Homeಮುಖಪುಟಬಿಲ್ಕಿಸ್‌ ಬಾನೋ ಅತ್ಯಾಚಾರಿಗಳ ಬಿಡುಗಡೆಗೆ ಒಪ್ಪಿದ ಮೋದಿ ಸರ್ಕಾರ; ಏನೇನಾಯ್ತು ಈ ವರೆಗೆ? | ಸಂಕ್ಷಿಪ್ತ...

ಬಿಲ್ಕಿಸ್‌ ಬಾನೋ ಅತ್ಯಾಚಾರಿಗಳ ಬಿಡುಗಡೆಗೆ ಒಪ್ಪಿದ ಮೋದಿ ಸರ್ಕಾರ; ಏನೇನಾಯ್ತು ಈ ವರೆಗೆ? | ಸಂಕ್ಷಿಪ್ತ ವರದಿ

ಯಾವುದು ಕಪ್ಪು, ಯಾವುದು ಬಿಳಿ ಎಂದು ಇದೀಗ ಎಲ್ಲರಿಗೂ ಕಾಣಿಸುತ್ತಿದೆ ಎಂದು ಸಂಸದೆ ಮೊಹುವಾ ಮೊಹಿತ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ

- Advertisement -
- Advertisement -

ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳಿಗೆ ಕ್ಷಮಾದಾನ ನೀಡಿ ಅವಧಿಪೂರ್ವ ಬಿಡುಗಡೆಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಇತರರು ವಿರೋಧಿಸಿದ್ದರೂ, ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರವು ಅದಕ್ಕೆ ಅನುಮತಿ ನೀಡಿತ್ತು ಎಂದು ಗುಜರಾತಿನ ಬಿಜೆಪಿ ಸರ್ಕಾರ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ.

ಗುಜರಾತ್ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, “ಅಪರಾಧಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು ಏಕೆಂದರೆ, ಅವರು 14 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಜೈಲು ವಾಸವನ್ನು ಪೂರ್ಣಗೊಳಿಸಿದ್ದಾರೆ…ಅವರ ನಡವಳಿಕೆ ಉತ್ತಮವಾಗಿದೆ ಎಂದು ಕಂಡುಬಂದಿದೆ ಮತ್ತು ಒಕ್ಕೂಟ ಸರ್ಕಾರ ಕೂಡಾ ಇದಕ್ಕೆ ಸಹಮತ ವ್ಯಕ್ತಪಡಿಸಿದೆ’’ ಎಂದು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸಿಬಿಐನ ಪೊಲೀಸ್ ಸೂಪರಿಂಟೆಂಡೆಂಟ್, ಮುಂಬೈನ ವಿಶೇಷ ಅಪರಾಧ ವಿಭಾಗ ಮತ್ತು ವಿಶೇಷ ಸಿವಿಲ್ ನ್ಯಾಯಾಧೀಶರು (ಸಿಬಿಐ), ಗ್ರೇಟರ್ ಬಾಂಬೆಯ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆರಂಭದಲ್ಲಿ ಅಪರಾಧಿಗಳ ಬಿಡುಗಡೆಯನ್ನು ವಿರೋಧಿಸಿದ್ದರು ಎಂದು ರಾಜ್ಯ ಸರ್ಕಾರ ಹೇಳಿದೆ.

ಇದನ್ನೂ ಓದಿ: ‘ಕರ್ನಾಟಕ ಬಿಲ್ಕಿಸ್ ಜೊತೆಗಿದೆ’: ಬಿಜೆಪಿ ಸರ್ಕಾರದ ನಡೆ ವಿರೋಧಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

2002 ರ ಗುಜರಾತ್‌ ಗಲಭೆಯಲ್ಲಿ ಬಿಲ್ಕಿಸ್ ಬಾನೋ ಅವರು ಗರ್ಭಿಣಿಯಾಗಿದ್ದಾಗ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದು, ಮಾತ್ರವಲ್ಲದೆ ಅವರ ಮೂರು ವರ್ಷದ ಮಗಳು ಸೇರಿದಂತೆ ಅವರ ಕುಟುಂಬಿಕರನ್ನು ಕೊಲೆ ಮಾಡಲಾಗಿತ್ತು. ಒಟ್ಟು 11 ಜನರು ಈ ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ಸಾಬೀತಾಗಿ 2008 ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. ಆದಾಗ್ಯೂ, ಈ ವರ್ಷ ಆಗಸ್ಟ್ 15 ರಂದು ಗುಜರಾತ್ ಸರ್ಕಾರವು ಅವರನ್ನು ಬಿಡುಗಡೆ ಮಾಡಿದೆ.

ಇಲ್ಲಿಯವರೆಗೆ ಏನಾಗಿದೆ?

ಅತ್ಯಾಚಾರದ ಆರೋಪಿಗಳನ್ನು ಜೈಲಿನ ಬಾಗಿಲಲ್ಲಿ ಆರತಿ ಎತ್ತಿ ಸ್ವಾಗತಿಸಲಾಗಿತ್ತು ಜೊತೆಗೆ ಅವರಿಗೆ ಸನ್ಮಾನ ಕೂಡಾ ಮಾಡಲಾಗಿತ್ತು. 11 ಅಪರಾಧಿಗಳ ಬಿಡುಗಡೆ ಮತ್ತು ಕ್ಷಮಾದಾನವನ್ನು ಬೆಂಬಲಿಸಿದ ಸಲಹಾ ಸಮಿತಿಯು ಆಡಳಿತಾರೂಢ ಬಿಜೆಪಿಯೊಂದಿಗೆ ಸಂಪರ್ಕವನ್ನು ಹೊಂದಿದೆ ಎಂದು ಕ್ವಿಂಟ್ ವರದಿ ಮಾಡಿದೆ.

ಗೋಧ್ರಾ ಕಲೆಕ್ಟರ್ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಜಲ್ ಮಾಯಾತ್ರಾ ನೇತೃತ್ವದ 10 ಸದಸ್ಯರ ಸಮಿತಿಯು “ಅವಿರೋಧವಾಗಿ” ಅಪರಾಧಿಗಳ ಬಿಡುಗಡೆಗೆ ಒತ್ತಾಯಿಸಲು ನಿರ್ಧರಿಸಿದೆ. ಸಮಿತಿಯಲ್ಲಿ ಇಬ್ಬರು ಹಾಲಿ ಬಿಜೆಪಿ ಶಾಸಕರು ಸೇರಿದಂತೆ ಬಿಜೆಪಿಯ ಇತರ ಮೂವರು ಸದಸ್ಯರು ಇದ್ದರು. ಉತ್ತಮ ನಡವಳಿಕೆಯ ಆಧಾರದ ಮೇಲೆ ಅವರಿಗೆ ವಿನಾಯಿತಿ ನೀಡಲು ಜೈಲು ಸಲಹಾ ಸಮಿತಿಯ (ಜೆಎಸಿ) ‘ಸರ್ವಸಮ್ಮತ’ ಶಿಫಾರಸನ್ನು ರಾಜ್ಯ ಸರ್ಕಾರ ಉಲ್ಲೇಖಿಸಿದೆ.

ಈ ಮಧ್ಯೆ, ಅಪರಾಧಿಗಳಿಗೆ ಕ್ಷಮಾದಾನ ನೀಡಿ ಬಿಡುಗಡೆ ಮಾಡಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಎರಡು ಅರ್ಜಿಗಳನ್ನು ಸಲ್ಲಿಸಲಾಗಿದೆ. ಒಂದು ಅರ್ಜಿಯನ್ನು ಸಿಪಿಐ(ಎಂ) ನಾಯಕಿ ಸುಭಾಷಿಣಿ ಅಲಿ, ಪತ್ರಕರ್ತೆ ರೇವತಿ ಲಾಲ್ ಮತ್ತು ಶಿಕ್ಷಣತಜ್ಞೆ ರೂಪ್ ರೇಖಾ ವರ್ಮಾ ಸಲ್ಲಿಸಿದ್ದರೆ, ಮತ್ತೊಂದು ಅರ್ಜಿಯನ್ನು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸಲ್ಲಿಸಿದ್ದರು.

ಇದನ್ನೂ ಓದಿ: ಬಿಲ್ಕಿಸ್‌ ಬಾನೋ ಅತ್ಯಾಚಾರಿಗಳ ಬಿಡುಗಡೆಗೆ ಕೇಂದ್ರದಿಂದ ಅನುಮೋದನೆ: ಗುಜರಾತ್‌ ಸರ್ಕಾರದ ಅಫಿಡವಿಟ್‌ನಲ್ಲಿ ಉಲ್ಲೇಖ

ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿನ ಪ್ರಸ್ತುತ ಕಾನೂನುಗಳು ಅತ್ಯಾಚಾರ ಅಪರಾಧಿಗಳ ಅಥವಾ ಜೀವಾವಧಿ ಶಿಕ್ಷೆಗೆ ಒಳಗಾದವರ ಬಿಡುಗಡೆಯನ್ನು ನಿರ್ಬಂಧಿಸುತ್ತವೆ ಎಂದು ಸೂಚಿಸಿರುವ ಹಲವಾರು ಜನರು, ಒಕ್ಕೂಟ ಸರ್ಕಾರದ ಗೃಹ ಸಚಿವಾಲಯ ಅಪರಾಧಿಗಳ ಬಿಡುಗಡೆಯನ್ನು ಅನುಮೋದಿಸಿದೆಯೇ ಎಂದು ಪ್ರಶ್ನಿಸಿದ್ದರು.

ಹಾಗಾದರೆ ಗೃಹ ಸಚಿವಾಲಯ ತನ್ನ ಪತ್ರದಲ್ಲಿ ನಿಖರವಾಗಿ ಏನು ಹೇಳಿದೆ? ಬಿಡುಗಡೆಗೆ ಸಿಬಿಐ ವಿರೋಧ ವ್ಯಕ್ತಪಡಿಸಿದ್ದು ಏಕೆ? ಮತ್ತು ಗುಜರಾತ್ ಸರ್ಕಾರ ಇನ್ನೇನು ಹೇಳಿದೆ? ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ.

ಗೃಹ ಸಚಿವಾಲಯ ಹೇಳಿದ್ದೇನು?

11 ಕೈದಿಗಳನ್ನು ಅಕಾಲಿಕವಾಗಿ ಬಿಡುಗಡೆ ಮಾಡಲು CrPC ಯ ಸೆಕ್ಷನ್ 435 ರ ಅಡಿಯಲ್ಲಿ ಒಕ್ಕೂಟ ಸರ್ಕಾರದ ಒಪ್ಪಿಗೆ ಹಾಗೂ ಅನುಮೋದನೆಯನ್ನು ತಿಳಿಸುತ್ತದೆ ಎಂದು ಗೃಹ ಸಚಿವಾಲಯವು ತನ್ನ ಪತ್ರದಲ್ಲಿ ತಿಳಿಸಿದೆ ಎಂದು ದಿ ಕ್ವಿಂಟ್ ಹೇಳಿದೆ. CrPC ಯ ಸೆಕ್ಷನ್ 435 ಕೆಲವು ಸಂದರ್ಭಗಳಲ್ಲಿ ಒಕ್ಕೂಟ ಸರ್ಕಾರದೊಂದಿಗೆ ಸಮಾಲೋಚಿಸಿದ ನಂತರ ಕಾರ್ಯನಿರ್ವಹಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುತ್ತದೆ.

ಇದನ್ನೂ ಓದಿ: ಬಿಲ್ಕಿಸ್ ಬಾನೋ ಪ್ರಕರಣ: ಕೊಲೆ, ಅತ್ಯಾಚಾರದಂತಹ ಹೀನಕೃತ್ಯ ಎಸಗಿದವರಿಗೆ ಕ್ಷಮಾದಾನ ಸರಿಯೇ?

ಸಿಬಿಐ, ವಿಶೇಷ ನ್ಯಾಯಾಧೀಶರು ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದು ಏಕೆ?

ಅಪರಾಧಿಗಳಿಗೆ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ನೀಡಿದೆ ಮತ್ತು ಅದನ್ನು ಮೇಲ್ಮನವಿ ನ್ಯಾಯಾಲಯವು ಎತ್ತಿಹಿಡಿದಿದೆ ಎಂದು ಸಿಬಿಐ ಒತ್ತಿ ಹೇಳಿದ್ದು, “ಅವರು ಮಾಡಿದ ಅಪರಾಧವು ‘ಘೋರ, ಗಂಭೀರ ಮತ್ತು ಗಂಭೀರವಾಗಿದೆ’. ಆದ್ದರಿಂದ, ಆರೋಪಿಗಳನ್ನು ಅಕಾಲಿಕವಾಗಿ ಬಿಡುಗಡೆ ಮಾಡಬಾರದು ಮತ್ತು ಅವರಿಗೆ ಯಾವುದೇ ವಿನಾಯಿತಿ ನೀಡಬಾರದು” ಎಂದು ಅದು ಹೇಳಿದೆ.

ವಿಶೇಷ ನ್ಯಾಯಾಧೀಶರು ಕೂಡ ಅವರ ಆರಂಭಿಕವಾಗಿ ಬಿಡುಗಡೆಯನ್ನು ವಿರೋಧಿಸಿದ್ದಾರೆ. “ಸಂತ್ರಸ್ತರು ನಿರ್ದಿಷ್ಟ ಧರ್ಮಕ್ಕೆ ಸೇರಿದವರು ಎಂಬ ಕಾರಣಕ್ಕೆ ಅಪರಾಧ ಎಸಗಲಾಗಿದೆ. ಈ ಪ್ರಕರಣದಲ್ಲಿ ಅಪ್ರಾಪ್ತ ಮಕ್ಕಳನ್ನು ಸಹ ಕೊಲ್ಲಲಾಗಿದೆ” ಎಂದು ಹೇಳಿದ್ದರು.

ಗುಜರಾತ್ ಸರ್ಕಾರ ಇನ್ನೇನು ಹೇಳಿದೆ?

ಬಿಲ್ಕಿಸ್ ಬಾನೋ ಪ್ರಕರಣದ 11 ಅಪರಾಧಿಗಳ 14 ವರ್ಷಗಳ ಶಿಕ್ಷೆಯ ಅವಧಿ ಮುಗಿದ ನಂತರ ಅವರ ‘ನಡವಳಿಕೆ ಉತ್ತಮವಾಗಿದೆ’ ಮತ್ತು ಕೇಂದ್ರ ಸರ್ಕಾರದ ಅನುಮೋದನೆಯ ನಂತರ ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಗುಜರಾತ್ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಇದನ್ನೂ ಓದಿ: ಬಿಲ್ಕಿಸ್ ಬಾನೋಳ ಮುಗಿಯದ ವನವಾಸ ಮತ್ತು ಸಂಸ್ಕಾರವಂತ ಅತ್ಯಾಚಾರಿಗಳು

ಸುಪ್ರೀಂಕೋರ್ಟ್ ನಿರ್ದೇಶನದಂತೆ 09.07.1992 ರ ನೀತಿಯ ಪ್ರಕಾರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದ್ದು, ‘ಆಜಾದಿ ಕಾ ಅಮೃತ್ ಮಹೋತ್ಸವ’ ಆಚರಣೆಯ ಭಾಗವಾಗಿ ಕ್ಷಮೆ ನೀಡುವ ಸುತ್ತೋಲೆ ಅಡಿಯಲ್ಲಿ ಅಲ್ಲ ಎಂದು ಹೇಳಿದೆ. ಜೊತೆಗೆ ಏಳು ಅಧಿಕಾರಿಗಳ ಅಭಿಪ್ರಾಯಗಳನ್ನು ಸರ್ಕಾರ ಪರಿಗಣಿಸಿದೆ ಎಂದು ಸುಪ್ರೀಂಕೋರ್ಟ್‌ಗೆ ಗುಜರಾತ್‌ ಸರ್ಕಾರ ತಿಳಿಸಿದೆ.

ಅಪರಾಧಿಗಳ ಅವಧಿಪೂರ್ವ ಬಿಡುಗಡೆಯ ಪ್ರಸ್ತಾವನೆಯನ್ನು ಸಿಬಿಐನ ಪೊಲೀಸ್ ಸೂಪರಿಂಟೆಂಡೆಂಟ್, ಮುಂಬೈನ ವಿಶೇಷ ಅಪರಾಧ ವಿಭಾಗ ಮತ್ತು ವಿಶೇಷ ಸಿವಿಲ್ ನ್ಯಾಯಾಧೀಶರು (ಸಿಬಿಐ), ಗ್ರೇಟರ್ ಬಾಂಬೆಯ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ವಿರೋಧಿಸಿತ್ತು. ಆದರೆ ಗುಜರಾತ್‌ನ ಎಲ್ಲಾ ಅಧಿಕಾರಿಗಳು 10 ಅಪರಾಧಿಗಳ ಬಿಡುಗಡೆಗೆ ತಮ್ಮ ಯಾವುದೇ ಆಕ್ಷೇಪಣೆಯನ್ನು ನೀಡಲಿಲ್ಲ ಎಂದು ಸರ್ಕಾರ ಹೇಳಿದೆ.

ಗುಜರಾತ್‌ ಸರ್ಕಾರ ಸುಪ್ರಿಂಕೋರ್ಟ್‌ನಲ್ಲಿ ನೀಡಿದ ಹೇಳಿಕೆಯ ನಂತರ ಗಣ್ಯರು ಹೇಳಿದ್ದೇನು?

ಅಪರಾಧಿಗಳ ಬಿಡುಗಡೆ ವಿರೋಧಿಸಿ ಸುಪ್ರಿಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಸಂಸದೆ ಮೊಹುವಾ ಮೊಯಿತ್ರ ಅವರು ಪ್ರತಿಕ್ರಿಯಿಸಿ, “ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಎಲ್ಲಾ 11 ಅಪರಾಧಿಗಳ ‘ಅಕಾಲಿಕ ಬಿಡುಗಡೆ’ಗೆ  ಸಿಬಿಐ ಇಲ್ಲ ಎಂದು ಹೇಳಿತು, ಸಿಬಿಐ ವಿಶೇಷ ನ್ಯಾಯಾಧೀಶರು ಇಲ್ಲ ಎಂದು ಹೇಳಿದರು. ಆದರೆ ಕೇಂದ್ರವು ಹೌದು ಎಂದು ಹೇಳಿದೆ. ಯಾವುದು ಕಪ್ಪು ಮತ್ತು ಯಾವುದು ಬಿಳಿ ಎಂದು ಇದೀಗ ಎಲ್ಲರಿಗೂ ಕಾಣಿಸುತ್ತಿದೆ” ಎಂದು ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಿಲ್ಕಿಸ್‌ ಬಾನೋ ಅತ್ಯಾಚಾರಿಗಳ ಸಂಭ್ರಮಾಚರಣೆ: ಆತಂಕಗೊಂಡು ಊರು ತೊರೆದ ಮುಸ್ಲಿಮರು

ಖ್ಯಾತ ಯೂಟ್ಯೂಬರ್‌ ದ್ರುವ್‌ ರಾಠಿ, “ಅತ್ಯಾಚಾರಿಗಳ ಬಿಡುಗಡೆಗೆ ಮೋದಿಜಿ ಒಪ್ಪಿಗೆ ನೀಡಿದರೇ? ಏನೇ ಮಾಡಿದರೂ ಅವರು ಯೋಚಿಸಿದ ನಂತರವೇ ಮಾಡಿರುತ್ತಾರೆ..” ಎಂದು ವ್ಯಂಗ್ಯವಾಡಿದ್ದಾರೆ.

ಪತ್ರಕರ್ತೆ ಸ್ವಾತಿ ಚತುರ್ವೇದಿ ಅವರು, “ಕೊಲೆಗಡುಕರು ಮತ್ತು ಗ್ಯಾಂಗ್ ರೇಪಿಸ್ಟ್‌ಗಳನ್ನು ಪರೋಲ್ ಮಾಡುವ ಸರ್ಕಾರವು ದುಷ್ಟತನದಿಂದ ಕೂಡಿದ್ದಾಗಿದೆ…ಯಾವುದೇ ಸುಸಂಸ್ಕೃತ ಪ್ರಜಾಪ್ರಭುತ್ವ ಕೂಡಾ ಇಂತಹ ಸರ್ಕಾರವನ್ನು ಹೊಂದಿರಬಾರದು” ಎಂದು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ಬಿಲ್ಕಿಸ್ ಬಾನೋ ಒಂದು ವೇಳೆ ವಿಮಲಾ ದೇವಿ ಆಗಿದ್ದರೆ?

ಖ್ಯಾತ ವಕೀಲ ಪ್ರಶಾಂತ್ ಭೂಷಣ್‌ ಅವರು ಪ್ರತಿಕ್ರಿಯಿಸಿ, “ಬಿಲ್ಕಿಸ್ ಬಾನೊ ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳ ಬಿಡುಗಡೆಗೆ ಕೇಂದ್ರ ಅನುಮತಿ ನೀಡಿದೆ. ಮಾಡಿದ ಅಪರಾಧವು ‘ಘೋರ ಮತ್ತು ಗಂಭೀರವಾಗಿದೆ ಮತ್ತು ಆದ್ದರಿಂದ ಅವರನ್ನು ಅಕಾಲಿಕವಾಗಿ ಬಿಡುಗಡೆ ಮಾಡಲಾಗುವುದಿಲ್ಲ’ ಮತ್ತು ಅವರಿಗೆ ಯಾವುದೇ ವಿನಾಯಿತಿಯನ್ನು ನೀಡಲಾಗುವುದಿಲ್ಲ ಎಂದು ಸಿಬಿಐ ಹೇಳಿದೆ. ಸಿವಿಲ್ ನ್ಯಾಯಾಧೀಶರೂ ಅವರ ಬಿಡುಗಡೆಯನ್ನು ವಿರೋಧಿಸಿದರು. #ಬೇಟಿ ಬಚಾವೋ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬಿಲ್ಕಿಸ್ ಬಾನೋ ಪ್ರಕರಣ: ಅಪರಾಧಿಗಳನ್ನು ಬಿಡುಗಡೆ ಮಾಡಿ ಎಂದು ಆದೇಶಿಸಿಲ್ಲ ಎಂದ ಸುಪ್ರೀಂ!

‘ಅಪರಾಧಿಯ ಬಿಡುಗಡೆಯು ನ್ಯಾಯದ ಬಗ್ಗೆಗಿನ ನನ್ನ ನಂಬಿಕೆಯನ್ನು ಅಲುಗಾಡಿಸಿದೆ’: ಬಿಲ್ಕಿಸ್ ಬಾನೊ

11 ಅಪರಾಧಿಗಳ ಬಿಡುಗಡೆಯ ನಂತರ ಮಾತನಾಡಿದ್ದ ಸಂತ್ರಸ್ತೆ ಬಿಲ್ಕಿಸ್ ಬಾನೊ, “ನನಗೆ ಮಾತುಗಳೆ ಹೊರಡುತ್ತಿಲ್ಲ. ನಾನು ಮತ್ತಷ್ಟು ನಿಸ್ತೇಜಗೊಂಡಿದ್ದೇನೆ. ಇಂದು ನಾನು ಇದನ್ನು ಮಾತ್ರ ಹೇಳಬಲ್ಲೆ, ಯಾವುದೇ ಮಹಿಳೆಗೆ ನ್ಯಾಯ ಹೀಗೆ ಕೊನೆಗೊಳ್ಳಬಹುದೆ?” ಎಂದು ಕೇಳಿದ್ದರು.

ಅವರ ವಕೀಲರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ,“ನನ್ನ ಕುಟುಂಬ ಮತ್ತು ನನ್ನ ಜೀವನವನ್ನು ನಾಶಪಡಿಸಿದ, ನನ್ನ ಮೂರು ವರ್ಷದ ಮಗಳನ್ನು ನನ್ನಿಂದ ಕಿತ್ತುಕೊಂಡ 11 ಅಪರಾಧಿಗಳು ಸ್ವತಂತ್ರವಾಗಿ ಹೊರಗೆ ಹೋದರು ಎಂದು ನಾನು ಕೇಳಿದಾಗ, ಕಳೆದ 20 ವರ್ಷಗಳ ಆಘಾತವು ನನ್ನನ್ನು ಮತ್ತೆ ತೊಳೆದುಹಾಕಿತು.” ಎಂದು ಹೇಳಿದ್ದರು.

“ಸರ್ಕಾರದ ಈ ಕ್ರಮವು ಭಾರತದ ನ್ಯಾಯ ವ್ಯವಸ್ಥೆಯ ಮೇಲೆ ನನಗಿದ್ದ ನನ್ನ ನಂಬಿಕೆಯನ್ನು ಕಿತ್ತುಕೊಂಡಿದೆ. ನಾನು ನಮ್ಮ ನೆಲದಲ್ಲಿ ನ್ಯಾಯಾಲಯಗಳನ್ನು ನಂಬಿದ್ದೇನೆ. ನಾನು ವ್ಯವಸ್ಥೆಯನ್ನು ನಂಬಿದ್ದು, ನನ್ನ ಆಘಾತದಿಂದ ಹೊರ ಬಂದು ಬದುಕಲು ನಿಧಾನವಾಗಿ ಕಲಿಯುತ್ತಿದ್ದೇನೆ. ಇದೀಗ ಅಪರಾಧಿಗಳ ಬಿಡುಗಡೆಯು ನನ್ನಿಂದ ನನ್ನ ಶಾಂತಿ ಕಿತ್ತುಕೊಂಡಿದೆ ಮತ್ತು ನ್ಯಾಯದಲ್ಲಿ ಇದ್ದ ನನ್ನ ನಂಬಿಕೆಯನ್ನು ಅಲ್ಲಾಡಿಸಿದೆ” ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ಮಹಿಳೆಯ ಬಗ್ಗೆ ಮೋದಿ ಆಡಿದ ಮಾತಿಗೆ ಅರ್ಥವಿಲ್ಲವೆ?: ಬಿಲ್ಕಿಸ್‌ ಬಾನೋ ಅತ್ಯಾಚಾರಿಗಳ ಬಿಡುಗಡೆ ಬಳಿಕ ಪ್ರತಿಪಕ್ಷಗಳ ವಾಗ್ದಾಳಿ

“ನನ್ನ ದುಃಖ ಮತ್ತು ನನ್ನ ಅಸ್ಥಿರ ನಂಬಿಕೆ ನನಗೆ ಮಾತ್ರವಲ್ಲ, ನ್ಯಾಯಾಲಯಗಳಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿರುವ ಪ್ರತಿಯೊಬ್ಬ ಮಹಿಳೆಯದ್ದಾಗಿದೆ. ಇಂತಹ ದೊಡ್ಡ ಮತ್ತು ಅನ್ಯಾಯದ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನನ್ನ ಸುರಕ್ಷತೆ ಮತ್ತು ಯೋಗಕ್ಷೇಮದ ಬಗ್ಗೆ ಯಾರೂ ವಿಚಾರಿಸಲಿಲ್ಲ. ನಾನು ಗುಜರಾತ್ ಸರ್ಕಾರಕ್ಕೆ ಮನವಿ ಮಾಡುತ್ತೇನೆ, ದಯವಿಟ್ಟು ಇದನ್ನು ರದ್ದುಗೊಳಿಸಿ. ಭಯವಿಲ್ಲದೆ ಮತ್ತು ಶಾಂತಿಯಿಂದ ಬದುಕುವ ನನ್ನ ಹಕ್ಕನ್ನು ನನಗೆ ಮರಳಿ ನೀಡಿ” ಎಂದು ಅವರು ಹೇಳಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...