ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ರಾಜ್ಯ ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟ- ಕೋಯಲೀಷನ್ ಫಾರ್ ಕನ್ವರ್ಜನ್ಸ್ ರಚಿಸಲಾಗಿದೆ.
ಬೆಂಗಳೂರಿನ ಆಶೀರ್ವಾದ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ಡಿಸೆಂಬರ್ 5 ಮತ್ತು 6ರಂದು ಸಭೆ ನಡೆಸಲಾಗಿದೆ. ಕರ್ನಾಟಕದ ಹತ್ತು ಜಿಲ್ಲೆಗಳ ಲೈಂಗಿಕ ಅಲ್ಪಸಂಖ್ಯಾತರ ಜಿಲ್ಲಾ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಸಮುದಾಯ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿ, ಒಕ್ಕೂಟ ರಚನೆಗೆ ತೀರ್ಮಾನ ಕೈಗೊಂಡರು.
ಮುಖ್ಯ ವಾಹಿನಿ ಚಳವಳಿಗಳಾದ ಜನಪರ ಹಾಗೂ ಪ್ರಗತಿಪರ ಚಳವಳಿಗಳು, ಸಾಮಾಜಿಕ ನ್ಯಾಯ ಚಳವಳಿಗಳು, ಮಹಿಳಾ ಚಳವಳಿ, ಮಕ್ಕಳ ಹಕ್ಕುಗಳ ಚಳವಳಿ, ಯುವ ಸಮುದಾಯದ ಚಳವಳಿ, ಜಾತಿ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಚಳವಳಿ, ಸಹಸ್ರ ನಾಗರಿಕರ ಚಳವಳಿ, ಮಾನದ ಹಕ್ಕುಗಳ ಚಳವಳಿ, ಕಾರ್ಮಿಕ ಚಳವಳಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಾಗೂ ಸರ್ಕಾರೇತರ ಸಂಸ್ಥೆಗಳೊಂದಿಗೆ ಈ ಒಕ್ಕೂಟವು ಕಾರ್ಯನಿರ್ವಹಿಸಲಿದೆ.
ಈ ಒಕ್ಕೂಟದ ಜವಾಬ್ದಾರಿಯನ್ನು ರಾಜ್ಯ ಸಂಚಾಲಕರು, ವಿಭಾಗೀಯ ಸಂಚಾಲಕರು ಹಾಗೂ ಜಿಲ್ಲಾ ಸಂಚಾಲಕರು ನಿರ್ವಹಿಸುತ್ತಾರೆ.
ಡಿಸೆಂಬರ್ 5, ಸೋಮವಾರದಂದು ಸಭೆ ಆರಂಭಿಸಲಾಯಿತು. ಒಕ್ಕೂಟ ಬೇಕು – ಬೇಡಗಳ ಕುರಿತಾಗಿ ಚರ್ಚೆ ಮಾಡಿ ಎಲ್ಲಾ ಜಿಲ್ಲೆಗಳ ಜಿಲ್ಲಾ ಆಡಳಿತ ಮಂಡಳಿಗಳ ಪ್ರತಿನಿಧಿಗಳು ಮತ್ತು ಸಮುದಾಯ ಪ್ರತಿನಿಧಿಗಳು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಸರ್ವಾನುಮತದಿಂದ ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟ- ಕೊಯಿಲೀಷನ್ ಫಾರ್ ಕನ್ವರ್ಜನ್ಸ್ ಬೇಕು ಎಂಬ ನಿರ್ಧಾರಕ್ಕೆ ಬರಲಾಯಿತು.
ಡಿಸೆಂಬರ್ 6ರಂದು ಅಂದರೆ ಡಾ.ಬಿ.ಆರ್.ಅಂಬೇಡ್ಕರ್ರವರ ‘ಮಹಾ ಪರಿನಿರ್ವಾಣ ದಿನ’ದಂದು ಒಕ್ಕೂಟದ ಗುರಿ ಉದ್ದೇಶಗಳು, ವ್ಯಾಪ್ತಿ, ಇನ್ನಿತರ ವಿಷಯಗಳ ಕುರಿತಾಗಿ ಗುಂಪು ಚರ್ಚೆಯನ್ನು ಮಾಡಲಾಯಿತು. ನಂತರ ಸರ್ವಾನುಮತದಿಂದ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಜಿಲ್ಲಾವಾರು ಸಂಚಾಲಕರ ಆಯ್ಕೆಯನ್ನು ಮಾಡಲಾಯಿತು. ಬಸವರಾಜ್ (ಯಾದಗಿರಿ), ನಾರಾಯಣ (ಹುಬ್ಬಳ್ಳಿ – ಧಾರವಾಡ), ನಿಂಗಪ್ಪ (ಕೊಪ್ಪಳ), ಶಮೀರ್ (ಬಾಗಲಕೋಟೆ), ಮಾಯಾ.ಎಸ್ (ಚಿಕ್ಕಬಳ್ಳಾಪುರ), ಪ್ರಕಾಶ್ ರಾಜ್ (ಬೆಂಗಳೂರು ನಗರ), ಸಂಜನಾ (ಉಡುಪಿ), ಕೃಷ್ಣಮೂರ್ತಿ (ಕೋಲಾರ), ಪ್ಯಾರೂ (ಶಿವಮೊಗ್ಗ), ಪ್ರಣತಿ (ಮೈಸೂರು), ನಂದನ್ (ದಾವಣಗೆರೆ), ಮೋನಿಕಾ (ರಾಮನಗರ), ಪ್ರಗತಿ (ರಾಯಚೂರು), ಬೀರಲಿಂಗ (ಕಲಬುರ್ಗಿ) ಅವರು ಜಿಲ್ಲಾವಾರು ಸಂಚಾಲಕರಾಗಿ ಆಯ್ಕೆಯಾದರು.
ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ, ಕಾಂಗ್ರೆಸ್ ನಾಯಕಿ ಅಕ್ಕಯ್ ಪದ್ಮಶಾಲಿಯವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆ ಕೈಗೊಂಡ ನಿರ್ಣಯಗಳು
1) ಒಂದು ವರ್ಷದವರೆಗೆ ಯಾವುದೇ ಶುಲ್ಕವನ್ನು ಸದಸ್ಯರಿಂದ ಸ್ವೀಕರಿಸದೆ ಉಚಿತವಾಗಿ ಈ ಒಕ್ಕೂಟವನ್ನು ನಡೆಸಿಕೊಂಡು ಹೋಗಬೇಕು.
2) ಸಂಸ್ಥೆಯು ಕೆಲಸ ಮಾಡಲು ಮುಕ್ತ ಸ್ವತಂತ್ರ್ಯವಾದ ವಾತಾವರಣವಿರಬೇಕೆಂಬ ಕಾರಣಕ್ಕೆ ಮತ್ತು ಕೆಲಸದ ವ್ಯಾಪ್ತಿಯನ್ನು ಹೆಚ್ಚಿಸಲು ಸಂಸ್ಥೆಯನ್ನು ನೋಂದಾಯಿಸುವುದು ಬೇಡ.
3)ಬ್ಯಾಂಕ್ ಅಕೌಂಟ್ ಬೇಕು. ಜಂಟಿ ಖಾತೆ ಇರಬೇಕು. ಆ ಖಾತೆಯು ರಾಯಚೂರು ಜಿಲ್ಲೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾನಲ್ಲಿ ಬಸವರಾಜ್ (ಯಾದಗಿರಿ ಜಿಲ್ಲೆ), ಪ್ರಗತಿ (ರಾಯಚೂರು ಜಿಲ್ಲೆ), ಬೀರಲಿಂಗ (ಕಲಬುರ್ಗಿ ಜಿಲ್ಲೆ) ಅವರ ಹೆಸರಿನಲ್ಲಿ ಇರಬೇಕು.