Homeಮುಖಪುಟ‘ಗಾರ್ಗಿ’ ವಿಮರ್ಶೆ: ಪುರುಷಾಧಿಪತ್ಯದ ತಣ್ಣನೆಯ ಕ್ರೌರ್ಯ ಅನಾವರಣ

‘ಗಾರ್ಗಿ’ ವಿಮರ್ಶೆ: ಪುರುಷಾಧಿಪತ್ಯದ ತಣ್ಣನೆಯ ಕ್ರೌರ್ಯ ಅನಾವರಣ

- Advertisement -
- Advertisement -

ಲೇಡಿ ಸೂಪರ್‌ ಸ್ಟಾರ್‌ ಎಂದೇ ಖ್ಯಾತರಾದ, ಬಹುಭಾಷಾ ನಟಿ ಸಾಯಿ ಪಲ್ಲವಿ ಇತ್ತೀಚಿನ ದಿನಗಳಲ್ಲಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ‘ಗಾರ್ಗಿ’ ಸಿನಿಮಾ ಅದರ ಮುಂದುವರಿದ ಭಾಗವಾಗಿ ದಾಖಲಾಗಿದೆ.

ತೆಲುಗು, ತಮಿಳು ಹಾಗೂ ಕನ್ನಡ ಭಾಷೆಯಲ್ಲಿ ತೆರೆಕಂಡಿರುವ ‘ಗಾರ್ಗಿ’, ಹೆಣ್ಣಿನ ಮೇಲಾಗುತ್ತಿರುವ ಅನಾದಿಕಾಲದ ಕಿರುಕುಳದ ಕುರಿತು ಮಾತನಾಡುತ್ತದೆ. ‘ಎಲ್ಲಿ ಮಹಿಳೆಯರನ್ನು ಪೂಜಿಸುತ್ತಾರೋ, ಅಲ್ಲಿ ದೇವತೆಗಳು ನಲೆಸಿರುತ್ತಾರೆ’ ಎಂಬುದೆಲ್ಲ ಬಾಯಿ ಮಾತಿನ ಗೌರವ. ಆದರೆ ಹೆಣ್ಣನ್ನು ಭೋಗದ ವಸ್ತು ಎಂದು ನೋಡುವ ಪುರುಷಪ್ರಧಾನ ಮನಸ್ಥಿತಿಯೇ ವಾಸ್ತವ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ಬೇಟಿ ಪಡಾವೋ, ಬೇಟಿ ಬಜಾವೋ’ ಎಂದು ಸರ್ಕಾರವೂ ಹೇಳುತ್ತದೆ. ಹೆಣ್ಣಿನ ರಕ್ಷಣೆಯ ಮೇಲೆ ಮಾಡುವ ಉದ್ದುದ್ದದ ಭಾಷಣಗಳಿಗೆ ಕೊನೆಯೂ ಇಲ್ಲ. ಆದರೆ ಸಮಾಜ ತನ್ನ ಆಂತರ್ಯದಲ್ಲಿ ಇಟ್ಟುಕೊಂಡಿರುವ ಪುರುಷಾಧಿಪತ್ಯದ ತಣ್ಣನೆಯ ಕ್ರೌರ್ಯ, ಯಾವಾಗ, ಯಾವ ರೀತಿಯಲ್ಲಿ ಅನಾವರಣವಾಗುತ್ತದೆ ಎಂದು ಹೇಳಲಾಗದು. ನಿರ್ದೇಶಕ ಗೌತಮ್‌ ರಾಮಚಂದ್ರನ್‌ ಈ ಕಹಿ ಸತ್ಯವನ್ನು ಇಲ್ಲಿ ಚರ್ಚಿಸಿದ್ದಾರೆ.

“ಹೆಣ್ಣಿನ ಜಗತ್ತಿನಲ್ಲೇ ಹೆಣ್ಣೇ ಹೆಣ್ಣಿಗೆ ಅಂತಿಮ ಆಸರೆ. ವಿಕೃತ ಜಗತ್ತನ್ನು ಎದುರಿಸಬೇಕಾದರೆ ಹೆಣ್ಣೊಬ್ಬಳು ಇನ್ನೊಬ್ಬ ಹೆಣ್ಣಿನ ಕೈ ಹಿಡಿದು ಸಂಘಟಿತವಾಗಿ ನಡೆಯಬೇಕು. ತನ್ನ ಮೇಲಾಗುವ ದೌರ್ಜನ್ಯವನ್ನು ಯಾವುದೇ ಮರ್ಜಿಗೆ ಒಳಗಾಗದೆ ಮಣಿಸಬೇಕು” ಎಂಬ ಸಂದೇಶವನ್ನು ‘ಗಾರ್ಗಿ’ ಸಿನಿಮಾ ನೀಡುತ್ತದೆ.

ಬಾಲಕಿಯೊಬ್ಬಳ ಮೇಲೆ ನಡೆಯುವ ಗ್ಯಾಗ್ ರೇಪ್‌ವೊಂದರ ಸುತ್ತಲಿನ ಕಥಾ ಹಂದರವನ್ನು ಒಳಗೊಂಡಿರುವ ‘ಗಾರ್ಗಿ’- ಕೋರ್ಟ್ ರೂಮ್‌ ಡ್ರಾಮಾ ಕೂಡ ಹೌದು. ‘ಪೊಲೀಸರು ಬಂಧಿಸಿರುವವರೆಲ್ಲರೂ ತಪ್ಪಿತಸ್ಥರಾ?’ ಎಂಬ ಪ್ರಶ್ನೆಯ ಮೇಲೆ ಸಾಗುವ ಸಿನಿಮಾ ಅಂತಿಮವಾಗಿ ನೀಡುವ ಸಂದೇಶವೂ ಮೌಲಿಕವಾಗಿದೆ. ಹಿತಮಿತವಾದ ಸಿನಿಮ್ಯಾಟಿಕ್‌ ನಿರೂಪಣೆಯಲ್ಲಿ ಸಾಗುವ ಕೆಳ ಮಧ್ಯಮ ವರ್ಗವೊಂದರ ಕಥೆಯನ್ನೊಳಗೊಂಡ ‘ಗಾರ್ಗಿ’ ವಾಸ್ತವಗಳಿಗೆ ಹತ್ತಿರವಾಗಿ ಚಿತ್ರಿತವಾಗಿದೆ.

‘ಗಾರ್ಗಿ’ ಎಂಬ ಹೆಸರಿಗೆ ವಿಶೇಷ ಅರ್ಥವೂ ಇದೆ. ಆಕೆ, ವೇದ ಕಾಲದಲ್ಲಿ ದಾಖಲಾಗಿರುವ ಮಹಿಳಾ ವಿದ್ವಾಂಸೆಯೂ ಹೌದು. ಆರಂಭಿಕ ಮಹಿಳಾವಾದಿಗಳ ಸಾಲಿನಲ್ಲೂ ಆಕೆಯನ್ನು ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ ‘ಗಾರ್ಗಿ’ ಎಂಬ ಹೆಸರಿಗೆ ವಿಶೇಷವಾದ ಅರ್ಥವಂತಿಕೆ ಪ್ರಾಪ್ತವಾಗಿದೆ.

“ಹೆಣ್ಣೆಂದರೆ ಅಬಲೆ, ಆಕೆಯ ಹಣೆಯ ಬರವೇ ಇಷ್ಟು, ಅವಳಿಂದ ಏನೂ ಆಗದು” ಎಂಬ ಸಿದ್ಧಮಾದರಿ ಚೌಕಟ್ಟುಗಳನ್ನು ಶಿಕ್ಷಕಿ ಗಾರ್ಗಿ ಪ್ರಶ್ನಿಸುತ್ತಾಳೆ. “ನೀನು ಹಣೆಬರ, ಕಾಲ, ವಿಧಿ ಎಲ್ಲವನ್ನೂ ನಂಬು. ನನ್ನನ್ನು ಮಾತ್ರ ನಂಬಬೇಡ. ಯಾಕಂದ್ರೆ ನಾನು ಗಂಡು ಹುಡುಗ ಅಲ್ಲ, ಹೆಣ್ಣು ತಾನೇ?” ಎಂದು ತನ್ನ ತಾಯಿಗೆ ಗಾರ್ಗಿ ಬೇಸರದಿಂದ ಕೇಳುತ್ತಾಳೆ. ಸತ್ಯಕ್ಕಾಗಿ ಹೋರಾಡುತ್ತಾಳೆ. ಸತ್ಯ ತಿಳಿದ ಮೇಲೆ ದಿಟ್ಟ ನಿಲುವನ್ನು ತಾಳುತ್ತಾಳೆ.

ಇಲ್ಲಿ ಟ್ರಾನ್ಸ್‌ಜೆಂಡರ್‌ ಮಹಿಳೆಯೊಬ್ಬರು ನ್ಯಾಯಾಧೀಶೆಯಾಗಿದ್ದಾರೆ. ಸಂತ್ರಸ್ತೆಯ ಪರವಾಗಿ ವಾದ ಮಂಡಿಸುತ್ತಿರುವ ವಕೀಲನ ಒರಟು ಮಾತುಗಳಿಗೆ ನ್ಯಾಯಾಧೀಶೆ ತೀಕ್ಷ್ಣವಾಗಿ ಉತ್ತರಿಸುತ್ತಾರೆ. ಅಂತಿಮವಾಗಿ ಸತ್ಯದ ಅನಾವರಣವಷ್ಟೇ ಮುಖ್ಯವಾಗಬೇಕು ಎಂಬುದನ್ನು ಟ್ರಾನ್ಸ್‌ಜೆಂಡರ್‌ ನ್ಯಾಯಾಧೀಶೆ ಮನವರಿಕೆ ಮಾಡಿಕೊಡುತ್ತಾರೆ.

ಒಂದು ಸಣ್ಣ ಎಳೆಯ ಕಥೆಯಾದರೂ ತೀರಾ ಮೈನವಿರೇಳಿಸುವ ರೋಚಕತೆಯನ್ನೇನೂ ಗಾರ್ಗಿ ಒಳಗೊಂಡಿಲ್ಲ. ಅಗತ್ಯಕ್ಕೂ ಮೀರಿ ರೋಚಕತೆಯನ್ನು ಸೇರಿಸಲು ನಿರ್ದೇಶಕರು ಪ್ರಯತ್ನಿಸಿಲ್ಲ. ಬಂಧನಕ್ಕೊಳಗಾದ ತಂದೆಯನ್ನು ಹೊರಗೆ ತರಲು ಒಬ್ಬೊಂಟಿಯಾಗಿ ಹೋರಾಡುವ, ಸತ್ಯದ ಹುಡುಕಾಟಕ್ಕಾಗಿ ಪರಿತಪಿಸುತ್ತಿರುವ ಹೆಣ್ಣು ಮಗಳೊಬ್ಬಳ ತೊಳಲಾಟಗಳನ್ನು ಗಾರ್ಗಿ ಕಟ್ಟಿಕೊಡುತ್ತದೆ. ಎಲ್ಲವನ್ನೂ ಸಮರ್ಥವಾಗಿ ಎದುರಿಸುವ ಆಕೆಯ ಮನೋಬಲ ಚಿತ್ರಕತೆಯಲ್ಲಿ ನಿರೂಪಣೆಗೊಂಡಿದೆ.

ಸೂಕ್ಷ್ಮ ಸಂಗತಿಯೊಂದರ ಸುತ್ತ ಮಾಧ್ಯಮಗಳು ತೋರುವ ಧಾವಂತವನ್ನು ಇಲ್ಲಿಯೂ ನಿಕಶಕ್ಕೊಡ್ಡಿದ್ದರೂ, ಅಂತಿಮ ಜಿಜ್ಞಾಸೆಯಾಗಿ ಅದು ಉಳಿದಿಲ್ಲ. ಮಾಧ್ಯಮಗಳು ತೋರುವುದೆಲ್ಲ ಸತ್ಯವಲ್ಲದಿದ್ದರೂ ಅವುಗಳು ತೋರಿಸುವ ಕೆಲವು ಸಂಗತಿಗಳು ಸತ್ಯವೂ ಆಗಿರಬಹುದು ಎನಿಸುತ್ತದೆ.

ಇದನ್ನೂ ಓದಿರಿ: ‘ಮಾರಿ ಸೆಲ್ವರಾಜ್‌‌’ ಸಿನಿಮಾಗಳಲ್ಲಿನ ರೂಪಕಗಳ ಸುತ್ತ…

ಸಾಯಿ ಪಲ್ಲವಿ ಮತ್ತೊಮ್ಮೆ ತಮ್ಮ ಅಭಿಮಾನಿಗಳಿಗೆ ಇಷ್ಟವಾಗುವುದು ಖಚಿತ. ಕನ್ನಡ ವರ್ಷನ್‌ನಲ್ಲಿ ಸಾಯಿ ಪಲ್ಲವಿಯವರೇ ಡಬ್‌ ಮಾಡಿರುವುದು ಇಲ್ಲಿನ ಅಭಿಮಾನಿಗಳಿಗೆ ಮುದ ನೀಡುತ್ತದೆ. ಅತ್ಯಾಚಾರಿ ಆರೋಪಿಯಾಗಿ ಅಭಿನಯಿಸಿರುವ ಆರ್‌.ಎಸ್‌.ಶಿವಾಜಿ, ತಣ್ಣನೆಯ ಕ್ರೌರ್ಯವನ್ನು ಪರಿಚಯಿಸುತ್ತಾರೆ. ವಕೀಲನಾಗಿ ಕಾಳಿ ವೆಂಕಟ್‌, ಪತ್ರಕರ್ತೆಯಾಗಿ ಐಶ್ವರ್ಯ ಲಕ್ಷ್ಮಿ, ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ತಂದೆಯ ಪಾತ್ರದಲ್ಲಿ ಸರವಣ್‌ ಅಭಿನಯಿಸಿದ್ದಾರೆ.

ಹಿನ್ನೆಲೆ ಸಂಗೀತ ಮತ್ತಷ್ಟು ತೀವ್ರವಾಗಿಸಬಹುದಿತ್ತು ಎನಿಸುತ್ತದೆ. ಸಿನಿಮಾದಲ್ಲಿ ಬಳಸಿರುವ ಬಿಟ್ ಸಾಂಗ್‌ಗಳು ಅಷ್ಟಾಗಿ ನೆನಪಿನಲ್ಲಿ ಉಳಿಯುವುದಿಲ್ಲ. ‘ಗಾರ್ಗಿ’ಯ ಪ್ರಿಯಕರನ ಪಾತ್ರ- ಹಾಗೆ ಬಂದು ಹೀಗೆ ಹೋದಂತೆ ಭಾಸವಾಗುತ್ತದೆ. ಕಾನೂನು ಸೇವೆಗಳ ಪ್ರಾಧಿಕಾರದಂತಹ ವ್ಯವಸ್ಥೆಯನ್ನು ಅತ್ಯಂತ ಬಾಲಿಷವಾಗಿ ತೋರಿಸಿದ್ದಾರೆನಿಸುತ್ತದೆ. ಇಂತಹ ದೃಶ್ಯಗಳಿಂದಾಗಿ ನ್ಯಾಯಾಂಗದ ನೆರವಿನ ಕುರಿತು ಜನರಲ್ಲಿ ಕೆಟ್ಟ ಅಭಿಪ್ರಾಯವೂ ಮೂಡಿಬಿಡಬಹುದು. ಇಂತಹ ಕೆಲವು ಕೊರತೆ ಬಿಟ್ಟರೆ ‘ಗಾರ್ಗಿ’, ಚರ್ಚೆಗೊಳಪಡಬೇಕಾದ ಸಿನಿಮಾ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...