬವರು ಗೊತ್ತಾಗಿದೆ. ಅವರ ಯೂಟ್ಯೂಬ್ ಚಾನೆಲ್ ಅನ್ನು ಕೂಡ ಫೇಸ್‌ಬುಕ್ ಪೇಜ್‌ಗೆ ಲಿಂಕ್ ಮಾಡಲಾಗಿದೆ. ನಾವು ಯೂಟ್ಯೂಬ್ ಚಾನೆಲ್ ಪರಿಶೀಲಿಸಿದಾಗ, ಅದರಲ್ಲಿ ಪಾಕಿಸ್ತಾನಿ ರೈಲ್ವೆಗೆ ಸಂಬಂಧಿಸಿದ ಹಲವಾರು ವಿಡಿಯೋಗಳು ಕಂಡು ಬಂದಿವೆ.

ನಾವು ವಿಡಿಯೋ ಕುರಿತು ಇನ್ನಷ್ಟು ಮಾಹಿತಿ ಹುಡುಕಿದಾಗ ಡಿಸೆಂಬರ್ 5, 2023ರಂದು ‘ಮೀಡಿಯಾ ಸೆಲ್ – ಡಿಐಜಿ ದಕ್ಷಿಣ ವಲಯ’ ಎಂಬ ಮತ್ತೊಂದು ಫೇಸ್‌ಬುಕ್‌ ಪೇಜ್‌ನಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವುದು ಕಂಡು ಬಂದಿದೆ. ವಿಡಿಯೋಗೆ ಉರ್ದು ಭಾಷೆಯಲ್ಲ ಕ್ಯಾಪ್ಶನ್ ಕೊಡಲಾಗಿದೆ. ಅದನ್ನು ನಾವು ಭಾಷಾಂತರಿಸಿ ನೋಡಿದಾಗ “ಬೋಟ್ ಬೇಸಿನ್ ಚೌಕಿ ಬಳಿ ಸರ್ತಾಜ್ ಖಾನ್ ಫಾಟಕ್ ರೈಲ್ವೆ ಮಾರ್ಗದಿಂದ ಟ್ರ್ಯಾಕ್ ನಟ್ ಬೋಲ್ಟ್ ಕಳ್ಳತನದ ವಿಡಿಯೋ ಪ್ರಕರಣ. ದಕ್ಷಿಣ ಡಿಐಜಿ ನೇತೃತ್ವದಲ್ಲಿ ಎಸ್‌ಹೆಚ್‌ಒ ಬೋಟ್‌ ಬೇಸಿನ್ ಕ್ರಮ ಕೈಗೊಂಡು ರೈಲ್ವೆ ಗೇಟ್‌ನಿಂದ ಮಾಲನ್ನು ಕಳವು ಮಾಡಿದ ಅಪ್ರಾಪ್ತರನ್ನು ಠಾಣೆಗೆ ಕರೆತಂದಿದೆ. ಆದರೆ, ಮಕ್ಕಳು ಚಿಕ್ಕವರಾಗಿದ್ದರಿಂದ ಅವರ ಪೋಷಕರನ್ನು ಠಾಣೆಗೆ ಕರೆಸಲಾಗಿತ್ತು. ಮಕ್ಕಳ ಕಳ್ಳತನ ಕೃತ್ಯದ ಬಗ್ಗೆ ಎಚ್ಚರಿಕೆ ನೀಡಿ, ತಮ್ಮ ಮಕ್ಕಳ ಮೇಲೆ ನಿಗಾ ಇಡಬೇಕು ಎಂದು ಪೋಷಕರಿಗೆ ಸೂಚನೆ ನೀಡಲಾಗಿದೆ. ಪೋಷಕರು ಭರವಸೆ ನೀಡಿದ ಬಳಿಕ ಮಕ್ಕಳನ್ನು ಅವರಿಗೆ ಒಪ್ಪಿಸಲಾಗಿದೆ” ಎಂದು ಬರೆದುಕೊಂಡಿರುವುದು ಗೊತ್ತಾಗಿದೆ.

‘ಮೀಡಿಯಾ ಸೆಲ್ – ಡಿಐಜಿ ದಕ್ಷಿಣ ವಲಯ’ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಕಳ್ಳತನ ಆರೋಪ ಹೊತ್ತಿರುವ ಮಕ್ಕಳು ‘ಶಿರೀನ್ ಜಿನ್ನಾ’ದಲ್ಲಿ ರೈಲು ಹಳಿಯ ನೆಟ್, ಬೋಲ್ಡ್ ಕಳವು ಮಾಡಿರುವುದಾಗಿ ಹೇಳುವುದಿದೆ. ಈ ಶಿರೀನ್ ಜಿನ್ನಾ ಬಗ್ಗೆ ಮಾಹಿತಿ ಹುಡುಕಿದಾಗ, ಅದು ಪಾಕಿಸ್ತಾನದ ಕರಾಚಿಯ ಬೋಟ್‌ ಬೇಸಿನ್ ಪ್ರದೇಶದ ಒಂದು ಕಾಲೊನಿ ಎಂದು ಗೊತ್ತಾಗಿದೆ.

ಒಟ್ಟಿನಲ್ಲಿ ಪಾಕಿಸ್ತಾನದ ಕರಾಚಿಯ ಬೋಟ್‌ ಬೇಸಿನ್ ಪ್ರದೇಶದ ‘ಶಿರೀನ್ ಜಿನ್ನಾ’ ಕಾಲೋನಿಯ ಬಳಿ ಮಕ್ಕಳು ರೈಲು ಹಳಿಯ ನೆಟ್‌, ಬೋಲ್ಟ್ ಕಳವು ಮಾಡಿರುವ ವಿಡಿಯೋವನ್ನು ಭಾರತದಲ್ಲಿ ಮುಸ್ಲಿಂ ಮಕ್ಕಳು ರೈಲು ಅಪಘಾತ ಉಂಟು ಮಾಡಲು ರೈಲು ಹಳಿಗೆ ಹಾನಿ ಮಾಡುತ್ತಿದ್ದಾರೆ ಎಂದು ಸುಳ್ಳು ಮತ್ತು ಕೋಮುದ್ವೇಷದ ಮಾಹಿತಿಯೊಂದಿಗೆ ಹಂಚಿಕೊಂಡಿರುವುದು ನಮ್ಮ ಪರಿಶೀಲನೆಯಲ್ಲಿ ಗೊತ್ತಾಗಿದೆ.

ಇದನ್ನೂ ಓದಿ : FACT CHECK : ಇಂಡೋನೇಷ್ಯಾದಲ್ಲಿ RSS ಇಲ್ಲದ ಕಾರಣ ಅಲ್ಲಿ ಕೋಮುಗಲಭೆ ಇಲ್ಲ ಎಂದು ನಟ ಪ್ರಕಾಶ್ ರಾಜ್ ಹೇಳಿಲ್ಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಧರ್ಮದ ಕಾರಣಕ್ಕೆ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿಗೆ ಹಲವು ಬಾರಿ ಇರಿತ: ಅಮೆರಿಕದ ಮಾಲ್‌ನಲ್ಲಿ ಕೃತ್ಯ

ಅಮೆರಿಕದ ಉತಾಹ್‌ನಲ್ಲಿರುವ ಶಾಪಿಂಗ್ ಮಾಲ್‌ನಲ್ಲಿ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಹಲವು ಬಾರಿ ಇರಿತದ ಆರೋಪ ಹೊರಿಸಲಾಗಿದೆ. ಹೈದರಾಬಾದ್‌ ನಗರದ ಟೋಲಿಚೌಕಿಯ ನಿವಾಸಿ ಸೈಯದ್ ಸೊಹೈಲ್ ಉದ್ದೀನ್, ಉತಾಹ್‌ನ ಸಾಲ್ಟ್ ಲೇಕ್ ಕೌಂಟಿಯ...

47 ವರ್ಷಗಳ ನಂತರ ಸಾಮೂಹಿಕ ಅತ್ಯಾಚಾರ ಪ್ರಕರಣದ ಶಿಕ್ಷೆ ಎತ್ತಿಹಿಡಿದ ಅಲಹಾಬಾದ್ ಹೈಕೋರ್ಟ್

1979 ರಲ್ಲಿ ನಡೆದಿದ್ದ ಅಪ್ರಾಪ್ತೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 71 ವರ್ಷದ ವ್ಯಕ್ತಿಯ ಶಿಕ್ಷೆಯನ್ನು ಅಲಹಾಬಾದ್ ಹೈಕೋರ್ಟ್ ಎತ್ತಿಹಿಡಿದಿದೆ. ಆದರೆ, ಕ್ರಿಮಿನಲ್ ಮೇಲ್ಮನವಿಯ 43 ವರ್ಷಗಳ ಸುದೀರ್ಘ ವಿಚಾರಣೆ ಮತ್ತು ಆತನ...

ಪಶ್ಚಿಮ ಬಂಗಾಳ: ಮುರ್ಷಿದಾಬಾದ್‌ನಲ್ಲಿ ಶಾಲಾ ವ್ಯಾನ್‌ಗೆ ರೈಲು ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಸೇರಿ 3 ಮಂದಿ ಸಾವು

ಮುರ್ಷಿದಾಬಾದ್: ದೇಶದಲ್ಲಿ ರೈಲ್ವೆ ಸುರಕ್ಷತೆಯ ಕುರಿತು ಸರ್ಕಾರಗಳು ದೊಡ್ಡ ದೊಡ್ಡ ಭರವಸೆ ಹಾಗೂ ಯೋಜನೆಗಳನ್ನು ಮಂಡಿಸುತ್ತಿದ್ದರೂ, ತಳಮಟ್ಟದ ವಾಸ್ತವ ಮಾತ್ರ ಇಂದಿಗೂ ಅತ್ಯಂತ ಭೀಕರವಾಗಿದೆ ಎಂಬುದಕ್ಕೆ ಪಶ್ಚಿಮ ಬಂಗಾಳದಲ್ಲಿ ನಡೆದ ಈ ಘೋರ...

ವಿಜಯ್ ನೇತೃತ್ವದ ಟಿವಿಕೆ ಸರ್ಕಾರವನ್ನು ಅಸ್ಥಿರಗೊಳಿಸಲು ‘ಪ್ರಾಜೆಕ್ಟ್ ಮೇಘಾಲಯ’ ಸಂಚು ಆರೋಪ : ಪತ್ರಕರ್ತನ ವಿಚಾರಣೆ

ತಮಿಳುನಾಡಿನ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶಾಸಕ ಎನ್. ಇಲೈಯರಾಜ ಅವರಿಗೆ ಹಣದ ಆಮಿಷವೊಡ್ಡಲು ಯತ್ನಿಸಿದ ಆರೋಪ ಪ್ರಕರಣ ಸಂಬಂಧ ಚೆನ್ನೈ ಪೊಲೀಸರು 'ಪುದಿಯಾ ತಲೈಮುರೈ' ವಾಹಿನಿಯ ಪತ್ರಕರ್ತ ವಿಜಯನ್...

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...

E20 ಪೆಟ್ರೋಲ್ ಪ್ರಕರಣ : ‘ಗ್ರ್ಯಾಂಡ್ ವಿಟಾರಾ’ ಕಾರು ಬದಲಾಯಿಸಿ ಕೊಡಲು ಮಾರುತಿ ಸುಝುಕಿಗೆ ಗ್ರಾಹಕ ನ್ಯಾಯಾಲಯ ಆದೇಶ

ಛತ್ತೀಸ್‌ಗಢದ ರಾಯ್‌ಪುರದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು (ಡಿಸಿಡಿಆರ್‌ಸಿ), E20 ಇಂಧನ (ಪೆಟ್ರೋಲ್) ಬಳಕೆಯಿಂದಾಗಿ ಕಾರು ಕೆಟ್ಟುಹೋಗಿದೆ ಎಂದು ಆರೋಪಿಸಿದ ವ್ಯಕ್ತಿಗೆ ಹೊಸ 'ಗ್ರಾಂಡ್ ವಿಟಾರಾ' ಕಾರನ್ನು ನೀಡುವಂತೆ ಕಾರು ತಯಾರಿಕಾ...

ಸಿಜೆಪಿ ಶಾಂತಿಯುತ ಪ್ರತಿಭಟನೆಗೆ ನಿರಂತರ ಪೊಲೀಸ್ ಕಣ್ಗಾವಲು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಜನತಾ ಪಕ್ಷ (ಸಿಜೆಪಿ) ಆಯೋಜಿಸಿರುವ ಶಾಂತಿಯುತ ಧರಣಿ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ನಾಗರಿಕರ ಮೇಲೆ ದೆಹಲಿ ಪೊಲೀಸರು ನಿರಂತರ ಮತ್ತು ವ್ಯಾಪಕ ಕಣ್ಗಾವಲು...

IAS ಆಗುವ ಮುನ್ನ ‘ಪರಿಪೂರ್ಣ ತಾಯಿ’ಯಾಗಿ ಎಂದ ರಾಜ್ಯಪಾಲರ ಸಲಹೆ ಪುರುಷ ಪ್ರಾಧ್ಯಾನ್ಯತೆಯ ಮುಂದುವರೆದ ಆಚರಣೆ ಅಲ್ಲವೆ?

ಇತ್ತೀಚೆಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು, "ಮಹಿಳೆಯರು IAS ಅಧಿಕಾರಿ ಅಥವಾ ಶಿಕ್ಷಕಿಯಾಗುವ ಕನಸು ಕಾಣುವ ಮೊದಲು 'ಪರಿಣಿತ ತಾಯಿ' ಆಗುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದರು. ಕಾನ್ಪುರದ ಛತ್ರಪತಿ...

ಹಿಂದಿನ ಮದುವೆ, ಮಗು ವಿಚಾರ ಮುಚ್ಚಿಟ್ಟಿದ್ದಕ್ಕೆ ಸಹೋದರನೊಂದಿಗಿನ ಸಂಬಂಧ ಮುರಿದುಕೊಂಡಿದ್ದ ಕಾನೂನು ವಿದ್ಯಾರ್ಥಿನಿಯನ್ನು ಇರಿದು ಕೊಂದ ತಮ್ಮ

ಬೆಂಗಳೂರು: ಮೊದಲ ಮದುವೆ ಹಾಗೂ ಮಗುವಿದ್ದ ವಿಷಯವನ್ನು ಮುಚ್ಚಿಟ್ಟು ವಂಚಿಸಿದ್ದ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡ ಕಾರಣಕ್ಕೆ, ಆತನ ಸಹೋದರನಿಂದಲೇ ಚಾಕು ಇರಿತಕ್ಕೊಳಗಾಗಿದ್ದ ಕಾನೂನು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ...

ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ಅಮೆರಿಕ ದಾಳಿಗೆ ಇರಾನ್‌ನಿಂದ ಪ್ರತೀಕಾರ

ಕಳೆದ ಗುರುವಾರ (ಜು.16) ಖುಜೆಸ್ತಾನ್ ಪ್ರಾಂತ್ಯದಲ್ಲಿರುವ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನ್ ಪ್ರತಿದಾಳಿ...