ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ 17 ಆರೋಪಿಗಳ ವಿರುದ್ಧದ ವಿಚಾರಣೆ ಇಂದಿನಿಂದ ಆರಂಭವಾಗಲಿದೆ. ಹತ್ಯೆಯ ಪ್ರಮುಖ ರುವಾರಿ ಅಮೋಲ್ ಕಾಳೆ, ಗುಂಡು ಹಾರಿಸಿದ ಪರಶುರಾಮ್ ವಾಗ್ಮೋರೆ ಮತ್ತು ಬೈಕ್ ಚಲಾಯಿಸಿದ ಆರೋಪ ಹೊತ್ತಿರುವ ಗಣೇಶ್ ಮಿಸ್ಕಿನ್ ಸೇರಿದಂತೆ ಇತರ ಆರೋಪಿಗಳು ವಿಚಾರಣೆ ಎದುರಿಸಲಿದ್ದಾರೆ.
ಸೆಪ್ಟಂಬರ್ 05, 2017ರ ರಾತ್ರಿ ಗೌರಿ ಲಂಕೇಶ್ರವರ ಕಚೇರಿ ಕೆಲಸ ಮುಗಿಸಿ ಮನೆಗೆ ತಲುಪಿದಾಗ ದುಷ್ಕರ್ಮಿಗಳು ಅವರ ಮನೆ ಮುಂದು ಗುಂಡು ಹಾರಿಸಿ ಕೊಂದಿದ್ದರು. ಹತ್ಯೆ ನಡೆದು ನಾಲ್ಕೂವರೆ ವರ್ಷದ ನಂತರ ವಿಚಾರಣೆ ಆರಂಭವಾಗುತ್ತಿದೆ.
ಆರೋಪಿಗಳ ಪರವಾಗಿ 60ಕ್ಕೂ ಹೆಚ್ಚು ವಕೀಲರು ವಕಾಲತ್ತು ವಹಿಸಿದ್ದರು. ಅವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯ ಕಾರಣಕ್ಕೆ ಹತ್ಯೆ ಪ್ರಕರಣದ ವಿಚಾರಣೆ ತಡವಾಗಿದೆ ಎಂದು ಪ್ರಾಸಿಕ್ಯೂಷನ್ ವಕೀಲರು ಹೇಳಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ನೇಮಿಸಿದ್ದ ಎಸ್ಐಟಿ ತಂಡವು 17 ಆರೋಪಿಗಳನ್ನು ಬಂಧಿಸಿ ಅವರು ವಿರುದ್ದ 8500 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿತ್ತು.
ಧಾರವಾಡದಲ್ಲಿ ಕನ್ನಡ ವಿದ್ವಾಂಸ ಎಂ.ಎಂ.ಕಲಬುರ್ಗಿ, ಕೊಲ್ಲಾಪುರದಲ್ಲಿ ಎಡಪಂಥೀಯ ಚಿಂತಕ ಗೋವಿಂದ್ ಪನ್ಸಾರೆ ಹತ್ಯೆಗೆ ಬಳಸಿದ 7.65 ಎಂಎಂ ಕಂಟ್ರಿಮೇಡ್ ಪಿಸ್ತೂಲ್, ಗೌರಿ ಲಂಕೇಶ ಅವರ ಹತ್ಯೆಗೂ ಬಳಕೆಯಾಗಿದೆ ಎಂದು ಎಸ್ಐಟಿ ಪತ್ತೆ ಹಚ್ಚಿತ್ತು.
ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರನ್ನು ಹತ್ಯೆ ಮಾಡಲು ಬಳಸಿದ ಬಂದೂಕಿಗೂ ಪನ್ಸಾರೆ ಗುಂಡಿನ ದಾಳಿಯಲ್ಲಿ ಬಳಸಿದ ಎರಡನೇ ಬಂದೂಕಿಗೂ ಹೊಂದಾಣಿಕೆಯಾಗಿರುವುದು ಕಂಡುಬಂದಿತ್ತು.
ಗೌರಿ ಲಂಕೇಶ್ ಅವರ ಹತ್ಯೆ ಆರೋಪಿಗಳಲ್ಲಿ ಒಬ್ಬನಾದ, ಅಮೋಲ್ ಕಾಳೆ ಸಹಚರ ಮೋಹನ್ ನಾಯಕ್ ವಿರುದ್ದ ದಾಖಲಾಗಿದ್ದ ‘ಕರ್ನಾಟಕ ಸಂಘಟಿತ ಅಪರಾಧಗಳ ಕಾಯ್ದೆ’ (KCOCA) ಪ್ರಕರಣವನ್ನು ಕರ್ನಾಟಕ ಹೈಕೊರ್ಟ್ ಈ ಹಿಂದೆ ರದ್ದು ಮಾಡಿತ್ತು. ಇದನ್ನು ಸುಪ್ರೀಂಕೋರ್ಟ್ನಲ್ಲಿ ಗೌರಿ ಲಂಕೇಶ್ ಅವರ ಸಹೋದರಿ ಕವಿತಾ ಲಂಕೇಶ್ ಅವರು ಪ್ರಶ್ನಿಸಿದ್ದರು.
“ಗೌರಿ ಲಂಕೇಶ್ ಅವರ ಹತ್ಯೆ ಸಾಮಾನ್ಯ ಕೊಲೆ ಅಲ್ಲ. ಒಂದು ಸಂಘಟಿತ ಮತ್ತು ಸೈದ್ಧಾಂತಿಕ ದ್ವೇಷದ ಕಾರಣಕ್ಕೆ ನಡೆಸಲಾದ ಹತ್ಯೆ. ಕೋಕಾ ಕಾಯ್ದೆಯನ್ನು ಕೈಬಿಡುವುದರಿಂದ ಹತ್ಯೆಯ ಹಿಂದಿರುವ ಕಾಣದ ಕೈಗಳಿಗೆ ಶಿಕ್ಷೆಯಾಗುವುದಿಲ್ಲ” ಎಂದು ಕವಿತಾ ಲಂಕೇಶ್ ಅವರ ಪರವಾಗಿ ನ್ಯಾಯವಾದಿ ತೀಸ್ತಾ ಸೆತಲ್ವಾದ್ ಅವರು ಸುಪ್ರೀಂ ಕೋರ್ಟ್ನಲ್ಲಿ ವಾದಿಸಿದ್ದರು. ನಂತರ ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿ, ಕೋಕಾ ಕಾಯ್ದೆ ಹೇರಿತ್ತು.
ಗೌರಿ ಲಂಕೇಶ್ ಹತ್ಯೆಯ ಆರೋಪಿಗಳ ಪಟ್ಟಿ ಹೀಗಿದೆ; ಅಮೋಲ್ ಕಾಳೆ (37), ಪರಶುರಾಮ್ ವಾಘ್ಮೋರೆ (27), ಗಣೇಶ್ ಮಿಸ್ಕಿನ್ (27), ಅಮಿತ್ ಬಾಡ್ (27), ಅಮಿತ್ ದೆಗ್ವೇಕರ್ (38), ಭರತ್ ಕುರಣೆ (37), ಸುರೇಶ್ ಹೆಚ್ ಎಲ್ (36), ರಾಜೇಶ್ ಬಂಗೇರ (50 ವರ್ಷ), ಸುಧನ್ವ ಗೊಂದಲೇಕರ್ (39), ಶರದ್ ಕಲಾಸ್ಕರ್ (25), ಮೋಹನ್ ನಾಯಕ್ (50), ವಾಸುದೇವ್ ಸೂರ್ಯವಂಶಿ (29), ಸುಜಿತ್ ಕುಮಾರ್ (37), ಮನೋಹರ ಎಡವೆ (29), ಶ್ರೀಕಾಂತ್ ಪಂಗರ್ಕರ್ (40), ಕೆ ಟಿ ನವೀನ್ ಕುಮಾರ್ (37) ಮತ್ತು ರುಶಿಕೇಶ್ ದಿಯೋದಿಕರ್ (44).
ಈ ಎಲ್ಲಾ ಆರೋಪಿಗಳು ‘ಸನಾತನ ಸಂಸ್ಥೆ’ಯ 86 ಪುಟಗಳ ‘ಕ್ಷತ್ರ ಧರ್ಮ ಸಾಧನ’ ಪುಸ್ತಕದಿಂದ ಪ್ರೇರಿತರಾಗಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಕರ್ನಾಟಕ ವಿಶೇಷ ತನಿಖಾ ದಳ (SIT) ಭೇದಿಸಿದ್ದಾದರೂ ಹೇಗೆ?