ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಕಲ್ಲೂರು ಕೆರೆ ಕೋಡಿಯಲ್ಲಿ ಕೈಕಾಲು ತೊಳೆಯಲು ಹೋಗಿ ಕೊಚ್ಚಿ ಹೋಗಿದ್ದ ಇಬ್ಬರು ವ್ಯಕ್ತಿಗಳ ಮೃತದೇಹಗಳು ಎರಡು ದಿನಗಳ ನಂತರ ಪತ್ತೆಯಾಗಿವೆ.
ಭಾರೀ ಮಳೆಯಿಂದಾಗಿ ತಿಂಗಳ ಹಿಂದೆಯೇ ಕೆರೆ ಕೋಡಿ ಬಿದ್ದಿತ್ತು. ಆದರೆ ಕೆಲವು ದಿನಗಳಿಂದ ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಕೆರೆ ಕೋಡಿಗಳಲ್ಲಿ ನೀರಿನ ರಭಸವೂ ಹೆಚ್ಚಾಗಿದೆ. ಜಿಲ್ಲೆಯ ತೆಂಗು ಹಾಗೂ ಅಡಿಕೆ ತೋಟಗಳಲ್ಲಿ ನೀರು ನಿಂತಿದೆ. ಬೆಳೆ ನಾಶವಾಗಿದ್ದು, ಇದರ ನಡುವೆ ಜೀವಹಾನಿಗಳೂ ಸಂಭವಿಸಿರುವುದರಿಂದ ರೈತರು ಆತಂಕಕ್ಕೀಡಾಗಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕಳೆದ ಶನಿವಾರ ಸಂಜೆ ಕಲ್ಲೂರು ಕೆರೆಯಲ್ಲಿ ಕೈಕಾಲು ತೊಳೆಯಲು ಹೋದ ನಟರಾಜು (30) ಹಾಗೂ ಹನುಮಂತರಾಜು(48) ಕಾಲು ಜಾರಿ ನೀರಿಗೆ ಬಿದ್ದು ನೀರಿನ ರಭಸಕ್ಕೆ ಕ್ಷಣಾರ್ಧದಲ್ಲಿ ಕೊಚ್ಚಿ ಹೋಗಿದ್ದರು. ಸ್ಥಳೀಯರು ಕತ್ತಲಲ್ಲೇ ಹುಡುಕಾಟ ನಡೆಸಿದ್ದರೂ ಕೊಚ್ಚಿ ಹೋದವರು ಪತ್ತೆಯಾಗಿರಲಿಲ್ಲ. ನಂತರ ಅಗ್ನಿ ಶಾಮಕದಳದ ಉಪನಿರೀಕ್ಷಕ ಮಹಾಲಿಂಗಪ್ಪ ನೇತೃತ್ವದ ಸಿಬ್ಬಂದಿ ವರ್ಗ ಸತತ ಪ್ರಯತ್ನಪಟ್ಟು ಕೊಚ್ಚಿಹೋದವರಿಗಾಗಿ ಹುಡುಕಾಟ ನಡೆಸಿದ್ದರು.
ಎಲ್ಲಾ ರೀತಿಯ ಕಾರ್ಯಾಚರಣೆ ನಡೆದರೂ ಯಾವುದೇ ಸುಳಿವು ಸಿಗದೆ ಪ್ರಯತ್ನ ಮುಂದುವರೆಸಿದ್ದರು. ಎರಡು ದಿನದ ಬಳಿಕ ಸೋಮವಾರ ಬೆಳಿಗ್ಗೆ ಕಲ್ಲೂರು ಸಮೀಪದ ಬಿಳಿನಂದಿ ತೊರೆ ಬಳಿ ನಟರಾಜು ಶವ ಪತ್ತೆಯಾಯಿತು. ಮತ್ತೇ ಹುಡುಕಾಟ ನಡೆದು ಮಂಗಳವಾರ ಬೆಳಿಗ್ಗೆ ಅದೇ ಸ್ಥಳದಲ್ಲೇ ಹನುಮಂತರಾಜು ಅವರ ಶವ ಕೂಡಾ ಪತ್ತೆಯಾಗಿದೆ. ಸಿ.ಎಸ್.ಪುರ ಪೊಲೀಸರು ಶವ ಪರೀಕ್ಷೆ ನಡೆಸಿ ಮೃತರ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಕಲ್ಲೂರು ಕೆರೆ ಕೋಡಿ ನೀರು ಕುಣಿಗಲ್ ತಾಲ್ಲೂಕಿನ ಮಾರ್ಕೋನಹಳ್ಳಿ ಜಲಾಶಯವನ್ನು ಸೇರುತ್ತದೆ.
ಘಟನಾ ಸ್ಥಳಕ್ಕೆ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಮಸಾಲ ಜಯರಾಮ್ ಭೇಟಿ ನೀಡಿ ಕ್ರಮ ವಹಿಸಿದ್ದರು. ಮಾಜಿ ಶಾಸಕ ಎಂ.ಟಿ.ಕೃಷ್ಣ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬುವ ಜೊತೆಗೆ ಜಿಲ್ಲಾಡಳಿತದ ನೀರಿನಲ್ಲಿ ಮುಳುಗಡೆಗೊಂಡಿರುವ ಕುಟುಂಬಸ್ಥರಿಗೆ ಹತ್ತು ಲಕ್ಷ ರೂ.ಗಳ ಪರಿಹಾರವನ್ನು ವಿತರಣೆ ಮಾಡಬೇಕು ಎಂದು ಒತ್ತಾಯಿಸಿದ್ದರು.
ಮೈಸೂರಿನಲ್ಲಿ ರೈತ ಸಾವು
ಮೈಸೂರು ತಾಲ್ಲೂಕಿನ ಭುಗತಹಳ್ಳಿಯಲ್ಲಿ ಶನಿವಾರ ತಡರಾತ್ರಿ ಮಳೆಯಿಂದ ಜಲಾವೃತವಾಗಿದ್ದ ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ರೈತ ಪುಟ್ಟಮಾದಪ್ಪ (46) ಮೃತಪಟ್ಟಿದ್ದಾರೆ.
ಪಾವಗಡ ತಾಲ್ಲೂಕಿನ ಪಳವಳ್ಳಿಗೆ ಹೊರಟಿದ್ದ ಕೆಂಚಗಾನಹಳ್ಳಿಯ ಗಂಗಾಧರ (38) ರಸ್ತೆ ಮೇಲೆ ರಭಸವಾಗಿ ಹರಿಯುತ್ತಿದ್ದ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ಕೈಗೊಂಡಿದ್ದಾರೆ.
ರಾಜ್ಯದ ಹಲವೆಡೆ ಹಾನಿ
ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲ್ಲೂಕಿನ 12 ಗ್ರಾಮಗಳಲ್ಲಿ 30ಕ್ಕೂ ಹೆಚ್ಚು ಮನೆಗಳ ಗೋಡೆಗಳು ಕುಸಿದಿವೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಹೊನ್ನೇನಹಳ್ಳಿಯಲ್ಲಿ ಮಳೆಗೆ 6 ಮನೆಗಳು ಹಾನಿಗೀಡಾಗಿವೆ.
ಇದನ್ನೂ ಓದಿರಿ: ಸುರತ್ಕಲ್ ಅನಧಿಕೃತ ಟೋಲ್ ವಿರೋಧಿ ಹೋರಾಟ | ಪೊಲೀಸರಿಂದ ಬಂಧನ; ಬಿಡುಗಡೆಗೆ ಡಿವೈಎಫ್ಐ ಒತ್ತಾಯ
ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ಮಳೆಯಿಂದಾಗಿ ಬಸ್ನಿಲ್ದಾಣ ಜಲಾವೃತವಾಗಿತ್ತು. ಮೈಸೂರು ಜಿಲ್ಲೆಯ ಪಿರಿಯಾ ಪಟ್ಟಣ, ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕು, ಚಾಮರಾಜನಗರ, ಕೊಡಗು, ಮಂಡ್ಯ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಅಪಾರ ಪ್ರಮಾಣದ ಜಮೀನು ಜಲಾವೃತವಾಗಿದ್ದು, ಬೆಳೆ ಹಾನಿಯಾಗಿದೆ.
ಚಾಮರಾಜನಗರ ಜಿಲ್ಲೆಯ ಗರಿಕೆಕಂಡಿಯಿಂದ ತಮಿಳುನಾಡಿನ ಹಂದಿಯೂರು ನಡುವೆ ವಿವಿಧೆಡೆ ಗುಡ್ಡ ಕುಸಿದಿದ್ದು, ಭಾನುವಾರದಿಂದ 4 ದಿನಗಳವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಪ್ರವಾಸಿ ತಾಣ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದ್ದು, ಭಾನುವಾರ ಬೆಟ್ಟಕ್ಕೆ ಕೆಎಸ್ಆರ್ಟಿಸಿ ಬಸ್ ಸಂಚಾರ ಸ್ಥಗಿತಗೊಂಡಿತ್ತು.