ಬೆಂಗಳೂರು-ಚೆನ್ನೈ ಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ದ್ವೇಷ ಹರಡುವ “ಪ್ರೊಪಗಾಂಡ” ಪತ್ರಿಕೆಯನ್ನು ವಿತರಿಸಲಾಗಿರುವ ಘಟನೆ ವಿವಾದಕ್ಕೆ ಸಿಲುಕಿದ್ದು, ಭಾರಿ ಆಕ್ರೊಶ ವ್ಯಕ್ತವಾಗಿದೆ. ಪ್ರಕರಣದ ಕುರಿತು ತನಿಖೆಗೆ ಆದೇಶಿಸಿದ್ದೇವೆ ಎಂದು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ(IRCTC) ಹೇಳಿದೆ. ಪತ್ರಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ IRCTC, ರೈಲಿನಲ್ಲಿ ವಿತರಿಸಲಾಗಿರುವ “ದಿ ಆರ್ಯವರ್ತ್ ಎಕ್ಸ್ಪ್ರೆಸ್” ಪತ್ರಿಕೆಯು “ಅನಧಿಕೃತ” ಎಂದು ಒಪ್ಪಿಕೊಂಡಿದೆ.
ಮಾನವ ಹಕ್ಕುಗಳ ಹೋರಾಟಗಾರ್ತಿ ಗೋಪಿಕಾ ಬಕ್ಷಿ ಅವರು ಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಪ್ರೊಪಗಾಂಡ ಪತ್ರಿಕೆಯನ್ನು ಹಂಚುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ ನಂತರ ಘಟನೆಯು ಬೆಳಕಿಗೆ ಬಂದಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಅವರು, “ಇಂದು ಬೆಳಿಗ್ಗೆ ನಾನು ಬೆಂಗಳೂರು-ಚೆನ್ನೈ ಶತಾಬ್ದಿ ಎಕ್ಸ್ಪ್ರೆಸ್ ಅನ್ನು ಹತ್ತಿದೆ. ಈ ಪ್ರೊಪಗಾಂಡ ಪತ್ರಿಕೆಯಾದ ಆರ್ಯವರ್ತ್ ಎಕ್ಸ್ಪ್ರೆಸ್ ಎಲ್ಲಾ ಸೀಟಿನ ಮೇಲೆ ಇದ್ದು ಸ್ವಾಗತಿಸುತ್ತಿತ್ತು. ಈ ಪತ್ರಿಕೆಯ ಬಗ್ಗೆ ಎಂದಿಗೂ ಕೇಳಿರಲಿಲ್ಲ. IRCTC ಇದಕ್ಕೆ ಹೇಗೆ ಅನುಮತಿ ನೀಡಿದೆ” ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದರು.
This morning I boarded the Bangalore-Chennai Shatabdi Express only to be greeted by this blatantly propagandist publication on every other seat- The Aryavarth Express. Had never even heard of it. How is @IRCTCofficial allowing this??? pic.twitter.com/vJq7areg8u
— Gopika Bashi (@gopikabashi) April 22, 2022
ಕಾಂಗ್ರೆಸ್ ಸಂಸದ ಬಿ. ಮಾಣಿಕಂ ಟ್ಯಾಗೋರ್ ಕೂಡ ಇಂತಹ ಪತ್ರಿಕೆ ರೈಲಿನಲ್ಲಿ ಹೇಗೆ ಬಂತು ಎಂದು ಪ್ರಶ್ನಿಸಿದ್ದಾರೆ.
“ಗೌರವಾನ್ವಿತ ರೈಲ್ವೆ ಸಚಿವರು ಇದರ ಬಗ್ಗೆ ತನಿಖೆಗೆ ಆದೇಶಿಸುತ್ತಾರೆಯೇ? ಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಪ್ರೊಪಗಾಂಡ ಸಾಮಗ್ರಿಗಳನ್ನು ಅನುಮತಿಸುವುದು ರೈಲ್ವೇ ಇಲಾಖೆಯ ನೀತಿಯೇ? ಲೋಕಸಭೆಯಲ್ಲಿ ಈ ವಿಷಯವನ್ನು ಬರೆದು ಪ್ರಸ್ತಾಪಿಸುತ್ತೇನೆ” ಎಂದು ಅವರು ಟ್ವೀಟ್ ಮಾಡಿದ್ದು, ‘ದ್ವೇಷದ ವಿರುದ್ದ ಭಾರತ’(IndiaAgainstHate)ಎಂಬ ಹ್ಯಾಶ್ ಟ್ಯಾಗ್ ಬಳಸಿದ್ದಾರೆ.
ಇದನ್ನೂ ಓದಿ: ಹಿಂದೂ ರಾಷ್ಟ್ರಕ್ಕಾಗಿ ಕೊಲೆ ಮಾಡಲು ಪ್ರಚೋದಿಸಿದ್ದು ದ್ವೇಷ ಭಾಷಣವಲ್ಲ ಎಂದ ದೆಹಲಿ ಪೊಲೀಸರು; ಸುಪ್ರೀಂ ಆಕ್ಷೇಪ
ಮತ್ತೊಬ್ಬ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ, IRCTC ಚಂದಾದಾರರಾಗಿರುವ ಪ್ರಕಾಶನಗಳ ಪಟ್ಟಿಗೆ ಇಂತಹ ಪತ್ರಿಕೆ ಹೇಗೆ ಸೇರಿತು ಎಂದು ಪ್ರಶ್ನಿಸಿದ್ದಾರೆ.
“ರೈಲ್ವೆಯ ಟಿಕೆಟಿಂಗ್ ಮತ್ತು ಕ್ಯಾಟರಿಂಗ್ ವಿಭಾಗವು ಡೆಕ್ಕನ್ ಹೆರಾಲ್ಡ್ ಮತ್ತು ಇನ್ನೊಂದು ಸ್ಥಳೀಯ ಪತ್ರಿಕೆಯನ್ನು ಈ ಪ್ರದೇಶದಲ್ಲಿ ರೈಲುಗಳಲ್ಲಿ ವಿತರಿಸಲು ಅನುಮೋದಿಸಿದೆ. ಈ ಪತ್ರಿಕೆಗಳನ್ನು IRCTC ಪರವಾನಗಿದಾರರು ವಿತರಿಸುತ್ತಾರೆ” IRCTC ಮೂಲಗಳನ್ನು ಉಲ್ಲೇಖಿಸಿ ಆನ್ ಮನೋರಮಾ ವರದಿ ಮಾಡಿದೆ.
“ಈ ಬಗ್ಗೆ ನಾವು ತನಿಖೆಗೆ ಆದೇಶಿಸಿದ್ದೇವೆ. ಇದಕ್ಕೆ ಹೊಣೆಗಾರರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಈ ಪತ್ರಿಕೆಯು IRCTC ಅನುಮೋದಿತ ಪ್ರಕಟಣೆಗಳಲ್ಲಿಲ್ಲ” ಎಂದು IRCTC ವಕ್ತಾರ ಆನಂದ್ ಝಾ ಹೇಳಿದ್ದಾರೆ.
ಈ ಕುರಿತು ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಚೆನ್ನೈ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ತಿಳಿಸಿದ್ದಾರೆ.
ಇದನ್ನೂ ಓದಿ: ಕೋಮುದ್ವೇಷ ತಡೆಗೆ ಆಗ್ರಹಿಸಿ 13 ವಿಪಕ್ಷಗಳ ನಾಯಕರಿಂದ ಜಂಟಿ ಪತ್ರಿಕಾ ಹೇಳಿಕೆ
“ಇತ್ತೀಚಿನ ಅಪ್ಡೇಟ್ ಏನೆಂದರೆ, ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಅನಧಿಕೃತ ಪತ್ರಿಕೆಯು ರೈಲಿನೊಳಗೆ ಹೇಗೆ ಬಂತು ಎಂಬುದರ ಕುರಿತು ತನಿಖೆ ನಡೆಸುತ್ತಿದೆ. ರೈಲು ಬೆಂಗಳೂರು ವಿಭಾಗಕ್ಕೆ ಸೇರಿದ್ದಾಗಿದ್ದು, ಘಟನೆ ಅಲ್ಲಿ ನಡೆದಿದೆ. ಅವರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ನಮಗೆ ಖಾತ್ರಿಯಿದೆ” ಎಂದು ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.