Homeಮುಖಪುಟರೈತ ಹೋರಾಟ ಗೆದ್ದದ್ದು - ಗೆಲ್ಲಬೇಕಾದ್ದು

ರೈತ ಹೋರಾಟ ಗೆದ್ದದ್ದು – ಗೆಲ್ಲಬೇಕಾದ್ದು

- Advertisement -
- Advertisement -

ರೈತ ಚಳವಳಿ ಒಂದು ವರ್ಷ ತಲುಪುವ ಕೆಲ ವಾರಗಳ ಮುಂಚೆಯೇ ಹೊಸ ರೂಪ ಪಡೆದಿದೆ. ಸರ್ಕಾರ ಈ ರೀತಿ ರೈತರ ಬೇಡಿಕೆಗಳಿಗೆ ಬಾಗುತ್ತದೆ ಎಂದು ಬಹಳ ಜನ ಭಾವಿಸಿರಲಿಲ್ಲ. ಆದರೆ ಸರ್ಕಾರವು ಬಾಗಿದಂತೆ ಮಾಡಿ ರೈತ ಚಳವಳಿಗೆ ಮತ್ತಿಷ್ಟು ಸವಾಲುಗಳನ್ನು ತಂದಿಟ್ಟಿದೆ. ಒಂದು ವರ್ಷ ಹೋರಾಡಿ ಮೊದಲಿದ್ದ ಸ್ಥಿತಿಗೆ ವ್ಯವಸ್ಥೆಯನ್ನು ತರಲಾಗಿದೆ ಅಷ್ಟೆ. ಉಳಿದ ಬೇಡಿಕೆಗಳ ಬಗ್ಗೆ ಸರ್ಕಾರ ಸಕಾರಾತ್ಮಕ ತೀರ್ಮಾನ ತೆಗೆದುಕೊಂಡರಷ್ಟೇ ಅದು ರೈತರ ಪರ ತೀರ್ಮಾನವಾಗುತ್ತಿತ್ತು. ಮೂರು ಮಸೂದೆಗಳನ್ನು ಹಿಂಪಡೆಯುವ ಸರ್ಕಾರದ ನಿರ್ಧಾರ ರೈತರಿಗೆ ಹೊಸ ಲಾಭವನ್ನೇನೂ ತಂದಿಲ್ಲ.

ಸರ್ಕಾರದ ಈ ತೀರ್ಮಾನಕ್ಕೆ ಮುಂದೆ ಇರುವ ಉತ್ತರ ಪ್ರದೇಶ, ಪಂಜಾಬ್ ಚುನಾವಣೆಗಳೇ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಇದರ ಜೊತೆಗೆ ಇತ್ತೀಚಗಷ್ಟೇ ನಡೆದ ಮರುಚುನಾವಣೆಯ ಅನುಭವ ಕೂಡ ಈ ತೀರ್ಮಾನಕ್ಕೆ ಒತ್ತಡ ತಂದಿದೆ. ಒಂದು ವರ್ಷದ ಕಾಲ ದೆಹಲಿಯ ರಸ್ತೆಗಳಲ್ಲಿ ಉಳಿದ ಲಕ್ಷಾಂತರ ರೈತರ ಒತ್ತಾಯಕ್ಕೆ ಮಣಿದು ಸರ್ಕಾರ ಈ ತೀರ್ಮಾನ ತೆಗೆದುಕೊಂಡಿಲ್ಲ. ತಮ್ಮ ತೀರ್ಮಾನ ರೈತರ ಪರವಾಗಿ ಇರಲಿಲ್ಲವೇನೋ ಎಂದು ಅವರಿಗೆ ಅನಿಸಿಲ್ಲ. ಬದಲಿಗೆ ರೈತರ ಮನವೊಲಿಸಲು ನಾವು ಸೋತಿದ್ದೇವೆ ಎಂದು ಮೋದಿಯವರು ಹೇಳಿದ್ದಾರೆ.

ಒಂದು ವರ್ಷದ ಕಾಲ ಲಕ್ಷಾಂತರ ರೈತರು ಹೋರಾಟದಲ್ಲಿ ತೊಡಗಿದ್ದು ಚಾರಿತ್ರಿಕವಾದುದು. ಇಂತಹ ಚಳವಳಿಯೊಂದು ಹಿಂದೆ ಎಂದೂ ನಡೆದಿಲ್ಲ. ಚಳವಳಿಯನ್ನು ಪ್ರಾರಂಭಿಸುವ ಮುಂಚೆ ಪಂಜಾಬಿನ ರೈತ ಸಂಘಟನೆಗಳೆಲ್ಲವೂ ಸಂಯುಕ್ತ ಕಿಸಾನ್ ಮೋರ್ಚ ಹೆಸರಿನಲ್ಲಿ ಒಗ್ಗೂಡಿದವು. ದೇಶದ 40ಕ್ಕೂ ಹೆಚ್ಚು ರೈತ ಸಂಘಟನೆಗಳು ಒಗ್ಗಟ್ಟಾಗಿ ಹೋರಾಟ ನಡೆಸಲು ತೀರ್ಮಾನಿಸಿದ್ದು ಬಹಳ ದೊಡ್ಡ ಶಕ್ತಿಯನ್ನು ಹೋರಾಟಕ್ಕೆ ತಂದುಕೊಟ್ಟಿತು. ಈ ಎಲ್ಲ ರೈತ ಸಂಘಟನೆಗಳನ್ನು ಒಂದೇ ಉದ್ದೇಶಕ್ಕಾಗಿ ಒಟ್ಟಿಗೆ ತಂದು, ಮೇಲು- ಕೀಳು ಎಂಬ ಭಾವನೆ ಇರದಂತೆ ಮಾಡಿದ್ದು ಕಡಿಮೆ ಸಾಧನೆ ಏನಲ್ಲ. ಇಡೀ ಚಳವಳಿಯಲ್ಲಿ ಒಬ್ಬ ನಾಯಕನ ಹೆಸರು ಎಂದೂ ಕೇಳಿಬಂದಿಲ್ಲ. ಬದಲಿಗೆ ಸಾಮೂಹಿಕ ನಾಯಕತ್ವ ಕಂಡುಬರುತ್ತಿರುವುದು ವಿಶೇಷವಾಗಿದೆ. ಸಾಮೂಹಿಕ ನಾಯಕತ್ವ ತಾನೇ ಹಾಕಿಕೊಂಡಿರುವ ನೀತಿನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾ ಬಂದಿರುವುದು ಗಮನಾರ್ಹ. ಲಖಿಂಪುರ ಖೇರಿಯ ಘಟನೆಯ ನಂತರ ಹೋರಾಟದಲ್ಲಿ ಮಂಚೂಣಿಯಲ್ಲಿರುವ ಯೋಗೇಂದ್ರ ಯಾದವ್ ಅವರ ಮೇಲೆ ಶಿಸ್ತಿನ ಕ್ರಮಕೈಗೊಂಡಿದ್ದು, ಕೆಲವು ವಾರಗಳ ಕಾಲ ಅವರು ಚಳವಳಿಯಿಂದ ಹಿಂದೆ ಸರಿದದ್ದು, ಈ ಕ್ರಮವನ್ನು ಸ್ವತಃ ಯೋಗೇಂದ್ರ ಯಾದವ್ ಅವರು ಸಕಾರಾತ್ಮಕವಾಗಿ ಸ್ವೀಕರಿಸಿ ಪಾಲಿಸಿದ್ದು ಬಹಳ ವಿಶೇಷ. ಇಂತಹ ಶಿಸ್ತುಗಳು ಮತ್ತು ಅವುಗಳನ್ನು ಸ್ವಯಂಸ್ಪೂರ್ತಿಯಿಂದ ಪಾಲಿಸುವ ಗುಣ ಇಂದಿನ ಯಾವ ಚಳವಳಿಗಳಲ್ಲೂ ಕಂಡಿರಲಿಲ್ಲ.

ಮತ್ತೊಂದು ವಿಶೇಷವೆಂದರೆ ಎಷ್ಟೇ ಕಷ್ಟ ಬಂದರೂ ರೈತರು ತಮ್ಮ ಹೋರಾಟವನ್ನು ಅಹಿಂಸಾತ್ಮಕವಾಗಿ ತೆಗೆದುಕೊಂಡು ಹೋಗುತ್ತಿರುವುದು. ಹೋರಾಟದ ವಿರೋಧಿಗಳು ಹಿಂಸೆಯನ್ನು ಹುಟ್ಟುಹಾಕಲು ಮಾಡಿದ ಪ್ರಯತ್ನವೆಲ್ಲಕ್ಕೂ ಹೋರಾಟಗಾರರು ಅಹಿಂಸಾತ್ಮಕವಾಗಿ ಉತ್ತರಕೊಡುತ್ತಾ ಬಂದದ್ದು ಈ ಹೋರಾಟದ ದೊಡ್ಡ ಶಕ್ತಿ. ಜನವರಿ 26ರಂದು ಅತ್ಯಂತ ಶಿಸ್ತಿನಿಂದ ನಡೆಯುತ್ತಿದ್ದ ರೈತ ಪರೇಡ್‌ನಲ್ಲಿದ್ದ ಒಂದು ಗುಂಪು ಹೋರಾಟವನ್ನು ದಾರಿತಪ್ಪಿಸಲೆಂದೇ ಕೆಂಪುಕೋಟೆಯ ಮೇಲೆ ಸಿಖ್ ಧಾರ್ಮಿಕ ಬಾವುಟ ಹಾರಿಸಿ ಚಳವಳಿಗೆ ಕೆಟ್ಟ ಹೆಸರು ತರಲು ಪ್ರಯತ್ನಿಸಿತು. ಖಲಿಸ್ಥಾನಿಗಳು ಸೇರಿದ್ದಾರೆ ಎಂದು ಗುಲ್ಲೆಬ್ಬಿಸಿ ಚಳವಳಿಯನ್ನು ಮುರಿಯಲು ಮಾಡಿದ ಪ್ರಯತ್ನವೇ ಆಗಲಿ, ಟೂಲ್‌ಕಿಟ್ ಆಪಾದನೆಯಾಗಲೀ, ರೈತ ಹೋರಾಟವು ಅವುಗಳನ್ನು ಎದುರಿಸಿದ ಮತ್ತು ಸ್ಪಂದಿಸಿದ ರೀತಿಯನ್ನು ಮೆಚ್ಚಬೇಕು. ಪ್ರತಿ ನಿಮಿಷವೂ ಚಳವಳಿಯನ್ನು ಮುರಿದುಹಾಕಲು ಹೊರಗಿನಿಂದ ನಡೆಯುತ್ತಿರುವ ಪಿತೂರಿಗಳು ಒಂದು ಕಡೆಯಾದರೆ, ಹಿಂಸೆಯ ಹುನ್ನಾರಕ್ಕೆ ಹಾತೊರೆದು ರೈತರನ್ನೆಲ್ಲಾ ಹೊಡೆದು ಓಡಿಸಲು ತಯಾರಾಗಿ ನಿಂತಿರುವ ಪೊಲೀಸರು ಇನ್ನೊಂದು ಕಡೆ. ಇವರುಗಳ ಮಧ್ಯೆ ಹೋರಾಟಗಾರರು ಯಾವುದೇ ಕಾರಣಕ್ಕ್ಕೂ ಹಿಂಸೆಯನ್ನು ಕೈಗೆ ಎತ್ತಿಕೊಳ್ಳದಂತೆ ಅವರ ಮನವೊಲಿಸಿ ಚಳವಳಿಯನ್ನು ಮುನ್ನಡೆಸುತ್ತಾ ಹೋಗುವುದು ಸಾಮಾನ್ಯವಾದ ಸವಾಲಲ್ಲ.

ಲಖಿಂಪುರ್ ಖೇರಿಯಲ್ಲಿ ನಡೆದ ದಾರುಣ ಘಟನೆಯು ಸರ್ಕಾರಕ್ಕೆ ನೈತಿಕತೆ ಇಲ್ಲ ಎಂಬುದಕ್ಕೆ ಉದಾಹರಣೆ. ಅಕ್ಟೋಬರ್ 3ರಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಸಾರ್ವಜನಿಕ ಸಭೆಯಲ್ಲಿ ರೈತರು ಕಪ್ಪು ಬಾವುಟ ತೋರಿಸಿ ಹಿಂದಿರುಗುತ್ತಿದ್ದಾಗ ಸಚಿವರ ಆರೋಪಿತ ಪುತ್ರ ರೈತರ ಮೇಲೆ ತನ್ನ ಐಶಾರಾಮಿ ಕಾರನ್ನು ಹಾರಿಸಿ ನಾಲ್ಕಾರು ರೈತರನ್ನು ಬೇಕೆಂದೇ ಕೊಂದು ತನ್ನ ದುರಹಂಕಾರ ಮೆರೆದದ್ದು ಖಂಡನೀಯ. ಆನಂತರ ಪೋಲೀಸರು ಆತನನ್ನು ಬಂಧಿಸಲು ಮೀನಾಮೇಷ ಎಣಿಸಿದ್ದು, ತನ್ನ ಮಗನದೇ ತಪ್ಪು ಎಂದು ದೊಡ್ಡಮಟ್ಟದಲ್ಲಿ ಆರೋಪ ಕೇಳಿಬಂದ ನಂತರವೂ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡದ ಅಜಯ್ ಮಿಶ್ರಾ, ಆತನ ಜೊತೆ ವೇದಿಕೆಯಲ್ಲಿ ಕೂತ ಗೃಹ ಸಚಿವ ಇವರೆಲ್ಲರೂ ನೈತಿಕ ಪ್ರಜ್ಞೆಯನ್ನು ಕಳೆದುಕೊಂಡಿರುವುದಕ್ಕೆ ಸಾಕ್ಷಿ. ಎಷ್ಟೋ ಜನ ಸತ್ತಾಗ ಸಂದೇಶ ನೀಡುವ ನಮ್ಮ ಪ್ರಧಾನ ಮಂತ್ರಿಗಳು ಈ ವಿಷಯದಲ್ಲಿ ತುಟಿಪಿಟಕ್ಕೆನ್ನದೆ ಇದ್ದದ್ದು, ಅಜಯ್ ಮಿಶ್ರಾನನ್ನು ಸಚಿವಸಂಪುಟದಿಂದ ಹೊರಗೆ ಹಾಕದೇ ಇದ್ದದ್ದು ಅವರ ನೈತಿಕತೆ ಮತ್ತು ಕಳೆದುಕೊಂಡಿರುವ ಮಾನವೀಯತೆಯನ್ನು ಜಗಜ್ಜಾಹೀರುಗೊಳಿಸಿವೆ. ಹಾಗೆಯೇ ಸುಪ್ರೀಂಕೋರ್ಟ ಹಾಕಿದ ಛೀಮಾರಿಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಒಂದು ವರ್ಷದ ಹೋರಾಟದ ನಂತರ ಸರ್ಕಾರ ಮೂರು ಕಾನೂನುಗಳನ್ನು ಹಿಂತೆಗೆದುಕೊಂಡು ಈಗ ಹೊಸ ಸವಾಲನ್ನು ತಂದಿಟ್ಟಿದೆ. ನಮ್ಮ ಬೇಡಿಕೆ ಇಷ್ಟೇ ಅಲ್ಲ. ಕನಿಷ್ಟ ಬೆಂಬಲ ಬೆಲೆಗೆ ಕಾನೂನಾತ್ಮಕ ಮನ್ನಣೆ ನಮ್ಮ ಪ್ರಮುಖ ಬೇಡಿಕೆಯಾಗಿತ್ತು ಎಂಬುದನ್ನು ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ರೈತ ಹೋರಾಟ ಮನದಟ್ಟು ಮಾಡಿಕೊಡಬೇಕಿದೆ. ಸರ್ಕಾರದ ಪರವಾಗಿರುವ ಮಂದಿಗೆ ಇದು ಅರ್ಥ ಆಗುವುದು ಕಷ್ಟ. ಮೋದಿಯವರು ಮೂರು ಕಾನೂನುಗಳನ್ನು ಹಿಂಪಡೆದು ರೈತರಿಗೆ ಮಹದುಪಕಾರ ಮಾಡಿದ್ದಾರೆ ಎಂದು ಅವರು ಭಾವಿಸಿದ್ದಾರೆ. ರೈತರ ಹಠ ಜಾಸ್ತಿ ಆಯಿತು ಎಂದುಕೊಂಡಿರುವ ಅವರಿಗೆ ಮುಂದುವರೆದ ರೈತ ಚಳವಳಿ ಅರ್ಥ ಆಗುವುದಿಲ್ಲ. ಇದು ಮೋದಿ ಸರ್ಕಾರದ ವಿರುದ್ಧ ನಡೆದಿರುವ ಷಢ್ಯಂತರ, ವಿರೋಧ ಪಕ್ಷಗಳು, ದೇಶ ವಿರೋಧಿ ಜನರು, ನಕ್ಸಲೈಟರು ಹೀಗೆ ಯಾರ್‍ಯಾರೋ ರಾಷ್ಟ್ರದ ಮುನ್ನಡೆಯನ್ನು ಸಹಿಸದ ಮಂದಿ ರೈತರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದುಕೊಂಡಿದ್ದಾರೆ, ಅಂದರೆ ಅಂತಹ ಭಾವನೆಯನ್ನು ಜನರಲ್ಲಿ ಮೂಡಿಸಲು ಇನ್ನಷ್ಟು ಕಾರ್ಯೋನ್ಮುಖರಾಗುತ್ತಾರೆ. ಸರ್ಕಾರಕ್ಕೆ ಈ ಚಳವಳಿ ಬಸವಳಿದು ಮುಗಿದುಹೋಗಬೇಕಿದೆ. ಹಾಗಾಗಿ ಅವರು ಕಾಲವನ್ನೇ ನಂಬಿ ಕೂತಿದ್ದಾರೆ. ಇದು ಒಂದು ರೀತಿಯಲ್ಲಿ ಹೋರಾಟಕ್ಕೆ ಅನುಕೂಲವಾಗಿದ್ದರೆ, ಇನ್ನೊಂದು ರೀತಿಯಲ್ಲಿ ಅನಾನುಕೂಲವೂ ಆಗಿದೆ. ಈಗ ಈ ಚಳವಳಿ ರಾಷ್ಟ್ರವ್ಯಾಪಿ ಭುಗಿಲೆದ್ದರೆ ರೈತರಿಗೆ ಲಾಭ. ಸರ್ಕಾರ ಒಂದು ವರ್ಷದ ಕಾಲ ಈ ಹೋರಾಟದೊಂದಿಗೆ ನಡೆದುಕೊಂಡ ರೀತಿಯನ್ನು ನೋಡಿದರೆ ಈ ಚಳವಳಿಯನ್ನು ಇನ್ನು ಎಷ್ಟು ಸಮಯ ಮುಂದುವರೆಸಬೇಕಾಗುತ್ತದೋ ಹೇಳಲಾಗದು. ಹಾಗಾಗಿ ಈ ದೀರ್ಘಕಾಲದ ಹೋರಾಟದಲ್ಲಿ ಹೋರಾಟದ ಕಿಚ್ಚನ್ನು ಉಳಿಸಿಕೊಂಡು ಹೋಗುವುದು ದೊಡ್ಡ ಸವಾಲೇ ಸರಿ.

ಈ ಚಳವಳಿಯಿಂದ ರಾಜ್ಯ ಮಟ್ಟದ ರೈತ ಚಳವಳಿಗಳು ಕಲಿಯಬೇಕಾದ ಪಾಠ ದೊಡ್ಡದಿದೆ. ಒಗ್ಗಟ್ಟೇ ಶಕ್ತಿ ಎಂಬುದು ರಾಜ್ಯ ರೈತ ಸಂಘಟನೆಗಳಿಗೆ ಅರ್ಥವಾಗಬೇಕಿದೆ. ನಮ್ಮ ಪರಸ್ಪರ ಭಿನ್ನಮತಗಳನ್ನು ಬದಿಗಿಟ್ಟು, ನಾವೇ ಮಂಚೂಣಿಯಲ್ಲಿರಬೇಕು ಎಂಬುದನ್ನು ಬಿಟ್ಟು ಪರಸ್ಪರ ಕೈಹಿಡಿದು ಮನ್ನಡೆಯುವುದೇ ಯಶಸ್ಸಿಗೆ ದಾರಿ ಎಂಬುದು ಅರಿವಾಗಬೇಕಿದೆ. ರೈತ ಚಳವಳಿಗೆ ಕರ್ನಾಟಕದ ರೈತ ಸ್ಪಂದನೆ ನಿರೀಕ್ಷೆಯ ಮಟ್ಟಕ್ಕೆ ಬೆಳೆಯದಿದ್ದುದ್ದು ಹೊಂದಾಣಿಕೆಯ ಕೊರತೆ ಮುಖ್ಯ ಕಾರಣ. ಈ ಚಳವಳಿ ಇನ್ನು ಬಹಳ ದೀರ್ಘ ಅವಧಿಯವರೆಗೆ ನಡೆಯಬೇಕಿರುವುದರಿಂದ ನಮ್ಮ ವಿವಿಧ ರೈತ ಬಣಗಳು ಒಗ್ಗಟ್ಟಾಗಿ ತೀರ್ಮಾನಗಳನ್ನು ತೆಗೆದುಕೊಂಡು ರಾಷ್ಟ್ರಮಟ್ಟದ ಚಳವಳಿಗೆ ಸ್ಪಂದಿಸದಿದ್ದರೆ ಅದಕ್ಕೂ ನಿರೀಕ್ಷಿತ ಮಟ್ಟದ ಬೆಂಬಲ ಸಿಗದೆ ಹೋಗುವುದಲ್ಲದೆ, ಕರ್ನಾಟಕದ ರೈತ ಚಳವಳಿಗೂ ನಷ್ಟ.

ಈ ಚಳವಳಿಯು ಒಂದು ತಾರ್ಕಿಕ ಅಂತ್ಯ ಪಡೆಯುವುದರೊಳಗೆ ರೈತರು ತಮ್ಮ ಭವಿಷ್ಯದ ಕೃಷಿ ಪದ್ಧತಿಯ ಬಗ್ಗೆ ಸರಿಯಾದ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಕೂಡ ಮುಖ್ಯವಾಗಿದೆ. ಈ ಮಾರುಕಟ್ಟೆ ಆಧಾರಿತ ಕೃಷಿ ಪದ್ಧತಿಯಿಂದ ಹೊರಬರದಿದ್ದರೆ ಬಿಡುಗಡೆ ಇಲ್ಲ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವ್ಯಾಪಾರಿ ಬೆಳೆಗಳನ್ನು ನಾವು ಬೆಳೆದಿದ್ದಕ್ಕಲ್ಲವೇ ವ್ಯಾಪಾರಿಗಳು ಬಂದದ್ದು? ಅವರ ಹಿಂದೆ ಬಹು ರಾಷ್ಟ್ರೀಯ ಕಂಪನಿಗಳು ಬಂದದ್ದು? ಈಗಾಗಲೇ ’ಬಿಳಿ ವಿಷ’ ಎಂದು ದೃಢಪಟ್ಟಿರುವ ಸಕ್ಕರೆ ಮಾಡಲು ನಾವು ಇಷ್ಟೊಂದು ಪ್ರಮಾಣದಲ್ಲಿ ಕಬ್ಬು ಬೆಳೆಯಬೇಕೆ? ಅದನ್ನು ಬೆಳೆದು ನಾವೇ ಕಂಪನಿಗಳ ಶೋಷಣೆಗೆ ಸಿಕ್ಕಿಹಾಕಿಕೊಳ್ಳುತ್ತಿಲ್ಲವೇ?

ಈ ಚಾರಿತ್ರಕ ಹೋರಾಟ ಸ್ವತಂತ್ರ ಚಳವಳಿಯ ಸಂದರ್ಭದ ಅಸಹಕಾರ ಚಳವಳಿಯ ರೂಪ ಪಡೆದು ರೈತರು ತಮ್ಮೆಲ್ಲ ಹಂಗಿನಿಂದ ಹೊರಬರುವಂತೆ ಅವರನ್ನು ಪ್ರೇರೇಪಿಸುವುದು ಜಾಗತೀಕರಣ, ಬಹುರಾಷ್ಟ್ರೀಯ ಕಂಪನಿಗಳ ಹುನ್ನಾರದಿಂದ ಹೊರಬರಲು ಇರುವ ಏಕೈಕ ಮಾರ್ಗ.

ಸಂತೋಷ ಕೌಲಗಿ

ಸಂತೋಷ ಕೌಲಗಿ
ಮೇಲುಕೋಟೆಯವರಾದ ಸಂತೋಷ ಗಾಂಧಿವಾದಿಗಳು, ಲೇಖಕರು ಮತ್ತು ಸಾವಯವ ಕೃಷಿಕರು. ಜಾನಪದ ಸೇವಾ ಟ್ರಸ್ಟ್ ಮೂಲಕ ಗ್ರಾಮೋದ್ಯೋಗ, ಖಾದಿ ಬಳಕೆ ಉತ್ತೇಜನ, ಆನಾಥ ಮಕ್ಕಳ ಪಾಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಫುಕುವೊಕರವರ ’ಒಂದು ಹುಲ್ಲಿನ ಕ್ರಾಂತಿ’ ಕನ್ನಡಕ್ಕೆ ಅನುವಾದಿಸಿದ್ದಾರೆ.


ಇದನ್ನೂ ಓದಿ: ರೈತರಿಗೆ ಸಾಲ ನೀಡಲು SBI ಜೊತೆ ಕೈಜೋಡಿಸಿದ ಅದಾನಿ ಕ್ಯಾಪಿಟಲ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...

ಕರ್ನಾಟಕ ಎಸ್‌ಐಆರ್: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಮಂಗಳೂರು: ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಸೇವೆಯ ಮೂಲಕ ದೇಶ-ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ...

SIR ಸೂತ್ರದಿಂದ ಬದಲಾಗುತ್ತಾ ಬೆಂಗಳೂರಿನ 28 ಕ್ಷೇತ್ರಗಳ ಗೆಲುವಿನ ಸಮೀಕರಣ?

ರಾಜ್ಯ ರಾಜಕೀಯದ ಶಕ್ತಿಕೇಂದ್ರವಾದ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR)’ ಪ್ರಕ್ರಿಯೆಯು ಮಹತ್ವದ ರಾಜಕೀಯ ಮತ್ತು ಆಡಳಿತಾತ್ಮಕ ಚರ್ಚೆಯನ್ನು ಹುಟ್ಟುಹಾಕಿದೆ. ಎಸ್‌ಐಆರ್‌ಗೂ ಮುನ್ನ ನಗರದಲ್ಲಿದ್ದ ಸುಮಾರು 1.03...

ಮಣಿಪುರದಲ್ಲಿ ಹಿಂಸಾಚಾರಕ್ಕೆ 306 ಬಲಿ, 49 ಮಂದಿ ನಾಪತ್ತೆ: ವಿಧಾನಸಭೆಯಲ್ಲಿ ಗೃಹ ಸಚಿವರ ಸ್ಪಷ್ಟನೆ

ಇಂಫಾಲ್: ಮಣಿಪುರದಲ್ಲಿ 2023ರ ಮೇ ತಿಂಗಳಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರಕ್ಕೆ ಮೂರು ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದರೂ, ಅದರ ಪರಿಣಾಮದಿಂದ ರಾಜ್ಯ ಸಂಪೂರ್ಣವಾಗಿ ಹೊರಬಂದಿಲ್ಲ. ಹಿಂಸಾಚಾರ ಆರಂಭವಾದ ಬಳಿಕ ಇದುವರೆಗೆ ಕನಿಷ್ಠ 306...

ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ನಿಧಿ ದುರ್ಬಳಕೆ; ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷದ ಸಿ.ಸಿ. ರಸ್ತೆ ನಿರ್ಮಾಣ!

ಸಮಾಜ ಕಲ್ಯಾಣ ಇಲಾಖೆಯ 'ಪ್ರಗತಿ ಕಾಲೋನಿ' ಯೋಜನೆಯ ನಿಧಿ ದುರ್ಬಳಕೆಯಾಗಿರುವ ಆರೋಪ ಕೇಳಿಬಂದಿದ್ದು, ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿರುವ ಪ್ರಕರಣ ಬೆಂಗಳೂರು...

SIR: ‘ಚುನಾವಣಾ ಆಯೋಗದಿಂದ ನೋಟಿಸ್‌’ ಇಲ್ಲದಿರುವ ದಾಖಲೆಗಳನ್ನು ಎಲ್ಲಿಂದಾ ತರೋದು? ಸಾರ್ವಜನಿಕರ ಪ್ರಶ್ನೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ಬಳಸುತ್ತಿರುವ 'Logical Discrepancy' (ತಾರ್ಕಿಕ ವ್ಯತ್ಯಾಸ) ಎಂಬ ಸಾಫ್ಟ್‌ವೇರ್ ಆಧಾರಿತ ಪರಿಶೀಲನೆಯು ತಾಂತ್ರಿಕವಾಗಿ ದೋಷರಹಿತವೆಂದು ತೋರಿದರೂ, ವಾಸ್ತವದಲ್ಲಿ ಲಕ್ಷಾಂತರ ನೈಜ...

SIR ರಗಳೆ: ಕೊನೆಗೂ 43.81 ಲಕ್ಷ ಮತದಾರರ ನೋಟಿಸ್ ಪಟ್ಟಿ ಬಹಿರಂಗಪಡಿಸಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ ನೋಟಿಸ್‌ಗೆ ಗುರಿಯಾಗಿರುವ 43.81 ಲಕ್ಷ ಮತದಾರರ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಕೊನೆಗೂ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ...

‘ಆರ್‌ಎಸ್‌ಎಸ್‌ ಅಡಗಿಕೊಂಡಿದೆ’: ಮೋಹನ್ ಭಾಗವತ್‌ ಯುಕೆ ಭೇಟಿ ವಿರೋಧಿಸಿ ಲಂಡನ್‌ನಲ್ಲಿ ಪ್ರತಿಭಟನೆ

ಲಂಡನ್: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಯುನೈಟೆಡ್ ಕಿಂಗ್‌ಡಮ್‌ ಭೇಟಿಯನ್ನು ವಿರೋಧಿಸಿ ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ. ಭಾಗವತ್ ಅವರ ಯುಕೆ ಪ್ರವಾಸದ...

ಪಂಚಾಯಿತಿಯಲ್ಲಿ ಅಸ್ಪೃಶ್ಯತೆ ಆಚರಣೆ-ಪ್ರತ್ಯೇಕ ಟೀ ಲೋಟ; ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ ಮಹಿಳೆ

ಕೆಲಸದ ಸ್ಥಳದಲ್ಲಿ ನಡೆಯುತ್ತಿದ್ದ ಅಸ್ಪೃಶ್ಯತೆ ಆಚರಣೆಯಿಂದ ಮನನೊಂದ 37 ವರ್ಷದ ದಲಿತ ನೈರ್ಮಲ್ಯ ಕಾರ್ಮಿಕರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ಮೇಲೂರು ಸಮೀಪದ ಕಂಬೂರ್ ಪಂಚಾಯತ್‌ನಲ್ಲಿ ಬೆಳಕಿಗೆ ಬಂದಿದೆ. ...

ಗೌರಿ, ಗಾಂಧಿಯನ್ನು ಕೊಂದದ್ದು ಬರೀ ಬುಲೆಟ್‌ಗಳಲ್ಲ, ಕೋಮುವಾದಿ ಸಿದ್ಧಾಂತ: ವಿದ್ಯಾರ್ಥಿ ನಾಯಕಿ ದಾನಿಶ್ ಅಲಿ

"ಗಾಂಧಿ, ಗೌರಿಯನ್ನು ಕೊಂದಿದ್ದು ಬರೀ ಬುಲೆಟ್‌ಗಳಲ್ಲ, ಅದು ಸಿದ್ಧಾಂತ ಎಂಬುದನ್ನು ನಾವು ನೆನಪಿಡಬೇಕು. ಈ ಸಿದ್ಧಾಂತಗಳ ವಿರುದ್ಧವಾಗಿ ನಾವು ಇಂದು ಹೋರಾಡಬೇಕಿದೆ” ಎಂದು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿ ನಾಯಕಿ...