ಉತ್ತರ ಪ್ರದೇಶದ ಹತ್ರಾಸ್ನಲ್ಲಿ 2018 ರಲ್ಲಿ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿ ದೂರು ನೀಡಿದ್ದ ವ್ಯಕ್ತಿಯನ್ನು ಆರೋಪಿ ಗುಂಡಿಟ್ಟು ಕೊಲೆ ಮಾಡಿರುವ ಘಟನೆ ಸೋಮವಾರ (ಮಾ.02) ನಡೆದಿದೆ.
ಲೈಂಗಿಕ ದೌರ್ಜನ್ಯ ಪ್ರಕರಣವೊಂದರಲ್ಲಿ 2018 ರಲ್ಲಿ ಒಂದು ತಿಂಗಳು ಜೈಲಿನಲ್ಲಿದ್ದ ಆರೋಪಿ, ಜಾಮೀನಿನ ಮೇಲೆ ಹೊರಬಂದಿದ್ದರು. ಅಂದಿನಿಂದ ಜೈಲಿನಿಂದ ಹೊರಗಿದ್ದ ಆರೋಪಿ, ದೆಹಲಿಯಿಂದ 200 ಕಿ.ಮೀ ದೂರದಲ್ಲಿರುವ ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ದೂರುದಾರ ವ್ಯಕ್ತಿಯನ್ನು ನಿನ್ನೆ ಗುಂಡು ಹಾರಿಸಿ ಕೊಂದಿದ್ದಾನೆ.
ಸೋಮವಾರ ಸಂಜೆ 4:30 ರ ಸುಮಾರಿಗೆ ಗ್ರಾಮದ ದೇವಾಲಯದ ಬಳಿ ಸಂತ್ರಸ್ತೆಯ ಕುಟುಂಬ ಮತ್ತು ಆರೋಪಿಗಳ ಕುಟುಂಬದ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಆರೋಪಿ ದೂರುದಾರನಿಗೆ ಗುಂಡಿಕ್ಕಿದ್ದಾನೆ. ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಂತ್ರಸ್ತೆಯ ತಂದೆ ಸಾವನ್ನಪ್ಪಿದ್ದಾರೆ ಎಂದು ಹತ್ರಾಸ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಕ್ಕಳನ್ನು ಹೆರುವುದು ನೀವು, ಸರ್ಕಾರ ವೆಚ್ಚ ಭರಿಸಬೇಕಾ?: ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ
ವಿವರವಾದ ಹೇಳಿಕೆ ನೀಡಿರುವ ಹತ್ರಾಸ್ ಪೊಲೀಸರು, ಯುವತಿಯ ತಂದೆ ತನ್ನ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ ನಂತರ ಆರೋಪಿ ಗೌರವ್ ಶರ್ಮಾನನ್ನು 2018 ರಲ್ಲಿ ಒಂದು ತಿಂಗಳು ಜೈಲಿಗೆ ಹಾಕಲಾಗಿತ್ತು. ಒಂದು ತಿಂಗಳ ನಂತರ ಸ್ಥಳೀಯ ನ್ಯಾಯಾಲಯದಿಂದ ಆರೋಪಿ ಜಾಮೀನು ಪಡೆದಿದ್ದನು.
“ಮೃತ ವ್ಯಕ್ತಿಯು ಗೌರವ್ ಶರ್ಮಾ ವಿರುದ್ಧ ಜುಲೈ 2018 ರಲ್ಲಿ ತನ್ನ ಮಗಳ ಮೇಲಿನ ಲೈಂಗಿಕ ಕಿರುಕುಳಕ್ಕಾಗಿ ಪ್ರಕರಣ ದಾಖಲಿಸಿದ್ದರು. ಆರೋಪಿ ಜೈಲಿಗೆ ಹೋಗಿ ಒಂದು ತಿಂಗಳ ನಂತರ ಜಾಮೀನು ಪಡೆದನು. ಅಂದಿನಿಂದ, ಎರಡೂ ಕುಟುಂಬಗಳ ನಡುವೆ ಪರಸ್ಪರ ದ್ವೇಷ ಹೆಚ್ಚಾಗಿತ್ತು. ಮುಖ್ಯ ಆರೋಪಿಯ ಪತ್ನಿ ಮತ್ತು ಚಿಕ್ಕಮ್ಮ ಮತ್ತು ಮೃತ ವ್ಯಕ್ತಿಯ ಇಬ್ಬರು ಹೆಣ್ಣುಮಕ್ಕಳು ಹಳ್ಳಿಯ ದೇವಸ್ಥಾನವೊಂದಕ್ಕೆ ತೆರಳಿದ್ದರು. ಈ ವೇಳೆ ಇವರ ನಡುವೆ ವಾದ ವಿವಾದ ನಡೆದಿದೆ. ಇದಾದ ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಗೌರವ್ ಶರ್ಮಾ ಕೋಪದಿಂದ ಗುಂಡು ಹಾರಿಸಿದ್ದಾನೆ” ಎಂದು ಹತ್ರಾಸ್ ಪೊಲೀಸ್ ಮುಖ್ಯಸ್ಥ ವಿನೀತ್ ಜೈಸ್ವಾಲ್ ಟ್ವಿಟರ್ನಲ್ಲಿ ಬಿಡುಗಡೆ ಮಾಡಿದ ವೀಡಿಯೊದಲ್ಲಿ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಈವರೆಗೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳ ವಿರುದ್ಧ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಜಾರಿಗೆ ತರಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಇದನ್ನೂ ಓದಿ: ಅತ್ಯಾಚಾರ ಸಂತ್ರಸ್ತೆಯನ್ನು ಮದುವೆಯಾಗಲು ಆರೋಪಿಯನ್ನೆ ಕೇಳಿದ ಸುಪ್ರೀಂ!
Hathras: A man was shot dead by another man against whom the former had filed a case of molestation in July 2018, in a village in Sasni area yesterday. FIR registered against 4 named accused, 2 of whom have been arrested. pic.twitter.com/VJCZ1RT5T0
— ANI UP (@ANINewsUP) March 2, 2021
ಪೊಲೀಸ್ ಠಾಣೆಯ ಹೊರಗೆ ಸಂತ್ರಸ್ತೆ ಗೋಳಿಟ್ಟು ಅಳುವುದು ಮತ್ತು ನ್ಯಾಯ ಕೋರಿ ಆಗ್ರಹಿಸುವುದು ಎಂಥವರ ಕರುಳು ಚುರುಕ್ ಎನ್ನುವಂತೆ ಮಾಡುತ್ತಿತ್ತು. ವಿಡಿಯೋಗಳಲ್ಲಿ “ದಯವಿಟ್ಟು ನನಗೆ ನ್ಯಾಯ ನೀಡಿ, ಮೊದಲು ಆತ ನನಗೆ ಕಿರುಕುಳ ನೀಡಿದ್ದ, ಈಗ ನನ್ನ ತಂದೆಯನ್ನು ಗುಂಡಿಟ್ಟು ಕೊಂದಿದ್ದಾನೆ. ಆತ ನಮ್ಮ ಹಳ್ಳಿಗೆ ಬಂದಿದ್ದ. ಅವರು ಆರು-ಏಳು ಜನರಿದ್ದರು. ನನ್ನ ತಂದೆಗೆ ಯಾರ ವಿರುದ್ಧವೂ ದ್ವೇಷವಿರಲಿಲ್ಲ. ಅವನ ಹೆಸರು ಗೌರವ್ ಶರ್ಮಾ” ಎಂದು ಕೂಗಿ ಕೂಗಿ ಹೇಳುವ ವಿಡಿಯೋದಲ್ಲಿ ಆಕೆ ನ್ಯಾಯಕ್ಕಾಗಿ ಆಗ್ರಹಿಸಿದ್ದಾಳೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಹತ್ರಾಸ್ನಲ್ಲಿ ಮೇಲ್ಜಾತಿಯ ಸಮುದಾಯದವರು ಎಂದು ಕರೆಯಲ್ಪಡುವ ನಾಲ್ವರು ಪುರುಷರಿಂದ 20 ವರ್ಷದ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಕೊಲೆ ಮಾಡಿದ್ದು ಇಡೀ ರಾಷ್ಟ್ರವನ್ನು ಬೆಚ್ಚಿಬೀಳಿಸಿತ್ತು.
ಇದನ್ನೂ ಓದಿ: ದೆಹಲಿ ಹಿಂಸಾಚಾರದ ಅಸಲಿ ಪಿತೂರಿಗಾರರು ಯಾರು? ದೆಹಲಿ ಪೊಲೀಸ್ ನೋಡಲೊಲ್ಲದ ಭೀಕರ ಸತ್ಯಗಳನ್ನು ತೆರೆದಿಟ್ಟ