Homeಕರ್ನಾಟಕಗುಂಡ್ಲುಪೇಟೆ ಅಮಾನವೀಯ ಕ್ರೌರ್ಯಕ್ಕೆ ಜಾತಿ ಕಾರಣವಲ್ಲವೇ?

ಗುಂಡ್ಲುಪೇಟೆ ಅಮಾನವೀಯ ಕ್ರೌರ್ಯಕ್ಕೆ ಜಾತಿ ಕಾರಣವಲ್ಲವೇ?

- Advertisement -
- Advertisement -

| ಅನಿಲ್ ಕುಮಾರ್ ಚಿಕ್ಕದಾಳವಟ್ಟ |

ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ಫೇಕ್‍ಸುದ್ದಿಗಳನ್ನು ಶೇರ್ ಮಾಡಿದ್ದನ್ನೆ ಬಲವಾಗಿ ನಂಬಿದ ಕಾರಣ ಅಮಾಯಕ ಬಡವರನ್ನು ಮಕ್ಕಳ ಕಳ್ಳರು ಎಂದು ಶಂಕಿಸಿ ಕೊಲೆ ಮಾಡಿದ ಘಟನೆಗಳು ಒಮ್ಮೆ ಸರಣಿಯಾಗಿ ನಡೆದಿದ್ದು ನಿಮಗೆ ಇನ್ನೂ ನೆನಪಿರಬಹುದು. ಇದು ಈ ಆಧುನಿಕ ಕಾಲದಲ್ಲಿ ಸೋಷಿಯಲ್ ಮೀಡಿಯಾವನ್ನು ಬಳಸಿಕೊಂಡು ನಡೆದ ವಿಕೃತ ಕೆಲಸಗಳಲ್ಲೊಂದು. ನಾವು ನಮ್ಮ ನಮ್ಮ ಹಳ್ಳಿಯ ಬಾಲ್ಯವನ್ನು ನೆನೆಸಿಕೊಂಡರೆ ಯಾರಾದರೂ ಶೋಷಿತ ಜಾತಿಯವರು, ಮೇಲ್ವರ್ಗದವರ ಮನೆ ಮುಂದೆ ಅಡ್ಡಾಡಿದರೂ ಸಾಕು ಅವರನ್ನು ಸಂಶಯದಿಂದ ನೋಡುವುದು ‘ಸಹಜ’ವಾಗಿತ್ತು. ಚುಚ್ಚಿ ಮಾತನಾಡುವುದೇ ಅಲ್ಲದೆ ಆ ಮನೆಯ ಯಜಮಾನ ಆ ವ್ಯಕ್ತಿಯನ್ನು ಹೀಯಾಳಿಸಿ ಸುತ್ತಲಿನವರಿಗೆ ಪುಕ್ಕಟ್ಟೆ ಮನರಂಜನೆ ಕೊಡುವಂತಹ ಸನ್ನಿವೇಶಗಳು ನಡೆಯುತ್ತಿದ್ದವು.

ಇತ್ತ ಅಪಹಾಸ್ಯಕ್ಕೀಡಾ ವ್ಯಕ್ತಿ ಹಸಿವಿನ ಮುಂದೆ ಸ್ವಾಭಿಮಾನವನ್ನ ಮರೆಯುತ್ತ ಒಳಗೆ ಉರಿಯಿದ್ದರೆ ಹೊರಗೆ ಮುಗುಳುನಗುತ್ತಿದ್ದ. ಹೀಗೆ ಮೇಲಿನವರು ಕೆಳಗಿನವರನ್ನು ನೋಡುವ ದೃಷ್ಟಿಯೇ ತುಂಬಾ ತುಚ್ಚವಾಗಿರುತ್ತಿತ್ತು. ಹಳ್ಳಿಗಳಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡ ಯಾರಾದರೂ ಬಂದರೆ ಅವರ ಅಂಗಿಗೆ ಕಲ್ಲು ಕಟ್ಟುವುದು, ಅವನಿಗೆ ಕಲ್ಲು ಹೊಡೆದು ರೇಗಿಸುವುದರ ಮೂಲಕ ಮನರಂಜನೆ ತೆಗೆದುಕೊಳ್ಳುವಂತಹ ಘಟನೆಗಳು ನಡೆಯುತ್ತಲಿದ್ದವು. ಇಲ್ಲಿ ನಮಗೆ ಕಾಡಬೇಕಾದ ಪ್ರಶ್ನೆ ವ್ಯಕ್ತಿಯ ನ್ಯೂನ್ಯತೆಯನ್ನು ಇಟ್ಟುಕೊಂಡು ಕಾಡುವ ಈ ಜನಕ್ಕೆ ಎಂದಿಗೂ ಮನುಷ್ಯರನ್ನು ಮನುಷ್ಯರಂತೆ ನೋಡಲು ಸಾಧ್ಯವಾಗಿಲ್ಲ ಯಾಕೆ ಎಂಬುದು. ಇಂತಹ ಎಲ್ಲಾ ಪ್ರಶ್ನೆಗಳು ನಮಗೆ ಮೂಡುವಂತೆ ಮಾಡಿದ್ದು ದೂರದ ಯಾವುದೋ ಕಾನೂನು ಸುವ್ಯವಸ್ಥೆ ಹದಗೆಟ್ಟ ರಾಜ್ಯದ್ದೋ, ದೇಶದ್ದೋ ಕಥೆಯಲ್ಲ. ಬದಲಿಗೆ ನಮ್ಮದೇ ರಾಜ್ಯದ ಗುಂಡ್ಲುಪೇಟೆಯಲ್ಲಿ ನಡೆದ ದಲಿತ ಯುವಕನ ಬೆತ್ತಲೆ ಮೆರವಣಿಗೆ ಮತ್ತು ಹಲ್ಲೆಮಾಡಿದ ಅಮಾನವೀಯ ಘಟನೆ.
ಘಟನೆಯ ಸುತ್ತ ಕೆಲವು ಗೊಂದಲಗಳು ಉಂಟಾಗಿವೆ. ಅಥವಾ ಅವನ್ನು ಸೃಷ್ಟಿಮಾಡಲು ಗುಂಪೊಂದು ಪ್ರಯತ್ನಿಸುತ್ತಿದೆ. ತಮ್ಮ ಜಾತಿಗೆ ಸೇರಿದವರು ಮಾಡಿದ ತಪ್ಪು ಅನ್ನುವ ಕಾರಣಕ್ಕೆ ಅವರ ಹಿತಾಸಕ್ತಿ ಕಾಪಾಡಲು ಅದು ಪ್ರಯತ್ನ ಮಾಡುತ್ತಿದೆ. ಘಟನೆಯ ವಿವರ ನಿಮಗೆ ಗೊತ್ತೆ ಇದೆ.

ಪ್ರತಾಪ್ ಎಂಬ ಗುಂಡ್ಲುಪೇಟೆ ತಾಲೂಕಿನ ವೀರಾಪುರ ಗ್ರಾಮದ ದಲಿತ ಯುವಕ ಮೈಸೂರಿನಲ್ಲಿ ಐ.ಎ.ಎಸ್ ಪರೀಕ್ಷೆ ಬರೆಯಲು ಹೋಗಿದ್ದ. ಪರೀಕ್ಷೆ ಬರೆಯಲಾಗದ್ದಕ್ಕೋ, ಇನ್ನಾವುದೋ ಕಾರಣಕ್ಕೋ ಮನನೊಂದು ವಾಪಸ್ಸು ಬಂದು ಕಬ್ಬೆಕಟ್ಟೆ ಎಂಬ ಗ್ರಾಮದ ಹತ್ತಿರದ ದೇವಸ್ಥಾನದಲ್ಲಿ ಮಲಗಿದ್ದ. ಜನರು ನೋಡುವಾಗಲೇ ಆತ ಬೆತ್ತಲಾಗಿದ್ದ ಎಂದು ಕೆಲವರು (ಆತನ ಮೇಲೆ ಹಲ್ಲೆ ಮಾಡಿದ ಆರೋಪ ಹೊತ್ತಿರುವವರ ಕಡೆಯವರು) ಹೇಳುತ್ತಾರೆ. ಕಬ್ಬೆಕಟ್ಟೆ ಗ್ರಾಮದ ಕೆಲವರು ಆತನನ್ನು ಅನುಮಾನಿಸಿ, ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ್ದಾರೆ ಎಂದು ಪ್ರತಾಪ್ ಪರವಾಗಿ ಮಾತಾಡುತ್ತಿರುವವರು ಹೇಳುತ್ತಾರೆ.

ಘಟನೆಯ ಬಗ್ಗೆ ತಿಳಿದ ನಂತರ ರಾಜ್ಯದ ಕೆಲವೆಡೆ ದಲಿತಪರ ಹೋರಾಟಗಾರರು ಪ್ರತಿಭಟನೆಗಳನ್ನು ಮಾಡಿದ್ದಾರೆ. ಸೂಕ್ತ ತನಿಖೆಯನ್ನು ನಡೆಸುವಂತೆ ಸಂಬಂಧಪಟ್ಟವರಿಗೆ ಮನವಿ ಮಾಡಿದ್ದಾರೆ. ಈ ಲೇಖನ ಬರೆಯುವ ಹೊತ್ತಿಗೆ ಗುಂಡ್ಲುಪೇಟೆಯಲ್ಲಿ ಬೃಹತ್ ಕಾಲ್ನಡಿಗೆ ಜಾಥ ಮತ್ತು ಪ್ರತಿರೋಧ ಸಮಾವೇಶವನ್ಮು ಕೂಡ ನಡೆಸಿದ್ದಾರೆ.

ಇದನ್ನು ಓದಿ: ಗುಂಡ್ಲುಪೇಟೆಯಲ್ಲಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳಿಂದ ಬೃಹತ್ ಜಾಥ, ಪ್ರತಿರೋಧ ಸಮಾವೇಶ

ಈ ವಿಚಾರದಲ್ಲಿ ನಡೆದ ಇನ್ನೊಂದು ಬೆಳವಣಿಗೆಯೆಂದರೆ ಇದಕ್ಕೆ ನಾವು ಪ್ರತಿ ಜಾಥಾ ನಡೆಸುತ್ತೇವೆಂದು ಮೇಲ್ಜಾತಿಗೆ ಸೇರಿದ ಕೆಲವು ಜನ ಹೇಳಿದ್ದಾರೆ. ಅವರ ಪ್ರಕಾರ ಘಟನೆ ನಡೆದದ್ದೇ ಬೇರೆ ರೀತಿ. ಮಾನಸಿಕ ಅಸ್ವಸ್ಥನಾಗಿದ್ದ ಆತನಿಗೆ ಮೊದಲು ಯಾರೂ ಏನನ್ನೂ ಮಾಡಲಿಲ್ಲ. ಬದಲಿಗೆ ಸಾಧು ಇರಬೇಕೆಂದು ನಮಸ್ಕರಿಸಿದ್ದಾರೆ. ಆ ನಂತರ ಆತನೇ ಬೇರೆಯವರ ಮೇಲೆ ಹಲ್ಲೆ ನಡೆಸಿದಾಗ, ಬಹಳ ಪ್ರಯತ್ನಪಟ್ಟು ಹಿಡಿದು, ಕಟ್ಟಿ ಹಾಕಿದ್ದೇವೆ ಅಷ್ಟೇ. ಆ ನಂತರ ಪೊಲೀಸರು ಬಂದಾಗ ಅವರಿಗೆ ಒಪ್ಪಿಸಿದ್ದೇವೆ. ಜೊತೆಗೆ ಆತನ ಜಾತಿಯೂ ನಮಗೆ ಗೊತ್ತಿರಲಿಲ್ಲ. ಹಾಗಾಗಿ ಇದಕ್ಕೆ ಜಾತಿ ಬಣ್ಣ ಕಟ್ಟುವುದು ಬೇಡ ಎಂಬುದು ಅವರ ಹೇಳಿಕೆ.

ಒಂದು ವೇಳೆ ಇಷ್ಟೇ ಆಗಿದ್ದರೆ, ಅದು ಬೆತ್ತಲೆ ತಿರುಗುವ ಯಾವುದೇ ಮಾನಸಿಕ ಅಸ್ವಸ್ಥನ ಜೊತೆ ಸಮಾಜ ನಡೆದುಕೊಳ್ಳಬೇಕಾದ ರೀತಿ ಎಂದು ಬಗೆಯಬಹುದು. ಆದರೆ, ಈ ಮಾತುಗಳನ್ನು ಆಡುತ್ತಿರುವವರು ಸತ್ಯ ನುಡಿಯುತ್ತಿಲ್ಲ ಎಂಬುದಕ್ಕೆ ವಿಡಿಯೋ ಸಾಕ್ಷಿಯಾಗಿದೆ. ಆ ಹುಡುಗನನ್ನು ಬೆತ್ತಲೆಗೊಳಿಸಿ, ಕೈ ಹಿಂದಕ್ಕೆ ಕಟ್ಟಿ ನಡೆಸಿಕೊಂಡು ಬರುವುದು ಕಾಣುತ್ತಿದೆ. ಆ ರೀತಿ ನಡೆಸಿಕೊಂಡು ಬರುತ್ತಿರುವವರು ಕೈಯ್ಯಲ್ಲಿ ಕೋಲು ಹಿಡಿದಿದ್ದಾರೆ ಮತ್ತು ಇದನ್ನು ವಿಡಿಯೋ ಮಾಡಲಾಗಿದೆ. ‘ಜಾತಿ ಬಣ್ಣ ಕಟ್ಟಬೇಡಿ’ ಎನ್ನುತ್ತಿರುವವರು ಮೊದಲು ವಾಸ್ತವವನ್ನು ಮಾತಾಡಬೇಕು. ಕನಿಷ್ಠ ಇಂತಹ ಅಮಾನವೀಯವಾದ ಕೃತ್ಯವನ್ನು ಖಂಡಿಸುವ ಮಾನವೀಯತೆಯೂ ಇಲ್ಲದೇ, ಕೃತ್ಯವನ್ನು ಎಸಗಿದವರ ರಕ್ಷಣೆಗೆ ನಿಂತಿರುವುದು ಇಲ್ಲಿ ಎದ್ದು ಕಾಣುತ್ತಿದೆ.

ಅವರು ಹೇಳುವ ಹಾಗೆ ಮಾನಸಿಕ ಅಸ್ವಸ್ಥನೇ ಇರಬಹುದು (ಆ ರೀತಿ ಇಲ್ಲ, ಆತ ಐಎಎಸ್ ಪರೀಕ್ಷೆ ಬರೆಯುವಷ್ಟು ಸರಿಯಾಗಿದ್ದಾನೆಂದು ಕೇಂದ್ರ ಆಯೋಗದ ಸದಸ್ಯರು ಬಹಿರಂಗ ಹೇಳಿಕೆ ಕೊಟ್ಟಿದ್ದಾರೆ), ಬೆತ್ತಲೆಯೇ ಕೂತಿದ್ದ ಎಂದುಕೊಳ್ಳೋಣ. ಮಾನಸಿಕ ಅಸ್ವಸ್ಥನಾಗಿದ್ದು, ಬೆತ್ತಲೆ ಕೂತಿರುವ ವ್ಯಕ್ತಿಯನ್ನು ಬೀದಿಯಲ್ಲಿ ಮೆರವಣಿಗೆ ಮಾಡುವವರು ಮಾನಸಿಕವಾಗಿ ಸ್ವಸ್ಥರೇ? ಅವರ ಮಾನಸಿಕತೆಗೆ ಬಡಿದಿರುವ ರೋಗ ಯಾವುದು? ಅದು ಮಕ್ಕಳ ಕಳ್ಳರು ಇತ್ಯಾದಿ ಕಾರಣ ಹೇಳಿ, ಬಡಿದು ಕೊಲ್ಲುವ ಮಾನಸಿಕತೆಯೇ? ಅಥವಾ ಜಾತಿ ರೋಗವೂ ಬಡಿದಿತ್ತಾ? ಆರೋಪಿಗಳ ಪಟ್ಟಿಯಲ್ಲಿ ದಲಿತ ಸಮುದಾಯಕ್ಕೆ ಸೇರಿದವರಾರೂ ಇಲ್ಲ. ಬಲಾಢ್ಯ ಜಾತಿಗಳಿಗೆ ಸೇರಿದವರು ಮಾತ್ರವಿದ್ದಾರೆ. ಸಮರ್ಥನೆಗೆ ಇಳಿದವರೂ ಅವರೇ ಆಗಿದ್ದಾರೆ. ಹಾಗಾಗಿ ಇಲ್ಲಿ ಜಾತಿ ವಾಸನೆ ಬಡಿಯುತ್ತಿದೆ.

ಕೆಲವೊಮ್ಮೆ ಹೀಗೂ ಆಗುತ್ತದೆ. ಮೊದಲೇ ಹೇಳಿದ ರೀತಿಯಲ್ಲಿ ಅಪಮಾನಕ್ಕೆ ಗುರಿಯಾಗುವವರು ಸಾಮಾನ್ಯವಾಗಿ ಬಡವರು, ದುರ್ಬಲರು, ಶೋಷಿತ ಜಾತಿಗಳಿಗೆ ಸೇರಿದವರು, ಕೊಳೆಬಟ್ಟೆ ಹಾಕಿದವರು ಆಗಿರುತ್ತಾರೆ. ಬೀದಿಯಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರೀ ಕಚೇರಿಗಳಲ್ಲಿ ಬಂದಿರುವವರ ಬಟ್ಟೆ ಇತ್ಯಾದಿಗಳನ್ನು ನೋಡಿ ಗೌರವದ ಮಟ್ಟ ನಿರ್ಧಾರವಾಗುತ್ತದೆ ಎಂದ ಮೇಲೆ, ಉಳಿದುದನ್ನು ಊಹಿಸಬಹುದು.

ಇಷ್ಟೇ ಅಲ್ಲದೇ, ನಮ್ಮದೇ ರಾಜ್ಯದಲ್ಲಿ ದಲಿತ ಯುವಕ ಹುಡುಗಿಯನ್ನು ಮಾತನಾಡಿಸಿದ ಎಂಬ ಕಾರಣಕ್ಕೆ, ಬೆತ್ತಲೆ ಮಾಡಿ ಚೆನ್ನಾಗಿ ಹೊಡೆದು ಆತನ ಕೊರಳಿಗೆ ಬೋರ್ಡ್ ನೇತಾಕಿ ವಿಡಿಯೋ ಮಾಡಿದ ಘಟನೆ ನಡೆದು ಬಹಳ ಕಾಲವಾಗಿಲ್ಲ. ದಲಿತ ಜೀವಪರ ಸಂಘಟನೆಗಳು ಇದನ್ನು ಪ್ರತಿಭಟಿಸಿದಾಗ ದಲಿತ ಯುವಕನ ಮೇಲೆಯೇ ಕೌಂಟರ್ ಕೇಸ್ ಹಾಕಿದ ಘಟನೆ ನಮ್ಮ ಕಣ್ಣಮುಂದೆ ಇದೆ. 9ನೇ ತರಗತಿಯ ಹುಡುಗಿಯನ್ನು ಮಾತನಾಡಿಸಿದ ನಂತರ ದಲಿತ ಹುಡುಗನೊಬ್ಬ ಅನಾಥ ಶವವಾಗಿದ್ದೂ ಇತ್ತೀಚೆಗೇ. ವಿಜಾಪುರದ ದಲಿತ ಹುಡುಗಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದಾಗ ಆ ಹುಡುಗಿಯ ನಡತೆಯೇ ಸರಿಯಿಲ್ಲವೆಂದ ಪೋಲಿಸ್ ಅಧಿಕಾರಿಗಳ ಆಡಿಯೋ ಸಹಾ ಎಲ್ಲರೂ ಕೇಳಿದ್ದೇವೆ.

ಈ ಎಲ್ಲಾ ಘಟನೆಗಳಲ್ಲೂ ಮೇಲ್ಜಾತಿಯ ಮನಸ್ಥಿತಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿಲ್ಲ. ಹೀಗಾಗಿ ಜಾತಿ ಮೇಲರಿಮೆಯೇ ಇದಕ್ಕೆ ಕಾರಣ ಎಂದು ನಂಬಲು ಕಾರಣಗಳಿವೆ. ಸುಲಭವಾಗಿ ಸಿಗುವ ಪ್ರತಾಪ್‍ನಂತಹ ಅಮಾಯಕರನ್ನು ಹಿಂಸಿಸುವುದನ್ನು ತಪ್ಪು ಎಂದು ಒಪ್ಪಿಕೊಳ್ಳದಷ್ಟು ಮಾನವೀಯತೆ ಕಳೆದುಕೊಂಡಿದ್ದೇವಾ ಎಂದು ಅವರೂ ಯೋಚಿಸಬೇಕಿದೆ. ಹಾಗೆ ಮಾಡದೇ ಸುಳ್ಳುಗಳನ್ನು ಕಟ್ಟಿದಾಗ ಇರಬಹುದಾದ ಅಲ್ಪಸ್ವಲ್ಪ ನಿಜವನ್ನೂ ನಂಬಲಾಗದು.

ಪ್ರತಿಜಾಥಾ ಇತ್ಯಾದಿ ಪ್ರಸ್ತಾಪಗಳನ್ನು ಮಾನವೀಯತೆಯಿರುವ ಜನರು ಕೈಬಿಟ್ಟು, ಆತ್ಮಾವಲೋಕನಕ್ಕೆ ಮುಂದಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...