ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸುವಂತೆ ಕೋರಿ ಭಾರತ್ ರಾಷ್ಟ್ರ ಸಮಿತಿ ನಾಯಕಿ ಕೆ. ಕವಿತಾ ನೇತೃತ್ವದಲ್ಲಿ ಮಾರ್ಚ್ 10, 2023ರಂದು ನವದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು. ಈ ಸಂದರ್ಭದಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಕೂಡ ಭಾಗಿಯಾಗಿದ್ದರು.
ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ನಾಯಕಿ ಕೆ. ಕವಿತಾ ಅವರು, ಅಬಕಾರಿ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಮುಂದೆ ಹಾಜರಾಗುವ ಒಂದು ದಿನ ಮುಂಚಿತವಾಗಿ ಮಾರ್ಚ್ 10ರಂದು ಉಪಹಾಸ ಸತ್ಯಾಗ್ರಹ ನಡೆಸಿದರು. ಮಾರ್ಚ್ 13ರಿಂದ ಪ್ರಾರಂಭವಾಗುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸುವಂತೆ ಆಗ್ರಹಿಸಿದರು.
ನವದೆಹಲಿಯ ಜಂತರ್ ಮಂತರ್ನಲ್ಲಿ ಆರು ಗಂಟೆಗಳ ಧರಣಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಿಪಿಐ-ಎಂ ನಾಯಕ ಸೀತಾರಾಮ್ ಯೆಚೂರಿ, ಈ ಸಂಸತ್ತಿನ ಅಧಿವೇಶನದಲ್ಲಿ ಮೋದಿ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಬೇಕು ಎಂದು ಒತ್ತಾಯಿಸಿದರು.
ಮುಷ್ಕರದಲ್ಲಿ ಶ್ಯಾಮ್ ರಜಾಕ್ (ಆರ್ಜೆಡಿ), ಸೀಮಾ ಶುಕ್ಲಾ (ಎಸ್ಪಿ), ತೆಲಂಗಾಣ ಶಿಕ್ಷಣ ಸಚಿವೆ ಸಬಿತಾ ಇಂದ್ರ ರೆಡ್ಡಿ ಮತ್ತು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸತ್ಯವತಿ ರಾಥೋಡ್ ಮತ್ತು ಆಂಧ್ರಪ್ರದೇಶದ ಮಹಿಳಾ ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ: ಮಹೇಶ್ ಜೋಶಿ ಸರ್ವಾಧಿಕಾರ ನಡೆಗೆ ಕಸಾಪ ಸದಸ್ಯರಿಂದಲೇ ವಿರೋಧ
ಸಂಜಯ್ ಸಿಂಗ್ ಮತ್ತು ಚಿತ್ರ ಸರ್ವರಾ (ಎಎಪಿ), ನರೇಶ್ ಗುಜ್ರಾಲ್ (ಅಕಾಲಿದಳ), ಅಂಜುಮ್ ಜಾವೇದ್ ಮಿರ್ಜಾ (ಪಿಡಿಪಿ), ಶಮಿ ಫಿರ್ದೌಸ್ (ಎನ್ಸಿ), ಸುಶ್ಮಿತಾ ದೇವ್ (ಟಿಎಂಸಿ), ಕೆಸಿ ತ್ಯಾಗಿ (ಜೆಡಿಯು), ಸೀಮಾ ಮಲಿಕ್ (ಎನ್ಸಿಪಿ), ನಾರಾಯಣ ಕೆ ( ಸಿಪಿಐ, ಶ್ಯಾಮ್ ರಜಾಕ್ (ಆರ್ಎಲ್ಡಿ), ಪ್ರಿಯಾಂಕಾ ಚತುರ್ವೇದಿ (ಶಿವಸೇನೆ) ಮತ್ತು ಮಾಜಿ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು ಮುಷ್ಕರದ ಕೊನೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.
”ರಾಜಕೀಯದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ನೀಡಲು ಈ ಮಸೂದೆಯನ್ನು ಜಾರಿಗೆ ತರುವುದು ಮುಖ್ಯವಾಗಿದೆ. ಸಂಸತ್ತಿನಲ್ಲಿ ಈ ಮಸೂದೆ ಅಂಗೀಕಾರವಾಗುವವರೆಗೆ ನಮ್ಮ ಪಕ್ಷವು ಈ ಪ್ರತಿಭಟನೆಯಲ್ಲಿ ಕವಿತಾ ಅವರಿಗೆ ಬೆಂಬಲವಾಗಿ ನಿಲ್ಲುತ್ತದೆ” ಎಂದು ಉದ್ಘಾಟನಾ ಭಾಷಣದಲ್ಲಿ ಯೆಚೂರಿ ಹೇಳಿದರು.
”2014ರಲ್ಲಿ ಮೋದಿ ಅವರು ಮೊದಲ ಬಾರಿಗೆ ಸಂಸತ್ತಿಗೆ ಪ್ರವೇಶಿಸಿದಾಗ ಮಹಿಳಾ ಮೀಸಲಾತಿ ಮಸೂದೆ ತಮ್ಮ ಸರ್ಕಾರದ ಆದ್ಯತೆ ಎಂದು ಹೇಳಿದ್ದರು. ಈಗ ಅವರು ಅಧಿಕಾರಕ್ಕೆ ಬಂದು ಒಂಬತ್ತು ವರ್ಷಗಳು ಕಳೆದಿವೆ, ಆದರೂ ಈ ಮಸೂದೆಯನ್ನು ಸಂಸತ್ತಿನಲ್ಲಿ ಮತ್ತೆ ಮಂಡಿಸಲಾಗಿಲ್ಲ” ಎಂದು ಅವರು ಹೇಳಿದರು.
ಸಾಕಷ್ಟು ಹೋರಾಟಗಳು ನಡೆದ ಬಳಿಕ ಸರ್ಕಾರವು ಪಂಚಾಯತ್ಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿತು. ”ನೀವು ಪಂಚಾಯತ್ಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಬಹುದಾದರೆ, ಸಂಸತ್ತಿನಲ್ಲಿ ಏಕೆ ನೀಡಬಾರದು?” ಎಂದು ಯೆಚೂರಿ ಪ್ರಶ್ನಿಸಿದರು. ಮಹಿಳೆಯರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಮಾನ ಅವಕಾಶ ನೀಡದ ಹೊರತು ದೇಶವು ಪ್ರಗತಿಯಾಗುವುದಿಲ್ಲ ಎಂದು ಅವರು ಪ್ರತಿಪಾದಿಸಿದರು.
ಪ್ರಸ್ತುತ ಸಂಸತ್ತಿನ ಅಧಿವೇಶನದಲ್ಲಿ ಈ ಮಸೂದೆಯನ್ನು ತರುವುದು ಮುಖ್ಯವಾಗಿದೆ ಮತ್ತು ಈ ಪ್ರತಿಭಟನೆಯಲ್ಲಿ ಸಿಪಿಐ-ಎಂ ಬಿಆರ್ಎಸ್ ಪಕ್ಷದ ಜೊತೆಗೆ ನಿಲ್ಲುತ್ತದೆ ಎಂದು ಯಚೂರಿ ಅವರು ಹೇಳಿದರು.
ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಹಂತವು ಮಾರ್ಚ್ 13ರಂದು ಪ್ರಾರಂಭವಾಗಿ ಏಪ್ರಿಲ್ 6ರಂದು ಕೊನೆಗೊಳ್ಳಲಿದೆ.
”ಭಾರತ ಅಭಿವೃದ್ಧಿ ಹೊಂದಬೇಕಾದರೆ ರಾಜಕೀಯದಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಬೇಕು, ರಾಜಕೀಯದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕು. ಹಾಗಾಗಿ 27 ವರ್ಷಗಳಿಂದ ಬಾಕಿ ಇರುವ ಈ ಮಸೂದೆಯನ್ನು ಜಾರಿಗೆ ತರುವುದು ಮುಖ್ಯವಾಗಿದೆ” ಎಂದು ಕವಿತಾ ಹೇಳಿದರು.
“ಸುಸ್ಮಾ ಸ್ವರಾಜ್, ಸೋನಿಯಾ ಗಾಂಧಿ ಮತ್ತು ಬೃಂದಾ ಕಾರಟ್ ಅವರಂತಹ ನಾಯಕರು ಮಸೂದೆ ಜಾರಿಗಾಗಿ ಹೋರಾಟಗಳನ್ನು ನಡೆಸಿದರು. 1996ರಿಂದ ಅನೇಕ ರಾಜಕೀಯ ಪಕ್ಷಗಳು ಈ ಮಸೂದೆಯನ್ನು ತರಲು ಪ್ರಯತ್ನಿಸಿದವು, ಆದರೆ ಅದನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಗಲಿಲ್ಲ” ಎಂದು ಅವರು ಹೇಳಿದರು.
“ಈ ಆಂದೋಲನವನ್ನು ಮುಂದಕ್ಕೆ ಕೊಂಡೊಯ್ಯಲು ನನಗೆ ಅವಕಾಶ ಸಿಕ್ಕಿರುವುದಕ್ಕೆ ನನಗೆ ಸಂತೋಷವೆನಿಸುತ್ತದೆ. ಮಸೂದೆಯನ್ನು ಮಂಡಿಸಿ ಅಂಗೀಕರಿಸುವವರೆಗೆ ನಾವು ಈ ಪ್ರತಿಭಟನೆಯನ್ನು ಮುಂದುವರೆಸುತ್ತೇವೆ ಎಂದು ನಾನು ಭಾರತದ ಮಹಿಳೆಯರಿಗೆ ಭರವಸೆ ನೀಡುತ್ತೇನೆ” ಎಂದರು.
”ಇಂದು ಇಲ್ಲಿ ಕೇವಲ ಉಪವಾಸ ಸತ್ಯಾಗ್ರಹ ಕೇವಲ ಪ್ರಾರಂಭವಾಗಿದೆ, ಇದು ದೇಶಾದ್ಯಂತ ಈ ವಿಚಾರವಾಗಿ ಪ್ರತಿಭಟನೆಗಳು ಮುಂದುವರಿಯುತ್ತದೆ. ಕೇಂದ್ರದಲ್ಲಿ ಪೂರ್ಣ ಬಹುಮತದ ಸರ್ಕಾರವಿರುವುದರಿಂದ ಮಸೂದೆ ಅಂಗಿಕಾರಕ್ಕೆ ಸುಲಭವಾಗಲಿದೆ. ಬಿಜೆಪಿ ಸರ್ಕಾರವು ಈ ಮಸೂದೆಯನ್ನು ಅಂಗೀಕರಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ. ನಾವು ಎಲ್ಲಾ ರಾಜಕೀಯ ಪಕ್ಷಗಳನ್ನು ಒಟ್ಟಿಗೆ ಸೇರಿಸುತ್ತೇವೆ ಮತ್ತು ಸಂಸತ್ತಿನಲ್ಲಿ ನಿಮ್ಮನ್ನು ಬೆಂಬಲಿಸಲು ಪ್ರಯತ್ನಿಸುತ್ತೇವೆ” ಎಂದು ಕವಿತಾ ಹೇಳಿದರು.
ಆರ್ಜೆಡಿ ನಾಯಕ ಶ್ಯಾಮ್ ರಜಾಕ್ ಮಾತನಾಡಿ, ”ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯವಿಲ್ಲದೆ ಭಾರತೀಯ ಪ್ರಜಾಪ್ರಭುತ್ವವನ್ನು ಬಲಪಡಿಸಲು ಸಾಧ್ಯವಿಲ್ಲ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಶೇ.33ಕ್ಕಿಂತ ಹೆಚ್ಚಿರಬೇಕು” ಎಂದು ಹೇಳಿದರು.