ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಉದ್ದೇಶಿತ ವಿಡಿಯೋ ದೃಶ್ಯಾವಳಿಗಳು ಹೊರಬಿದ್ದಿದೆ. ‘ಪೂರ್ವನಿಯೋಜಿತ ಕೃತ್ಯ’ ಎಂದು ಕೆನಾಡ ಈ ಹಿಂದೆ ಆರೋಪಿಸಿದ್ದ ಪ್ರಕರಣದಲ್ಲಿ ಹರ್ದೀಪ್ ಸಿಂಗ್ ಮೇಲೆ ಶಸ್ತ್ರಸಜ್ಜಿತ ವ್ಯಕ್ತಿಗಳು ಗುಂಡು ಹಾರಿಸಿರುವ ವಿಡಿಯೋವನ್ನು ಕೆನಡಾ ಮೂಲದ ಸಿಬಿಸಿ ನ್ಯೂಸ್ ವರದಿ ಮಾಡಿದೆ.
2020ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಭಯೋತ್ಪಾದಕ ಎಂದು ಘೋಷಿಸಿದದ್ದ ಹರ್ದೀಪ್ ಸಿಂಗ್ ನಿಜ್ಜರ್ ಅವರನ್ನು ಜೂನ್ 18, 2023ರ ಸಂಜೆ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ಗುರುದ್ವಾರದ ಬಳಿ ಗುಂಡಿಕ್ಕಿ ಕೊಲ್ಲಲಾಗಿದೆ.
ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ವೀಡಿಯೋವನ್ನು ಸ್ವತಂತ್ರವಾಗಿ ಪರಿಶೀಲಿಸಲಾಗಿದೆ ಎಂದು CBC ಸುದ್ದಿ ತಿಳಿಸಿದೆ. ಪೂರ್ವ ನಿಯೋಜಿತ ಎಂದು ವಿವರಿಸಲಾದ ದಾಳಿಯಲ್ಲಿ ಆರು ಮಂದಿ ಭಾಗಿಯಾಗಿದ್ದರು ಮತ್ತು ಎರಡು ವಾಹನಗಳಲ್ಲಿ ಬಂದು ಕೃತ್ಯವನ್ನು ಮಾಡಲಾಗಿದೆ ಎಂದು ವರದಿ ಉಲ್ಲೇಖಿಸಿತ್ತು.
ಗುರುದ್ವಾರದ ಪಾರ್ಕಿಂಗ್ ಸ್ಥಳದಿಂದ ನಿಜ್ಜರ್ ಹೊರಡುವುದನ್ನು ವೀಡಿಯೊ ತೋರಿಸುತ್ತದೆ. ಅವರ ವಾಹನವನ್ನು ತಡೆದು ಇಬ್ಬರು ವ್ಯಕ್ತಿಗಳು ನಿಜ್ಜರ್ಗೆ ಗುಂಡು ಹಾರಿಸಿ ಟೊಯೊಟಾ ಕ್ಯಾಮ್ರಿಯಲ್ಲಿ ತಪ್ಪಿಸಿಕೊಳ್ಳುತ್ತಾರೆ ಎಂದು ಸಿಬಿಸಿ ನ್ಯೂಸ್ ವರದಿ ಮಾಡಿದೆ. ಘಟನೆ ನಡೆದಾಗ ಸಮೀಪದ ಮೈದಾನದಲ್ಲಿ ಆಡುತ್ತಿದ್ದ ಇಬ್ಬರು ಪ್ರತ್ಯಕ್ಷದರ್ಶಿಗಳು ಗುಂಡಿನ ಸದ್ದು ಕೇಳಿ ಸ್ಥಳಕ್ಕೆ ಓಡಿ ದಾಳಿಕೋರರನ್ನು ಹಿಂಬಾಲಿಸಲು ಪ್ರಯತ್ನಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ಬಗ್ಗೆ ಪ್ರತ್ಯಕ್ಷದರ್ಶಿ ಭೂಪಿಂದರ್ಜಿತ್ ಸಿಂಗ್ ಸಿಧು ಮಾತನಾಡಿದ್ದು, ಇಬ್ಬರು ವ್ಯಕ್ತಿಗಳು ಓಡುವುದನ್ನು ನಾವು ನೋಡಿದ್ದೇವೆ. ನಾವು ಗುಂಡಿನ ಶಬ್ಧ ಕೇಳಿ ಓಡಿ ಬಂದೆವು. ನಿಜ್ಜರ್ಗೆ ಸಹಾಯ ಮಾಡುವಂತೆ ನಾನು ಸ್ನೇಹಿತ ಮಲ್ಕಿತ್ ಸಿಂಗ್ಗೆ ಹೇಳಿ ಆರೋಪಿಗಳನ್ನು ಬೆನ್ನಟ್ಟಿದ್ದೆ ಎಂದು ಹೇಳಿದ್ದಾರೆ.
ಜೂ.18ರಂದು ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಪಂಜಾಬಿ ಪ್ರಾಬಲ್ಯದ ಸರ್ರೆ ನಗರದಲ್ಲಿರುವ ಗುರುನಾನಕ್ ಸಿಖ್ ಗುರುದ್ವಾರದ ಪಾರ್ಕಿಂಗ್ ಸ್ಥಳದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆ ನಡೆದಿತ್ತು. ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ ಸಂಭಾವ್ಯ ಕೈವಾಡದ ಬಗ್ಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸೆಪ್ಟೆಂಬರ್ನಲ್ಲಿ ಆರೋಪಿಸಿದ್ದರು. ಟ್ರುಡೊ ಅವರ ಆರೋಪಗಳನ್ನು ಭಾರತವು ಅಸಂಬದ್ಧ ಎಂದು ತಿರಸ್ಕರಿಸಿತ್ತು. ಆ ಬಳಿಕ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹದಗೆಟ್ಟಿದ್ದವು. ಎರಡೂ ದೇಶಗಳ ರಾಜತಾಂತ್ರಿಕ ಅಧಿಕಾರಿಗಳ ಉಚ್ಛಾಟಣೆಯು ನಡೆದಿತ್ತು. ಭಾರತವು ಕೆನಡಾದ ನಾಗರಿಕರಿಗೆ ವೀಸಾಗಳನ್ನು ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಕಳೆದ ತಿಂಗಳು ವೀಸಾ ಸೇವೆಗಳನ್ನು ಭಾರತವು ಪುನರಾರಂಭಿಸಿತ್ತು.
CBC has now published footage of KTF terrorist Nijjar's murder pic.twitter.com/AOQB6ESYE1
— Journalist V (@OnTheNewsBeat) March 8, 2024
ಇದನ್ನು ಓದಿ: ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳ ವಿರುದ್ಧದ ಕ್ರಮಕ್ಕೆ ತಡೆ ನೀಡಲು ನಿರಾಕರಿಸಿದ ನ್ಯಾಯಮಂಡಳಿ