ಪ್ರವಾದಿ ಮೊಹಮ್ಮದ್ ಅವರನ್ನು ನಿಂದಿಸಿದ್ದ ಬಿಜೆಪಿಯ ಮಾಜಿ ರಾಷ್ಟ್ರೀಯ ವಕ್ತಾರೆಯನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದ್ದ ಜಮ್ಮು ಕಾಶ್ಮೀರದ ಬಿಜೆಪಿಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಆಶಿಶ್ ಶರ್ಮಾ ಮತ್ತು ಇತರ ಇಬ್ಬರ ವಿರುದ್ಧ ಪೊಲೀಸರು ಮಂಗಳವಾರ ಎಫ್ಐಆರ್ ದಾಖಲಿಸಿದ್ದಾರೆ ಎಂದು ಅರ್ಲಿ ಟೈಮ್ಸ್ ವರದಿ ಮಾಡಿದೆ. ದುಷ್ಕರ್ಮಿಗಳು ಕೋಮು ಸೌಹಾರ್ದತೆ ಹಾಳುಗೆಡವಲು ಮತ್ತು ಎರಡು ಸಮುದಾಯಗಳ ನಡುವೆ ಬಿರುಕು ಮೂಡಿಸಲು ಕಾರಣರಾಗಿದ್ದಾರೆ ಎಂದು ಕಿಶ್ತ್ವಾರ್ ಪೊಲೀಸರು ಆರೋಪಿಸಿದ್ದಾರೆ.
ಆದರೆ ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಜಿಲ್ಲೆಯ ಜನರು ಪ್ರತಿಭಟಿಸಿದ್ದು, ಕಿಶ್ತ್ವಾರ್ ಬಂದ್ ಆಚರಿಸಿದ್ದಾರೆ ಎಂದು ಅದು ತನ್ನ ವರದಿಯಲ್ಲಿ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದವರಲ್ಲಿ ಜಮ್ಮು ಕಾಶ್ಮೀರದ ಬಿಜೆಪಿಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಆಶಿಶ್ ಶರ್ಮಾ, ಐಕೆಜೆಯುಟಿ ನಾಯಕರಾದ ಸಪರ್ಶ್ ಪರಿಹಾರ್ ಮತ್ತು ಅಂಶುಮಾನ್ ರಾಥೋಡ್ ಎಂದು ಗುರುತಿಸಲಾಗಿದೆ ಎಂದು ಪ್ರತಿಭಟನಾ ನಿರತ ಜನರನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಪೊಲೀಸರು ಐಟಿ ಕಾಯ್ದೆಯ ಸೆಕ್ಷನ್ 295 ಎ ಮತ್ತು 66 ಸಿ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ ಎಂದು ಅದು ಉಲ್ಲೇಖಿಸಿದೆ.
ಇದನ್ನೂ ಓದಿ: ಪ್ರವಾದಿ ನಿಂದನೆ ಮಾಡಿದವನಿಂದ ಪಠ್ಯಪರಿಷ್ಕರಣೆ; ರೋಹಿತ್ ಚಕ್ರತೀರ್ಥರ ಹಳೆಯ ಪೋಸ್ಟ್ಗಳು ವೈರಲ್
ಎಫ್ಐಆರ್ ದಾಖಲಾದ ನಂತರ, ಮೌಖಿಕವಾಗಿ ಅಥವಾ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಯಾವುದೇ ಧಾರ್ಮಿಕ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡುವ ಹೇಳಿಕೆ ನೀಡದಂತೆ ಸಾರ್ವಜನಿಕರಿಗೆ ಕಿಶ್ತ್ವಾರ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
“ಯಾವುದೇ ವರ್ಗದ ಅಥವಾ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಮತ್ತು ಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿಗೆ ಭಂಗವುಂಟುಮಾಡುವ ಹೇಳಿಕೆಯನ್ನು ಮೌಖಿಕ ಅಥವಾ ಯಾವುದೇ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ನೀಡದಂತೆ ಸಾರ್ವಜನಿಕರಿಗೆ ಈ ಮೂಲಕ ಸೂಚಿಸಲಾಗಿದೆ” ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಯಾವುದೇ ವ್ಯಕ್ತಿ ಅಂತಹ ಹೇಳಿಕೆ ನೀಡಿದರೆ ಕಾನೂನಿನ ಅಡಿಯಲ್ಲಿ ಕಟ್ಟುನಿಟ್ಟಾಗಿ ಕ್ರಮಕೈಗೊಳ್ಳಲಾಗುವುದು” ಎಂದು ಅವರು ಹೇಳಿದ್ದಾರೆ. ನೂಪುರ್ ಶರ್ಮಾ ಪರ ಬೆಂಬಲ ನೀಡಿದ ಪ್ರಕರಣದಲ್ಲಿ ಕಿಶ್ತ್ವಾರ್ ಪೊಲೀಸರ ಸೈಬರ್ ಸೆಲ್ ಸಾಮಾಜಿಕ ಮಾಧ್ಯಮಗಳ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುತ್ತಿದೆ.
📢 *Kishtwar Police warn Netizen for sharing objectionable Posts on Media*
— DISTRICT POLICE KISHTWAR (@SSPKishtwar) June 7, 2022
“ಬಿಜೆಪಿ ಯುವ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಆಶಿಶ್ ಶರ್ಮಾ, ಐಕೆಜೆಯುಟಿ ಮುಖಂಡ ಇಆರ್.ಸಪರ್ಶ್ ಪರಿಹಾರ್ ಮತ್ತು ಮತ್ತೊಬ್ಬ ಯುವಕ ಅಂಶುಮಾನ್ ರಾಥೋಡ್ ಈ ಪ್ರಕರಣದಲ್ಲಿ ಇದುವರೆಗೆ ಕಾಣಿಸಿಕೊಂಡಿದ್ದಾರೆ” ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ ಎಂದು ಅರ್ಲಿ ಟೈಮ್ಸ್ ವರದಿ ಮಾಡಿದೆ. ಪೊಲೀಸರು ಎಲ್ಲಾ ಆರೋಪಿಗಳ ಫೇಸ್ಬುಕ್ ಖಾತೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕಾನ್ಪುರ ಘರ್ಷಣೆಯ 4 ದಿನಗಳ ನಂತರ ಪ್ರವಾದಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ನಾಯಕನ ಬಂಧನ
ಉಚ್ಚಾಟಿತ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಬಹಿರಂಗವಾಗಿ ಬೆಂಬಲಿಸುವ ಮೂಲಕ ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತಂದಿರುವ ಬಿಜೆಪಿ ನಾಯಕ ಮತ್ತು ಐಕೆಜೆಯುಟಿ ನಾಯಕರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ವಿವಿಧ ಮುಸ್ಲಿಂ ಮುಖಂಡರು, ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತರು ಮತ್ತು ಮುಸ್ಲಿಂ ಸಂಘಟನೆಗಳು ಕಿಶ್ತ್ವಾರ್ ಜಿಲ್ಲಾಧಿಕಾರಿಗೆ ಮನವಿ ಮಾಡಿದ ನಂತರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎಂದು ಅರ್ಲಿ ಟೈಮ್ಸ್ ಹೇಳಿದೆ.