ಕೃಷಿ ಮಸೂದೆಗಳ ಸಾಧಕ-ಬಾಧಕಗಳನ್ನು ಚರ್ಚಿಸಲು ಸುಪ್ರೀಂಕೋರ್ಟ್ ನೇಮಕ ಮಾಡಿರುವ ಸಮಿತಿಯ ಬಗ್ಗೆ ಆಕ್ಷೇಪಣೆಯೆತ್ತಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಪ್ರಸ್ತುತ ಸಮಿತಿಯಿಂದ ರೈತ ಪರ ನಿಲುವು ಸಾಧ್ಯವೆ ಎಂದು ಪ್ರಶ್ನಿಸಿದೆ.
ಮಸೂದೆಗಳ ಬಗ್ಗೆ ಸುಪ್ರೀಂಕೋರ್ಟ್ ಮಧ್ಯಪ್ರವೇಶವನ್ನು ಸ್ವಾಗತಿಸಿರುವ ರೈತ ಸಂಘವು, ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ತೀರ್ಮಾನಕ್ಕೆ ಬರಲು ಮಾಡಿರುವ ಸಮಿತಿಯ ಬಗ್ಗೆ ತನ್ನ ಆಕ್ಷೇಪಣೆ ಇದೆ ಎಂದಿದೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್ ನೇಮಿಸುವ ಸಮಿತಿಯಲ್ಲಿ ಭಾಗವಹಿಸುವುದಿಲ್ಲ: ರೈತ ಮುಖಂಡರ ನಿರ್ಣಯ
“ಸಮಿತಿಗೆ ನೇಮಕವಾಗಿರುವ ನಾಲ್ವರು ಸದಸ್ಯರಲ್ಲಿ ಡಾ. ಅಶೋಕ್ ಗುಲಾತಿ ಮತ್ತು ಡಾ. ಪಿ.ಕೆ. ಜೋಷಿ ಮಸೂದೆಗಳ ಪರ ತಮ್ಮ ಅಭಿಪ್ರಾಯವನ್ನು ಈಗಾಗಲೆ ಬಹಿರಂಗಪಡಿಸಿದ್ದಾರೆ. ಮತ್ತಿಬ್ಬರು ಸದಸ್ಯರಾದ ಭೂಪಿ೦ದರ್ ಸಿ೦ಗ್ ಮನ್ ಮತ್ತು ಶೆತ್ಕಾರಿ ಸಂಘಟನೆಯ ಪ್ರಮುಖರಾದ ಅನಿಲ್ ಗನ್ವಠ್ ಕೇಂದ್ರ ಕೃಷಿ ಸಚಿವರಿಗೆ ಈಗಾಗಲೆ ಪತ್ರ ಬರೆದು ಕೃಷಿ ಮಸೂದೆಗಳನ್ನು ಸ್ವಾಗತಿಸಿದ್ದಾರೆ. ಇವರುಗಳು ಇರುವ ಸಮಿತಿಯಿ೦ದ ರೈತರ ಪರ ನಿಲುವುಗಳನ್ನು ಬಯಸುವುದು ಸಾಧ್ಯವೆ” ಎಂದು ರೈತ ಸಂಘ ಪ್ರಶ್ನಿಸಿದೆ.
ಕೃಷಿ ಮಸೂದೆಗಳಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ತರಾತುರಿಯಲ್ಲಿ ಮಾಡಿದ ಪ್ರಯತ್ನ ಮತ್ತು ಅದರ ಹಿನ್ನಲೆ, ಸುಗ್ರೀವಾಜ್ಞೆಗಳಿಗೆ ಅಂಗೀಕಾರ ಪಡೆಯಲು ರಾಜ್ಯಸಭೆಯಲ್ಲಿ ಅನುಸರಿಸಿದ ಅಸಾಂವಿಧಾನಿಕ ನಡವಳಿಕೆ, ಮಸೂದೆಗಳ ವಿರುದ್ದ ಧ್ವನಿ ಎತ್ತಿ ಬೀದಿಗಿಳಿದ ರೈತ ಸಮುದಾಯದ ಜೊತೆ ನಡೆದುಕೊಂಡ ರೀತಿಯನ್ನು ರೈತ ಸಂಘವು ಅನಾಗರೀಕ ಕ್ರಮ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಕುರಿತ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಮುಂದಿನ ಆದೇಶದವರೆಗೆ ಮೂರು ಕೃಷಿ ಕಾನೂನುಗಳನ್ನು ಅಮಾನತು ಮಾಡಿದೆ.
ಇದನ್ನೂ ಓದಿ: ಸುಪ್ರೀಂ ನೇಮಿಸಿದ ಸಮಿತಿಯಲ್ಲಿನ ಸದಸ್ಯರೆಲ್ಲರೂ ಕೃಷಿ ಕಾಯ್ದೆ ಸಮರ್ಥಕರು!: ಭುಗಿಲೆದ್ದ ಆಕ್ರೋಶ