ಅಪ್ರಾಪ್ತ ಬಾಲಕಿಯ ಕೈ ಹಿಡಿದು ಕಿರುಕುಳ ಕೊಟ್ಟಿದ್ದ ಆರೋಪಿಗೆ ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠವು ನಿರೀಕ್ಷಣಾ ಜಾಮೀನು ನೀಡಿದೆ. ಸಂತ್ರಸ್ತೆಯ ಹೇಳಿಕೆಯು ಯಾವುದೇ “ಲೈಂಗಿಕ ಉದ್ದೇಶ”ವನ್ನು ಸೂಚಿಸುವುದಿಲ್ಲ ಎಂದು ಹೇಳಿದೆ.
ಆರೋಪಿ, ಆಟೋರಿಕ್ಷಾ ಚಾಲಕನ ಬಂಧನದ ಜಾಮೀನು ಅರ್ಜಿಯನ್ನು ಫೆಬ್ರವರಿ 10ರಂದು ನ್ಯಾಯಮೂರ್ತಿ ಭಾರತಿ ಡಾಂಗ್ರೆ ಅವರು ಕೈಗೆತ್ತಿಕೊಂಡು ವಿಚಾರಣೆ ನಡೆಸಿದರು. ವಿಚಾರಣೆ ಬಳಿಕ ಸೋಮವಾರ ವಿವರವಾದ ಆದೇಶವನ್ನು ನೀಡಿದ್ದಾರೆ.
17 ವರ್ಷದ ಬಾಲಕಿಯ ತಂದೆ, ಆರೋಪಿಯ ವಿರುದ್ಧ ಯವತ್ಮಾಲ್ನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಆಟೋರಿಕ್ಷಾ ಚಾಲಕನ ವಿರುದ್ಧ, ಅಪ್ರಾಪ್ತ ಬಾಲಕಿಗೆ ಕಿರುಕಳ ನೀಡಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಇದನ್ನೂ ಓದಿ:ಅಗ್ನಿಪಥ್ ಯೋಜನೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿ ವಜಾ; ದೆಹಲಿ ಹೈಕೋರ್ಟ್ ತೀರ್ಪು
ದೂರುದಾರರ ಪ್ರಕಾರ, ಅವರ ಮಗಳು ಕಾಲೇಜಿಗೆ ಮತ್ತು ಟ್ಯೂಷನ್ಗೆ ಹೋಗಲು ಆರೋಪಿಯ ಆಟೋರಿಕ್ಷಾದಲ್ಲಿ ಕೆಲ ದಿನಗಳವರೆಗೆ ಪ್ರಯಾಣಿಸಿದ್ದಳು. ಆಕೆ ಆ ಆಟೋರಿಕ್ಷಾದಲ್ಲಿ ಹೋಗುವುದನ್ನು ನಿಲ್ಲಿಸಿದ ನಂತರ, ಆಕೆಯ ಹಿಂದೆಬಿದ್ದು ಆರೋಪಿಯು ಕಿರುಕುಳ ನೀಡಿದ್ದಾನೆ ಎಂದು ಹೇಳಲಾಗಿದೆ.
ನವೆಂಬರ್ 1, 2022 ರಂದು, ಆರೋಪಿಯು ತನ್ನ ಮೋಟರ್ಸೈಕಲ್ನಲ್ಲಿ ಹಿಂಬದಿ ಕುಳಿತುಕೊಳ್ಳಲು ಒತ್ತಾಯ ಮಾಡಿದ್ದಾನೆ. ಆಗ ಬಾಲಕಿಯು ನಿರಾಕರಿಸಿದಾಗ ಆಕೆಯ ಕೈ ಹಿಡಿದು ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಯು ಅವಳನ್ನು ಮನೆಗೆ ಬಿಡುವುದಾಗಿ ಹೇಳಿದ್ದಾನೆ ಆದರೆ ಬಾಲಕಿ ವಿರೋಧ ವ್ಯಕ್ತಪಡಿಸಿದ್ದಾಳೆ. ಆದರೂ ಆತ ಬಲವಂತಪಡಿಸಿದಾಗ ಬಾಲಕಿ ಆ ಸ್ಥಳದಿಂದ ಓಡಿಹೋದಳು ಎಂದು ದೂರುದಾರರು ಪೊಲೀಸರಿಗೆ ತಿಳಿಸಿದ್ದಾರೆ.
“ಅರ್ಜಿದಾರರು (ಆರೋಪಿ) ಮೇಲ್ನೋಟಕ್ಕೆ ಯಾವುದೇ ಲೈಂಗಿಕ ಕಿರುಕುಳ ನೀಡಿಲ್ಲ ಎಂಬುದು ತಿಳಿದುಬಂದಿದೆ, ಏಕೆಂದರೆ ಅರ್ಜಿದಾರರು ಯಾವುದೇ ಲೈಂಗಿಕ ಉದ್ದೇಶದಿಂದ ಆಕೆಯ ಕೈಯನ್ನು ಹಿಡಿದಿಲ್ಲ ಹಾಗಾಗಿ ಇದು ಕಾನೂನು ಕ್ರಮ ಜರುಗಿಸುವ ಪ್ರಕರಣವಲ್ಲ” ಎಂದು ನ್ಯಾಯಾಲಯ ತನ್ನ ಆದೇಶದ ಹೇಳಿಕೆಯಲ್ಲಿ ತಿಳಿಸಿದೆ.
“ಸಂತ್ರಸ್ತೆಯ ಹೇಳಿಕೆಯಿಂದ ಅಲ್ಲಿ ಆರೋಪಿಯಿಂದ ಯಾವುದೇ ಲೈಂಗಿಕ ಉದ್ದೇಶ ಇದೆ ಎನ್ನುವುದು ಕಂಡುಬರುವುದಿಲ್ಲ. ಹಾಗಾಗಿ ಆರೋಪಿಯು ಜಾಮೀನಿಗೆ ಅರ್ಹನಾಗಿದ್ದಾನೆ” ಎಂದರು.
ಆರೋಪಿಯು ಮುಂದೆ ಈ ರೀತಿ ನಡೆದುಕೊಳ್ಳಬಾರದು, ಒಂದು ವೇಳೆ ಹೀಗೆ ಮಾಡಿದರೆ, ಈಗ ನೀಡಿರುವ ಜಾಮೀನನ್ನು ಹಿಂಪಡೆಯಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.