Homeಕರ್ನಾಟಕಮುರುಘಾ ಶರಣರ ತನಿಖೆಗೆ ಎಸ್‌ಐಟಿ ರಚಿಸಿ: ದಲಿತ ಸಂಘರ್ಷ ಸಮಿತಿ ಆಗ್ರಹ

ಮುರುಘಾ ಶರಣರ ತನಿಖೆಗೆ ಎಸ್‌ಐಟಿ ರಚಿಸಿ: ದಲಿತ ಸಂಘರ್ಷ ಸಮಿತಿ ಆಗ್ರಹ

ದಲಿತ ನಾಯಕರಾದ ಗುರುಪ್ರಸಾದ್ ಕೆರೆಗೋಡು, ಮಾವಳ್ಳಿ ಶಂಕರ್‌, ಬೆಟ್ಟಯ್ಯ ಕೋಟೆ, ಶಂಭುಲಿಂಗ ಸ್ವಾಮಿ ಮೊದಲಾದವರು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ.

- Advertisement -
- Advertisement -

ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ರಾಜೇಂದ್ರ ಸ್ವಾಮೀಜಿಯ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣದ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿಗಳು, ಪ್ರಾಮಾಣಿಕ ತನಿಖಾಧಿಕಾರಿಗಳು, ಸಾಮಾಜಿಕ-ಸಂಸ್ಥೆಗಳನ್ನೊಳಗೊಂಡ ‘ಎಸ್‌ಐಟಿ’ ಕೂಡಲೇ ರಚಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಒಕ್ಕೂಟ ಆಗ್ರಹಿಸಿದೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಸಂಚಾಲಕ ಗುರುಪ್ರಸಾದ್ ಕೆರಗೋಡು ಮಾತನಾಡಿ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿ ಈಗಾಗಲೇ ಆರೋಪಿ ಸ್ವಾಮೀಜಿಯ ವಿರುದ್ಧ ಎಫ್‌ಐಆರ್ ದಾಖಲಾಗಿ ನಾಲ್ಕು ದಿನ ಕಳೆದಿವೆ. ಆದರೆ, ಚಿತ್ರದುರ್ಗದಲ್ಲಿಯೇ ಇರುವ ಆರೋಪಿ ಸ್ವಾಮೀಜಿಯನ್ನು ಬಂಧಿಸಲು ವಿಳಂಬ ಮಾಡುತ್ತಾ ಸಾಕ್ಷ್ಯಧಾರಗಳ ನಾಶಕ್ಕೆ ಅವಕಾಶ ಮಾಡಿಕೊಡುತ್ತಿವೆ. ಮೊದಲು ಆರೋಪಿ ಮುರುಘ ಶರಣ ಶಿವಮೂರ್ತಿ ಸ್ವಾಮೀಜಿಯನ್ನು ಬಂಧಿಸಿ ಎಂದು ಒತ್ತಾಯಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗಿ ನಾಲ್ಕು ದಿನ ಕಳೆದರೂ, ಆರೋಪಿಯನ್ನು ಬಂಧಿಸಿಲ್ಲ. ಗೃಹ ಸಚಿವರು ಮಾತನಾಡುತ್ತಾ, ಸ್ವಾಮೀಜಿ ಸತ್‌ಚಾರಿತ್ರ್ಯ ಹೊಂದಿದ್ದಾರೆ ಅನ್ನುವ ಮೂಲಕ ಪ್ರಕರಣ ದಿಕ್ಕು ತಪ್ಪಿಸಲು ಹೊರಟಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಈಗಾಗಲೇ ಆರೋಪಿ ಸ್ವಾಮೀಜಿಗೆ ಕ್ಲಿನ್ ಚೀಟ್ ಕೊಟ್ಟಿದ್ದಾರೆ. ಕಾನೂನಿನ ಮುಂದೆ ಎಲ್ಲ ಸಮಾನರು. ಮುಖ್ಯಮಂತ್ರಿಯಾದಿಯಾಗಿ ಅನೇಕರು ಆರೋಪಿಯ ರಕ್ಷಣೆಗೆ ನಿಂತಿರುವುದರಿಂದ ಆತಂಕ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಕರಣ ದಾಖಲಾಗುತ್ತಿದ್ದಂತೆ ಮುರುಘಾ ಸ್ವಾಮೀಜಿ ಸಂಧಾನಕ್ಕೂ ಸಿದ್ಧ ಸಮರಕ್ಕೂ ಎಂದಿದ್ದಾರೆ. ದೂರು ನೀಡಿರುವ ಅಪ್ರಾಪ್ತರು ದಲಿತ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ಬಾಲಕಿಯರಾಗಿದ್ದು, ಇವರು ಯಾರ ಬಳಿ ಸಂಧಾನ ಮಾಡುತ್ತಾರೆ. ಯಾರ ವಿರುದ್ಧ ಯುದ್ಧ ಮಾಡ್ತಾರೆ ಎಂದು ಪ್ರಶ್ನಿಸಿದರು.

ಅಪ್ರಾಪ್ತರಿಂದ ತನಿಖೆ ನಡೆಸುವಾಗ ಅನುಸರಿಬೇಕಾದ ವಿಧಿ ವಿಧಾನಗಳನ್ನು ಚಿತ್ರದುರ್ಗದ ಪೊಲೀಸರು ಅನುಸರಿಸುತ್ತಿಲ್ಲ. ಸ್ಥಳ ಮಹಜರು ಮಾಡಲು ಬಾಲಕಿಯರನ್ನು ಮಠದ ಆಡಳಿತ ಮಂಡಳಿಯ ಎದುರಿನಲ್ಲಿ ಮಠಕ್ಕೆ ಕರೆದುಕೊಂಡು ಹೋಗಿದ್ದಾರೆ. ಇಂಥ ಸಂದರ್ಭದಲ್ಲಿ ಬಾಲಕಿಯರು ಭಯ-ಭೀತಿಗೊಂಡಿದ್ದಾರೆ. ಬಾಲಕಿಯರಿಗೆ ಭಯ ಮುಕ್ತವಾಗಿ ತನಿಖೆ ನಡೆಸಿಕೊಂಡಿಲ್ಲ. ಹೀಗಾಗಿ ಪೊಲೀಸರು ನಡೆದುಕೊಂಡ ರೀತಿಯಲ್ಲಿ ಅನುಮಾನವಿದೆ ಎಂದರು.

ಪೋಕ್ಸೋ ಕಾಯ್ದೆ ಪ್ರಬಲವಾಗಿದೆ. ಆದರೆ, ಸ್ವಾಮೀಜಿ ಪ್ರಕರಣದಲ್ಲಿ ಕಾಯ್ದೆಯನ್ನು ಸರಿಯಾಗಿ ಅನುಸರಿಸುತ್ತಿಲ್ಲ. ಹೀಗಾಗಿ ನ್ಯಾಯ ದೊರೆಯುವ ವಿಶ್ವಾಸವೇ ಕಳೆದು ಹೋಗಿದೆ. ಚಿತ್ರದುರ್ಗ ಜಿಲ್ಲಾಡಳಿತ ಮತ್ತು ತನಿಖಾಧಿಕಾರಿಗಳು ಅನುಸರಿಸುತ್ತಿರುವ ಧೋರಣೆ ಪ್ರಕರಣದಲ್ಲಿ ಎದ್ದು ಕಾಣುತ್ತಿದ್ದು, ಅಲ್ಲಿನ ಜಿಲ್ಲಾಡಳಿತ ಬಗ್ಗೆ ನ್ಯಾಯ ಸಿಗುವ ವಿಶ್ವಾಸ ಕಾಣುತ್ತಿಲ್ಲ. ಈಗಲಾದರೂ ಸರ್ಕಾರ ಕೂಡಲೇ ಆರೋಪಿಯನ್ನು ಬಂಧಿಸಿ ಎಸ್ ಐಟಿ ತನಿಖಾ ತಂಡ ರಚನೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

‘ಒಡನಾಡಿಗೆ ಮಕ್ಕಳನ್ನು ಕರೆತನ್ನಿ’

ಚಿತ್ರದುರ್ಗಾದಲ್ಲಿರುವ ಮಕ್ಕಳನ್ನು ಸುರಕ್ಷಿತ ದೃಷ್ಟಿಯಿಂದ ಬೇರೆ ಜಿಲ್ಲೆಗೆ ಸ್ಥಳಾಂತರಿಸಬೇಕು. ಹೀಗಾಗಿ ಮೈಸೂರಿಗೆ ಕರೆ ತಂದು ಒಡನಾಡಿ ಸಂಸ್ಥೆಯಲ್ಲಿ ಮಕ್ಕಳನ್ನು ಇರಿಸಬೇಕು. ಮಕ್ಕಳಿಗೆ ದಲಿತ ಸಂಘರ್ಷ ಸಮಿತಿ ಕೂಡ ಬೆಂಬಲವಾಗಿ ನಿಲ್ಲುವುದು. ಈ ಪ್ರಕರಣದ ಸಂಬಂಧ ಎಲ್ಲ ಪಕ್ಷಗಳು ಜನಪ್ರತಿನಿಧಿಗಳು ಓಟು ರಾಜಕಾರಣ ಬಿಟ್ಟು ಮಾತನಾಡಬೇಕು. ಆ ಮೂಲಕ ನ್ಯಾಯದ ಪರವಾಗಿ ನಿಂತು ತಮ್ಮ ಬದ್ಧತೆ ಮೆರೆಯಬೇಕು ಎಂದು ಗುರುಪ್ರಸಾದ್ ಕೆರೆಗೋಡು ತಿಳಿಸಿದರು.

ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಸರ್ಕಾರ ಸ್ವಾಮೀಜಿಯ ರಕ್ಷಣೆಗೆ ನಿಂತಿರುವ ಅನುಮಾನ ಕಾಡುತ್ತಿದೆ. ಗೃಹ ಸಚಿವ ಅರಗಜ್ಞಾನೇಂದ್ರ ರಾಜೀನಾಮೆ ಕೊಡಬೇಕು. ಅವರು ಇಂತಹ ಮೂರ್ನಾಲ್ಕು ಪ್ರಕರಣಗಳಲ್ಲಿ ತಮ್ಮ ಹೇಳಿಕೆಗಳ ಮೂಲಕ ತನಿಖೆ ದಿಕ್ಕು ತಪ್ಪಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಈ ಪ್ರಕರಣದಲ್ಲಿ ಷಡ್ಯಂತ್ರ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ. ಈ ಇಬ್ಬರು ಅಪ್ರಾಪ್ತ ಬಾಲಕಿಯರು ಷಡ್ಯಂತ್ರ ರೂಪಿಸಲು ಸಾಧ್ಯವೇ? ಮಕ್ಕಳಿಗೆ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿದ್ದಾರೆ. ಆದರೆ, ಸ್ವಾಮೀಜಿಗೆ ವೈದ್ಯಕೀಯ ಪರೀಕ್ಷೆ ನಡೆಯದೆ ಇರುವುದು ಪ್ರಕರಣವನ್ನು ದಿಕ್ಕು ತಪ್ಪಿಸುವ ಸೂಚನೆಯಾಗಿದೆ. ಈ ಪ್ರಕರಣವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದರೆ ತೀವ್ರ ಚಳವಳಿ ಎದುರಿಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದನ್ನೂ ಓದಿರಿ: ಎಸ್‌ಸಿ, ಎಸ್‌ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಮುರುಘಾ ಶರಣರ ವಿರುದ್ಧ ಪ್ರಕರಣ ದಾಖಲು

ಅಪ್ರಾಪ್ತ ಬಾಲಕಿಯರಿಗೆ ನ್ಯಾಯ ದೊರೆಕಿಸುವ ನಿಟ್ಟಿನಲ್ಲಿ ಪ್ರಗತಿಪರ, ರೈತ ಹಾಗೂ ದಲಿತ ಮತ್ತು ವಿವಿಧ ಸಮುದಾಯಗಳ ಸಂಘಟನೆಗಳು ಹೋರಾಟ ರೂಪಿಸುವ ನಿಟ್ಟಿನಲ್ಲಿ ಆ.31ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸಭೆ ಹಮ್ಮಿಕೊಳ್ಳಲಾಗಿದೆ. ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ದಸಂದ ಮೈಸೂರು ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಮಾತನಾಡಿ, “ಚಿತ್ರದುರ್ಗದ ಮುರುಘಾ ಮಠದ ಮೇಲೆ ನಮಗಿದ್ದ ಆಶಾ ಭಾವನೆಗೆ ಅಘಾತ ತಂದಿದೆ. ಕೂಡಲೇ ಆರೋಪಿಯಾಗಿರುವ ಶಿವಮೂರ್ತಿ ಮುರುಘಾ ರಾಜೇಂದ್ರ ಸ್ವಾಮೀಜಿಯನ್ನು ಮೊದಲು ಜೈಲಿಗೆ ಕಳುಹಿಸಬೇಕು. ಇಲ್ಲವಾದರೆ ಗ್ರಾಮೀಣ ಪ್ರದೇಶಗಳಿಂದಲೇ ಹೋರಾಟ ನಡೆಸಲಾಗುವುದು. ಸರ್ಕಾರಕ್ಕೆ ಮಾನ-ಮರ್ಯಾದೆ ಇದ್ದರೆ ಮೊದಲು ಆರೋಪಿ ಸ್ವಾಮೀಜಿಯನ್ನು ಬಂಧಿಸಬೇಕು” ಎಂದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಎಸ್‌. ಐ.ಟಿ. ರಚನೆಗಾಗಿ ಸರ್ಕಾರವನ್ನು ನಂಬಿ ಕೂರಬಾರದು. ನ್ಯಾಯಾಂಗದ ಮೊರೆ ಹೋಗಬೇಕು.

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...