ಆಹಾರ ತಯಾರಿಸಲಿಲ್ಲ ಎಂಬ ಕಾರಣಕ್ಕೆ ಮದ್ಯ ಸೇವಿಸಿದ್ದ ತನ್ನ ಪತ್ನಿಯನ್ನು ಕೊಂದ ಪತಿಯನ್ನು ರಾಜ್ಯ ಹೈಕೋರ್ಟ್ ಬಿಡುಗಡೆಗೆ ಆದೇಶ ನೀಡಿದ್ದು, ಆರೋಪಿಯು ತನ್ನ ಪತ್ನಿಯನ್ನು ಪೂರ್ವ ಯೋಜಿತ ಗುರಿಯೊಂದಿಗೆ ಕೊಂದಿಲ್ಲ, ಆದ್ದರಿಂದ ಅದು ಮರ್ಡರ್ ಅಲ್ಲ ಎಂದು ಹೇಳಿದೆ.
ಆರೋಪಿಯು ತಪ್ಪಿತಸ್ಥ ನರಹತ್ಯೆ (Culpable Homicide) ಮಾಡಿದ್ದಾನೆ ಎಂದು ಹೈಕೋರ್ಟ್ ಕಂಡುಕೊಂಡಿದೆ. ಕೊಲೆ ಮಾಡುವ ಆರೋಪಿಯ ಉದ್ದೇಶವನ್ನು ವಿವರಿಸಲು ಪ್ರಾಸಿಕ್ಯೂಷನ್ಗೆ ಸಾಧ್ಯವಾಗಲಿಲ್ಲ ಎಂದು ಹೇಳಿರುವ ಹೈಕೋರ್ಟ್ ಕೆಳ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷಯ ಆದೇಶವನ್ನು ಮಾರ್ಪಡಿಸಿದೆ. ಪ್ರಚೋದನೆಯಿಂದಾಗಿ ಆರೋಪಿಯು ತನ್ನ ಹೆಂಡತಿಯನ್ನು ಕೊಲೆ ಮಾಡುವಷ್ಟು ಕೋಪಗೊಂಡನು ಎಂದು ಹೈಕೋರ್ಟ್ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಘಟನೆಯ ದಿನದಂದು ಮಹಿಳೆ ಮನೆಯಲ್ಲಿ ಆಹಾರವನ್ನು ತಯಾರಿಸಲಿಲ್ಲ ಎಂದು ಪ್ರಾಸಿಕ್ಯೂಷನ್ ಸಾಕ್ಷ್ಯದಿಂದ ಕಂಡುಬಂದಿದೆ. ಇದು ಆರೋಪಿಯನ್ನು ಕೆರಳಿಸಿದ್ದು, ಇದ್ದಕ್ಕಿದ್ದಂತೆ ಇಂತಹ ಕಠಿಣ ಕ್ರಮವನ್ನು ತೆಗೆದುಕೊಳ್ಳಲು ಪ್ರೇರೇಪಿಸಿತು” ಎಂದು ಹೈಕೋರ್ಟ್ ಹೇಳಿದೆ.
ಇದನ್ನೂ ಓದಿ: ವಾಮಾಚಾರಕ್ಕೆ ಮಹಿಳೆಯರಿಬ್ಬರ ನರಬಲಿ: ಅಘಾತ ವ್ಯಕ್ತಪಡಿಸಿದ ಕೇರಳ ಹೈಕೋರ್ಟ್
“ಇದರ ನಂತರ ಆರೋಪಿ ಮನೆಯಲ್ಲಿ ಇದ್ದ ದೊಣ್ಣೆಯನ್ನು ತೆಗೆದುಕೊಂಡು ಶಿಕ್ಷೆಯ ಭಾಗವಾಗಿ ಗಾಯಗಳನ್ನು ಉಂಟುಮಾಡಿದನು. ಆದರೆ ಸಾವಿಗೆ ಕಾರಣವಾಗುವ ಉದ್ದೇಶವು ಆರೋಪಿಯ ಕಡೆಯಿಂದ ಇರಲಿಲ್ಲ. ಆದ್ದರಿಂದ, ಆರೋಪಿಯ ಆಪಾದಿತ ಕೃತ್ಯವು ಐಪಿಸಿಯ ಸೆಕ್ಷನ್ 300 ರ ವಿನಾಯಿತಿ -1 ರ ವ್ಯಾಪ್ತಿಯಲ್ಲಿ ಬರುತ್ತದೆ. ಮಹಿಳೆಯ ಸಾವು ತಪ್ಪಿತಸ್ಥ ನರಹತ್ಯೆ ಆಗಿದ್ದು, ಕೊಲೆಗೆ ಸಮನಾಗಿರುವುದಿಲ್ಲ” ಎಂದು ಹೈಕೋರ್ಟ್ ಹೇಳಿದೆ.
“ಒಬ್ಬ ವ್ಯಕ್ತಿಯ ಸಾವಿಗೆ ಕೊಲೆ ಮಾಡಿರುವವರೇ ಕಾರಣವಾದರೂ, ಕೊಲೆಗಾರ ಆ ವ್ಯಕ್ತಿಯನ್ನು ಕೊಲ್ಲಬೇಕು ಎಂಬ ಉದ್ದೇಶದಿಂದ ಕೃತ್ಯ ಎಸಗಿರುವುದಿಲ್ಲ” ಇದನ್ನು ತಪ್ಪಿತಸ್ಥ ನರಹತ್ಯೆ (Culpable Homicide) ಎಂದು ಕರೆಯುತ್ತಾರೆ. ಇಂತಹ ಕೃತ್ಯದಲ್ಲಿ ಕೊಲೆಗಾರ ವ್ಯಕ್ತಿಯೊಬ್ಬರನ್ನು ಕೊಂದಿರುವುದಕ್ಕಾಗಿ ಕಾನೂನು ಅವರನ್ನು ಶಿಕ್ಷಿಸುತ್ತದೆ, ಆದರೆ ಕಠೋರವಾದ ಶಿಕ್ಷೆಯಿಂದ ವಿನಾಯಿತಿ ನೀಡುತ್ತದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಆರೋಪಿ ಸುರೇಶ ಎಂಬಾತ 2017ರಲ್ಲಿ ಮೇಲ್ಮನವಿ ಸಲ್ಲಿಸಿ ಹೈಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಕೊಲೆ ಆರೋಪಿ ಎಂದು ತೀರ್ಪು ನೀಡಿ ಅದೇ ವರ್ಷ ನವೆಂಬರ್ನಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠವು ಮನವಿಯ ವಿಚಾರಣೆ ನಡೆಸಿತು.
ಇದನ್ನೂ ಓದಿ: ಗರ್ಭಪಾತಕ್ಕೆ ವಿವಾಹಿತ ಮತ್ತು ಅವಿವಾಹಿತ ಮಹಿಳೆ ಎಂಬ ಬೇಧವಿರಬಾರದು: ಸುಪ್ರೀಂ
ಸುರೇಶ ತನ್ನ ಮೊದಲ ಪತ್ನಿ ಮೀನಾಕ್ಷಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾಗ ರಾಧಾ ಎಂಬವರೊಂದಿಗೆ ವಿವಾಹವಾದರು. ರಾಧಾ ಅವರು ತಮ್ಮ ಪತಿ ನಂಜಯ್ಯನಿಂದ ಬೇರ್ಪಟ್ಟಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು.
2016ರ ಒಂದು ದಿನ, ಹಬ್ಬದ ದಿನ ಕೆಲಸ ಮುಗಿಸಿ ಬಂದಿದ್ದ ಸುರೇಶನಿಗೆ ತನ್ನ ಪತ್ನಿ ರಾಧಾ ಕುಡಿದಿದ್ದು ಮತ್ತು ಮನೆಯಲ್ಲಿ ಅಡುಗೆ ಮಾಡದೇ ಇರುವುದು ಕಂಡು ಬಂದಿತ್ತು. ಇದರಿಂದ ಕುಪಿತಗೊಂಡ ಸುರೇಶ ದೊಣ್ಣೆಯಿಂದ ಮಾರಣಾಂತಿಕವಾಗಿ ಹೊಡೆದಿದ್ದಾನೆ.
ವಿಚಾರಣಾ ನ್ಯಾಯಾಲಯದ ಶಿಕ್ಷೆ ಮತ್ತು ಶಿಕ್ಷೆಯ ಆದೇಶವನ್ನು ಮಾರ್ಪಡು ಮಾಡಿರುವ ಹೈಕೋರ್ಟ್, ಇದೀಗ ಐಪಿಸಿಯ ಸೆಕ್ಷನ್ 302 (ಕೊಲೆ) ಬದಲಿಗೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 304 (ಕೊಲೆಗೆ ಸಮನಾಗದ ತಪ್ಪಿತಸ್ಥ ನರಹತ್ಯೆ) ಅಡಿಯಲ್ಲಿ ಸುರೇಶನನ್ನು ದೋಷಿ ಎಂದು ತೀರ್ಪು ನೀಡಿದೆ.
ಇದನ್ನೂ ಓದಿ: ದೆಹಲಿ ಬೀದಿಯಲ್ಲಿ ಮಹಿಳೆಯ ಕೂದಲು ಹಿಡಿದು ಹೊಟ್ಟೆಗೆ ಒದ್ದ ದುಷ್ಕರ್ಮಿ: FIR ದಾಖಲಿಸುವಂತೆ ಒತ್ತಾಯಿಸಿದ ಮಹಿಳಾ ಆಯೋಗದ ಅಧ್ಯಕ್ಷೆ
ಐಪಿಸಿಯ ಸೆಕ್ಷನ್ 304 ಭಾಗ 1 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಕ್ಕೆ ಆರೋಪಿಯು ಜೈಲಿನಲ್ಲಿ ಕಳೆದ ಆರು ವರ್ಷ ಮತ್ತು 22 ದಿನಗಳ ಅವಧಿಯು ಸಾಕಾಗುತ್ತದೆ ಎಂದು ಹೈಕೋರ್ಟ್ ಹೇಳಿದ್ದು, ಆರೋಪಿಯು ಬೇರೆ ಯಾವುದೇ ಪ್ರಕರಣದಲ್ಲಿ ಇಲ್ಲದಿದ್ದರೆ, ಆತನನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.