Homeಅಂಕಣಗಳುಧರ್ಮಗಳನು ಮೀರಿದ ಈ ಮಾತೃತ್ವ

ಧರ್ಮಗಳನು ಮೀರಿದ ಈ ಮಾತೃತ್ವ

- Advertisement -
- Advertisement -

ಗೌರಿ ಲಂಕೇಶ್
20 ಆಗಸ್ಟ್, 2008 (`ಕಂಡಹಾಗೆ’ ಸಂಪಾದಕೀಯದಿಂದ) |

ನಾನು ಸಿನಿಕಳಲ್ಲ. ಆದ್ದರಿಂದ ನಮ್ಮ ದೇಶಕ್ಕೆ ಇನ್ನೂ ಭವಿಷ್ಯವಿದೆ ಇಲ್ಲಿ ಜಾತಿ, ಧರ್ಮ ದಂತಹ ಭೇದಗಳನ್ನು ಮೀರುವ ಜನರಿದ್ದಾರೆ. ಮಮತೆ ಮತ್ತು ಮಾನವೀಯತೆಗೆ ಇನ್ನೂ ಮೌಲ್ಯವಿದೆ ಎಂದು ಸಾರುವ ಒಂದು ನಿಜ ಕಥೆಯನ್ನು ಇಲ್ಲಿ ಹೇಳುತ್ತೇನೆ. ಈ ಕತೆಯ ಕೇಂದ್ರಬಿಂದು ವಿವೇಕ್ ಅಲಿಯಾಸ್ ಮುಜಾಫರ್ ಎಂಬ ಎಂಟು ವರ್ಷದ ಬಾಲಕ. ಮುಖ್ಯಪಾತ್ರಧಾರಿಗಳು ಆತನಿಗೆ ಜನ್ಮಕೊಟ್ಟ ಜಬುನ್ನೀಸಾ ಮತ್ತು ಸಲೀಂ ಎಂಬ ಮುಸ್ಲಿಂ ದಂಪತಿಗಳು ಹಾಗೂ ಆತನನ್ನು ಕಳೆದ ಆರು ವರ್ಷಗಳಿಂದ ಅಕ್ಕರೆಯಿಂದ ಸಾಕಿರುವ ವೀಣಾಪಟ್ನಿ ಎಂಬ ಹಿಂದೂ ತಾಯಿ.
ವಿವೇಕ್ ಅಲಿಯಾಸ್ ಮುಜಾಫರ್‍ನ ಕಥೆ ಪ್ರಾರಂಭವಾಗುವುದು 2002ರಿಂದ. ಅದು ಫೆಬ್ರವರಿ 28. ಹಿಂದಿನ ದಿನವೇ ಗೋದ್ರದಲ್ಲಿ ಸಬರಮತಿ ರೈಲಿನ ಹಲವು ಬೋಗಿಗಳಿಗೆ ಬೆಂಕಿ ಬಿದ್ದು 59 ಅಮಾಯಕರು ಆಹುತಿಯಾಗಿದ್ದರು. ಅದಕ್ಕೆ ಪ್ರತಿಯಾಗಿ ಅಮಾಯಕ ಮುಸಲ್ಮಾನರ ಮೇಲೆ ಹಿಂದುತ್ವವಾದಿಗಳ ದಾಳಿ ಶುರುವಾಗಿತ್ತು.
ಸಲೀಂ ತನ್ನ 2 ವರ್ಷದ ಮಗ ಮುಜಾಫರ್‍ನೊಂದಿಗೆ ಅಹಮದಾಬಾದಿನ ಗುಲ್ಬರ್ಗ್ ಸೊಸೈಟಿಗೆ ಹೋಗಿದ್ದರು. ಆಗ ಅಲ್ಲೇ ಇದ್ದ ಕಾಂಗ್ರೆಸ್‍ನ ಮಾಜಿ ಸಂಸದ ಇಶಾನ್ ಜಾಫ್ರಿಯವರ ಮನೆ ಮೇಲೆ ಹಿಂದೂತ್ವವಾದಿಗಳ ಗುಂಪೊಂದು ದಾಳಿ ಇಟ್ಟು, ಜಾಫ್ರಿ ಅವರನ್ನು ತುಂಡು ತುಂಡಾಗಿ ಕತ್ತರಿಸಿ ಕೊಂದಿತ್ತಲ್ಲದೆ, ಅವರ ಮನೆಗೆ ಬೆಂಕಿ ಇಟ್ಟು ಅವತ್ತು ಅವರೊಂದಿಗಿದ್ದ ಎಷ್ಟೋ ಜನರನ್ನು ಕೊಂದು ಹಾಕಿತು. ಇಂತಹ ಅಮಾನುಷ ಗುಂಪಿನಿಂದ ತಪ್ಪಿಸಿಕೊಳ್ಳಲು ಸಲೀಂ ಓಡಿದರು. ಅವರು ವಾಪಸ್ಸು ಬಂದಾಗ, ಹಿಂದುತ್ವವಾದಿಗಳ ಗುಂಪು ಕೊಂದು ಹಾಕಿದ್ದ ಅವರ ಅಜ್ಜಿಯ ಹೆಣ ಇತ್ತೇ ಹೊರತು ಮಗ ಮುಜಾಫರ್‍ನ ಸುಳಿವಿರಲಿಲ್ಲ. ಸುಮಾರು ಎರಡು ತಿಂಗಳ ಕಾಲ ನಡೆದ ಮಾರಣ ಹೋಮದಲ್ಲಿ ಸುಮಾರು ಮೂರು ಸಾವಿರ ಮುಸಲ್ಮಾನರು ಸಾವನ್ನಪ್ಪಿದರೆ, 400ಕ್ಕೂ ಹೆಚ್ಚು ಜನ ಮತ್ತು ಮಕ್ಕಳು ನಾಪತ್ತೆಯಾದರು.
ಅವತ್ತಿನಿಂದ ಮುಜಾಫರ್‍ಗಾಗಿ ತುಂಬಾ ಹುಡುಕಾಡಿದರು, ಪೊಲೀಸರಿಗೆ ದೂರು ನೀಡಿದರು, ತಮ್ಮ ಮಗ ಎಲ್ಲೋ ಸುರಕ್ಷಿತವಾಗಿದ್ದಾನೆ, ಸಿಕ್ಕೇ ಸಿಗುತ್ತಾನೆ ಎಂಬ ಆಶೆಯಲ್ಲಿ ಬದುಕುತ್ತಿದ್ದರು.

veena patni and muzaffar

ಅವರಿಗೆ ಗೊತ್ತಿಲ್ಲದಿದ್ದು ಏನೆಂದರೆ ಪ್ರವೀಣ್ ಪಟ್ನಿ ಎಂಬ ಪೊಲೀಸ್ ಪೇದೆ ತನಗೆ ಸಿಕ್ಕ ಮುಜಾಫರ್‍ನನ್ನು ತನ್ನ ಸಂಬಂಧಿಕರಾದ ವಿಕ್ರಮ್ ಮತ್ತು ವೀಣಾ ಪಟ್ನಿ ಎಂಬ ದಂಪತಿಗಳಿಗೆ ನೀಡಿದ್ದ. ಪಟ್ನಿ ದಂಪತಿಗಳು ಮಕ್ಕಳಿಲ್ಲದವರಾಗಿರಲಿಲ್ಲ, ಹಣವಂತರೂ ಆಗಿರಲಿಲ್ಲ. ಅವರಿಬ್ಬರಿಗೆ ಬೆಳೆದು ನಿಂತಿದ್ದ 4 ಮಕ್ಕಳಿದ್ದರು. ವಿಕ್ರಂ ಕೂಲಿ ಕೆಲಸ ಮಾಡುತ್ತಿದ್ದರೆ, ವೀಣಾ ಮೀನು ಮಾರಿ ಹಣ ಸಂಪಾದಿಸುತ್ತಿದ್ದರು.
ನಾನು ಯಾರು, ಎಲ್ಲಿಂದ ಬಂದೆ ಎಂಬುದು ಗೊತ್ತಿರದ 2 ವರ್ಷದ ಬಾಲಕ ತಮ್ಮ ಸುಪರ್ದಿಗೆ ಬಂದ ನಂತರ ಆತನಿಗೆ ವಿವೇಕ್ ಎಂದು ಮರುನಾಮಕರಣ ಮಾಡಿದ ಪಟ್ನಿ ದಂಪತಿಗಳು ಅವನನ್ನು ಪ್ರೀತಿಯಿಂದಲೇ ಸಲಹಲಾರಂಭಿಸಿದರು. ಆತನಿಗೆ ಕೈತುತ್ತು ನೀಡುತ್ತಾ, ಕೈ ಹಿಡಿದು ನಡೆಸುತ್ತ, ಜೋಗುಳ ಹಾಡುತ್ತಾ, ಆತ ತನಗೆ ಹುಟ್ಟಿದ ಮಗು ಎಂಬಷ್ಟು ಅಕ್ಕರೆಯಿಂದ ವೀಣಾ ಬೆಳೆಸಿದರು.
ಇತ್ತ ತೀಸ್ತಾ ಸೆಟಲ್ವಾಡ್‍ರ ನೆರವಿನೊಂದಿಗೆ ಮಗನಿಗಾಗಿ ಹುಡುಕಾಟವನ್ನು ಸಲೀಂ, ಜಬುನ್ನೀಸಾ ಮುಂದುವರಿಸಿದ್ದರು. ಕೊನೆಗೂ ಮುಜಾಫರ್ ಎಲ್ಲಿದ್ದಾನೆ ಎಂದು ಪತ್ತೆ ಹೆಚ್ಚಿದ ಅವರು ಆತನನ್ನು ಹಿಂದಿರುಗಿಸುವಂತೆ ಕೇಳಿಕೊಂಡರು. ವಿವೇಕ್ ಅವರ ಮಗ ಎಂಬುದಕ್ಕೆ ಸಾಕ್ಷಿ ಏನೆಂದು ವೀಣಾ ಪ್ರಶ್ನಿಸಿದಾಗ ಸಲೀಂ ಮತ್ತು ವಿವೇಕ್ ಆಲಿಯಾಸ್ ಮುಜಾಫರ್ ಡಿಎನ್‍ಎ ಪರೀಕ್ಷಿಸಲಾಯಿತು. ಅದರಿಂದ ವಿವೇಕ್ ನಿಜವಾಗಲೂ ಸಲೀಂ ಮತ್ತು ಜಬುನ್ನೀಸ್ಸಾರ ಮಗ ಎಂದು ಸಾಬೀತಾಯಿತು.
ಆದರೆ ಆರು ವರ್ಷಗಳ ಕಾಲ ಆತನನ್ನು ತನ್ನ ಮಗನೆಂದು ಬೆಳೆಸಿದ್ದ ವೀಣಾ ಅವನನ್ನು ಹೆತ್ತವರಿಗೆ ಹಿಂದಿರುಗಿಸಲು ಒಪ್ಪಲಿಲ್ಲ. ಆಗ ಸಲೀಂ ಮತ್ತು ಜಬುನ್ನೀಸಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅವರ ದುರಂತಕ್ಕೆ ವಿವೇಕನಿಗೆ ತನಗೆ ಜನ್ಮ ನೀಡಿರುವವವರ ನೆನಪೇ ಇರಲಿಲ್ಲ ಮಾತ್ರವಲ್ಲ, ನ್ಯಾಯಾಧೀಶರ ಮುಂದೆ ತಾನು ವೀಣಾ ಅಮ್ಮನೊಂದಿಗೆ ಇರುತ್ತೇನೆ ಎಂದ. ಕಾನೂನಿನ ಪ್ರಕಾರ ಆತ ಹೆತ್ತವರಿಗೆ ಸೇರಬೇಕಿದ್ದರು ಆ ಬಾಲಕನ ಮನಸ್ಸನ್ನು ನೋಯಿಸಬಾರದು ಎಂದು ಅವನನ್ನು ವೀಣಾರೊಂದಿಗೆ ಬಿಡಲಾಯಿತು.
ಸಲೀಂ ಮತ್ತು ಜಬುನ್ನಿಸ್ಸಾರಿಗೆ ತಮ್ಮ ಮಗನ ಮೇಲೆ ವೀಣಾರವರಿಗೆ ಇರುವ ಪ್ರೀತಿ ಅರ್ಥವಾಗುತ್ತದೆ. ಹಾಗಂತ ಹೆತ್ತ ಕುಡಿಯನ್ನು ಮರೆತು ಸುಮ್ಮನಿರಲಾಗುವುದಿಲ್ಲ. ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸುವ ಸಲೀಂ “ವೀಣಾ ನನ್ನ ಮಗನ ದೊಡ್ಡಮ್ಮ ಆಗಿರಲಿ, ನನ್ನ ಹೆಂಡತಿಯೇ ಆತನಿಗೆ ಚಿಕ್ಕಮ್ಮನಾಗಿರಲಿ. ನಾನು ಅವರನ್ನು ಅತ್ತಿಗೆಯಂತೆ ನೋಡಿಕೊಳ್ಳುತ್ತೇನೆ. ಆದರೆ ನಮಗೆ ನಮ್ಮ ಮಗ ಬೇಕು” ಎನ್ನುತ್ತಾರೆ.
ಬರ್ಟೋಲ್ಡ್ ಬ್ರೆಕ್ಟ್ ರವರ ‘ಕಕೇಶಿಯನ್ ಚಾಕ್ ಸರ್ಕಲ್’ ಎಂಬ ನಾಟಕದಲ್ಲಿ ಹೆತ್ತ ತಾಯಿಯೇ ತನ್ನ ಮಗನನ್ನು ಎಳೆದಾಡಲು ಸಿದ್ಧರಿರುತ್ತಾಳೆ. ಆದರೆ ಆತನನ್ನು ಸಾಕಿ ಸಲುಹಿದ ದತ್ತು ತಾಯಿ ಅವರಿಗೆ ನೋವಾಗಕೂಡದೆಂದು ಅವನನ್ನು ತನ್ನತ್ತ ಎಳೆಯಲು ನಿರಾಕರಿಸುತ್ತಾಳೆ.
ಆದರೆ ಬೈಬಲ್‍ನಲ್ಲಿ ಬರುವ ‘ಜಡ್ಜ್‍ಮೆಂಟ್ ಆಫ್ ಸೋಲಮನ್’ ಪ್ರಸಂಗದಲ್ಲಿ ನ್ಯಾಯಾಧೀಶ ಸೊಲಮನ್ ಮಗುವನ್ನು ಕತ್ತರಿಸಿ ಇಬ್ಬರು ತಾಯಂದಿರಿಗೆ ಹಂಚಲು ತಯಾರಾದಾಗ, ಆತನನ್ನು ಹೆತ್ತ ತಾಯಿ “ತನ್ನ ಮಗುವನ್ನು ಕೊಲ್ಲಬೇಡಿ ಅವಳಿಗೆ ಕೊಡಿ” ಎಂದು ಕಣ್ಣೀರಿಡುತ್ತಾಳೆ.
ಅಂದರೆ ಹೆತ್ತ ತಾಯಿಯ ಪ್ರೀತಿ ದೊಡ್ಡದು, ಸಾಕಿ ಸಲುಹಿದ ತಾಯಿಯ ಮಮತೆ ಹೆಚ್ಚಿನದು ಎಂದು ತೀರ್ಮಾನಿಸುವುದು ಸುಲಭವಲ್ಲ. ಇವತ್ತು ಜಾತಿ, ಧರ್ಮ, ಅಂತಸ್ತು ಎಂದೆಲ್ಲ ಬಹಳಷ್ಟು ಜನ ಅಂಧರಾಗಿರುವಾಗ ಈ ಪುಟ್ಟ ಬಾಲಕ ಮತ್ತು ಆತನ ಇಬ್ಬರು ತಾಯಂದಿರು ಅವುಗಳನ್ನೆಲ್ಲ ಮೀರಿ ಮಾತೃತ್ವ, ಮಮತೆ ಮತ್ತು ಮಾನವೀಯತೆಯ ಪ್ರತಿಬಿಂಬಗಳಾಗಿದ್ದಾರೆ.
ಈಗಾಗಲೇ ಧರ್ಮದ ಹೆಸರಲ್ಲಿ ಸಾಕಷ್ಟು ದ್ವೇಷ ಮತ್ತು ರಕ್ತಪಾತವನ್ನು ಕಂಡಿರುವ ಗುಜರಾತ್ ಈ ಪ್ರಕರಣದಲ್ಲಾದರೂ ತನ್ನ ಅಂತರಾಳದಲ್ಲಿರುವ ಮನುಷ್ಯತ್ವವನ್ನು ಕಂಡುಕೊಳ್ಳುವಂತಾಗಲಿ.
ಹಾಗಾದರೆ ಎಷ್ಟು ಚೆನ್ನ ಅಲ್ಲವೇ….

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ವೆಟ್ಟುವಂ’ ಪಾ.ರಂಜಿತ್ ಅವರ ಅದ್ಭುತ ಅಪೋಕಲಿಪ್ಟಿಕ್ ಆಕ್ಷನ್ ಸಿನಿಮಾ: ರಂಗನಾಥ್ ಆರ್. ವಿ

ತಮಿಳಿನ ಖ್ಯಾತ ನಿರ್ದೇಶಕ ಪಾ.ರಂಜಿತ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ವೆಟ್ಟುವಂ' ಚಿತ್ರವನ್ನು 'ಲರ್ನ್ ಆಂಡ್ ಟೀಚ್ ಪ್ರೊಡಕ್ಷನ್' ಸಂಸ್ಥೆಯ ಸಹಯೋಗದೊಂದಿಗೆ, ಪಾ.ರಂಜಿತ್ ಅವರ 'ನೀಲಂ ಪ್ರೊಡಕ್ಷನ್ಸ್' ನಿರ್ಮಿಸಿದೆ. ಈ ಚಿತ್ರದ ಜಗತ್ತನ್ನು ಪರಿಚಯಿಸುವ...

SIR ಮೋಸ: ಅಗತ್ಯಬಿದ್ದರೆ ಕಾಂಗ್ರೆಸ್‌ನಿಂದ ಕಾನೂನು ಹೋರಾಟ ಬಿ.ಕೆ. ಹರಿಪ್ರಸಾದ್ ಎಚ್ಚರಿಕೆ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ 2026ರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ತಾಂತ್ರಿಕ ಲೋಪಗಳು, ಅಂಕಿಅಂಶಗಳ ವ್ಯತ್ಯಾಸ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ಪಷ್ಟತೆಯ ಕೊರತೆ ಎದ್ದುಕಾಣುತ್ತಿದೆ ಎಂದು...

ವಿಚಾರಣೆಯಿಲ್ಲದೆ ಆರು ವರ್ಷ ಜೈಲುವಾಸ: ಉಮರ್ ಖಾಲಿದ್ ಹೋರಾಟದ ಹಾದಿ

ಸೆಪ್ಟೆಂಬರ್ 13, 2020 ರಂದು, ಮಾನವ ಹಕ್ಕುಗಳ ಯುವ ಕಾರ್ಯಕರ್ತ ಉಮರ್ ಖಾಲಿದ್ ಅವರನ್ನು ದೇಶದ ರಾಜಧಾನಿಯಲ್ಲಿ ಗುರಿಯಾಗಿಸಿಕೊಳ್ಳಲಾಯಿತು. ವಿಚಾರಣೆಯೇ ಇಲ್ಲದೆ ಅವರು ಜೈಲಿನಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಸರ್ಕಾರದ ವಿರುದ್ಧದ ರಾಜಕೀಯ...

ಕನ್ವರ್ ಯಾತ್ರೆ ವೇಳೆ 18 ದ್ವೇಷ ಘಟನೆಗಳು: ಮುಸ್ಲಿಮರು, ಅವರ ವ್ಯಾಪಾರಗಳನ್ನು ಗುರಿಯಾಗಿಸಿಕೊಂಡ ಪ್ರಕರಣಗಳೇ ಹೆಚ್ಚು; APCR ವರದಿ

ನವದೆಹಲಿ: 2026ರ ಕನ್ವರ್ ಯಾತ್ರೆಯ 13 ದಿನಗಳ ಅವಧಿಯಲ್ಲಿ ಹಿಂಸಾಚಾರ, ಬಲವಂತ, ತಾರತಮ್ಯ, ಆರ್ಥಿಕ ಬಹಿಷ್ಕಾರ ಹಾಗೂ ಸಾರ್ವಜನಿಕ ಅಶ್ಲೀಲ ವರ್ತನೆಗೆ ಸಂಬಂಧಿಸಿದ ಕನಿಷ್ಠ 18 ಘಟನೆಗಳು ವರದಿಯಾಗಿವೆ ಎಂದು ನಾಗರಿಕ ಹಕ್ಕುಗಳ...

ಸಿಐಟಿಯು ಕಾನೂನು ಹೋರಾಟಕ್ಕೆ ಮೊದಲ ಜಯ: ಕನಿಷ್ಠ ವೇತನ ತಡೆಹಿಡಿದಿದ್ದ ಸರ್ಕಾರದ ಮೂರು ಸುತ್ತೋಲೆಗಳಿಗೆ ಹೈಕೋರ್ಟ್ ತಡೆ

ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರ ಹೊಸ ಕನಿಷ್ಠ ವೇತನವನ್ನು ತಡೆಹಿಡಿದಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಹೊಸ ವೇತನ ನೀಡುವುದನ್ನು ಅಮಾನತಿನಲ್ಲಿಟ್ಟಿದ್ದ ಸರ್ಕಾರದ ಮೂರು...

ಟಿಎಂಸಿ ಹೆಸರು, ಚಿಹ್ನೆ ಫ್ರೀಜ್: ಮಮತಾ ಬ್ಯಾನರ್ಜಿಗೆ ‘ಫುಟ್‌ಬಾಲ್ ಪ್ಲೇಯರ್’, ಬಂಡಾಯ ಬಣಕ್ಕೆ ‘ಲಕೋಟೆ’ ಚಿಹ್ನೆ ನೀಡಿದ ಚುನಾವಣಾ ಆಯೋಗ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂಲ ಹೆಸರು ಮತ್ತು ಸಾಂಪ್ರದಾಯಿಕ 'ಹೂವು-ಹುಲ್ಲು' ಚಿಹ್ನೆಯನ್ನು ಮುಟ್ಟುಗೋಲು (ಫ್ರೀಜ್) ಹಾಕಿದ ನಂತರ, ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಎರಡೂ ಎದುರಾಳಿ ಬಣಗಳಿಗೆ ಪ್ರತ್ಯೇಕ ಮಧ್ಯಂತರ ಹೆಸರು...

‘ರೋಹಿತ್ ವೇಮುಲಾ ಸ್ಥಿತಿ ನನಗೆ ಬಾರದಿರಲಿ..’; ವಿದೇಶದಲ್ಲಿ ಕಷ್ಟಕ್ಕೆ ಸಿಲುಕಿದ ತಮಿಳುನಾಡಿನ ದಲಿತ ಸಂಶೋಧಕ

ಮಲೇಷ್ಯಾದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ತಮಿಳುನಾಡಿನ ದಲಿತ ಸಂಶೋಧನಾ ವಿದ್ಯಾರ್ಥಿ ಭಾರತಿ ದಾಸನ್ ರಾಮನ್, ತಮಿಳುನಾಡು ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯು ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ ಎಂದು 'ದಿ ನ್ಯೂಸ್‌ ಮಿನಿಟ್'...

DUSU ಚುನಾವಣೆ: ಮತದಾನ ಆರಂಭ; ವಿಜಯೋತ್ಸವ ಮೆರವಣಿಗೆಗೆ ದೆಹಲಿ ಹೈಕೋರ್ಟ್ ತಡೆ

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (DUSU) 2026-27ನೇ ಸಾಲಿನ ಚುನಾವಣೆಗೆ ಶುಕ್ರವಾರ (ಸೆ.18) ಮತದಾನ ಆರಂಭವಾಗಿದೆ. ಬೆಳಗಿನ ಅವಧಿಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 8:30ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಸಂಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ...

ಕರಾವಳಿ ಇತಿಹಾಸದಲ್ಲೇ ಪ್ರಥಮ: ಮಂಗಳೂರಿನಲ್ಲಿ ಸಿಎಂ ‘ಡಿ.ಕೆ ಶಿವಕುಮಾರ್’ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ

ಕರಾವಳಿ ಕರ್ನಾಟಕದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ (Cabinet) ಸಭೆಯು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪಡೀಲ್‌ನಲ್ಲಿರುವ ನೂತನ 'ಪ್ರಜಾ ಸೌಧ'ದಲ್ಲಿ (ಜಿಲ್ಲಾಡಳಿತ ಸೌಧ) ಶುಕ್ರವಾರ ವಿಜೃಂಭಣೆಯಿಂದ ಆರಂಭವಾಗಿದೆ....

ಟಿಎಂಸಿ ಹೆಸರು, ಚಿಹ್ನೆ ಬಳಕೆಗೆ ತಡೆ: ಚುನಾವಣಾ ಆಯೋಗದ ಆದೇಶ ‘ಕಾನೂನಿಗೆ ವಿರುದ್ಧ’ ಎಂದ ಮಮತಾ ಬಣ, ಆದೇಶ ಸ್ವಾಗತಿಸಿದ ಬಂಡಾಯ ಪಾಳಯ 

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತ ರಾಜಕಾರಣದಲ್ಲಿ ಪ್ರಮುಖ ಶಕ್ತಿಯಾಗಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ)ಯ ಆಂತರಿಕ ಬಿಕ್ಕಟ್ಟು ಇದೀಗ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯ ಮೇಲಿನ ಹಕ್ಕಿನ ಸಂಘರ್ಷವಾಗಿ ತೀವ್ರಗೊಂಡಿದೆ. ಟಿಎಂಸಿಯ ಎರಡು...