Homeಅಂಕಣಗಳುಪಿಕೆ ಟಾಕೀಸ್: ಪೀಳಿಗೆಗಳ ನಡುವಿನ ಸಂಘರ್ಷಗಳನ್ನು ಚಿತ್ರಿಸಿರುವ ಅರ್ಗಿರಿಸ್ ಸಿನಿಮಾಗಳು

ಪಿಕೆ ಟಾಕೀಸ್: ಪೀಳಿಗೆಗಳ ನಡುವಿನ ಸಂಘರ್ಷಗಳನ್ನು ಚಿತ್ರಿಸಿರುವ ಅರ್ಗಿರಿಸ್ ಸಿನಿಮಾಗಳು

- Advertisement -
- Advertisement -

ಪಿಕೆ ಟಾಕೀಸ್ 10/ ಜಾಗತಿಕ ಸಿನಿಮಾ/ ಗ್ರೀಸ್/ ಅರ್ಗಿರಿಸ್ ಪಪಡಿಮಿಟ್ರೊಪೊಲಸ್

ಸನ್‌ಟ್ಯಾನ್ (2016): ನಲವತ್ತೈದರ ಒಂಟಿಯಾಗಿರುವ ಡಾಕ್ಟರೊಬ್ಬ ಸಿಸಾನಲ್ ಟೂರಿಸ್ಟ್ ದ್ವೀಪದಲ್ಲಿ ಕೆಲಸ ಮಾಡಲು ನೇಮಕವಾಗಿ ಬರುತ್ತಾನೆ. ಚಳಿಗಾಲದಲ್ಲಿ ಜನ ವಿರಳವಾಗಿರುವ ದ್ವೀಪಕ್ಕೆ ಬೇಸಿಗೆ ಬಂದರೆ ಸಾಕು ಯೂರೋಪಿನ ಎಲ್ಲ ದೇಶಗಳಿಂದ ಯುವಕ ಯುವತಿಯರು ಬರುತ್ತಾರೆ. ಡಾಕ್ಟರ್‌ನ ದೈನಂದಿಕ ಜೀವನದಲ್ಲಿ ಮತ್ತು ಮಾನಸಿಕವಾಗಿ ಆಗುವ ಬದಲಾವಣೆಗಳೇ ಸಿನಿಮಾದ ಕಥಾನಕ.

ಡಾಕ್ಟರ್ ಒಂಟಿಯಾಗಿ ತಾನಾಯಿತು ತನ್ನ ಕೆಲಸವಾಯಿತು ಎಂಬಂತೆ, ಶಿಸ್ತುಬದ್ಧವಾಗಿ ಬದುಕುತ್ತಿರುತ್ತಾನೆ. ಜೊತೆಗೆ ಸುತ್ತಮುತ್ತಲಿನ ಜನರಾದ ರೆಸ್ಟ್ಟೊರೆಂಟ್‌ನ ಓನರ್, ಬಾರಿನ ಓನರ್, ದ್ವೀಪದ ಮೇಯರ್ ಹೀಗೆ ಎಲ್ಲರೂ ಇವನನ್ನು ಗೌರವಿಸುತ್ತಾರೆ.

ಬೇಸಿಗೆ ಶುರುವಾದೊಡನೆ ಯೂರೋಪಿನ ವಿವಿಧ ಭಾಗಗಳಿಂದ ಹದಿನೆಂಟು ಹತ್ತೊಂಬತ್ತರ ವಯಸ್ಸಿನ ಯುವಕ-ಯುವತಿಯರು ಗುಂಪುಗಳು ಬರುವುದರಿಂದ ದ್ವೀಪವೇ ಬದಲಾಗುತ್ತದೆ. ಸಾಮಾನ್ಯವಾಗಿ ಖಾಲಿಯಿರುವ ರಸ್ತೆಗಳಲ್ಲಿ ರಾತ್ರಿಗಳಲ್ಲೂ ಓಡಾಡುವ ವಾಹನಗಳು, ಬೆಳಿಗ್ಗೆವರೆಗೂ ತೆರೆದಿರುವ ರೆಸ್ಟ್ಟೊರೆಂಟ್‌ಗಳು, ನೈಟ್ ಕ್ಲಬ್‌ಗಳು, ಬೀಚ್‌ಗಳ ತುಂಬ ನಗ್ನವಾಗಿ ಓಡಾಡುತ್ತಾ, ಕುಣಿಯುತ್ತಾ, ಆಡುವ ಯುವಕ-ಯುವತಿಯರು.

ದ್ವಿಚಕ್ರ ವಾಹನದಿಂದ ಬಿದ್ದು ಗಾಯಗೊಂಡ ಯುವತಿ ತನ್ನ ಗೆಳೆಯರ ಗುಂಪಿನೊಂದಿಗೆ ಒಮ್ಮೆ ಆಸ್ಪತ್ರೆಗೆ ಬರುತ್ತಾಳೆ. ಗಾಯಗೊಂಡಿರುವ ಅನ್ನಾ, ಸ್ವಚ್ಚಂದವಾಗಿ ಸದಾ ನಗುತ್ತಾ ಇರುವ, ಯೌವ್ವನ ಚಿಲುಮೆಯ ತುತ್ತತುದಿಯಲ್ಲಿರುವ ಚೆಲುವೆ. ಅನ್ನಾಳಿಗೆ ಚಿಕಿತ್ಸೆ ನೀಡುವಾಗಲೇ ಆ ಗುಂಪು ಡಾಕ್ಟರಿಗೆ ಕೀಟಲೆ ಮಾಡುತ್ತದೆ. ಡಾಕ್ಟರ್ ಕೋಪಗೊಳ್ಳದೆ, ಸ್ನೇಹದಿಂದ ವರ್ತಿಸುತ್ತಾನೆ. ಅನ್ನಾ ಡಾಕ್ಟರನ್ನು ಮೆಚ್ಚಿಕೊಂಡು ಕೆನ್ನೆಗೊಂದು ಮುತ್ತನ್ನಿಡುತ್ತಾಳೆ.

ಸನ್ ಟ್ಯಾನ್

ಮತ್ತೆ ಡಾಕ್ಟರ್ ಮತ್ತು ಯುವ ಗುಂಪು ಬೀಚಿನಲ್ಲಿ ಭೇಟಿಯಾಗುತ್ತಾರೆ. ಅಲ್ಲಿಂದ, ಆಸ್ಪತ್ರೆಗೆ ಬಾಗಿಲು ಎಳೆದು, ಆ ಗುಂಪಿನ ಜೊತೆಯಲ್ಲೇ ಓಡಾಡುತ್ತಾ, ಕುಡಿಯುತ್ತಾ, ಕುಣಿಯುತ್ತಾ ಯುವಕನಂತಾಗುತ್ತಾನೆ. ಸಮಯ ಕಳೆಯುತ್ತಿದ್ದಂತೆ ಅವರೊಂದಿಗೆ ಇರಲು, ಮುಖ್ಯವಾಗಿ ಅನ್ನಾಳ ಜೊತೆಗಿರಲು ಹಂಬಲಿಸುತ್ತಾನೆ. ಕುಡಿದ ಮತ್ತಿನಲ್ಲಿ ಅವಳಿಗೆ ಮುತ್ತನ್ನಿಡುತ್ತಾನೆ. ಅವಳು ಅವನ ತಾಳಕ್ಕೆ ಕುಣಿಯುತ್ತಾಳೆ ಮತ್ತು ಯಾರು ಇಲ್ಲದ ಬೀಚಿನಲ್ಲಿ ಡಾಕ್ಟರ್ ಮತ್ತು ಅನ್ನಾ ಸೆಕ್ಸ್‌ನಲ್ಲಿ ಉನ್ಮತ್ತರಾಗುತ್ತಾರೆ.

ನಂತರದ ಐದು ದಿನಗಳು ಯುವ ಗುಂಪಿನ ಜಾಡೇ ಇಲ್ಲವಾಗುತ್ತದೆ. ಡಾಕ್ಟರ್ ಹಸಿದ ಹೆಬ್ಬುಲಿಯಂತೆ ಎಲ್ಲ ಬಾರ್‌ಗಳಿಗೂ, ನೈಟ್ ಕ್ಲಬ್‌ಗಳಿಗೆ ಹೋಗಿ ಅವಳನ್ನು ಹುಡುಕುತ್ತಾ, ಕುಡಿತದಲ್ಲಿ ಮುಳುಗುತ್ತಾನೆ. ಮತ್ತೆ ಅವನ ಮನೆಗೆ ಹಿಂತಿರುಗಿ ಬಂದು ಮಲಗಲು ಪ್ರಯತ್ನಿಸುತ್ತಾನೆ. ಆದರೆ ಅವನ ಮನಸ್ಸೆಲ್ಲ ಅನ್ನಾಳೇ ತುಂಬಿಕೊಂಡಿರುತ್ತಾಳೆ.

ಈ ಹುಡುಕಾಟದಲ್ಲಿ ಕೊನೆಗೂ ಅನ್ನಾ ಸಿಗುತ್ತಾಳೆ. ತನ್ನ ತಳಮಳದ ಹುಡುಕಾಟವನ್ನು ಪ್ರಸ್ತಾಪಿಸಿ, ’ಅವಳು ಎಲ್ಲಿ ಹೋಗಿದ್ದಳು?’ ಎಂದು ಹಕ್ಕಿನಿಂದ ಪ್ರಶ್ನಿಸುವುದು ಅನ್ನಾಳಿಗೆ ಇಷ್ಟವಾಗುವುದಿಲ್ಲ. ಡಾಕ್ಟರಿನ ಮನಸ್ಸಿನಲ್ಲಾದ ಕಳವಳಗಳನ್ನು ಅವಳ ಬಳಿ ಹಂಚಿಕೊಳ್ಳಲು ಪ್ರಯತ್ನಿಸಿದರೂ, ಅನ್ನಾ ಅವನೊಂದಿಗೆ ಏನನ್ನೂ ಮಾತಾಡದೆ, ಅವನನ್ನು ನಿರಾಕರಿಸುತ್ತಾಳೆ.

ಇದನ್ನು ಜೀರ್ಣಿಸಿಕೊಳ್ಳಲಾಗದೆ ಡಾಕ್ಟರ್ ಪದೇ ಪದೇ ಆಕೆಯ ಬೆನ್ನು ಹತ್ತುತ್ತಾನೆ. ಆದರೆ ಗುಂಪಿನ ಎಲ್ಲರೂ ಇವನನ್ನು ತಿರಸ್ಕರಿಸುತ್ತಾರೆ. ಅತಿಯಾದ ಕುಡಿತದಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಮಯ ಕೊಡಲಾಗುವುದಿಲ್ಲ. ಡಾಕ್ಟರ್ ಕೆಲಸವನ್ನು ತೊರೆದುಹೋಗಲು ಮೇಯರ್ ಹೇಳುತ್ತಾನೆ. ನೈಟ್ ಕ್ಲಬಿನಲ್ಲಿ ಕುಣಿಯುತ್ತಿದ್ದ ಅನ್ನಾಳಿಗೆ ಇಂಜಕ್ಷನ್‌ಅನ್ನು ಚುಚ್ಚಿ ಡಾಕ್ಟರ್ ಅವಳನ್ನು ಆಸ್ಪತ್ರೆಗೆ ಎತ್ತಿಕೊಂಡು ಬರುವಲ್ಲಿಗೆ ಸಿನಿಮಾ ಮುಗಿಯುತ್ತದೆ.

ನಲವತ್ತೈದರ ವಯಸ್ಸಿನಲ್ಲಿ ಭದ್ರತೆ, ಸ್ಥಿರತೆಯನ್ನು ಮನಸ್ಸು ಒಂದು ಕಡೆ ಕೇಳಿದರೆ, ಇಪ್ಪತ್ತರ ಸ್ವಾತಂತ್ರ ಮತ್ತು ಸ್ವಚಂದವನ್ನು ಮತ್ತೊಂದು ಕಡೆ ಕೇಳುತ್ತದೆ. ಹೀಗೆ ಚಲನೆ ಸುಲಭವಾಗಿ ಸಾಧ್ಯವಾಗದ ಈ ಎರಡು ಪೀಳಿಗೆಗಳ ನಡುವಿನ ಸಂಘರ್ಷಗಳನ್ನು ಈ ಸಿನಿಮಾ ಹಿಡಿದಿಟ್ಟಿದೆ.

ವೆಸ್ಟೆಡ್ ಯೂತ್ (2011): ಅಥೆನ್ಸಿನಲ್ಲಿ ಐವತ್ತರ ಗಡಿಯಲ್ಲಿರುವ ಪೊಲೀಸ್ ಅಧಿಕಾರಿ ಮತ್ತು ಹದಿನಾರು ವರ್ಷದ ಹುಡುಗನ ಬೇರೆ ಬೇರೆ ಬದುಕುಗಳನ್ನು ನೈಜವಾಗಿ ಚಿತ್ರಿಸುತ್ತಾ, ಒಂದು ನಡುರಾತ್ರಿಯ ಸಂದರ್ಭದಲ್ಲಿ ಇವರಿಬ್ಬರೂ ಎದುರಾಗಲು ಕಾರಣವಾಗುವ ಕಹಿ ಘಟನೆಯೇ ಸಿನಿಮಾದ ಕಥೆ.

ಈ ಸಿನಿಮಾದಲ್ಲಿ ಸಮಾನಾಂತರವಾಗಿ ನಡೆಯುವ ಎರಡು ಪೀಳಿಗೆಗಳ ಕಥೆಗಳು ಒಂದು ಕಡೆಗೆ ಚಲಿಸುತ್ತವೆ. ನಿಧಾನಗತಿಯ ಹಾಗೂ ಉತ್ಸಾಹವಿಲ್ಲದೆ, ಸದಾ ಮೊಬೈಲ್ ನೋಡುವ ಮಗಳಿಗೆ ಬೈಯುತ್ತಾ ಮತ್ತು ಸದಾ ಟಿವಿ ನೋಡುವ ತಾಯಿಯೊಂದಿಗೆ ಮಾತಾಡಲು ಪ್ರಯತ್ನಿಸಿ ಸೋತು, ಸಾಧಾರಣ ಜೀವನ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಒಂದು ಕಡೆಯಾದರೆ, ಇನ್ನೊಂದೆಡೆ, ಯಾವುದೇ ಒತ್ತಡಗಳಲ್ಲಿದೆ, ಉತ್ಸಾಹದಲ್ಲಿ ಗೆಳೆಯರೊಂದಿಗೆ ಕಾಲ ಕಳೆಯುತ್ತಾ, ಸದಾ ಹರಟುತ್ತಾ, ಸ್ಕೇಟ್ ಬೋರ್ಡಿನ ಸಹಾಯದಿಂದ ಸುತ್ತಾಡುವ ಹುಡುಗ. ಹದ್ದುಬಸ್ತಿನಲ್ಲಿಡುವ ತಂದೆಯಿಂದ ತಪ್ಪಿಸಿಕೊಂಡು, ಆಸ್ಪತ್ರೆಯಲ್ಲಿ ರೋಗಿಯಾಗಿರುವ ತಾಯಿಯನ್ನು ಮಾತಾಡಿಸುತ್ತಾ, ಯಾವುದೇ ಜವಾಬ್ದಾರಿಗಳಲ್ಲಿದೇ ಬದುಕುತ್ತಿರುತ್ತಾನೆ.

ಹೀಗೆ ಸಾಗುವ ಇವರಿಬ್ಬರ ಒಂದೇ ದಿನದ ಕಥೆಯನ್ನು ಚಿತ್ರಿಸಲಾಗಿದೆ. ಹುಡುಗ ತನ್ನ ಗೆಳಯರೊಡಗೂಡಿ, ಅವರೆಲ್ಲ ಸುತ್ತಾಡುತ್ತಾ, ಸ್ಕೇಟ್ ಮಾಡುತ್ತಾ, ಹಸ್ತಮೈಥುನ ಮಾಡುತ್ತಾ, ಊರೆಲ್ಲ ಸುತ್ತಾಡಿ ನೈಟ್ ಕ್ಲಬ್ಬಿಗೆ ಬರುತ್ತಾರೆ. ಪೊಲೀಸ್ ತನ್ನ ಸಹೋದ್ಯೋಗಿಯೊಂದಿಗೆ, ವೀಲಿಂಗ್ ಮಾಡುತ್ತಿರುವ ಯುವಕರನ್ನು ಚದುರಿಸುತ್ತಾ, ರಾತ್ರಿಯೆಲ್ಲ ರಸ್ತೆಗಳನ್ನು ಗಮನಿಸುತ್ತಾ ಗಸ್ತು ಸುತ್ತಿ ನೈಟ್ ಕ್ಲಬ್ಬಿನತ್ತ ಬರುತ್ತಾರೆ.

ವೆಸ್ಟೆಡ್ ಯೂತ್

ನೈಟ್ ಕ್ಲಬ್ಬಿನಲ್ಲಿ ಕುಡಿದ ಮತ್ತಿನಲ್ಲಿ ಬೇರೊಂದು ಹುಡುಗಿಗೆ ಮುತ್ತನ್ನಿಡುವುದನ್ನು, ಹುಡುಗನ ಗರ್ಲ್‌ಫ್ರೆಂಡ್ ನೋಡಿ, ಇವನೊಂದಿಗೆ ಜಗಳ ಮಾಡಿಕೊಂಡು, ಹೊರಗೆ ಹೋಗುತ್ತಾಳೆ. ಅವಳನ್ನು ಸಮಾಧಾನಪಡಿಸಲು ಸಾಧ್ಯವಾಗದೆ ತಿರುಗಿ ನೈಟ್ ಕ್ಲಬ್ಬಿಗೆ ಬರುವಾಗ ಪೊಲೀಸ್ ವಾಹನ ಬರುತ್ತದೆ. ಹುಡುಗ ಗರ್ಲ್‌ಫ್ರೆಂಡಿನ ಮೇಲಿನ ತನ್ನ ಕೋಪದಿಂದ ಪೊಲೀಸ್ ವಾಹನವನ್ನು ತಡೆದು ತಟ್ಟುತ್ತಾನೆ. ಆಗ ಪೊಲೀಸರು ಇಳಿದು ಆತನೆಡೆಗೆ ಬಂದಾಗ, ಹುಡುಗ ಹೊರಗೆ ಕುಡಿದು ನಿಂತಿದ್ದ ಜನಗಳ ಗುಂಪಿನೊಂದಿಗೆ ಸೇರಿಕೊಳ್ಳುತ್ತಾನೆ.

ಕುಡಿದ ಗುಂಪು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು, ಗುಂಪಿನಿಂದ ಖಾಲಿ ಬಾಟಲ್‌ಗಳನ್ನು ಪೋಲಿಸರ ಮೇಲೆ ಎಸೆಯುತ್ತಾರೆ. ಆಗ ಪೋಲಿಸನ ಸಹದ್ಯೋಗಿ ಆಕಸ್ಮಿಕವಾಗಿ ಗುಂಪಿನತ್ತ ಗುಂಡನ್ನು ಹಾರಿಸುತ್ತಾನೆ. ಆ ಗುಂಡಿಗೆ ಆ ಹುಡುಗ ಬಲಿಯಾಗುವುದೇ ಸಿನಿಮಾದ ಕೊನೆ.

ಈ ಸಿನಿಮಾ ಅಥೆನ್ಸಿನಲ್ಲಿ ನಡೆದ ನೈಜ ಘಟನೆಯ ಆಧಾರಿತವಾಗಿದೆ. ಹುಡುಗ ಮತ್ತು ಪೊಲೀಸ್ ಅಧಿಕಾರಿಯ ಕಾಂಟ್ರಾಸ್ಟ್ ಬದುಕನ್ನು ಚಿತ್ರಿಸುವುದರ ಜೊತೆಗೆ ಆಥೆನ್ಸಿನ ಜನಜೀವನವನ್ನು ಈ ಸಿನಿಮಾ ಕಟ್ಟಿಕೊಟ್ಟಿದೆ.
ಅರ್ಗಿರಿಸ್‌ರ ಜೊತೆ ಯಾನ್ ವೊಗಲ್ ಕೂಡ ಈ ಸಿನಿಮಾಕ್ಕೆ ಸಹ ನಿರ್ದೇಶನ ಮಾಡಿರುವುದು ವಿಶೇಷ.

ಅರ್ಗಿರಿಸ್ ಪಪಡಿಮಿಟ್ರೊಪೊಲಸ್: ಅರ್ಗಿರಿಸ್ ಮೂಲತಃ ನಿರ್ಮಾಪಕ. ಇವರು ಹತ್ತಕ್ಕೂ ಸಿನಿಮಾಗಳನ್ನು ನಿರ್ಮಿಸಿ, ಕೆಲ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇವರ ಮುಖ್ಯ ಆಸಕ್ತಿ ಅಥೆನ್ಸಿನ ಜನಜೀವನವನ್ನು ಹಿಡಿಯುವುದರ ಜೊತೆಗೆ ಯುವ ಹಾಗೂ ವಯಸ್ಕ ಪೀಳಿಗೆಗಳ ನಡುವಿನ ವ್ಯತ್ಯಾಸಗಳನ್ನು ಕಟ್ಟಿಕೊಡುವುದು. ಎರಡು ಪೀಳಿಗೆಗಳ ದೃಷ್ಟಿಕೋನದಲ್ಲಿ ಅಥೆನ್ಸ್‌ಅನ್ನು ಅಥೆಂಟಿಕ್ ಆಗಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.

ಸಂದರ್ಶನವೊಂದರಲ್ಲಿ ಹೇಳುವಂತೆ, ಒಬ್ಬ ನಟನನ್ನು ಆರಿಸಿಕೊಂಡು, ಆ ಪಾತ್ರದ ಸ್ನೇಹಿತರ ಪಾತ್ರಗಳಿಗೆ, ಆ ನಟನ ನಿಜವಾದ ಸ್ನೇಹಿತರನ್ನೇ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಿರುತ್ತಾರೆ ಅರ್ಗಿರಿಸ್. ನಟ ನಟಿಯರೊಂದಿಗೆ ಕಥೆಯನ್ನು ಚರ್ಚಿಸಿದ ನಂತರ, ಸ್ಕ್ರಿಪ್ಟ್‌ಅನ್ನು ಪಕ್ಕಕ್ಕಿಟ್ಟು, ನಟ-ನಟಿಯರೊಂದಿಗೆ ಸಮಯ ಕಳೆಯುತ್ತಾ, ಯಾವುದೇ ಒತ್ತಡವಿಲ್ಲದೆ ಸಿನಿಮಾ ಮಾಡುವುದು ಇವರ ಶೈಲಿ. ಪರಸ್ಪರರ ಕುರಿತು ಒಮ್ಮೆ ತಿಳಿದುಕೊಂಡ ನಂತರ ಕ್ಯಾಮರಾದಿಂದ ಅವರ ಬದುಕನ್ನು ಹಿಡಿಯುವ ಮೂಲಕ ಸಿನಿಮಾವನ್ನು ಕಟ್ಟುವುದು ಕೂಡ.

ಅರ್ಗಿರಿಸ್ ಪಪಡಿಮಿಟ್ರೊಪೊಲಸ್

ಇದರಿಂದ ಅವರ ಸಿನಿಮಾಗಳಲ್ಲಿ ನಿಜವಾದ ಬದುಕನ್ನು ಹಿಡಿಯಲು ಸಾಧ್ಯವಾಗುತ್ತದೆ ಹಾಗೂ ಗೆಳೆಯರೇ ಒಡಗೂಡಿ ನಟಿಸುವಾಗ ಯಾವುದೇ ರೀತಿಯ ಮುಚ್ಚುಮರೆ ಮುಜುಗರಗಳಿಲ್ಲದೆ ನಟಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ.

ಇವರ ಕ್ಯಾಮರಾ ಶೈಲಿ ಸದಾ ’ಹ್ಯಾಂಡ್ ಹೆಲ್ಡ್’ ಆಗಿರುತ್ತದೆ. ಪ್ರೇಕ್ಷಕರು ಪಾತ್ರಗಳೊಂದಿಗೆ ಅವರು ಹೋದ ಜಾಗಗಳಿಗೆಲ್ಲ ಹೋಗುತ್ತಾ, ಪ್ರೇಕ್ಷಕರು ಪಾತ್ರಗಳ ಗೆಳೆಯರೆಂಬಂತೆ ಮಾಡುತ್ತದೆ ಸಿನಿಮ್ಯಾಟೋಗ್ರಫಿ.

ಕಥೆಯ ವಿಷಯಕ್ಕೆ ಬಂದರೆ, ಮುಖ್ಯವಾದ ಘಟನೆಗಳೇ ಇರಬೇಕು ಅನ್ನದೇ, ಎಷ್ಟೋ ನಿರಾಸಕ್ತವಾದ ಚಟುವಟಿಕೆಗಳನ್ನು ಚಿತ್ರೀಕರಿಸುತ್ತಾರೆ. ಅದೇ ನಿಜವಾದ ಬದುಕಿನ ಸೂಚಕವೆನ್ನುವುದು ಉಲ್ಲೇಖನೀಯ.

ಅಥೆನ್ಸ್‌ನಲ್ಲಿ ನಡೆದ ನೈಜ ಘಟನೆಗಳನ್ನು ಇಟ್ಟುಕೊಂಡು, ವಿವಿಧ ವಯಸ್ಸಿನ ವ್ಯಕ್ತಿಗಳ, ಪೀಳಿಗೆಗಳ ದೃಷ್ಟಿಯಿಂದ ಅವರ ಬದುಕುಗಳ ಬಗ್ಗೆ ಚಿತ್ರಕತೆ ಬರೆದು, ಅವರಂತಿರುವ ನಟರನ್ನು ಅಥವಾ ನಟನೆಯೇ ತಿಳಿಯದವರನ್ನು ಆಯ್ಕೆ ಮಾಡಿ, ಅವರೊಂದಿಗೆ ಕೂಡಿಕೊಂಡು ಗೆಳೆಯರಂತೆ ಬದುಕುತ್ತಾ ಅವರ ಬದುಕನ್ನು ನೈಜವಾಗಿ ಕ್ಯಾಮರಾದ ಸಹಾಯದಿಂದ ಕಟ್ಟಿರುವುದನ್ನು ಅರ್ಗಿರಿಸ್‌ರ ಸಿನಿಮಾಗಳಲ್ಲಿ ನೋಡಬಹುದು.


ಇದನ್ನೂ ಓದಿ: ಪಿಕೆ ಟಾಕೀಸ್: ನಿಗೂಢ ಅಥೆನ್ಸ್‌ನ ಜನಜೀವನವನ್ನು ಚಿತ್ರಿಸಿರುವ ಅದನ್ನು ಅಲೆಗರಿಯಾಗಿಸುವ ಸಿನಿಮಾಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...