Homeಮುಖಪುಟ‘ಮಾರಿ ಸೆಲ್ವರಾಜ್‌‌’ ಸಿನಿಮಾಗಳಲ್ಲಿನ ರೂಪಕಗಳ ಸುತ್ತ...

‘ಮಾರಿ ಸೆಲ್ವರಾಜ್‌‌’ ಸಿನಿಮಾಗಳಲ್ಲಿನ ರೂಪಕಗಳ ಸುತ್ತ…

- Advertisement -
- Advertisement -

ಇತ್ತೀಚೆಗೆ ಬಿಡುಗಡೆಯಾದ ಕನ್ನಡದ ‘ಚಾರ್ಲಿ’ ಸಿನಿಮಾಕ್ಕೆ ಭಾರೀ ಜನಸ್ಪಂದನೆ ಮೂಡಿ ಬಂತು. ‘ಚಾರ್ಲಿ’ ಎಂಬ ನಾಯಿಯ ಸುತ್ತ ಹೆಣೆದ ಈ ಸಿನಿಮಾವನ್ನು ನೋಡಿ ಅನೇಕರು ಭಾವುಕರಾದರು. ಇದನ್ನೆಲ್ಲ ನೋಡುತ್ತಿದ್ದಾಗ, ‘ಚಾರ್ಲಿ’ ಎಂಬ ನಾಯಿ ಮಾರಾಟದ ಸರಕಾಗಿದೆ ಎನಿಸುತ್ತಿತ್ತು. ‘ಚಾರ್ಲಿ’ ಎಂಬ ನಾಯಿಯ ಕಥೆಗೆ ಜನ ನೀಡುತ್ತಿದ್ದ ವಿಪರೀತ ಸ್ಪಂದನೆಯ ನಡುವೆ- ‘ಕರುಪ್ಪಿ’ ಎಂಬ ನಾಯಿ ತೀವ್ರವಾಗಿ ಕಾಡತೊಡಗಿತ್ತು.

ಯಾವುದು ಉತ್ತಮ ಕಲಾಕೃತಿ? ಅದರ ಲಕ್ಷಣಗಳೇನು? ಎಂಬ ಪ್ರಶ್ನೆಗಳು ಇಂದು ಮೊನ್ನೆಯದ್ದಲ್ಲ. ಪ್ರತಿಯೊಂದು ಕಲಾ ಮಾಧ್ಯಮವು ತನ್ನದೇ ಆದ ಪರಿಭಾಷೆಗಳನ್ನು, ಕಲಾಭಿವ್ಯಕ್ತಿಯ ದಾರಿಗಳನ್ನು ಹೊಂದಿದ್ದರೂ ಕಲಾ ಮೀಮಾಂಸೆಯ ಒಟ್ಟು ಉದ್ದೇಶ- ರಸಾನುಭವ, ಅನುಭೂತಿ. ನಮ್ಮನ್ನು ಇನ್ನಿಲ್ಲದಂತೆ ಕಾಡುವ, ಪದಗಳಲ್ಲಿ ವಿವರಿಸಲಾಗದ ಅವ್ಯಕ್ತ ಭಾವನೆಗಳನ್ನು ಸೃಷ್ಟಿಸುವ ಮಾಧ್ಯಮಗಳನ್ನು- ಉತ್ತಮ ಕಲಾಕೃತಿ ಎನ್ನಬಹುದೇನೋ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ತಮಿಳಿನ ಮಾರಿ ಸೆಲ್ವರಾಜ್ ಸಿನಿಮಾಗಳ ಕುರಿತು ಧ್ಯಾನಿಸುತ್ತಾ ಹೋದಂತೆ ಕಲಾ ಮೀಮಾಂಸೆಯ ಪರಿಭಾಷೆಗಳನ್ನೂ ಪಕ್ಕದಲ್ಲಿಟ್ಟು ನೋಡುವುದು ಅನಿವಾರ್ಯವಾಗುತ್ತದೆ. ಸೆಲ್ವರಾಜ್‌ ದೃಶ್ಯ ಕಲಾ ಮಾಧ್ಯಮದಲ್ಲಿ ಕ್ರಿಯಾಶೀಲವಾಗಿರುವ ಸೃಜನಶೀಲ ವ್ಯಕ್ತಿ. ಅವರ ಸಿನಿಮಾಗಳು ಮೂರರಲ್ಲಿ ಮತ್ತೊಂದಾಗದೆ ವಿಶಿಷ್ಟ ಸಾಂಸ್ಕೃತಿಕ ಅಭಿವ್ಯಕ್ತಿಯಾಗಿಯೂ, ವಿನೂತನ ಪ್ರತಿರೋಧದ ಹೆಜ್ಜೆಗಳಾಗಿಯೂ ದಾಖಲಾಗುತ್ತಿವೆ.

ನಿರ್ದೇಶಕ ಮಾರಿ ಸೆಲ್ವರಾಜ್‌

ಸಾಹಿತಿ ದೇವನೂರ ಮಹಾದೇವ ಅವರ ಮಾತಿಗಳಿಗೆ ಹೆಚ್ಚು ತೂಕ ಏಕೆ? ಎಂದು ಪ್ರಶ್ನಿಸಿಕೊಂಡರೆ, ಅವರು ಯಾವುದಾದರೂ ವಿದ್ಯಮಾನಕ್ಕೆ ಪ್ರತಿಕ್ರಿಯೆ ನೀಡುವಾಗ ಬಳಸುವ ರೂಪಕತೆಗಳೇ ಇದಕ್ಕೆ ಕಾರಣವೆಂದು  ಹೇಳಿಬಿಡಬಹುದು. ಯಾರಿಗೂ ಹೊಳೆಯದ ರೂಪಕಗಳು ದೇವನೂರರಲ್ಲಿ ಮೂಡುತ್ತವೆ. ಅವರ ಪ್ರತಿಕ್ರಿಯೆಗಳು ಸಾಂಸ್ಕೃತಿಕ ಇತಿಹಾಸಕ್ಕೆ ತಳುಕುಹಾಕಿಕೊಂಡು ಸೃಜನಶೀಲವಾಗಿರುತ್ತವೆ. ಮಾರಿ ಸೆಲ್ವರಾಜ್‌ ಅವರ ಕಲಾಕೃತಿಗಳಿಗೂ ಇದೇ ಮಾತು ಅನ್ವಯಿಸಬಹುದೇನೋ.

ಮಾರಿ ಸೆಲ್ವರಾಜ್ ನಿರ್ದೇಶಿಸಿರುವ ‘ಪರಿಯೇರುಮ್ ಪೆರುಮಾಳ್‌- ಬಿ.ಎ. ಬಿ.ಎಲ್‌’, ‘ಕರ್ಣನ್‌’ ಸಿನಿಮಾಗಳಲ್ಲಿ ಬಳಕೆಯಾಗಿರುವ ರೂಪಕಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಹೋದರೆ ಮಾತುಗಳಲ್ಲಿ ವಿವರಿಸಲಾಗದ ಅನುಭೂತಿ ನಮ್ಮದಾಗುತ್ತದೆ. ‘ಪರಿಯೇರುಮ್‌ ಪರುಮಾಳ್‌’ (ಕುದುರೆಯೇರಿ ಬರುವ ಪೆರುಮಾಳ್‌) ಎಂಬುದೇ ಒಂದು ರೀತಿಯ ರೂಪಕ. ‘ಕರ್ಣನ್‌’- ಸಿನಿಮಾವಂತೂ ಹೆಸರು ಮತ್ತು ಅದಕ್ಕಂಟಿದ ಜಾತಿ ಐಡೆಂಟಿಗಳ ಕುರಿತು ಢಾಳಾಗಿ ಚರ್ಚಿಸುತ್ತದೆ.

‘ಪರಿಯೇರುಮ್‌ ಪೆರುಮಾಳ್‌’ ರೂಪಕಗಳು

ಸೆಲ್ವರಾಜ್‌ ಅವರ ಸಿನಿಮಾಗಳಲ್ಲಿ ಹಲವು ರೂಪಕಗಳು ಅಲ್ಲಲ್ಲಿ ಬಳಕೆಯಾದರೂ ಪ್ರಧಾನ ರೂಪಕವೊಂದು ಇಡೀ ಸಿನಿಮಾದುದ್ದಕ್ಕೂ ಹರಿಯುವುದನ್ನು ಕಾಣಬಹುದು. ಪರಿಯೇರುಮ್‌ ಪೆರುಮಾಳ್‌ನಲ್ಲಿ ‘ಕರುಪ್ಪಿ’ (ಕಪ್ಪು ನಾಯಿ) ಪ್ರಧಾನ ರೂಪಕವಾಗಿದೆ. ಕಾರಣವಿಲ್ಲದೆ ಕೊಲೆಯಾಗುವ ಮುಗ್ಧ ಜನರ ಪ್ರತಿನಿಧಿಯಾಗಿ ‘ಕರುಪ್ಪಿ’ ನಿಲ್ಲುತ್ತದೆ. ಇಲ್ಲಿ ಕೊಲೆಯಾಗಿದ್ದು ‘ಕರುಪ್ಪಿ’ಯೋ ‘ಕಥಾನಾಯಕ’ನೋ ಎಂಬ ದುಗುಡವನ್ನು ಕಥೆಯ ಆರಂಭದಲ್ಲೇ ನಿರ್ದೇಶಕ ಬಿಟ್ಟು ಹೊರಡುತ್ತಾರೆ.

ಜಾತಿ ಕಾರಣಕ್ಕೆ ದೌರ್ಜನ್ಯಕ್ಕೊಳಗಾಗುವ, ಆದರೆ ತನ್ನ ಗೆಳತಿಗೆ ಈ ಕಾರಣವನ್ನು ಕೊನೆಯವರೆಗೂ ಹೇಳದೇ ಇರುವ ‘ಕಥಾನಾಯಕ’ ಯಾರಿಗೂ ಕೇಡು ಬಯಸದ ಮುಗ್ಧ ಜೀವಿ. ಗೆಳತಿ ಮುನಿಸಿಕೊಂಡು ಕ್ಲಾಸ್‌ ರೂಮ್‌ನಿಂದ ಹೊರ ನಡೆದಾಗ, ಅನಾಥನಂತೆ ಕುಳಿತ ಪೆರುಮಾಳ್‌ ಹತ್ತಿರ ಧಾವಿಸುತ್ತಾ ಬರುವ ‘ಕರುಪ್ಪಿ’ ಒಂದು ಅಮೂರ್ತ ಕಲ್ಪನೆ. ‘ನಾಯಾರ್‌’ ಹಾಡಿನಲ್ಲಿ ತೋರಿಸಲಾಗುವ ಕ್ರಿಮಿ, ಕೀಟ, ಗಾಯಗೊಂಡ ನಾಯಿ, ಹಾವು, ಚೇಳು- ಇವೆಲ್ಲವೂ ಕಥಾ ನಾಯಕನ ತಬ್ಬಲಿತನವನ್ನು ತೀವ್ರವಾಗಿ ತೋರಿಸುವ ರೂಪಕಗಳು.

ಜಾತಿಯ ಕಾರಣಕ್ಕೆ ಮಾರ್ಯಾದೆ ಹತ್ಯೆಗಳನ್ನು ಮಾಡುತ್ತ ಬರುತ್ತಿರುವ ಮುದುಕ, ಕೊನೆಗೆ ಪೆರುಮಾಳ್‌ನನ್ನು ಕೂಡ ಹೊಡೆದು ರೈಲಿನ ಕಂಬಿಯ ಮೇಲೆ ಮಲಗಿಸಿರುತ್ತಾನೆ. ಸಾವಿನ ದವಡೆಯಲ್ಲಿ ಮಲಗಿರುವ ಆತನತ್ತ ಓಡೋಡಿ ಬರುವ ನೀಲಿ ಬಣ್ಣದ ನಾಯಿ- ತೀವ್ರವಾಗಿ ಕಾಡುತ್ತದೆ. ಸಿನಿಮಾದ ಆರಂಭದಲ್ಲಿ ಕರುಪ್ಪಿಯನ್ನು ರೈಲಿನ ಅಳಿಗೆ ಕಟ್ಟಿ ಕೊಲ್ಲಲಾಗಿರುತ್ತದೆ. ಕರುಪ್ಪಿಯಂತೆಯೇ ಪೆರುಮಾಳ್‌ನನ್ನು ಕೊಲ್ಲಲು ಯತ್ನಿಸುವ ದೃಶ್ಯ ಹಾಗೂ ಎಚ್ಚರದ ಸೂಚಕವಾಗಿ ಓಡೋಡಿ ಬರುವ ಕರುಪ್ಪಿ- ನಮ್ಮನ್ನು ಸದಾ ಕಾಡುವ ರೂಪಕಗಳು.

‘ಕರ್ಣನ್‌’ ರೂಪಕಗಳು

ತುಳುನಾಡಿನ ದಲಿತ ಆತ್ಮಕಥೆಗಳನ್ನು ‘ಪಾಡ್ದನಾಗಳು’ ಎಂದು ಕರೆಯಲಾಗಿದೆ. ಇಲ್ಲಿನ ಭೂತಗಳನ್ನು ದಲಿತ ಪೂರ್ವಜರು ಎಂದು ಗುರುತಿಸಲಾಗಿದೆ. ಇಂತಹದ್ದೇ ದೈವ ಕಲ್ಪನೆಯನ್ನು ‘ಕರ್ಣನ್‌’ ಸಿನಿಮಾದಲ್ಲಿ ತರಲಾಗಿದೆ. ಇಡೀ ಸಿನಿಮಾದುದ್ದಕ್ಕೂ ಚಲಿಸುವ ಪ್ರಧಾನ ರೂಪಕವಿದು. ನಡು ರಸ್ತೆಯಲ್ಲಿ ವಾಹನಗಳ ಮಧ್ಯೆ ಬಿದ್ದು ಹೊರಳಾಗಿ, ಯಾರ ಸಹಾಯವೂ ಸಿಗದೆ ಸಾವಿಗೀಡಾದ ಮಗು- ದೈವ ರೂಪ ಪಡೆಯುತ್ತದೆ. ದಲಿತರು ವಾಸವಿರುವ ಈ ಊರಿನ ಮುಂದೆ ಬಸ್‌ ನಿಲ್ಲಿಸದೆ ಇರುವುದು ಕ್ರಾಂತಿಯ ಮೂಲ. ಜಾತಿ ವಾದಿಗಳ ಅಸಹನೆ, ಕಿರುಕುಳ ಎಲ್ಲವನ್ನೂ ಪ್ರಶ್ನಿಸಿ, ಇಡೀ ವ್ಯವಸ್ಥೆಗೆ ಪ್ರತಿರೋಧ ತೋರುವಾಗಲೆಲ್ಲ- ಆ ದೈವದ ರೂಪ ತೆರೆಯ ಮೇಲೆ ಬಂದು ಖುಷಿಪಟ್ಟು ಹೋಗುತ್ತದೆ. ಬಸ್ಸನ್ನು ಛಿದ್ರ ಛಿದ್ರ ಮಾಡಿದಾಗ, ಇಡೀ ಊರೇ ಒಂದಾಗಿ ಹೋರಾಟಕ್ಕೆ ಸಜ್ಜಾದಾಗ, ಕಥಾ ನಾಯಕ ಕತ್ತಿ ಹಿಡಿದು ಕುದುರೆ ಏರಿ ಬರುವ ಮುನ್ನ… ಹೀಗೆ ಅನೇಕ ಸಂದರ್ಭಗಳಲ್ಲಿ ಈ ದೈವ ಪ್ರವೇಶಿಸುತ್ತದೆ.

ಬಸ್‌ ನಿಲ್ಲಿಸದ ರಸ್ತೆಯಲ್ಲಿ ಮೆರವಣಿಗೆ ಮಾಡುತ್ತ, ಆನೆ ಮೇಲೆ ಏರಿ ಬರುವ ಊರಿನ ಜನ, ಜನಜಂಗುಳಿಯನ್ನು ಹಾದಿಹೋಗಲಾರದೆ ನಿಂತಿರುವ ವಾಹನಗಳು, ತಲೆ ಇಲ್ಲದ ಬುದ್ಧನ ವಿಗ್ರಹ, ಬುದ್ಧನ ಶಿರದ ಮೇಲೆ ಉದಯಿಸಿದಂತೆ ಭಾಸವಾಗುವ ಸೂರ್ಯ, ಕಾಲಿಗೆ ಕಟ್ಟು ಬಿಗಿದ ಕತ್ತೆ ಕುಂಟುತ್ತಾ ನಡೆಯುವುದು, ದೇವರ ಕತ್ತಿ, ಕೋಳಿ ಮರಿಗಳನ್ನು ಕದ್ದು ಹೊತ್ತುಯ್ಯುವ ರಣಹದ್ದು, ಪ್ರತಿರೋಧದ ಸೂಚಕವಾಗಿ ಕತ್ತೆಯ ಕಾಲಿನ ಕಟ್ಟು ಬಿಚ್ಚುವುದು… ಹೀಗೆ ಅನೇಕ ರೂಪಕಗಳನ್ನು ಕರ್ಣನ್‌ನಲ್ಲಿ ಬಳಸಲಾಗಿದೆ.

ತಲೆಗೆ ಮುಂಡಾಸು ಕಟ್ಟಿ ಮಾತನಾಡಿದ ಕಾರಣಕ್ಕೆ ಕೋಪಾದ್ರಿಕ್ತನಾದ ಪೊಲೀಸ್‌ ಅಧಿಕಾರಿ, ವಯಸ್ಸಾದವರನ್ನು ಥಳಿಸುವುದು, ಪತಂಗವೊಂದು ಆ ಭೀಕರ ದೃಶ್ಯಗಳ ಸುತ್ತ ಹಾರಾಡುವುದು, ವಿಷಯ ತಿಳಿದ ಊರಿನ ಜನ ಪೊಲೀಸ್‌ ಠಾಣೆಗೆ ನುಗ್ಗಿ ಪ್ರತಿರೋಧ ತೋರುವಾಗ ಬಾಬಾ ಸಾಹೇಬರ ಫೋಟೋಕ್ಕೆ ಕೈ ತಗುಲಿ, ಆ ಫೋಟೋ ಅತ್ತಂದಿತ್ತ ಅಲ್ಲಾಡುವುದು- ಇವೆಲ್ಲವೂ ವಿಶಿಷ್ಟ ಅನುಭೂತಿಯನ್ನು ಕಟ್ಟಿಕೊಡುತ್ತವೆ.

ಮಾರಿ ಸೆಲ್ವರಾಜ್‌ ಕಥೆಯನ್ನು ಕೇವಲ ಕಥೆಯಾಗಿ ಹೇಳುವುದಿಲ್ಲ. ಹಲವು ರೂಪಕಗಳನ್ನು ತನ್ನ ಸಿನಿಮಾಗಳಲ್ಲಿ ಸಶಕ್ತವಾಗಿ ಬಳಸುತ್ತಾ ಹೋಗುತ್ತಾರೆ. ಸಿನಿಮಾದಲ್ಲಿ ಇಡೀ ಕಥೆಗೆ ಒಂದು ತೂಕವಿದ್ದರೆ, ಅದರ ಅಂದವನ್ನು ಹೆಚ್ಚಿಸುವ ರೂಪಕಗಳಿಗೆ ಮತ್ತೊಂದು ತೂಕವಿರುತ್ತದೆ.

ಇದನ್ನೂ ಓದಿರಿ: ದಕ್ಷಿಣದ ಸಿನಿಮಾಗಳೆಂದರೆ ‘KGF, RRR, ಪುಷ್ಪ’ ಅಷ್ಟೇ ಅಲ್ಲ: ಬಾಲಿವುಡ್‌ ಎದುರು ಚರ್ಚೆ ಹಾದಿತಪ್ಪಿತೆ?

ಸಂತೋಷ್‌ ನಾರಾಯಣ್ ಸಂಗೀತ

ಮುಖ್ಯವಾಗಿ ಮತ್ತೊಂದು ವಿಷಯವನ್ನು ಇಲ್ಲಿ ಪ್ರಸ್ತಾಪಿಸಲೇಬೇಕು. ‘ಪರಿಯೇರುಮ್ ಪೆರುಮಾಳ್‌’ ಮತ್ತು ‘ಕರ್ಣನ್‌’ ಸಿನಿಮಾಕ್ಕೆ ಸಂತೋಷ್ ನಾರಾಯಣ್‌ ನೀಡಿರುವ ಸಂಗೀತದಿಂದಾಗಿ ರೂಪಕಗಳ ಕಲಾತ್ಮಕತೆ ಹೆಚ್ಚಿದೆ. ಸೆಲ್ವರಾಜ್‌ ಅವರ ದೃಶ್ಯಗಳ ತೀವ್ರತೆಯನ್ನು ಇಮ್ಮಡಿಗೊಳಿಸುವಲ್ಲಿ ಸಂತೋಷ್ ನಾರಾಯಣ್ ಅವರ ಸಂಗೀತವೂ ಬಹುಮುಖ್ಯ ಪಾತ್ರ ವಹಿಸಿದೆ. ಸಾಂಸ್ಕೃತಿಕ ಬೆಸುಗೆಯನ್ನು ಒಳಗೊಂಡ ಕಥನದೊಳಗೆ ದೇಸಿ ಹಾಗೂ ರ್‍ಯಾಪ್‌‌ ಮಿಶ್ರಿತ ಸಂಗೀತವನ್ನು ಸಂತೋಷ್ ನಾರಾಯಣ್‌ ರಚಿಸಿದ್ದಾರೆ. ಪರಿಯೇರು‌ಮ್‌ ಪೆರುಮಾಳ್‌ನ ‘ಕರುಪ್ಪಿ’, ‘ನಾಯಾರ್‌‌’ ಹಾಡುಗಳು, ‘ಕರ್ಣನ್‌’ನ ‘ಮಂಜನೆತ್ತಿ’, ‘ಕಂಡವರ ಸೊಲ್ಲುಂಗ’, ‘ಉತ್ರಾದಿಂಗ ಯಪ್ಪೊ’ ಹಾಡುಗಳು ಸೆಲ್ವರಾಜ್ ಅವರ ಆಶಯವನ್ನು ಗಟ್ಟಿಗೊಳಿಸಿವೆ.

ಕೊನೆಯದಾಗಿ, ‘ಚಾರ್ಲಿ’ ಥರದ ಮಧ್ಯಮ ವರ್ಗ ಕೇಂದ್ರಿತ ನಾಯಿ ಕಥೆಯಲ್ಲಿ ರೂಪಕತೆಯನ್ನು ಹುಡುಕಬಾರದು. ಭಾವುಕತೆಯೇ ಬಂಡವಾಳವಾಗುವ ಸಿನಿಮಾಗಳಲ್ಲಿ ಕಲಾತ್ಮಕತೆಯನ್ನು, ದಟ್ಟ ಅನುಭೂತಿಯನ್ನು ನಿರೀಕ್ಷಿಸಲಾಗದು ಎಂಬುದು ನಿಜ. ಆದರೆ ಸಿನಿಮಾವೊಂದು ಅಷ್ಟೇ ಆಗಿ ನಿಲ್ಲಬಾರದೆಂಬುದು ಇಲ್ಲಿನ ಆಶಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...