Homeಮುಖಪುಟತಾನೊಂದು ಹೆಣ್ಣಾಗಿದ್ದು ಶಾಪ, ಕಪ್ಪು ಹೆಣ್ಣಾಗಿದ್ದು ಮಹಾಶಾಪ : ಮೇರಿ ಪ್ರಿನ್ಸ್

ತಾನೊಂದು ಹೆಣ್ಣಾಗಿದ್ದು ಶಾಪ, ಕಪ್ಪು ಹೆಣ್ಣಾಗಿದ್ದು ಮಹಾಶಾಪ : ಮೇರಿ ಪ್ರಿನ್ಸ್

ದ ಹಿಸ್ಟರಿ ಆಫ್ ಮೇರಿ ಪ್ರಿನ್ಸ್ : ಮೇರಿ ಪ್ರಿನ್ಸ್‌ಳ ಕಪ್ಪು ಇತಿಹಾಸ

- Advertisement -
- Advertisement -

ತಾನೊಂದು ಹೆಣ್ಣಾಗಿದ್ದು ಶಾಪವಾದರೆ, ಕಪ್ಪುಹೆಣ್ಣಾಗಿದ್ದು ಮಹಾಶಾಪ ವೆಂದು ಅಲ್ಲೊಂದು ದನಿ ನೋವಿನಲ್ಲಿ ಬಿಕ್ಕಳಿಸುತ್ತದೆ. ಹುಟ್ಟಿನಿಂದ ಎಲ್ಲರೂ ಸಮಾನರು ಎಂದು ಎಂದಿಗೂ ಅರ್ಥವೇ ಅಗುವುದಿರಲಿ, ಕೇಳುವುದಕ್ಕೂ ಅವಕಾಶವಿರಲಿಲ್ಲ ಅಸಂಖ್ಯಾತ ಕಪ್ಪು ಮತ್ತು ಬಿಳಿಯ ಕಿವಿಗಳಿಗೆ. ತುಳಿಯುವ ಹಕ್ಕು ಮತ್ತು ತುಳಿಸಿಕೊಳ್ಳುವ ಕರ್ತವ್ಯದಲ್ಲಿ ಒಂದು ಕಪ್ಪು ಹೆಣ್ಣು ಕತ್ತಲಲ್ಲೇ ಬಯಲಾಗಿ ಹೋದಳು.

ಮೇರಿ ಎಂಬ ಒಂದು ಕಪ್ಪು ಹೆಣ್ಣು ಮಗುವಿಗೆ ರಾಜಕುಮಾರ ಎಂಬ ಹೆಸರಷ್ಟೇ ನಂಟು. ಹುಟ್ಟಿದ್ದು (೧೭೮೮) ಗುಲಾಮರ ಕುಟುಂಬದಲ್ಲಿ. ತಲೆಮಾರಿನ ಹಿನ್ನೆಲೆ ಆಫ್ರಿಕಾಗೆ ಅಂಟು. ಆಕೆಯ ಆತ್ಮಕಥನವು ಹುಟ್ಟಿದ್ದು ಆಕೆಯು ಲಂಡನ್‌ನಲ್ಲಿದ್ದಾಗ. ಹಾಗೆ ಹುಟ್ಟಿದ ತನ್ನ ಚರಿತ್ರೆಯನ್ನು ಆಕೆ ಬೆಳಕಿಗೆ ತಂದದ್ದು ೧೮೩೧ರಲ್ಲಿ.

ಬರ್ಮುಡಾ ಮತ್ತು ಕೆರಿಬಿಯನ್ ಕಾಲೋನಿಗಳಲ್ಲಿ ಕಾನೂನು ಮನ್ನಣೆಯನ್ನು ಗಳಿಸಿರುವ ಗುಲಾಮ ಪದ್ಧತಿಯ ಭಾಗವಾಗಿಯೇ ತನ್ನ ಎಲ್ಲಾ ನೋವು ತುಂಬಿರುವ, ಹಾಗೂ ಸರಪಳಿ ಬಂಧಿತ ಸ್ವಾನುಭವಗಳನ್ನು ಚಿತ್ರಿಸುತ್ತಾ ಹೋಗುವ ಆ ಸಾಹಿತ್ಯ ಮೂಲಕದ ಆಕೆಯ ಅಭಿವ್ಯಕ್ತಿಯೇ ದಾಸ್ಯ ವಿಮೋಚನಾ ಚಳುವಳಿಯ ಧ್ವನಿಯಾಗುತ್ತದೆ. ಮೊದಲ ವರ್ಷದಲ್ಲಿಯೇ ಅದು ಮೂರು ಮುದ್ರಣಗಳನ್ನು ಕಂಡಿತು. ಅದರ ಎಲ್ಲಾ ಹಣವನ್ನು ಥಾಮಸ್ ಪ್ರಿಂಗ್ಲ್ ನೇತೃತ್ವದ ದಾಸ್ಯ ವಿಮೋಚನಾ ಸಮಿತಿಗೆ ವರ್ಗಾಯಿಸಿದಳು.

ಮೇರಿ ಪ್ರಿನ್ಸ್‌ಳ ಪುಸ್ತಕ

ಅವಳ ತಂದೆ ಹೆಸರು ಪ್ರಿನ್ಸ್ ಆಗಿದ್ದರೂ ಡೇವಿಡ್ ಟ್ರಿಮ್ಮಿಂಗ್‌ಹ್ಯಾಂ ಎಂಬಾತನ ದಾಸನಾಗಿದ್ದು, ಆಕೆಯ ತಾಯಿ ಚಾರ್ಲ್ಸ್ ಮೈನರ್ ಎಂಬುವಳಿಗೆ ಗುಲಾಮಳಾಗಿದ್ದಳು. ಆಕೆಗೆ ಮೂವರು ಸೋದರರೂ ಮತ್ತು ಇಬ್ಬರರು ಸೋದರಿಯರು. ಮೈನರ್ ತಾನು ಸಾಯುವಾಗ ಮಾಡಿದ ಘನಕಾರ್ಯವೆಂದರೆ, ಮೇರಿಯನ್ನೂ ಸೇರಿದಂತೆ ಅವಳ ತಾಯಿ ಮತ್ತು ಎಲ್ಲಾ ಸೋದರ, ಸೋದರಿಯರನ್ನು ಕ್ಯಾಪ್ಟನ್ ಡೇರಿಲ್ ಎಂಬುವನಿಗೆ ಮಾರಿಬಿಟ್ಟ. ಅವನು ಬೆಟ್ಸೇ ವಿಲಿಯಮ್ಸ್ ಎಂಬ ಅವನ ಮೊಮ್ಮಗಳಿಗೆ ಮೇರಿಯನ್ನು ಸೇವಕಿಯನ್ನಾಗಿ ಮಾಡಿದ. ಮೇರಿ ೧೨ನೇ ವಯಸ್ಸಲ್ಲಿರುವಾಗ ೩೮ ಪೌಂಡ್‌ಗಳಿಗೆ ಸ್ಪ್ಯಾನಿಷ್‌ನ ಕ್ಯಾಪ್ಟನ್ ಜಾನ್ ಎಂಬುವನಿಗೆ ಮಾರಲಾಯಿತು. ಅಂದೇ ಅವಳ ಇಬ್ಬರು ಸೋದರಿಯರನ್ನು ಬೇರೆ ಬೇರೆ ಯಜಮಾನರುಗಳಿಗೆ ಮಾರಲಾಯಿತು. ಮೇರಿಯ ಹೊಸ ಯಜಮಾನ ಮತ್ತು ಅವನ ಹೆಂಡತಿ ಇಬ್ಬರೂ ಕಟು ಸ್ವಭಾವದವರು, ಕ್ರೂರಿಗಳು. ಸಣ್ಣ ಪುಟ್ಟ ತಪ್ಪುಗಳಿಗೂ ಮೇರಿ ಮತ್ತು ಇತರ ಕೆಲಸದವರಿಗೆ ಚಾವುಟಿಯಿಂದ ಬಾರಿಸುತ್ತಿದ್ದ ಜಾನ್.

ಮುಂದೆ ಜಾನ್ ಮೇರಿಯನ್ನು ೧೮೦೬ರಲ್ಲಿ ಗ್ರಾಂಡ್ ಟರ್ಕ್‌ನ ಉಪ್ಪು ತಯಾರಿಕನೊಬ್ಬನಿಗೆ ಮಾರಿದ. ಉಪ್ಪು ಮಾಡುತ್ತಿದ್ದ ಅವರಲ್ಲಿ ಗಂಡಸರೇ ಸಾಮಾನ್ಯವಾಗಿ ಕೆಲಸ ಮಾಡುತ್ತಿದ್ದದ್ದು. ಉಪ್ಪು ತಯಾರಿಕೆ ಅಷ್ಟು ಸುಲಭವಾಗಿರಲಿಲ್ಲ. ಸುಡು ಬಿಸಿಲಿಗೆ, ತಯಾರಿಕೆಗೆ ಬೇಕಾದ ಬಿಸಿಗೆ ತಳ್ಳಲ್ಪಟ್ಟಿದ್ದ ಅವರ ಬರಿಗಾಲುಗಳು ಉಪ್ಪಿನಿಂದಲೇ ತಿಂದು ಹೋಗಿರುತ್ತಿದ್ದವು. ಹೆಂಗಸರು ಉಪ್ಪನ್ನು ಪ್ಯಾಕ್ ಮಾಡುತ್ತಿದ್ದರು. ಅಂತೆಯೇ ಮೇರಿಯೂ ಸಹ. ೧೮೧೦ರಲ್ಲಿ ಅವಳ ಯಜಮಾನ ಬರ್ಮುಡಾಗೆ ಹೋದಾಗ ಇವಳೂ ಹಿಂಬಾಲಿಸಬೇಕಾಯ್ತು. ನಂತರ ಅವಳ ಮಗಳನ್ನು ನೋಡಿಕೊಳ್ಳುವ ಕೆಲಸಕ್ಕೆ ಅವಳನ್ನು ಹಚ್ಚಿದ.

ನಂತರ ೧೮೧೫ನಲ್ಲಿ ಮೇರಿ ನಾಲ್ಕನೇ ಬಾರಿ ಮಾರಾಟಕ್ಕೆ ಒಳಗಾದಳು. ಈ ಬಾರಿ ಕೊಂಡಿದ್ದು ಜಾನ್ ಆಡಮ್ಸ್ ವುಡ್ ಎಂಬಾತ. ೩೦೦ ಡಾಲರ್ ಅವಳ ಬೆಲೆ. ಅಲ್ಲಿ ಮನೆಗೆಲಸದವಳಾಗಿ ದುಡಿಯುತ್ತಿದ್ದಳು, ಅವನ ಜೊತೆ ಹಾಸಿಗೆಯನ್ನೂ ಹಂಚಿಕೊಳ್ಳಬೇಕಿತ್ತು. ಅವನ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಳು. ಬಟ್ಟೆ ತೊಳೆಯುತ್ತಿದ್ದಳು. ಹಾಗೆಲ್ಲಾ ದುಡಿಯುತ್ತಿದ್ದುದರ ಫಲ ರುಮ್ಯಾಟಿಸಂ. ಕೆಲಸ ಮಾಡಲು ಆಗುತ್ತಿರಲಿಲ್ಲ. ಅವಳ ಯಜಮಾನ ಊರಲ್ಲಿ ಇಲ್ಲದ ಸಮಯದಲ್ಲಿ ಮೇರಿಯು ಹೊರಗೆ ಬಟ್ಟೆ ತೊಳೆಯುವ, ಕಾಫಿ ಮಾರುವ ಇತ್ಯಾದಿ ಕೆಲಸಗಳನ್ನು ಮಾಡುತ್ತಾ ಅವಳದೊಂದು ಸಣ್ಣ ಇಡುಗಂಟನ್ನು ಮಾಡಿಕೊಂಡಳು.

ಅದೇ ಸಮಯದಲ್ಲಿ ಅವಳು ಮೊರವಿಯನ್ ಚರ್ಚ್‌ಗೆ ಸೇರಿದಳು. ಅಲ್ಲಿ ತರಗತಿಗಳಲ್ಲಿ ಭಾಗವಹಿಸಿ ಓದಲು ಕಲಿತಳು. ೧೮೧೭ನಲ್ಲಿ ಇಂಗ್ಲೀಷ್ ಚರ್ಚೊಂದರಲ್ಲಿ ಬಾಪ್ಟಿಸಂ ಪಡೆದು, ಕಮ್ಯೂನಿಯನ್‌ನಲ್ಲಿ ಸ್ವೀಕೃತವಾದರೂ ಅವಳು ತನ್ನ ಯಜಮಾನನಿಂದ ಅನುಮತಿ ಪಡೆದು ತೆರಳಲು ಬಹಳಷ್ಟು ಭಯಪಟ್ಟಳು. ೧೮೨೬ರಲ್ಲಿ ಮೇರಿ ಡೇನಿಯಲ್ ಜೇಮ್ಸ್ ಎಂಬುವನನ್ನು ಮದುವೆಯಾದಳು. ಅವನೂ ಕೂಡ ಗುಲಾಮನಾಗಿದ್ದ ಮತ್ತು ಬಡಗಿಯಾಗಿ ಕೆಲಸ ಮಾಡುತ್ತಿದ್ದ. ಇವಳನ್ನು ಯಜಮಾನರಿಂದ ಬಂಧಮುಕ್ತಳನ್ನಾಗಿ ಮಾಡಲು ಆತ ದುಡಿದು ಸಂಪಾದಿಸಿದ. ಆದರೆ ಆಕೆಯ ಯಜಮಾನ ಮತ್ತು ಯಜಮಾನ್ತಿಗೆ ಇವರನ್ನು ಬಿಡಗಡೆ ಮಾಡಲು ಎಷ್ಟೂ ಇಷ್ಟವಿರಲಿಲ್ಲ.

೧೮೨೮ರಲ್ಲಿ ಯಜಮಾನ ವುಡ್ ಮತ್ತು ಅವನ ಕುಟುಂಬ ಲಂಡನ್ನಿಗೆ ತೆರಳಿತು. ಅಷ್ಟು ಹೊತ್ತಿಗಾಗಲೇ ಬ್ರಿಟನ್‌ನಲ್ಲಿ ಗುಲಾಮಗಿರಿಯು ಕಾನೂನುಬದ್ಧವಾಗಿ ಉಳಿದಿರಲಿಲ್ಲ. ಕಾನೂನು ರೀತ್ಯಾ ವ್ಯವಸ್ಥೆಯಲ್ಲಿ ಅವಳು ಮುಕ್ತವಾಗಬಹುದಾಗಿದ್ದರೂ, ಅವಳು ಆಂಟಿಗ್ವಾದಲ್ಲಿರುವ ಅವಳ ಗಂಡನನ್ನು ಸೇರುವಂತಿರಲಿಲ್ಲ. ಏಕೆಂದರೆ, ಆಂಟಿಗ್ವಾದಲ್ಲಿ ಗುಲಾಮಗಿರಿಯು ಕಾನೂನು ಸಮ್ಮತವಾಗಿಯೇ ಇತ್ತು ಹಾಗೂ ಅವನು ತನ್ನ ಹೆಂಡತಿಯನ್ನು ಕರೆಯಿಸಿಕೊಳ್ಳಲು ಗುಲಾಮ ಪದ್ಧತಿಯ ಕಟ್ಟಳೆಯ ತೊಡಕಿತ್ತು. ಮೇರಿಗೆ ಇಂಗ್ಲೆಂಡಲ್ಲಿ ತನ್ನ ಹೊಟ್ಟೆಯನ್ನು ತಾನೇ ಹೊರೆದುಕೊಳ್ಳಲು ಸಾಧ್ಯವಿರಲಿಲ್ಲ. ಅವಳು ವುಡ್‌ನಿಂದ ಬಿಡುಗಡೆಯ ಪತ್ರವನ್ನು ಪಡೆಯದೇ ಎಲ್ಲಿಗೂ ಹೋಗುವಂತಿರಲಿಲ್ಲ. ಆಗಾಗ ಅವಳ ಮೇಲೆ ಕೋಪಗೊಂಡಾಗ ಹೇಳಿದ ಮಾತು ಕೇಳಿಕೊಂಡಿರು ಅಥವಾ ಬಿಟ್ಟು ಹೋಗು ಎಂದು ಹೇಳುತ್ತಿದ್ದಂತೆ ಒಂದು ಬಾರಿ ಅವಳನ್ನು ಕಳಿಸಿಯೇ ಬಿಟ್ಟ, ಆದರೆ ಅವಳನ್ನು ಯಾರೂ ಇಟ್ಟುಕೊಳ್ಳಲಾಗದೆಂಬ ಹಕ್ಕಿನ್ನು ನಮೂದಿಸುವ ಬಿಡುಗಡೆಯ ಪತ್ರದೊಂದಿಗೆ.

ಮೇರಿ ಪ್ರಿನ್ಸ್‌ಳ 230ನೇ ಜನ್ಮದಿನದಂದು ಗೂಗಲ್‌ ಡೂಡಲ್‌ ಗೌರವ

ಮೇರಿ ಅವನ ಮನೆಯಿಂದ ಹೊರಗೆ ಬಂದು ಹ್ಯಾಟ್ಟನ್ ಗಾರ್ಡನ್‌ನ ಮೊರಾವಿಯನ್ ಚರ್ಚ್‌ನಲ್ಲಿ ಆಶ್ರಯ ಪಡೆದಳು. ಕೆಲವೇ ವಾರಗಳಲ್ಲಿ ದಾಸ್ಯವಿರೋಧ ಸಂಸ್ಥೆಯ ಥಾಮಸ್ ಪ್ರಿಂಗ್ಲ್‌ನ ಬಳಿ ಸಹಾಯಕ ಬರಹಗಾರಳಾಗಿ ಕೆಲಸ ಮಾಡತೊಡಗಿದಳು.

ಹೌದು, ನಾನು ಸರಿಯಾಗಿಯೇ ಈ ಹೊಸ ಮನೆಗೆ ಬಂದಿದ್ದೇನೆ. ಮನೆಯು ದೊಡ್ಡದಾಗಿದೆ. ಬೆಟ್ಟದೆತ್ತರದಲ್ಲಿ ನಿಂತಿದೆ. ಆದರೆ ರಾತ್ರಿಯ ಹೊತ್ತು ಸರಿಯಾಗಿ ಕಾಣದು. ಬಂಡೆಗಲ್ಲುಗಳು, ಗಟ್ಟಿಮುಟ್ಟಾದ ಮರಮಟ್ಟುಗಳಿವೆ ಇಲ್ಲಿ. ಆದರೆ ಅವು ಗುಲಾಮರನ್ನಿಟ್ಟುಕೊಂಡಿರುವ ಯಜಮಾನರ ಹೃದಯಷ್ಟು ಕಠಿಣವಾಗಿಲ್ಲ.

ಥಾಮಸ್ ಪ್ರಿಂಗ್ಲ್ ಅವರ ಸಂಸ್ಥೆಯಲ್ಲಿ ಕಪ್ಪು ಜನರಿಗೆ ಬೇಕಾದ ಸಹಾಯವನ್ನು ಕೊಡುವ ಯೋಜನೆ ಇತ್ತು. ಮುಂದೆ ಮೇರಿ ಮತ್ತೊಂದು ಕಡೆ ಮನೆಯನ್ನು ನೋಡಿಕೊಳ್ಳುವವಳಾಗಿ ಕೆಲಸ ಪಡೆದಳು. ಆದರೆ ಅವಳಿಗೆ ಕೆಲಸ ಕೊಟ್ಟಿದ್ದವರು ಇಂಗ್ಲೆಂಡ್‌ಗೆ ಹೋಗಬೇಕಾಗಿ ಬಂತು. ಅಷ್ಟರಲ್ಲಿ ಅವಳ ಹಳೆಯ ಯಜಮಾನ ವುಡ್ಸ್ ಕೂಡ ಇಂಗ್ಲೆಂಡ್ ಬಿಟ್ಟು ಅವನ ಮಗಳೊಂದಿಗೆ ಅಂಟಿಗ್ವಾಗೆ ಮರಳಿದ್ದ. ಪ್ರಿಂಗಲ್ ವುಡ್‌ನಿಂದ ಕಾನೂನು ರೀತ್ಯ ಬಿಡುಗಡೆ ಪಡೆಯಲು ಸಾಕಷ್ಟು ಯತ್ನಿಸಿದ.

ಆದರೆ ವುಡ್ ಅವಳಿಗೆ ಅಂತಹ ಬಿಡುಗಡೆಯ ಪತ್ರವನ್ನು ಕೊಡಲೂ ಅಥವಾ ತನ್ನಿಂದ ಕೊಂಡುಕೊಳ್ಳಲೂ ಒಪ್ಪಲಿಲ್ಲ. ಅಂಟಿಗ್ವಾದಲ್ಲಿ ಗುಲಾಮಗಿರಿಯು ಕಾನೂನಿನ ಸಮ್ಮತಿಯಿಂದ ಮುಕ್ತವಾಗುವರೆಗೂ ತಾನು ಅವಳನ್ನು ಬಿಡುಗಡೆಗೊಳಿಸಲಾರೆ ಎಂದು ಸ್ಪಷ್ಟೀಕರಿಸಿದ. ಮೇರಿ ತನ್ನ ಗಂಡನನ್ನಾಗಲಿ, ಸ್ನೇಹಿತರನ್ನಾಗಲಿ ಸೇರಲು ಸಾಧ್ಯವಾಗದೇ ಹೋಯಿತು. ಏಕೆಂದರೆ ಅವರೆಲ್ಲರೂ ಅವನ ಗುಲಾಮಗಿರಿಯ ಅಧೀನದಲ್ಲೇ ಇದ್ದರು. ದಾಸ್ಯವಿರೋಧಿ ಸಂಸ್ಥೆಯು ಅಲ್ಲಿನ ಪಾರ್ಲಿಮೆಂಟಿಗೆ ಮೇರಿಯ ಬಿಡುಗಡೆಯನ್ನು ಕೋರಿ ಪತ್ರವನ್ನು ಸಲ್ಲಿಸಿದರೂ ಅದು ತಿರಸ್ಕೃತವಾಯಿತು. ವೆಸ್ಟ್ ಇಂಡೀಸ್‌ನಿಂದ ತಂದಿರುವ ಎಲ್ಲಾ ಗುಲಾಮರನ್ನು ಬಿಡುಗಡೆ ಮಾಡಬೇಕೆಂಬ ಪ್ರಸ್ತಾಪವನ್ನು ಮುಂದಿಡುತ್ತಿದ್ದರಾದರೂ ಶಾಸನವೇನೂ ಜಾರಿಗೆಯಾಗಿರಲಿಲ್ಲ. ಆದರೆ ಗುಲಾಮ ಪದ್ಧತಿಯ ವಿರುದ್ಧವಾಗಿ ಏಳುತ್ತಿದ್ದ ಕೂಗು ಗಾಢವಾಗುತ್ತಿತ್ತು ಮತ್ತು ಗುಲಾಮರ ಬಗ್ಗೆಯ ಅನುಕಂಪವು ದಟ್ಟವಾಗುತ್ತಿತ್ತು.

೧೮೨೯ರಲ್ಲಿ ಪ್ರಿಂಗ್ಲ್ ಮೇರಿಯನ್ನು ತನ್ನ ಮನೆಯ ಕೆಲಸಕ್ಕೆ ಎಂದೇ ಇಟ್ಟುಕೊಂಡ. ಆತನ ಪ್ರೇರೇಪಣೆಯಿಂದ ಅವಳ ಜೀವನ ಚಿತ್ರಣವನ್ನು ಆಕೆಯು ನಿರೂಪಣೆ ಮಾಡಿದ್ದೇ ಅಲ್ಲದೇ, ಸುಸಾನ ಸ್ಕ್ರಿಕ್ಲಾಂಡ್ ಎಂಬಾಕೆ ಬರವಣಿಗೆಯಲ್ಲಿ ದಾಖಲಿಸಿದಳು. ಪ್ರಿಂಗ್ಲ್ ಅದರ ಸಂಪಾದಕನಾಗಿ ಕಾರ್ಯ ನಿರ್ವಹಿಸಿದ. ಆ ಪುಸ್ತಕ ೧೮೩೧ರಲ್ಲಿ ಬಿಡುಗಡೆಯಾಯಿತು. ಅದರ ಹೆಸರು ದ ಹಿಸ್ಟರಿ ಆಫ್ ಮೇರಿ ಪ್ರಿನ್ಸ್.

ನಾನೇ ಗುಲಾಮಳಾಗಿದ್ದೆನು. ನನಗೆ ತಿಳಿದಿದೆ ಗುಲಾಮರ ಭಾವನೆಗಳು. ನನ್ನ ಮೂಲಕ ನಾನು ಉಳಿದ ಗುಲಾಮರ ದನಿಗಳನ್ನು ಉಸುರಬಲ್ಲೆ. ಅವರ ದನಿಗಳು ನನ್ನ ಕಂಠದಲ್ಲೂ ಇವೆ, ನನ್ನ ಕಿವಿಗಳಲ್ಲೂ ಇವೆ. ಗುಲಾಮಗಿರಿಯಲ್ಲಿದ್ದವನು ನಾನು ಸಂತೋಷವಾಗಿದ್ದೇನೆ ಎಂದ ಪಕ್ಷದಲ್ಲಿ ಅವನಿಗೆ ಬಿಡುಗಡೆ ಬೇಡವೆಂದೇ ಅರ್ಥ. ಅವನು ಒಂದೋ ಅಜ್ಞಾನಿಯಾಗಿರುತ್ತಾನೆ ಅಥವಾ ಸುಳ್ಳುಗಾರನಾಗಿರುತ್ತಾನೆ. ಆದರೆ ನಾನೆಂದಿಗೂ ಕೇಳೇ ಇಲ್ಲ, ಯಾವನೊಬ್ಬ ಗುಲಾಮ ತಾನು ಸಂತೋಷವಾಗಿದ್ದೇನೆಂದು ಹೇಳಿರುವುದನ್ನು. ನೀನು ಸಂತೋಷವಾಗಿದ್ದೀಯಾ ಎಂದು ಯಾವನೊಬ್ಬ ಬುಖ್ರ (ಬಿಳಿಯ ಮನುಷ್ಯ) ಹೇಳಿರುವುದನ್ನು.

ಸಂಚಲನವನ್ನು ಉಂಟುಮಾಡಿದ ಆ ಪುಸ್ತಕವು ಒಬ್ಬ ಕಪ್ಪು ಮಹಿಳೆಯ ಪ್ರಕಟವಾದ ಪ್ರಥಮ ಪುಸ್ತಕವು ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ನಾನು ಎಂದು ಪ್ರಥಮ ವ್ಯಕ್ತಿಯಾಗಿ ಕಥೆಯನ್ನು ಹೇಳಿಕೊಂಡ ಆ ರೀತಿಯೇ ಎಲ್ಲರನ್ನೂ ಮುಟ್ಟಿತ್ತು. ಮೊದಲ ವರ್ಷದಲ್ಲಿಯೇ ಮೂರು ಮುದ್ರಣಗಳನ್ನು ಕಂಡಿತು. ಅದೇ ಸಮಯದಲ್ಲಿ ಗುಲಾಮಗಿರಿ ಪದ್ಧತಿಯ ವಿರುದ್ಧವಾದ ದನಿಯ ಅಲೆಗಳು ಹೆಚ್ಚುತ್ತಲೇ ಇದ್ದವು.

ಮೇರಿ ಪ್ರಿನ್ಸ್‌ಳ ಇತಿಹಾಸದ ಪುಸ್ತಕಕ್ಕೆ ಜನಪ್ರಿಯತೆ ದಕ್ಕಿತು. ಅದರ ಜೊತೆಗೆ ಮೇರಿಯ ವಿರುದ್ಧವಾಗಿ ಮಾತ್ಸರ್ಯದಿಂದ ಮಾನ ಹಾನಿ ಮಾಡುವಂತಹ ಎರಡು ಕೇಸುಗಳೂ ಬಿದ್ದವು. ಅದನ್ನು ಎದುರಿಸಲು ಮೇರಿ ಕೋರ್ಟಿನ ಮೆಟ್ಟಿಲನ್ನು ಏರಬೇಕಾಯ್ತು.

ಮ್ಯಾಕ್ವೀನ್ ವೆಸ್ಟ್ ಇಂಡಿಯಾದಲ್ಲಿ ಬಿಳಿಯರ ಪರವಾಗಿ ದಾವೆಗಳನ್ನು ಸಂಭಾಳಿಸುತ್ತಿದ್ದ ನ್ಯಾಯವಾದಿ. ಅವನು ಗುಲಾಮಗಿರಿಯ ವಿರುದ್ಧದ ಆಂದೋಲನಕ್ಕೆ ಕಟ್ಟಾ ವಿರೋಧಿಯಾಗಿದ್ದ. ಅವನು ಮೇರಿಯನ್ನು ಚಾರಿತ್ರ್ಯಹೀನಳೆಂದೂ, ಅವಳು ಕೆಟ್ಟ ಕೆಲಸಗಳನ್ನು ಮಾಡುವ ನೀಚ ಮಹಿಳೆಯೆಂದೂ ಸಾಕಷ್ಟು ಪ್ರಚಾರ ಮಾಡಿದ. ಅಷ್ಟೇ ಅಲ್ಲದೇ ಉದಾರವಾದ ಮತ್ತು ಒಳ್ಳೆಯ ಮನಸ್ಸುಳ್ಳ ಯಜಮಾನರನ್ನು ದುರುಪಯೋಗ ಪಡಿಸಿಕೊಂಡವಳೆಂದೂ ತನ್ನ ದೂರಿನಲ್ಲಿ ಬಲವಾಗಿ ಪ್ರತಿಪಾದಿಸಲು ಯತ್ನಿಸಿದ್ದ. ಅಷ್ಟೇ ಅಲ್ಲದೇ ಪ್ರಿಂಗ್ಲ್‌ನ ಕುಟುಂಬವೂ ಕೂಡ ಅಂತಹುದೇ ಚಾರಿತ್ರ್ಯಹೀನವಾಗಿದ್ದು, ಒಬ್ಬಳು ಗುಲಾಮಳನ್ನು ತಮ್ಮ ಮನೆಯಲ್ಲಿರಿಸಿಕೊಂಡಿರುವುದೇ ದೊಡ್ಡ ಅಪರಾಧವೆಂದು ವಾದಿಸಿದ್ದ. ಅಷ್ಟೇ ಅಲ್ಲದೇ ಅವನ ಮೇಲೂ ಕೇಸುಗಳನ್ನು ಹಾಕಲಾಯಿತು. ಜಾನ್ ವುಡ್ ತನ್ನ ವ್ಯಕ್ತಿತ್ವವನ್ನು ಕೆಟ್ಟದಾಗಿ ಬಿಂಬಿಸಿದೆಯೆಂದು ಮಾನಹಾನಿ ದಾವೆ ಹೂಡಿದನು. ನ್ಯಾಯಾಲಯದಲ್ಲಿ ತೀರ್ಪು ಜಾನ್ ವುಡ್‌ನ ಪರವಾಗಿಯೇ ಇತ್ತು. ಅಪಾರ ಮೊತ್ತದ ಹಣವನ್ನು ದಂಡವನ್ನಾಗಿ ಪ್ರಿಂಗ್ಲ್ ತೆರಬೇಕಾಯ್ತು. ಮೇರಿಯ ಕೇಸು ಮುಗಿಯದೇ ಅವಳು ಮಾತ್ರ ಕೋರ್ಟಿಗೆ ಅಲೆಯುತ್ತಲೇ ಇರಬೇಕಾಗಿತ್ತು.

ಪುಸ್ತಕ ಪ್ರಕಟಣೆಯ ನಂತರದ ಆಕೆಯ ಜೀವನದ ಬಗ್ಗೆ ಹೆಚ್ಚು ಮಾಹಿತಿ ಈಗ ತಿಳಿದಿಲ್ಲ. ಅವಳು ತಾನು ಹಂಬಲಿಸಿದಂತೆ ತನ್ನ ಗಂಡನನ್ನು ಕೂಡಿದಳೋ ಇಲ್ಲವೋ ತಿಳಿದುಬಂದಿಲ್ಲ.

೧೮೩೩ರವರೆಗೆ ಅವಳು ಇಂಗ್ಲೆಂಡಲ್ಲಿ ಇದ್ದು ಅವಳ ಕೇಸುಗಳಿಗೆ ಎಡತಾಕುತ್ತಿದ್ದ ಸಾಕ್ಷಿಗಳಿವೆ. ಆಮೇಲೆ ೧೮೩೪ರಲ್ಲಿ ಗುಲಾಮ ವಿರೋಧಿ ಶಾಸನವು ಜಾರಿಯಾಯಿತು. ಆದರೆ ಮೇರಿ ಕಾಣಲೇ ಇಲ್ಲ. ಅವಳು ಎಲ್ಲಿಗೆ ಹೋದಳು ಏನಾದಳು ಎಂದೂ ತಿಳಿಯಲಿಲ್ಲ. ಅವಳು ಆರೋಗ್ಯವಾಗಿ ಮತ್ತು ಜೀವಂತವಾಗಿ ಇದ್ದದ್ದೇ ಆದ ಪಕ್ಷದಲ್ಲಿ ಆಕೆ ಖಂಡಿತವಾಗಿ ತನ್ನ ಪ್ರೀತಿಯ ಗಂಡನನ್ನು ಸೇರಲು, ತನ್ನ ಜೀವದ ಮಿತ್ರರನ್ನು ಸಂಧಿಸಲು ಬಂದೇ ಬರುತ್ತಿದ್ದಳು ಎಂದು ಎಲ್ಲರೂ ಮಾತಾಡುತ್ತಿದ್ದರು. ಆದರೆ ಮೇರಿ ಪ್ರಿನ್ಸ್ ಶೋಷಿತ ಅಸಂಖ್ಯರಲ್ಲಿ ಎಲ್ಲೋ ಏಕೋ ಕಳೆದೇ ಹೋದಳು. ವೆಸ್ಟ್ ಇಂಡೀಸ್‌ನ ಓರ್ವ ಕಪ್ಪು ಮಹಿಳೆ, ಇಂಗ್ಲೀಷಿನ ಜನಾಂಗೀಯ ಅಧಿಪತ್ಯದಲ್ಲಿ ತನ್ನ ಇರುವನ್ನೇ ಕರಗಿಸಿಕೊಂಡುಬಿಟ್ಟಳು.


ಇದನ್ನು ಓದಿ: ಪ್ರೀತಿಸುವ ಕಲೆ – ಎರಿಕ್ ಫ್ರಾಂ : ಯೋಗೇಶ್ ಮಾಸ್ಟರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...