Homeನ್ಯಾಯ ಪಥಎಚ್ ಎಸ್ ದೊರೆಸ್ವಾಮಿ ಶ್ರದ್ಧಾಂಜಲಿ; "ಪೌರವೀರ" ದೊರೆಸ್ವಾಮಿಯವರು

ಎಚ್ ಎಸ್ ದೊರೆಸ್ವಾಮಿ ಶ್ರದ್ಧಾಂಜಲಿ; “ಪೌರವೀರ” ದೊರೆಸ್ವಾಮಿಯವರು

- Advertisement -
- Advertisement -

ದೊರೆಸ್ವಾಮಿ ತಾತನ ಎಂಟು ದಶಕಗಳಿಗೂ ಮೀರಿದ ಸುದೀರ್ಘ ಸಾರ್ವಜನಿಕ ಜೀವನವನ್ನು ಇಂದು ಅವಲೋಕಿಸಿದಾಗ, ಅದರ ಮೂಲಸೆಲೆ ಅವರು ಪೌರತ್ವ ಮತ್ತು ಸ್ವಾತಂತ್ರ್ಯಗಳನ್ನು ಸತತವಾಗಿ ಮರುವ್ಯಾಖ್ಯಾನಿಸುತ್ತಲೇ ಸಾಗಿದ್ದು ಅನಿಸುತ್ತೆ. ಸರ್ಕಾರವನ್ನು ಪ್ರಶ್ನೆ ಕೇಳುವುದೇ ದೇಶದ್ರೋಹವೆಂದು ಬಗೆಯಲಾಗುತ್ತಿರುವ ಇಂದಿನ ದಿನಮಾನದಲ್ಲಿ ತಾತನ ಬದುಕು ಆದರ್ಶ ಪೌರತ್ವದ ಆಚರಣೆ ಎನಿಸುತ್ತದೆ. ‘It is not the Government’s job to keep its Citizens in check, but the other way around. The Citizens need to keep the Governments in check’ ಎಂಬ ಮಾತಿದೆ. ದೊರೆಸ್ವಾಮಿಯವರು ತಮ್ಮ ಜೀವನದುದ್ದಕ್ಕೂ ಪ್ರಯತ್ನ ಮಾಡಿದ್ದು ಅದನ್ನೇ.

ಬಹುತೇಕ ಸ್ವಾತಂತ್ರ್ಯ ಹೋರಾಟಗಾರರು 1947ರ ನಂತರ ಇಲ್ಲ ಅಧಿಕಾರ ರಾಜಕಾರಣದೆಡೆ ನಡೆದುಬಿಟ್ಟರು, ಇಲ್ಲ ತಮ್ಮ ಕೆಲಸ ಮುಗಿಯಿತೆಂದು ನಿವೃತ್ತರಾಗಿಬಿಟ್ಟರು. ದೊರೆಸ್ವಾಮಿಯವರ ವಿಶೇಷತೆಯೆಂದರೆ, ಅವರು ಎರಡೂ ಮಾಡಲಿಲ್ಲ. ಅವರು ಸ್ವಾತಂತ್ರ್ಯಾನಂತರ ಕಾಂಗ್ರೆಸ್ಸಿನಿಂದಲೂ ಹೊರಬಂದುಬಿಟ್ಟರು. ಅಷ್ಟೇ ಅಲ್ಲ ಅವರು ಜೀವನದುದ್ದಕ್ಕೂ ಯಾವುದೇ ಸಂಘಟನೆಯನ್ನು ಕಟ್ಟಲಿಲ್ಲ, ಯಾವುದೇ ಸಂಘಟನೆಯ ಜೊತೆ ಸಂಪೂರ್ಣವಾಗಿ ಗುರುತಿಸಿಕೊಳ್ಳಲಿಲ್ಲ. ಎಲ್ಲ ಸಾಮಾಜಿಕ ಹೋರಾಟಗಳು, ಸಂಘಟನೆಗಳಲ್ಲಿ ದೊರೆಸ್ವಾಮಿಯವರು ಇದ್ದರು, ಆದರೆ ತಾವರೆ ಎಲೆಯ ಮೇಲಿನ ನೀರಿನ ಗುಳ್ಳೆಯಂತೆಯೇ ಇದ್ದರು. ಸ್ವಾತಂತ್ರ್ಯಾ ನಂತರ ದೊರೆಸ್ವಾಮಿಯವರು ತಮ್ಮ ಇಡೀ ಜೀವನದಲ್ಲಿ ಎಂದೂ ಚುನಾವಣೆಗೆ ನಿಲ್ಲಲಿಲ್ಲ, ಯಾವುದೇ ಸಾರ್ವಜನಿಕ ಹುದ್ದೆಯನ್ನು ಅಲಂಕರಿಸಲಿಲ್ಲ. ಕಡೆಗೆ ದೊರೆಸ್ವಾಮಿಯವರು ಒಬ್ಬ ಪ್ರಜ್ಞಾವಂತ ಪೌರನಾಗಿ ತನ್ನ ಕರ್ತವ್ಯ ನಿರ್ವಹಿಸಿದರಷ್ಟೆ, ಪೌರತ್ವದ ಶ್ರೇಷ್ಠ ಮಾದರಿಯನ್ನು ಜೀವಿಸಿ ನಮಗೆ ತೋರಿಸಿಕೊಟ್ಟು ಹೋಗಿದ್ದಾರೆ. ಯಾವುದೇ ಅನ್ಯಾಯ, ಸರ್ಕಾರಗಳ ಜನವಿರೋಧಿ ನಿಲುವುಗಳು ಕಂಡರೆ ಬೀದಿಗಿಳಿದು ಪ್ರತಿಭಟಿಸುವುದು, ಅವುಗಳ ಕುರಿತು ಜನಾಭಿಪ್ರಾಯ ರೂಪಿಸುವುದಕ್ಕಾಗಿ ಪತ್ರಕರ್ತರಾದ ದೊರೆಸ್ವಾಮಿಯವರು ಬರೆದರು. ನೀವೇ ಮತ ಚಲಾಯಿಸಿದ ಪಕ್ಷದ ಸರ್ಕಾರವಾದರೂ, ಆಳುವ ಸರ್ಕಾರಗಳನ್ನು ಪ್ರಶ್ನಿಸುವುದು, ಅವು ಎಲ್ಲೆ ಮೀರದಂತೆ ಕಾಯುವುದೇ ದೊರೆಸ್ವಾಮಿಯವರು ತೋರಿಸಿಕೊಟ್ಟ ಪೌರತ್ವದ ಶ್ರೇಷ್ಠ ಮಾದರಿ. ಸರ್ಕಾರ ಜನಪರ ಕೆಲಸ ಮಾಡಿದಾಗ ಅದನ್ನು ಬೆಂಬಲಿಸಲೂ ಬೇಕು, ಆದರೆ ಅದು ಈಗ ಪ್ರಚಲಿತದಲ್ಲಿರುವಂತೆ ಅಂಧ ಭಕ್ತಿಯಾಗಬಾರದು ಎಂದು ನಂಬಿದ್ದವರು ಅವರು. ಸ್ವತಃ ತನ್ನ ಮಾತೃ ಪಕ್ಷವಾದ ಕಾಂಗ್ರೆಸ್ಸಿನ ವಿರುದ್ಧ ದೊರೆಸ್ವಾಮಿಯವರು ಅನೇಕ ಹೋರಾಟಗಳನ್ನು ರೂಪಿಸಿರುವುದೇ ಅದಕ್ಕೆ ಸಾಕ್ಷಿ.

ಗಾಂಧಿವಾದಿಗಳಾದ ದೊರೆಸ್ವಾಮಿಯವರು ಬಹುಶಃ ಸ್ವತಂತ್ರ ಭಾರತದಲ್ಲಿ ಗಾಂಧೀಜಿ ಇನ್ನೂ ಹೆಚ್ಚು ಕಾಲ ಬದುಕಿದ್ದರೆ ಹೇಗೆ ಬದುಕುತ್ತಿದ್ದರೋ, ಹಾಗೆ ಬದುಕಿದವರು ಎಂದು ನನಗನ್ನಿಸುತ್ತೆ. ಸ್ವಾತಂತ್ರ್ಯ ಬಂದು ನೆಹರೂ ದೆಹಲಿಯಲ್ಲಿ ತಿರಂಗಾ ಝಂಡಾ ಹಾರಿಸುತ್ತಿದ್ದರೆ, ಇಡೀ ಸ್ವಾತಂತ್ರ್ಯ ಚಳುವಳಿಯ ರೂವಾರಿ ಗಾಂಧೀಜಿ ಕೊಲ್ಕತ್ತೆಯಲ್ಲಿ ಹತ್ತಿಕೊಂಡು ಉರಿಯುತ್ತಿದ್ದ ಹಿಂದೂ-ಮುಸ್ಲಿಂ ಕೋಮು ದಳ್ಳುರಿಯನ್ನು ತಹಬಂದಿಗೆ ತರಲು ಪ್ರಯತ್ನಿಸುತ್ತಿದ್ದರು. ಅಂದು ಅವರು ಉಪವಾಸ ಕೂತಿದ್ದರು, ಪ್ರಾರ್ಥನೆಯಲ್ಲಿ ಇಡೀ ದಿನವನ್ನು ಕಳೆದಿದ್ದರು. ಗಾಂಧೀಜಿ ಸ್ವಾತಂತ್ರ್ಯಾನಂತರ ಕಾಂಗ್ರೆಸ್ಸನ್ನು ಒಂದು ರಾಜಕೀಯ ಪಕ್ಷವಾಗಿ ವಿಸರ್ಜಿಸಬೇಕು ಎಂದು ಬಯಸಿದ್ದರು. “ಸ್ವಾತಂತ್ರ್ಯ ಪಡೆಯಲು ಬಲಿದಾನ ಮಾಡಿದ ಸಂಸ್ಥೆ, ದೇಶದಿಂದ ಇಂಗ್ಲಿಷರನ್ನು ಓಡಿಸಿ ಗುಲಾಮಗಿರಿಯಿಂದ ದೇಶವನ್ನು ಪಾರು ಮಾಡಿದ ಕಾಂಗ್ರೆಸ್ ಸಂಸ್ಥೆಯು ಮುಂಚೂಣಿಯಲ್ಲಿರುವವರೆಗೆ ಸತತವಾಗಿ ಅಧಿಕಾರದಲ್ಲಿರಬೇಕು, ಅಧಿಕಾರ ಅನುಭವಿಸಬೇಕು ಎಂಬ ಹಂಬಲ ಸಹಜವಾಗಿಯೇ ಇರುತ್ತದೆ. ಆದರೆ ಕಾಂಗ್ರೆಸ್ ಅಧಿಕಾರ ದಾಹ ಬಿಟ್ಟು ರಾಜಕೀಯದಿಂದ ನಿವೃತ್ತಿ ಆಗಿ ಲೋಕಸೇವಾಸಂಘವಾಗಿ ಪರಿವರ್ತನೆಯಾಗಬೇಕು, ದುರಾಡಳಿತ ನಡೆಸುವ ಸರ್ಕಾರ ಮತ್ತು ಪಕ್ಷದ ವಿರುದ್ಧ ಸಂಘರ್ಷ ನಡೆಸಬೇಕು (ಬ್ರಿಟಿಷರ ವಿರುದ್ಧ ಹೋರಾಡಿದ ರೀತಿಯಲ್ಲೇ) ಎಂಬುದು ಗಾಂಧೀಜಿಯ ಆಶಯವಾಗಿತ್ತು.. ಆದರೆ ಅಂದಿನ ಕಾಂಗ್ರೆಸ್ ಧುರೀಣರು ಗಾಂಧೀಜಿಯವರ ಈ ಮಾತನ್ನಾಗಲೀ, ಅದರ ಹಿಂದಿನ ಉದ್ದೇಶವನ್ನಾಗಲೀ ಕೇಳಲಿಲ್ಲ ಎಂದು ಇದೇ ಪತ್ರಿಕೆಯ ’ನೂರರ ನೋಟ’ ಅಂಕಣದಲ್ಲಿ ಏಪ್ರಿಲ್ 2018ರಲ್ಲಿ ದೊರೆಸ್ವಾಮಿಯವರು ಬರೆಯುತ್ತಾರೆ.

ಕಾಂಗ್ರೆಸ್ಸಿಗರು ಕೇಳಲಿಲ್ಲ ನಿಜ. ಆದರೆ ದೊರೆಸ್ವಾಮಿಯವರು ಆ ಕರೆಗೆ ಓಗೊಟ್ಟರು ಮತ್ತು ಜೀವನಪರ್ಯಂತ ಹಾಗೇ ಬದುಕಿದರು ಕೂಡ – ‘ಪೌರವಾಣಿ’ಯಾಗಿ, ಆಳ್ವಿಕೆಗೆ ಬಂದ ಎಲ್ಲ ಸರ್ಕಾರಗಳಿಗೆ ಶಾಶ್ವತ ವಿರೋಧ ಪಕ್ಷವಾಗಿ. ಸ್ವಾತಂತ್ರ್ಯ ಬಂದು ನಮ್ಮವರದೇ ಸರ್ಕಾರ ಬಂದಕೂಡಲೇ ಎಲ್ಲವೂ ಸರಿಹೋಗುತ್ತೆ ಎಂಬ ಯಾವ ಉಟೋಪಿಯಾ ಅವರಿಗೆ ಇದ್ದಂತಿರಲಿಲ್ಲ. ಜನಸಾಮಾನ್ಯರ ನಡುವೆಯೇ ಬದುಕುತ್ತಿದ್ದ ದೊರೆಸ್ವಾಮಿಯವರಿಗೆ ಉತ್ತಮ ಪ್ರಭುತ್ವ ಲೊಳಲೊಟ್ಟೆ ಎಂಬುದರ ಅರಿವು ಚೆನ್ನಾಗಿತ್ತು ಅನ್ನಿಸುತ್ತೆ. ಪ್ರಜಾಪ್ರಭುತ್ವದಲ್ಲಿ ಆಳುವ ಸರ್ಕಾರವನ್ನು ಪ್ರಶ್ನಿಸುವುದರ ಪ್ರಾಮುಖ್ಯತೆಯನ್ನು ಬಲ್ಲವರಾಗಿದ್ದರು ಅವರು. ಅದಕ್ಕೆ ಅವರ ಚಳುವಳಿಯ ಹಿನ್ನೆಲೆ, ಗಾಂಧೀಜಿಯ ಅನಾರ್ಕಿಯ ಸೆಲೆಗಳು ಮತ್ತು ಒಬ್ಬ ಪತ್ರಕರ್ತನಾಗಿ ವ್ಯವಸ್ಥೆಯನ್ನು ಪ್ರಶ್ನಿಸುವ ಸಹಜ ಪ್ರವೃತ್ತಿ ಅವರ ಪ್ರಜ್ಞೆಯನ್ನು ಸದಾ ಜಾಗೃತವಾಗಿಟ್ಟಿತ್ತು.

ಅವರು ಮನಸ್ಸು ಮಾಡಿದ್ದರೆ ಎಂದೋ ಮಂತ್ರಿಯಾಗಬಹುದಿತ್ತು, ಅಧಿಕಾರ ರಾಜಕಾರಣಕ್ಕೆ ಹೋಗಿದ್ದರೆ ಮುಖ್ಯಮಂತ್ರಿಯೂ ಆಗುತ್ತಿದ್ದರೋ ಏನೋ ಬಲ್ಲವರಿಲ್ಲ, ಆದರೆ ಅವರಿಗೆ ಅದರಲ್ಲಿ ಎಳ್ಳಷ್ಟೂ ಆಸಕ್ತಿ ಇರಲಿಲ್ಲ. ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಅವರು ದೊರೆಸ್ವಾಮಿಯವರನ್ನು ಕರೆದು ಮಂತ್ರಿ ಮಾಡುತ್ತೇನೆ ಅಂದರಂತೆ. ಅದಕ್ಕೆ ದೊರೆಸ್ವಾಮಿಯವರು ತಾನು ಸರ್ಕಾರದ ತಪ್ಪುಗಳ ಬಗ್ಗೆ ಮಾತಾಡುವುದು ನಿಲ್ಲ್ಲಿಸುವುದಿಲ್ಲ ಎಂದದ್ದಕ್ಕೆ, ಕೆಂಗಲ್ ಅವರು ಹಾಗೆ ಮಾಡುವಂತಿಲ್ಲ ಎಂದರಂತೆ. ದೊರೆಸ್ವಾಮಿಯವರು ಕೈಮುಗಿದು ಎದ್ದು ಬಂದುಬಿಟ್ಟರು. ಇತ್ತೀಚೆಗೆ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ದೊರೆಸ್ವಾಮಿಯವರ ಬಳಿ ಕೊಂಚ ಸಲುಗೆಯಿತ್ತು. ತಾತ ಇನ್ನೂ ಬಾಡಿಗೆ ಮನೆಯಲ್ಲೇ ಇರುವುದು ತಿಳಿದು ಸರ್ಕಾರದಿಂದ ಸ್ವಂತ ಮನೆ ಮಂಜೂರು ಮಾಡುವ ಪ್ರಸ್ತಾಪ ಇಟ್ಟಾಗ ಅದನ್ನೂ ತಿರಸ್ಕರಿಸಿದರು. ಬಹುಶಃ ಸ್ವತಂತ್ರ್ಯ ಯೋಧರ ಪಿಂಚಣಿ ಒಂದನ್ನು ಬಿಟ್ಟು ಸರ್ಕಾರದಿಂದ ಅವರು ಯಾವ ಸವಲತ್ತನ್ನೂ ಪಡೆದವರೇ ಅಲ್ಲ. ಸಿದ್ಧರಾಮಯ್ಯನವರಿಗೆ ದೊರೆಸ್ವಾಮಿಯವರಲ್ಲಿ ಇದ್ದ ಸಲುಗೆ ಅವರು ಬರೆದ ಲೇಖನದಲ್ಲಿ ಕಂಡುಬರುತ್ತದೆ. ಹೇಗೆ ದೊರೆಸ್ವಾಮಿಯವರು ಒಮ್ಮೆಯೂ ವೈಯಕ್ತಿಕವಾದ ಯಾವುದೇ ವಿಷಯಕ್ಕೆ ತಮ್ಮನ್ನು ಭೇಟಿಯಾಗಲಿಲ್ಲವೆಂದು ಹೇಳುತ್ತಾ, “ಸ್ವಾರ್ಥದ ಲವಲೇಶವೂ ಇಲ್ಲದ ಅವರ ಕಠೋರ ನೈತಿಕತೆ ಎದುರು ರಾಜಕಾರಣದಲ್ಲಿರುವ ನಾವೆಲ್ಲರೂ ತಲೆ ತಗ್ಗಿಸಲೇಬೇಕಾಗುತ್ತಿತ್ತು” ಎಂದು ಬರೆಯುತ್ತಾರೆ. ಹಾಗೆಯೇ ಅವರು “ಕೊಡಗಿನಲ್ಲಿ ಭೂಮಾಲೀಕರು ಬಡ ಆದಿವಾಸಿಗಳನ್ನು ಒಕ್ಕಲೆಬ್ಬಿಸಿದಾಗ ಕೆಂಡಾಮಂಡಲವಾಗಿದ್ದ ದೊರೆಸ್ವಾಮಿಗಳು ನನ್ನ ಜೊತೆ ಜಗಳಕ್ಕೆ ನಿಂತಿದ್ದನ್ನು ನಾನು ಮರೆಯಲಾರೆ” ಎಂದೂ ಬರೆಯುತ್ತಾರೆ. ಮುಂದುವರೆದು ಹೀಗೆ ಧಾಖಲಿಸುತ್ತಾರೆ: “ವೈಯಕ್ತಿಕವಾಗಿ ನನ್ನ ಬಗ್ಗೆ ಅವರಿಗೆ ಅಪಾರವಾದ ಪ್ರೀತಿ ಇತ್ತು. ನನಗೆ ಅವರ ಬಗ್ಗೆ ಅಷ್ಟೇ ಗೌರವ ಇತ್ತು. ದೊರೆಸ್ವಾಮಿಯವರು ಭೇಟಿಯಾಗಲು ಬರುತ್ತಾರೆಂದ ಕೂಡಲೆ ನಾನು ಸ್ವಲ್ಪ ವಿಚಲಿತನಾಗುತ್ತಿದ್ದೆ. ರಾಜಕೀಯದ ಚಕ್ರವ್ಯೂಹದೊಳಗಿದ್ದು ನಮ್ಮದೇ ಇತಿಮಿತಿಯೊಳಗೆ ಕೆಲಸಮಾಡಬೇಕಾದ ನನ್ನಂತಹವರಿಗೆ ದೊರೆಸ್ವಾಮಿಯವರಂತಹ ಪ್ರಾಮಾಣಿಕ ಹೋರಾಟಗಾರರ ಎಲ್ಲ ಬೇಡಿಕೆಗಳನ್ನು ಈಡೇರಿಸುವುದು ಕಷ್ಟವಾಗುತ್ತಿತ್ತು”. ಅದೇ ದೊರೆಸ್ವಾಮಿಯವರ ಶಕ್ತಿಯಾಗಿತ್ತು, ಆಳುವ ಮುಖ್ಯಮಂತ್ರಿಯಲ್ಲಿ ಇಂಥದೊಂದು ಅಳುಕು, ಭಯವನ್ನು ಒಬ್ಬ ಪ್ರಜ್ಞಾವಂತ ಪೌರನಾಗಿಯಷ್ಟೆ ದೊರೆಸ್ವಾಮಿಯವರು ಮೂಡಿಸುತ್ತಿದ್ದರು.

ಇನ್ನು ಇತರೆ ಅನೇಕ ಹೋರಾಟಗಾರರಂತೆ ದೊರೆಸ್ವಾಮಿಯವರು ಒಂದು ವಿಷಯಕ್ಕೆ ಅಂಟಿಕೊಂಡವರಲ್ಲ. ಅವರು ಸ್ವಾತಂತ್ರ್ಯ ಭಾರತದ ಪ್ರಜ್ಞಾಪ್ರವಾಹದೊಂದಿಗೆ ನಡೆಯುತ್ತಾ ತಮ್ಮ ಸುತ್ತಲಿನ ಸಮಾಜ ಬಗ್ಗೆ ಒಂದು ಆಳದ ಸಮಷ್ಠಿ ಪ್ರಜ್ಞೆ, ಜನಪರತೆ ಮತ್ತು ನೈತಿಕತೆಯೊಂದಿಗೆ ಪ್ರತಿಕ್ರಿಯಿಸುತ್ತಾ ಹೋದರಷ್ಟೆ. ಹಾಗೆ ಮಾಡುತ್ತಾ ಅವರು ಸ್ವಾತಂತ್ರ್ಯವನ್ನು ಮರಳಿ ಮರಳಿ ಮರು ವ್ಯಾಖ್ಯಾನಿಸುತ್ತಾ ಹೋದರು. ಭೂಮಿ ಹಕ್ಕು, ತುರ್ತು ಪರಿಸ್ಥಿತಿಯಲ್ಲಿ ವೈಯಕ್ತಿಕ ಸಾಮಾಜಿಕ ಹಕ್ಕುಗಳು, ಮಾನವ ಹಕ್ಕುಗಳು, ಪರಿಸರ ನ್ಯಾಯ, ಗ್ರಾಹಕ ಹಕ್ಕುಗಳು, ವಾಕ್ ಸ್ವಾತಂತ್ರ್ಯ, ನವ ಆರ್ಥಿಕತೆಯ ಅಭಿವೃದ್ಧಿಯ ಮಾದರಿ, ಭ್ರಷ್ಟಾಚಾರ ಮತ್ತು ಕೋಮುವಾದದ ವಿರುದ್ಧ ಹೋರಾಟ ಹೀಗೆ.

ನಮ್ಮ ಸುತ್ತಲಿನ ಪರಿಸರ, ಸಮಾಜದ ಬಗ್ಗೆ ಒಂದು ನೈತಿಕ ಮತ್ತು ಸಮಷ್ಟಿ ಪ್ರಜ್ಞೆಯೊಂದಿಗೆ ಪ್ರತಿಕಿಯಿಸುತ್ತಾ, ಪಕ್ಷಾತೀತವಾಗಿ ಎಲ್ಲ ಸರ್ಕಾರಗಳನ್ನೂ ಪ್ರಶ್ನೆ ಮಾಡುತ್ತಾ ಅವುಗಳು ಎಲ್ಲೆ ಮೀರದಂತೆ, ಜನಪರ ಕೆಲಸ ಮಾಡುವಂತೆ ಒತ್ತಡ ಹಾಕಿ ಕೆಲಸ ಮಾಡುವುದೇ ಪ್ರಜಾಪ್ರಭುತ್ವದಲ್ಲಿ ಪೌರರೆಲ್ಲರ ಪವಿತ್ರ ಕರ್ತವ್ಯ. ಅದನ್ನು ನಾವೆಲ್ಲರೂ ನಿರ್ವಹಿಸುವುದೇ ತಾತನಿಗೆ ನಾವು ಸಲ್ಲಿಸುವ ನಿಜವಾದ ಗೌರವ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...