Homeಮುಖಪುಟಪ್ರವಾಸ-ಪ್ರಬಂಧ; ನಾಯಿ ಕಕ್ಕ ಮಾಡಿಸಿ ಎಣಿಸಬಹುದು ಲಕ್ಷ ಲಕ್ಷ!

ಪ್ರವಾಸ-ಪ್ರಬಂಧ; ನಾಯಿ ಕಕ್ಕ ಮಾಡಿಸಿ ಎಣಿಸಬಹುದು ಲಕ್ಷ ಲಕ್ಷ!

- Advertisement -
- Advertisement -

ಇಪ್ಪತ್ತು ಗಂಟೆಯ ನಿರಂತರ ಪ್ರವಾಸ ಮಾಡಿ ದೇಹ ದಣಿದಿತ್ತು. ಕಾಲುಚಾಚಿ ಮಲಗಲು ಹಾಸಿಗೆ ಸಿಕ್ಕರೆ ಸಾಕೆನಿಸಿತ್ತು. ಇನ್ನೇನು ಎರಡು ನಿಮಿಷದಲ್ಲಿ ಹಾಸಿಗೆ ಮೇಲೆ ಮೈಚೆಲ್ಲುವೆ ಎಂಬ ಯೋಚನೆಯಿಂದ ಮನಸ್ಸಿಗೆ ಆಗತಾನೆ ಹಿತ ಮೂಡುತ್ತಿತ್ತು. ಮಗ ಅಪಾರ್ಟಮೆಂಟ್‌ನ ಮನೆಯ ಬಾಗಿಲು ತೆಗೆದ. ಬಾಗಿಲು ತೆಗೆಯುತ್ತಿದ್ದಂತೆ ಓಡೋಡಿ ಬಂದ ಜೂಲು ನಾಯಿ, ಅವನ ಮೇಲೆರಗಿತು. ಅದು ಅವನು ಸಾಕಿದ ನಾಯಿ. ನಂತರ ನನ್ನ ಕಡೆ ತಿರುಗಿ ಹೊಸ ಆಗಂತುಕನನ್ನು ಪರಿಚಯಿಸಿಕೊಳ್ಳಲು ಮೂಸಿನೋಡಲಾರಂಭಿಸಿತು. ಮಂಜುಗಡ್ಡೆಯಂತೆ ಕೊರೆಯುತ್ತಿದ್ದ ಅದರ ತಣ್ಣನೆಯ ನಾಲಿಗೆಯಿಂದ ನನ್ನ ಪಾದ ನೆಕ್ಕಿ, ತಣ್ಣನೆಯ ಜೊಲ್ಲು ಸೂಸಿತು. ಪ್ರವಾಸದ ಆಯಾಸದಿಂದ ದಣಿದಿದ್ದ ನನಗೆ ನಾಯಿಯ ಸ್ಪರ್ಶ ಕಿರಿಕಿರಿ ಅನಿಸಿ, “ಚೀ ನಡಿಯಾಚೆ” ಎಂದು ದೂರ ಸರಿಸಿದೆ. ಮಗನ ಮುದ್ದಿನ ನಾಯಿಯದು. ನನ್ನ ಅಸಹನೆ ಹಿಡಿಸಿರಲಿಕ್ಕಿಲ್ಲ ಅವನಿಗೆ. ಅವನ ಮುಖದಲ್ಲಿ ಬೇಸರದ ಛಾಯೆ ಮೂಡಿದ್ದು ನನಗೂ ಕಂಡಿತು. “ಐರಿಷ್ ಬಾ ಇಲ್ಲಿ” ಎಂದು ಬರಸೆಳೆದು ಸಂತೈಸಿದ ತನ್ನ ನೆಚ್ಚಿನ ಮಗಳನ್ನು. ಆಗ ನನ್ನ ಬಾಲ್ಯ, ಮಿಸೆಸ್ ಎಂ. ಪಿ. ನಾಡಗೌಡರ ಅಂದಿನ ಮಾತುಗಳು ನೆನಪಿನಲ್ಲಿ ಸುಳಿದುಹೋದವು.

ಹಿಂದೊಮ್ಮೆ ಬೆಂಗಳೂರಿನಲ್ಲಿ ನಾಡಗೌಡರ ಮನೆಗೆ ಹೋಗಿದ್ದೆ. ಅತ್ತಿಗೆ ತಿಂಡಿ ತಿನ್ನಲು ಕರೆದಿದ್ದರು. ಒಳಗೆ ಕಾಲಿಡುತ್ತಿದ್ದಂತೆ ನನ್ನ ಬರುವಿಕೆಯನ್ನು ಅಲ್ಲಿದ್ದ ದೊಡ್ಡ ಗಾತ್ರದ ನಾಯಿ ಪ್ರತಿಭಟಿಸಿತು. ’ನೀನ್ಯಾರೆಂದು’ ತನ್ನ ಕರ್ಕಶವಾದ ಧ್ವನಿಯ ಪ್ರದರ್ಶನ ನೀಡಿತು. ಅದರ ಯಜಮಾನಿ ’ಸುಮ್ಮನಿರು’ ಎಂದು ಆಜ್ಞೆ ಮಾಡಿದ್ದೂ ಉಪಯೋಗವಾಗಲಿಲ್ಲ. ಮೂಸಿ ನೋಡುತ್ತ, ಆಗಂತುಕನ ಪೂರ್ವಾಪರ ವಿಚಾರಿಸಲು ಮುಂದೆ ಬಂತು. ಅದರ ಗಾತ್ರ ಮತ್ತು ಗಡುಸಾದ ಧ್ವನಿಯಿಂದ ಗಾಬರಿಗೊಂಡಿದ್ದ ನನ್ನನ್ನು ಗಮನಿಸಿದ ಮನೆಯ ಯಜಮಾನಿ ಸಂತೈಸುತ್ತಾ, “ಅವಳೇನು ಮಾಡಲ್ಲ, ತುಂಬಾ ಒಳ್ಳೆಯವಳು, ಹೆದರಬ್ಯಾಡ್ರಿ” ಅಂದರು. ’ಅವಳೇನು ಮಾಡಲ್ಲ’ ಎಂದು ಯಾರನ್ನು ಕುರಿತು ಹೇಳುತ್ತಿದ್ದಾರೆಂದು ಗಾಬರಿಯ ಜೊತೆಗೆ ಗಲಿಬಿಲಿಯೂ ಆಯಿತು. ಒಂದುಕ್ಷಣದ ನಂತರ ಗೋಚರಿಸಿದ್ದು: ನಾಯಿಗೆ ಮನುಷ್ಯನ ಸ್ಥಾನ ನೀಡಿದ್ದಾರೆಂದು. ಆಶ್ಚರ್ಯಚಕಿತನಾದರೂ ಅದನ್ನು ವ್ಯಕ್ತಪಡಿಸದೆ ಸುಮ್ಮನಾದೆ.

ಐರಿಶ್

ವಿಜಾಪುರದ ಹಳ್ಳಿಗೌಡರ ಮಗ ನಾನು. ಹತ್ತೆತ್ತಿನ ಒಕ್ಕಲು ಮನೆಯಲ್ಲಿ, ಎತ್ತು, ಎಮ್ಮೆ, ಆಕಳು, ಆಡುಗಳ ಮಧ್ಯೆ ಬೆಳೆದವನು. ಆಗ ಎರಡು ನಾಯಿಗಳು ನಮ್ಮೊಂದಿಗಿದ್ದವು. ಮನೆಯವರೆಲ್ಲರೂ ಮಲಗಿದ್ದಾಗ ಎಚ್ಚರವಿದ್ದು ಬಾಗಿಲಿಲ್ಲದ ಮನೆಯನ್ನು ಕಾಯುವ ಕೆಲಸ ಮಾಡುತ್ತಿದ್ದವು. ಎಲ್ಲ ಪ್ರಾಣಿಗಳಿಗಿಂತ ಕನಿಷ್ಠ ದರ್ಜೆಯ ಪ್ರಾಣಿಯ ಸ್ಥಾನ ನೀಡಿದರೂ ಮನೆಯ ಕಾವಲುಗಾರರೆಂದು ಅವ್ವ ಅವುಗಳನ್ನ ಪ್ರೀತಿಸುತ್ತಿದ್ದಳು. ಬಾಲ ಅಲ್ಲಾಡಿಸುತ್ತ ಹಿಂದೆ ಮುಂದೆ ಓಡಾಡುವ ವಿಶ್ವಾಸಿಕ ಪ್ರಾಣಿಯಾದರೂ ಅವುಗಳ ಸ್ಥಾನ ಯಾವತ್ತೂ ಹೊಸ್ತಿಲ ಹೊರಗಿತ್ತು.

ರಸ್ತೆಯಲ್ಲಿ ಬೀದಿ ನಾಯಿ ಮರಿಹಾಕಿದಾಗ ಓಡಿಹೋಗಿ ಎತ್ತಿಕೊಂಡಿದ್ದುಬಿಟ್ಟರೆ ನಾಯಿಗಳನ್ನು ಮುಟ್ಟಿದ್ದು ಕಡಿಮೆಯೆ. ಒಟ್ಟಾರೆಯಾಗಿ ಉಳಿದ ಪ್ರಾಣಿಗಳಿಗಿಂತ ನಿರ್ಲಕ್ಷಿತವಾದವಾಗಿದ್ದವು ನಾಯಿಗಳು. ಅಷ್ಟೇ ಏಕೆ “ನಾಯಿ ಬಾಳು ನನ್ನದು” ಎಂಬ ಆಡುಮಾತೇ ಸಾಕು, ಈ ನಾಗರಿಕ ಸಮಾಜ ನಾಯಿಯನ್ನು ಕಾಣುವ ರೀತಿಗೆ. ಕರಿ ನಾಯಿಯನ್ನು ಬಿಳಿ ನಾಯಿಯನ್ನಾಗಿ ಮಾಡಲು ಅಣ್ಣ ಸಾಬೂನು ಹಾಳು ಮಾಡಿದ್ದೂ, ಅವ್ವನಿಂದ ಚೆನ್ನಾಗಿ ಒದೆ ತಿಂದದ್ದೂ, ಅಣ್ಣನಿಗೆ ತಕ್ಕ ಶಾಸ್ತಿ ಆಯಿತೆಂದು ನಾನು ಸಂತೋಷಪಟ್ಟಿದ್ದು ಬಾಲ್ಯದ ನೆನಪು. ಅಣ್ಣನ ಬುದ್ಧಿವಂತಿಕೆಯನ್ನು ತುಂಬಾ ದಿನದ ಕೊಂಡಾಡಲಾಗಿತ್ತು. ಅದು ಗೇಲಿ ಎಂದು ಹೇಳುವ ಅವಶ್ಯಕತೆ ಇಲ್ಲ ಅಲ್ಲವೇ! ಅಪ್ಪನೂ ಬಿದ್ದು ಬಿದ್ದು ನಕ್ಕಿದ್ದರು ಅವನ ಈ ಸಾಹಸಕ್ಕೆ!

ಕಿವಿ

ಭಾರತೀಯ ನಾಯಿ ಎಂದರೆ ಸಾಮಾನ್ಯವಾಗಿ ಬೀದಿನಾಯಿ. ಅದಕ್ಕೆ ಬೇಕಿಲ್ಲ ’ಕೆನನ್ ಕ್ಲಬ್’ ಸರ್ಟಿಫಿಕೇಟ್. ನಾಯಿ ಮರಿಗಳು ಎಲ್ಲಿಂದರಲ್ಲಿ ಸಿಗುತ್ತವೆ. ನಾಯಿಮರಿಯ (ಪಪ್ಪಿ) ಕಿವಿ ಹಿಡಿದು ಮೇಲೆತ್ತಿದಾಗ ನೋವಿನಿಂದ ಚೀರಿದರೆ ’ಹುಷಾರು’. ಚೀರದಿದ್ದಲ್ಲಿ ’ಪೆದ್ದು’ ಅಥವಾ ’ತೆಬ್ಬಾವು’. ಇದೊಂದೇ ಮಾನದಂಡ ನಾಯಿಯ ಜಾತಿ ಕಂಡುಹಿಡಿಯಲು. ತಜ್ಞರ ಸರ್ಟಿಫಿಕೇಟ್ ಎಲ್ಲಾ ದೂರವೇ ಉಳಿಯಿತು. ವ್ಯಾಕ್ಸಿನೇಶನ್‌ನದ್ದೂ ಅದೇ ಗತಿ. ನೋವಿನಿಂದ ಚೀರಿದ ನಾಯಿಮರಿಯನ್ನು ಸಾಕಿಕೊಳ್ಳಲು ಅವ್ವನಿಂದ ಒಪ್ಪಿಗೆ ಸಿಕ್ಕರೆ ಅದಕ್ಕೆ ಮನೆಯ ಆವರಣದಲ್ಲಿ ನೆಲೆ ಸಿಕ್ಕಂತೆ. ಆಗ ಅದು ಗೌಡರ ನಾಯಿ. ಸಾಹುಕಾರರ ನಾಯಿ ಅಥವಾ ಕೃಷಿಕನ ನಾಯಿ. ಮನೆಯ ಅಂಗಳದಲ್ಲೊ, ದನದ ಕೊಟ್ಟಿಗೆಯಲ್ಲೊ ಬಿದ್ದುಕೊಂಡು, ಮನೆಯವರು ಉಂಡು ಬಿಟ್ಟ ಆಹಾರ ತಿಂದು ಬದುಕುವ ಮಾನವ ಸ್ನೇಹಿ ಪ್ರಾಣಿ.

ಇಂದಿನಂತೆ ಉದ್ದಿಮೆಯವರು ಉತ್ಪಾದಿಸಿದ ಆಹಾರ ಇರಲಿಲ್ಲಿ ಅವಕ್ಕೆ, ನಮ್ಮದೆ ರೊಟ್ಟಿ, ನುಚ್ಚು, ಉಳಿದ ಅನ್ನ ಅವುಗಳ ಆಹಾರ. ಮನೆಯಲ್ಲಿದ್ದ ಹಾಲನ್ನು ಅನ್ನದಲ್ಲಾಗಲಿ ನುಚ್ಚಿನಲ್ಲಾಗಲಿ ಹಾಕಿದರೆ ಮೃಷ್ಠಾನ್ನ ಭೋಜನ. ನಾಯಿಗೆಂತಲೇ ಕೊನೆಯಲ್ಲಿ ಬಡಿಯುತ್ತಿದ್ದರು ನಾಯಿರೊಟ್ಟಿ. ನಮ್ಮನೆಯ ಅಡುಗೆಯ ಸಹಾಯಕಿಗೆ ರೊಟ್ಟಿ ಬಡಿಯುವದು ಸಾಕೆನಿಸಿದಾಗ ಕೊನೆಯ ರೊಟ್ಟಿಯೊಂದನ್ನು ಬಡಿಯುತ್ತಿದ್ದಳು. ಅತ್ತ ಇತ್ತ ಚೆಲ್ಲಿದ ಒಣ ಹಿಟ್ಟನ್ನು ಬಳಿದು, ಕೊಪ್ಪರಿಗೆಯಲ್ಲಿ ಉಳಿದ ಹಸಿ ಹಿಟ್ಟಿನಲ್ಲಿ ಅದನ್ನು ಕಲಸಿ, ನಾದಿ, ಅಂಗೈ ದಪ್ಪನೆಯ ಕೈ ರೊಟ್ಟಿ ಮಾಡಿ ಹಂಚಿನ ಮೇಲೆ ಹಾಕಿ ಕೆಳಗಿನ ಉರಿಯುವ ಕಟ್ಟಿಗೆಗೆ ನೀರು ಹಾಕಿ ಎದ್ದರೆ, ಬೆಚ್ಚನೆ ಹಂಚಿನ ಕಾವಿನಿಂದಲೇ ಬೇಯುತ್ತಿತ್ತು ನಾಯಿ ರೊಟ್ಟಿ. ಇಂದಿಗೂ ಗ್ರಾಮೀಣ ಮಹಿಳೆಯ ಕೊನೆಯ ರೊಟ್ಟಿ ನಾಯಿ ರೊಟ್ಟಿಯೇ. “ನಾಯಿ ರೊಟ್ಟಿಯಂತಾ ರೊಟ್ಟಿ ಮಾಡತಾಳರಿ, ನಾ ಹ್ಯಾಂಗ ತಿನ್ನಲ್ರಿ ಯಪ್ಪಾ” ಎಂದು ಹೆಂಡತಿಯ ಮೇಲೆ ದೂರ ತರುತ್ತಿದ್ದರು ನಮ್ಮೂರ ಜನರು ಅಪ್ಪನಲ್ಲಿ.

ನನ್ನವ್ವನ ಮೊಮ್ಮಗನ ನಾಯಿಯ ವೃತ್ತಾಂತಕ್ಕಿಂತ ಮೊದಲು ಅಮೆರಿಕನ್ನರ ನಾಯಿಯ ಬಾಳಿನ ಬಗ್ಗೆ ಎರಡು ಮಾತು ಆಡಲೇಬೇಕು. ಅವರು ನಾಯಿಗೆ ನೀಡಿರುವ ಪ್ರಾಮುಖ್ಯತೆ ಅದ್ಭುತ. ಅದರ ಸುತ್ತಲೇ ಸುತ್ತುತ್ತವೆ ಅಮೆರಿಕನ್ನರ ಸಂಸಾರ. ದಿನಕ್ಕೆ ಎರಡು ಬಾರಿಯಾದರೂ ನಾಯಿಯನ್ನು ಹೊರಗೆ ಕರೆದುಕೊಂಡು ಹೋಗಬೇಕು. ಎರಡು ಬಾರಿ ಮೂತ್ರ ಮಾಡಿಸಲು ಮತ್ತೆರಡು ಬಾರಿ ಕಕ್ಕ ಮಾಡಿಸಲು. ಅಮೆರಿಕೆಯಲ್ಲಿ ನಾವಿದ್ದದ್ದು ಕೂಡುಮನೆಯ (ಅಪಾರ್ಟ್‌ಮೆಂಟ್) ಎರಡನೆಯ ಅಂತಸ್ತಿನಲ್ಲಿ. ಅಲ್ಲಿ ಅವುಗಳಿಗಾಗಿಯೇ ನಿರ್ಮಿಸಿದ 50×60 ಅಳತೆಯ ಕೈ ತೋಟ ಇದೆ. ಅಲ್ಲಿ ನಾಯಿ ಮೂತ್ರ ಮಾಡಲು ಪ್ಲಾಸ್ಟಿಕ್ ಹುಲ್ಲಿನ ಕಾರ್ಪೆಟ್ ಹಾಕಿದ್ದಾರೆ. ಇಡೀ ಅಪಾರ್ಟ್‌ಮೆಂಟಿನ ನಾಯಿಗಳು ಮೂತ್ರ ಮಾಡುವ ಸ್ಥಳವದು. ಆದರೆ ಅಲ್ಲಿ ಕಕ್ಕ ಮಾಡುವಂತಿಲ್ಲ. ಕಕ್ಕಸ್ಸಿಗಾಗಿ ಸಾರ್ವಜನಿಕ ರಸ್ತೆಗಳಿಗೆ ಕರೆದೊಯ್ಯಬೇಕು. ನಾಯಿಯನ್ನು ರಸ್ತೆಗೆ ತಂದವನೇ, ಅವುಗಳು ಮಾಡಿದ ಕಕ್ಕವನ್ನು ಎತ್ತಿ ಕಸದ ಡಬ್ಬಿಯಲ್ಲಿ ಹಾಕಬೇಕು. ಕಕ್ಕ ತಗೆಯಲು ಪ್ಲಾಸ್ಟಿಕ್ ಚೀಲಗಳನ್ನು ಕೈಲಿ ಹಿಡಿದೆ ರಸ್ತೆಗಿಳಿಯಬೇಕು. ಕಟ್ಟಿರುವ ಚೈನನ್ನು ಯಾವದೇ ಕಾರಣಕ್ಕೂ ಬಿಚ್ಚುವಂತಿಲ್ಲ. ಪ್ರತಿಯೊಂದು ಬಡಾವಣೆಯಲ್ಲಿಯೂ ಅವುಗಳಿಗಾಗಿಯೇ ಡಾಗ್ ಪಾರ್ಕುಗಳಿವೆ. ಪಾರ್ಕಿನಲ್ಲಿ ಚೈನನ್ನು ಬಿಚ್ಚಬಹುದು, ಸ್ವಾತಂತ್ರ್ಯ ಪಡೆದ ನಾಯಿಗಳು ಅಲ್ಲಿ ಓಡಾಡುತ್ತವೆ, ಪ್ರಿಯತಮೆ ಕಂಡರೆ ಮುದ್ದಾಡುತ್ತವೆ. ಆದರೆ ಕಚ್ಚಾಡುವುದನ್ನು ನಾನು ಕಂಡೇ ಇಲ್ಲ.

ಹಚಿ, ಹಳಿ ಎನಿಸಿಕೊಂಡು, ಬಾಗಿಲಾಚೆ ಬಿದ್ದುಕೊಂಡು, ನಮ್ಮ ಸಂಪತ್ತನ್ನು ಕಾಯುವ ಪ್ರಾಣಿ ಎಂಬ ಸಾಮಾನ್ಯ ಅಭಿಪ್ರಾಯ ಹಳ್ಳಿಗಾಡಿನ ಭಾರತೀಯನದು. ಅದರೆ ಅಮೆರಿಕನ್ ನಾಯಿ ಕಾವಲು ನಾಯಿಯಲ್ಲ. ಅವನು/ಅವಳು ಆ ಮನೆಯ ಸದಸ್ಯ. ಅವನಿಗೂ ಭಾವನೆಗಳಿವೆ ಎಂದು ತಿಳಿಯುತ್ತಾರೆ ಅಲ್ಲಿಯ ಜನ. ಅದು ಮನೆಯಲ್ಲಿ ಸರ್ವ ಸ್ವತಂತ್ರ, ಮನೆಯಲ್ಲಿರುವ ಎಲ್ಲ ಬೆಡ್‌ರೂಮ್‌ಗಳ ಒಡೆಯ. ಡ್ರಾಯಿಂಗ್ ರೂಮಿನಲ್ಲಿ ಅತಿಥಿಗಳನ್ನು ಸ್ವಾಗತಿಸುತ್ತ ಅವರನ್ನು ಉಪಚರಿಸಿ ಅವರ ಮನ ಗೆಲ್ಲುವುದನ್ನೂ ಮಾಡುತ್ತದೆ
ಅಮೆರಿಕೆಯ ನಾಯಿ. ಅದರ ಪರಿಪಾಲನೆಗೆ ತಗೆಲುವ ತಿಂಗಳ ಖರ್ಚು ನಮ್ಮ ಒಂದು ಕುಟುಂಬದ ಖರ್ಚಿನಷ್ಟು.

ರಿಲೀ

ನಮ್ಮ ಅಪಾರ್ಟ್‌ಮೆಂಟ್‌ನ ಮಹಿಳೆಯೊಬ್ಬರು ಮೂತ್ರ ಮಾಡಿಸಲು ತಮ್ಮ ನಾಯಿಯನ್ನು ಕರೆದುಕೊಂಡುಬಂದರು. ಅದೆ ಸಮಯದಲ್ಲಿ ನಾನೂ ನಮ್ಮ ನಾಯಿಯೊಂದಿಗೆ ಅಲ್ಲಿದ್ದೆ. ನಮ್ಮ ಮನೆಯ ಮೇಲಿನ ಅಂತಸ್ತಿನಲ್ಲಿ ಅವರಿರುವುದು. ’ಚಿಹ್ವಾ ಮಿನ್ ಪಿನ್ (Chihua min pin) ತಳಿಯ, ಮೆಕ್ಸಿಕನ್ ಮೂಲದ ನಾಯಿ ಅವರದ್ದು. ನೋಡಲು ಥೇಟ್ ಇಲಿಯಂತಿತ್ತು. ಚಿಕ್ಕ ನಾಯಿ, ಎತ್ತರ ಒಂಭತ್ತು ಇಂಚನ್ನು ಮೀರಲಾರದು. ಅದರ ಹೆಸರು ರಿಲೀ (riley).

“ರಿಲೀ ಎಂದರೇನು” ಕೇಳಿದೆ ನಾನು. “ಧೈರ್ಯಶಾಲಿ” (courageous) ಎಂದರು ಜೇನಿ. ಆರು ವರ್ಷದ ರಿಲೀಯ ಬಣ್ಣ ಕರಿ. ಇಲಿಯಂತೆ ಕಿವಿ ನಿಮಿರಿಸಿಕೊಂಡಿದ್ದಳು. ಪೋಟೋಗೆ ಪೋಸು ಕೊಡು ಎಂದಾಗ ಅವಳು ಕೊಟ್ಟ reaction ನೋಡಿ ಅವಳು ಧೈರ್ಯಶಾಲಿ ಎನಿಸಲಿಲ್ಲ. ಜೇನಿ ರಿಲೀಯ ದಿನನಿತ್ಯ ಆಹಾರಕ್ಕೆ 25-30 ಡಾಲರ್ ಖರ್ಚು ಮಾಡುತ್ತಾರಂತೆ. ಅದನ್ನು ಅಡಾಪ್ಟ್ ಮಾಡಿಕೊಂಡಿದ್ದಾರೆ. ಹೌದು ಈ ದೇಶದಲ್ಲಿ ನಾಯಿಯನ್ನು ಅಡಾಪ್ಟ್ ಮಾಡಿಕೊಳ್ಳಬಹುದು. ಅಡಾಪ್ಷನ್ ಫೀ ಎಂದು ಅವರು ಸ್ಥಳೀಯ ಆಡಳಿತಕ್ಕೆ 500 ಡಾಲರ್ ಕಟ್ಟಿದ್ದಾರೆ.

ಜೇನಿ ಶ್ರೀಮಂತ ಹೆಣ್ಣು. ಅವರೊಂದಿಗೆ ಮಾತಿಗಿಳಿದಾಗ ತಿಳಿಯಿತು, ಅವರ ಸಿಯಾಟೆಲ್ ನಗರದ ಆರೋಗ್ಯ ಇಲಾಖೆಯ ಸೇವೆಯಲ್ಲಿದ್ದಾರೆಂದು. ಜೇನಿ ಹೇಳಿದ ಇನ್ನೊಂದು ವಿಷಯ ನನ್ನನ್ನು ಆಶ್ಚರ್ಯಚಕಿತನನ್ನಾಗಿಸಿತು. ಅವರು ತನ್ನ ನಾಯಿಯನ್ನು ಸುತ್ತಿಸಲು ಒಬ್ಬರನ್ನು ನೇಮಿಸಿದ್ದಾರಂತೆ. ಪ್ರತಿನಿತ್ಯ ನಾಯಿಯನ್ನು ರಸ್ತೆಗೆ ಕರೆದುಕೊಂಡು ಹೋಗಿ ಕಕ್ಕ ಮಾಡಿಸಿ ಹಿಂತಿರಿಗಿ ಫ್ಲ್ಯಾಟ್‌ನಲ್ಲಿ ಬಿಡುವದು ಆ ಸೇವಕಿಯ ಕೆಲಸ. ಆ ಕೆಲಸಕ್ಕೆ ಇಪ್ಪತೈದು ಡಾಲರ ನಿತ್ಯ ಸಂಬಳ. “ಆಕೆಯ ಸೇವೆ ನಿಮ್ಮ ನಾಯಿಗೆ ಮಾತ್ರ ಮೀಸಲೇ” ಎಂದು ಪ್ರಶ್ನಿಸಿದೆ. “ಅದು ಆಕೆಗೆ ಬಿಟ್ಟಿದ್ದು, ನನಗೆ ತಿಳಿದಂತೆ ಆಕೆ ಹದಿನೈದು ಇಪ್ಪತ್ತು ನಾಯಿಗಳಿಗೆ ಸರ್ವಿಸ್ ಕೊಡುತ್ತಾಳೆ” ಎಂದಳು ಜೇನಿ.

“ಅಂದರೆ ಆಕೆಯ ದಿನದ ಗಳಿಕೆ 375ರಿಂದ 500 ಡಾಲರ್‌ಗಳೆ?” ಎಂದೆ ಆಶ್ಚರ್ಯಚಕಿತನಾಗಿ.

“May be” ಅವರ ಉತ್ತರ. ಅಮೆರಿಕೆಯ ಜೀವನಮಟ್ಟಕ್ಕೂ ಉನ್ನತಮಟ್ಟದ ಗಳಿಕೆ ಅದು.

“ಆ ಸೇವಕಿಯ ಕೆಲಸದ ಅರ್ಹತೆಗಳೇನು” ಎಂದೆ.

“ಏನಿಲ್ಲ, ಪರಿಚಯದವರು ರೆಕಮಂಡ್ ಮಾಡಿದ್ದಾರೆ” ಎಂದರು.

“ಹೇರ್ ಕಟಿಂಗ್ ಮಾಡಲು ಸಹ ಅರ್ಹತೆ ನೋಡುವ ನೀವು, ಇದಕ್ಕೂ ಅರ್ಹತೆ ಗೊತ್ತುಪಡಿಸಿರಬೇಕಲ್ಲ, ಅಥವಾ ಸ್ಥಳೀಯ ಆಡಳಿತದಿಂದ ನಿರ್ಬಂಧ ಏನಾದರೂ ಇರಬೇಕಲ್ಲವೆ?” ನನ್ನ ಪ್ರಶ್ನೆ.

“ಅಂತಹದೇನಿಲ್ಲ” ಎಂದರು ಜೇನಿ. ಅಮೇರಿಕಯಲ್ಲಿ ನಾಯಿ ಕಕ್ಕ ಮಾಡಿಸಿ ಕೋಟಿ ಕೋಟಿ ಸಂಪಾದಿಸಬಹುದು! ಬಡ ದೇಶದಲ್ಲಿ ಮನುಷ್ಯರಾಗಿ ಹುಟ್ಟಿ ನಾಯಿಗಿಂತ ಕೀಳಾದ ಜೀವನ ಮಾಡುವ ಬದಲು ಅಮೆರಿಕೆಯಲ್ಲಿ ನಾಯಿಯಾಗಿ ಹುಟ್ಟುವದು ಶ್ರೇಷ್ಠ ಎಂದಿದ್ದ ಇಲ್ಲಿಯ ಒಬ್ಬ ಎನ್‌ಆರ್‌ಐ.

ಇನ್ನೊಂದು ಕುಟುಂಬ ಬಂದಿತ್ತು. ಅದೇ ಕೆಲಸದ ಸಲುವಾಗಿಯೇ, ಅಂದರೆ ನಾಯಿಗಳಿಗೆ ಮೂತ್ರ ಮಾಡಿಸಲು. ಅವರಿಬ್ಬರು ಅಜಾನುಬಾಹರು. ಇಪ್ಪತ್ತೆಂಟರಿಂದ ಮೂವತ್ತು ವರ್ಷದ ಆಸುಪಾಸಿನಲ್ಲಿದ್ದರು. ಅವರು ಸುಂದರವಾದ ಚಿಕ್ಕ ಚಿಕ್ಕ ನಾಯಿಗಳನ್ನು ಹೊತ್ತು ತಂದಿದ್ದರು. ಅವಳು ಹಿಡಿದಿದ್ದು ಪಮೇರಿಯನ್ (Pumerian) ಬ್ರೀಡ್. ಅದನ್ನು ಮಫಿ (Muffy) ಎಂದು ಕರೆಯುತ್ತಿದ್ದರು. ಮಫಿಯನ್ನು 300 ಡಾಲರ ಕೊಟ್ಟು ಖರೀದಿಸಿದ್ದಳಾಕೆ. ದಿನವೊಂದಕ್ಕೆ 15-20 ಡಾಲರ್ ಅದರ ಆಹಾರಕ್ಕಾಗಿ ವ್ಯಯಿಸಿದರೆ, ವ್ಯಾಕ್ಸಿನ್ ಕೊಡಿಸಲು 800 ಡಾಲರ್! ಅವಳೊಂದಿಗಿದ್ದ ಅವಳ ಸ್ನೇಹಿತ ಹೊತ್ತು ತಂದಿದ್ದುದು ರೇಷ್ಮೆಯ ಕೂದಲುಳ್ಳ ಯಾರ್ಕಿಯನ್ನು (yorkie). ಯಾರ್ಕಿಯ ಮೂಲ ನ್ಯೂಜಿಲ್ಯಾಂಡ್ ಅಂತೆ. ಕಿವಿ (Kivi) ಬ್ರೀಡ್. ಬಹಳ ಸುಂದರವಾಗಿತ್ತು ಬೆಕ್ಕಿನ ಗಾತ್ರದ ಈ ನಾಯಿ.

ಮಫಿ

ಇನ್ನೊಬ್ಬನಿದ್ದ, ಕಂದು ಬಣ್ಣದವನು. ಎರಡು ಎರಡೂವರೆ ಅಡಿ ಎತ್ತರ ಇರಬಹುದು. ಮ್ಯಾಕ್ಸ್ ಅವನ ಹೆಸರು. ಅವನನ್ನು ಕರೆತಂದಿದ್ದವಳು ಮಧ್ಯ ವಯಸ್ಸಿನ ಹೆಣ್ಣು. ನಮ್ಮ ಐರಿಷ್ ಕಂಡರೆ ತುಂಬ ಇಷ್ಟವಂತೆ ಅವಳಿಗೆ. ಹೋಗುತ್ತಿರುವನನ್ನು ತಡೆಹಿಡಿದು ಮಾತಿಗೆ ಎಳೆದಳು. ನನಗೂ ಅವಳ ಮ್ಯಾಕ್ಸ್‌ನ ಚಿತ್ರ ಬೇಕಾಗಿತ್ತು. ಸಮ್ಮತಿಸಿದಳು. ಆದರೆ, ತನ್ನ ಸುಂದರ ಕಣ್ಣಾಲಿಗಳನ್ನು ತುಂಬಿಕೊಂಡು ಆಗ ಹೇಳಿದಳು.

“ಮ್ಯಾಕ್ಸ್ ಬಹಳ ದಿನ ಬದುಕಲಾರ”.

“ಯಾಕೆ? ಏನಾಯಿತು?”

“ಅವನಿಗೆ ಕ್ಯಾನ್ಸರ್ ಆಗಿದೆ. ದಿನದಿಂದ ದಿನಕ್ಕೆ ತೂಕ ಕಳೆದುಕೊಳ್ಳುತ್ತಿದ್ದಾನೆ. ತಿಂಗಳ ಹಿಂದೆ 55 lbs ತೂಗುತ್ತಿದ್ದವನು ನಿನ್ನೆ 45 lbs ತೂಗಿದ” ಎಂದಳು ಭಾವುಕಳಾಗಿ. ಸಾಮಾನ್ಯವಾಗಿ ಭಾವನೆಗಳನ್ನು ಪ್ರದರ್ಶಿಸದ ದೇಶದಲ್ಲಿ ಅಪರಿಚಿತನೆದರು ಕಣ್ಣೀರು. ಹೇಗೆ ಸಂತೈಸಲಿ ತಿಳಿಯಲಿಲ್ಲ.

“ಚಿಂತಿಸಬೇಡಿ ದೇವರಿದ್ದಾನೆ” ಎಂದೆ. “ಯಾವ ಹಂತದಲ್ಲಿದೆಯಂತೆ ಕ್ಯಾನ್ಸರ್” ಮರುಪ್ರಶ್ನಿಸಿದೆ.

“ನಾಳೆ ಬಯಾಪ್ಸಿ ಮಾಡುತ್ತಾರೆ, ಆಗ ತಿಳಿಯಲಿದೆ” ಮತ್ತೆ ಕಣ್ಣೀರು.

ಮ್ಯಾಕ್ಸ್

ಮನೆಗೆ ಬಂದು ಮಗನಿಗೆ ಪೋಟೋ ತೋರಿಸಿ ವರದಿ ಒಪ್ಪಿಸಿದೆ. “ಓ” ಎಂದು ಉದ್ಗಾರತಗೆದು ಚಿಂತಿತನಾದ ಮಗ. “ಮ್ಯಾಕ್ಸ್‌ನನ್ನು ನೋಡಿರುವೆ. ಹಿರಿಯ ನಾಗರಿಕನ ನಾಯಿ ಅದು. ಅದು ಸತ್ತರೆ ಅವನಿಗೆ ಬೇರಾರಿಲ್ಲ. ಅವನು ಬದುಕಲಾರ” ಎಂದ. ನಾಯಿಯ ಹೆಸರಿನಿಂದ ಅದರ ಮಾಲಿಕನನ್ನು ಗುರುತಿಸಿದ ನನ್ನ ಮಗ. ಆಗ ಹೇಳಿದೆ “ನಾಯಿಗೆ ಮೂತ್ರ ಮಾಡಿಸಲು ಕರೆತಂದಿದ್ದ ಹೆಂಗಸು ಅವನ ಸಂಬಂಧಿ ಇರಬಹುದೆಂದೆ”.

“ಇರಲಿಕ್ಕಿಲ್ಲ” ಅವನು ವಾದ ಮುಂದುವರೆಸಿದ್ದ…

ಜಿ ಬಿ ಪಾಟೀಲ

ಜಿ ಬಿ ಪಾಟೀಲ
ಬಸವನ ಬಾಗೇವಾಡಿಯ ಜಿ.ಬಿ.ಪಾಟೀಲ್ ಅವರು ಬೆಂಗಳೂರಿನಲ್ಲಿ ಯಶಸ್ವಿ ಉದ್ಯಮಿಯಾಗಿದ್ದೂ, ಸಾಮಾಜಿಕ ಹಾಗೂ ರಾಜಕೀಯ ಸಂಗತಿಗಳಲ್ಲಿ ನಿರಂತರ ಆಸಕ್ತಿ ಹೊಂದಿದ್ದವರು. ಸದ್ಯ ಜಾಗತಿಕ ಲಿಂಗಾಯಿತ ಮಹಾಸಭಾದ ಪ್ರಧಾನ ಕಾರ್ಯದರ್ಶಿಯಾಗಿ ಸಕ್ರಿಯರಾಗಿದ್ದಾರೆ.


ಇದನ್ನೂ ಓದಿ: ‘ನಮ್ಮ ಉಳಿವಿಗಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿ!’-ಉದ್ದವ್‌ ಠಾಕ್ರೆಗೆ ಶಿವಸೇನೆ ಶಾಸಕನ ಪತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...