“ಕಾರ್ಕಳದ ಕಾಂಗ್ರೆಸ್ಸಿಗರು, ಸ್ವಾತಂತ್ರ್ಯ ಚಳವಳಿಯನ್ನು ಕಟ್ಟಿರುವ ನಾವು ನಿಮಗೆ ಹೇಳುತ್ತೇವೆ, ಇದು ಅಲ್ಲಾ vs ರಾಮನ ಚುನಾವಣೆ. ಜೀಸಸ್, ಏಸು ಇವರೆಲ್ಲರೂ ಸೇರಿ ಆಶೀರ್ವಾದವನ್ನು ಕಾಂಗ್ರೆಸ್ಸಿಗ್ಗರ ಮೇಲೆ ಮಾಡುವಂತಹ ಚುನಾವಣೆ ಎನ್ನುವುದನ್ನು ನೀವು ಅರ್ಥ ಮಾಡಿಕೊಳ್ಳಬೇಕು” ಎಂದು ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮುರೋಳಿ ಹೇಳಿರುವುದಾಗಿ ವಿಡಿಯೋವೊಂದು ವೈರಲ್ ಆಗುತ್ತಿದೆ.
ಫ್ಯಾಕ್ಟ್ಚೆಕ್ : ಈ ವಿಡಿಯೋದ ಸತ್ಯಾಸತ್ಯತೆ ತಿಳಿಯುವ ಸಲುವಾಗಿ ನಾನುಗೌರಿ.ಕಾಂ ವೈರಲ್ ಕ್ಲಿಪ್ನ ಮೂಲ ವಿಡಿಯೋ ಹುಡುಕಿದೆ. ಈ ವೇಳೆ ‘ಟೈಮ್ಸ್ ಆಫ್ ಕಾರ್ಕಳ ಡಿಜಿಟಲ್’ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಮೇ 3,2023ರಂದು ಅಪ್ಲೋಡ್ ಮಾಡಲಾದ ವಿಡಿಯೋ ದೊರೆತಿದೆ.
ಒಟ್ಟು 19 ನಿಮಿಷ 50 ಸೆಕೆಂಡ್ನ ವಿಡಿಯೋದಲ್ಲಿ 3 ನಿಮಿಷ 51 ಸೆಕೆಂಡ್ನಿಂದ 4 ನಿಮಿಷ 50 ಸೆಕೆಂಡ್ಗಳ ನಡುವೆ ವೈರಲ್ ಕ್ಲಿಪ್ನಲ್ಲಿರುವ ಅಂಶಗಳಿವೆ.
ಮೂಲ ವಿಡಿಯೋದಲ್ಲಿ “ರಮಾನಾಥ ರೈ ಎನ್ನುವಂತಹ ಪ್ರಾಮಾಣಿಕ ರಾಜಕಾರಣಿ ಇದ್ದಾರೆ. ರಮಾನಾಥ ರೈ ಅವರ ಕ್ಷೇತ್ರಕ್ಕೆ ಚುನಾವಣಾ ಪ್ರಚಾರಕ್ಕೆ ಹೋಗಿ 20 ದಿವಸಗಳ ಹಿಂದೆ ಕಾರ್ಕಳದ ಸುನಿಲ್ ಕುಮಾರ್ ಅವರು ಹೇಳಿದ್ರಂತೆ, ಇದು ಅಲ್ಲಾ vs ರಾಮನ ಚುನಾವಣೆ, ನಾವು ರಾಮನ ಭಕ್ತರು ಎಂದು ಹೇಳಿದ್ರಂತೆ. ಮಿ.ಸುನಿಲ್ ಕುಮಾರ್, ನಾವು ಕಾಂಗ್ರೆಸ್ಸಿಗರು ‘ಈಶ್ವರ ಅಲ್ಲಾ ತೇರೋ ನಾಮ್ ಸಬ್ ಕೋ ಸನ್ಮತಿ ದೇ ಭಗವಾನ್’ ಅಂತ ಹೇಳಿ ಸ್ವಾತಂತ್ರ್ಯ ಚಳವಳಿಯನ್ನು ಕಟ್ಟಿರುವಂತಹ ನಾವು ನಿಮಗೆ ಹೇಳುತ್ತೇವೆ, ಇದು ಅಲ್ಲಾvs ರಾಮನ ಚುನಾವಣೆ ಅಲ್ಲ. ರಾಮ, ಕೃಷ್ಣ, ಕಲ್ಲುರ್ಟಿ, ಪಂಜರ್ಲಿ, ಕೋರ್ದಬ್ಬು, ಕೊರಗಜ್ಜ, ಬಬ್ಬುಸ್ವಾಮಿ, ದುರ್ಗಾ ಪರಮೇಶ್ವರಿ, ಮುಂಡುಕೂರು ದುರ್ಗಾ ಪರಮೇಶ್ವರಿ, ಹಿರ್ಕಾರದ ದುರ್ಗಾ ಪರಮೇಶ್ವರಿ, ಕಾರ್ಕಳದ ವೆಂಕಟರಮಣ, ಜೀಸಸ್, ಏಸು, ಗೊಮ್ಮಟೇಶ್ವರ, ಮಹಾವೀರ, ಬುದ್ದ, ಇವರೆಲ್ಲರೂ ಸೇರಿ ಆಶೀರ್ವಾದವನ್ನು ಮಾಡುವಂತಹ ಚುನಾವಣೆ ಎನ್ನುವುದನ್ನು ನೀವು ಅರ್ಥ ಮಾಡಿಕೊಳ್ಳಬೇಕು” ಎಂದು ಸುಧೀರ್ ಕುಮಾರ್ ಮುರೋಳಿ ಹೇಳಿದ್ದಾರೆ.
ಹಾಗಾಗಿ, ಸುಧೀರ್ ಕುಮಾರ್ ಮರೋಳಿ “ಇದು ಅಲ್ಲಾ vs ಚುನಾವಣೆ” ಎಂದು ಹೇಳಿಲ್ಲ. ಸುನಿಲ್ ಕುಮಾರ್ ನೀಡಿದ್ದ ಹೇಳಿಕೆಯನ್ನು ಅವರು ಪುನರುಚ್ಚರಿಸಿದ್ದಾರೆ. ಸುಧೀರ್ ಕುಮಾರ್ ಅವರ ಭಾಷಣದ ವಿಡಿಯೋವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ ಎಂಬುವುದು ಗೊತ್ತಾಗಿದೆ. ಇನ್ನು ವೈರಲ್ ಆಗಿರುವ ಸುಧೀರ್ ಕುಮಾರ್ ಅವರ ಭಾಷಣದ ವಿಡಿಯೋ ಇತ್ತೀಚಿನದ್ದಲ್ಲ, ಅದು ಸುಮಾರು 11 ತಿಂಗಳ ಹಳೆಯದ್ದು.
ಇದನ್ನೂ ಓದಿ : Fact Check : ರಾಮ ನವಮಿಗೆ ಮುಂಚಿತವಾಗಿ ಮನೆಗಳ ಮೇಲೆ ಕಲ್ಲು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ ಎಂಬುವುದು ಸುಳ್ಳು