ಹೈದರಾಬಾದ್ನ ‘ನಾಲ್ಸಾರ್’ (NALSAR) ಕಾನೂನು ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಬಾರದು ಎಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಂದು ಗುಂಪು ಆಡಳಿತ ಮಂಡಳಿಯನ್ನು ಆಗ್ರಹಿಸಿದೆ. ನವದೆಹಲಿಯಲ್ಲಿ ನಡೆದ ನೀಟ್ (NEET) ಪ್ರತಿಭಟನೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಸಿಜೆಐ ನೀಡಿದ್ದ ಕೆಲವು ಹೇಳಿಕೆಗಳನ್ನು ವಿರೋಧಿಸಿ ವಿದ್ಯಾರ್ಥಿಗಳು ಈ ಪಟ್ಟು ಹಿಡಿದಿದ್ದಾರೆ.
ವಿಶ್ವವಿದ್ಯಾಲಯವು ಪದವಿ ಪ್ರದಾನ ಸಮಾರಂಭದ ದಿನಾಂಕವನ್ನಾಗಲಿ ಅಥವಾ ಸಿಜೆಐ ಅವರ ಭೇಟಿಯನ್ನಾಗಲಿ ಅಧಿಕೃತವಾಗಿ ಇನ್ನೂ ಖಚಿತಪಡಿಸಿಲ್ಲವಾದರೂ, ಪ್ರತಿ ವರ್ಷ ಸಿಜೆಐ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುವುದು ನಾಲ್ಸಾರ್ನಲ್ಲಿ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ನೀಟ್ ಅಕ್ರಮ ಖಂಡಿಸಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳು ಹಾಗೂ ಜಂತರ್ ಮಂತರ್ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಶಿಕ್ಷಣತಜ್ಞ ಸೋನಂ ವಾಂಗ್ಚುಕ್ ಅವರಿಗೆ ಬೆಂಬಲ ಸೂಚಿಸಿ ಜುಲೈ 20 ರಂದು ನಾಲ್ಸಾರ್ನ ಹಲವು ವಿದ್ಯಾರ್ಥಿಗಳು ‘ಒಂದು ಹೊತ್ತಿನ ಉಪವಾಸ’ ಆಚರಿಸಿದ್ದರು.
ಇದರ ಬೆನ್ನಲ್ಲೇ, ಜುಲೈ 22 ರಂದು ನೀಟ್ ಪ್ರತಿಭಟನಾಕಾರರ ಮೇಲಿನ ಪೊಲೀಸ್ ದೌರ್ಜನ್ಯದ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲು ಸಿಜೆಐ ಸೂರ್ಯ ಕಾಂತ್ ಅವರಿದ್ದ ಪೀಠವು ನಿರಾಕರಿಸಿತ್ತು. ಈ ವೇಳೆ ನಮಗೆ ವಿಡಿಯೋಗಳನ್ನು ನೋಡಲು ಆಸಕ್ತಿಯಿಲ್ಲ, ಸಮಯವೂ ಇಲ್ಲ. ನಮ್ಮ ಸಮಯವನ್ನೂ ಹಾಳು ಮಾಡಬೇಡಿ, ನಿಮ್ಮ ಸಮಯವನ್ನೂ ವ್ಯರ್ಥ ಮಾಡಿಕೊಳ್ಳಬೇಡಿ ಎಂದು ಸಿಜೆಐ ಹೇಳಿದ್ದರೆನ್ನಲಾದ ಮಾತುಗಳು ಸಾಮಾಜಿಕ ಮಧ್ಯಮಗಳಲ್ಲಿ ವೈರಲ್ ಆಗಿದ್ದವು.
ಈ ಹಿನ್ನೆಲೆಯಲ್ಲಿ, ಜುಲೈ 23 ರಂದು 2026ರ ಬ್ಯಾಚ್ನ ಹೊರಹೋಗುವ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಕುಲಪತಿ, ರಿಜಿಸ್ಟ್ರಾರ್ ಹಾಗೂ ಆಡಳಿತ ಮಂಡಳಿಗೆ ಪತ್ರ ಬರೆದು, ಸಿಜೆಐ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದರು. ಸ್ಟೂಡೆಂಟ್ಸ್ ಬಾರ್ ಕೌನ್ಸಿಲ್ ಸದಸ್ಯರು ಸೇರಿದಂತೆ ಸುಮಾರು 70 ವಿದ್ಯಾರ್ಥಿಗಳು ಈ ಮನವಿಗೆ ಬೆಂಬಲ ಸೂಚಿಸಿದ್ದರು. ಪ್ರತಿಭಟನಾಕಾರರ ಮೇಲಿನ ಪೊಲೀಸ್ ದೌರ್ಜನ್ಯವನ್ನು ಅಲಕ್ಷಿಸುವ ರೀತಿಯಲ್ಲಿ ನಡೆದುಕೊಂಡ ವ್ಯಕ್ತಿಯಿಂದ ಪದವಿ ಪಡೆಯುವುದು ತಾವು ಕಲಿತ ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂಬುದು ವಿದ್ಯಾರ್ಥಿಗಳ ವಾದವಾಗಿತ್ತು. ನಂತರ ಈ ಅಭಿಯಾನಕ್ಕೆ ಜೂನಿಯರ್ ಬ್ಯಾಚ್ಗಳ ವಿದ್ಯಾರ್ಥಿಗಳೂ ಬೆಂಬಲ ವ್ಯಕ್ತಪಡಿಸಿದ್ದು, ಒಟ್ಟು 380ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಮನವಿಗೆ ಸಹಿ ಹಾಕಿದ್ದಾರೆ.
ಆಗಸ್ಟ್ 8 ರವರೆಗೆ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಮನವಿಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಸಾಮಾನ್ಯವಾಗಿ ಆಗಸ್ಟ್ನಲ್ಲಿ ನಡೆಯಬೇಕಿದ್ದ ಪದವಿ ಪ್ರದಾನ ಸಮಾರಂಭದ ದಿನಾಂಕ ನಿಗದಿಯಾಗದಿರುವುದು ಮತ್ತು ಯಾವುದೇ ಸಿದ್ಧತೆಗಳು ಆರಂಭವಾಗದಿರುವುದು ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸಿದೆ. ಅಲ್ಲದೆ, ಪ್ರಸಕ್ತ ತಿಂಗಳ ಕೊನೆಯಲ್ಲಿ ಮಧ್ಯಂತರ ಪರೀಕ್ಷೆಗಳು ಇರುವುದರಿಂದ ಆಗಸ್ಟ್ನಲ್ಲಿ ಸಮಾರಂಭ ನಡೆಯುವುದು ಅನುಮಾನ ಎನ್ನಲಾಗಿದೆ. ಈ ಕುರಿತು ಮಾತನಾಡಿದ ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು, ವಿದ್ಯಾರ್ಥಿಗಳ ಪತ್ರವನ್ನು ಆಡಳಿತ ಮಂಡಳಿ ಗಮನಿಸಿದೆ, ಆದರೆ ಮುಖ್ಯ ಅತಿಥಿಯನ್ನು ಬದಲಾಯಿಸುವ ಸಾಧ್ಯತೆ ತೀರ ಕಡಿಮೆ ಇದ್ದು, ಸದ್ಯ ‘ಕಾದು ನೋಡುವ’ ತಂತ್ರ ಅನುಸರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇನ್ನೊಂದೆಡೆ, ಆಡಳಿತ ಮಂಡಳಿಯಿಂದ ಸೂಕ್ತ ಸ್ಪಂದನೆ ಸಿಗದಿದ್ದರೆ ಒಂದು ವಾರದ ನೋಟಿಸ್ ನೀಡಿ ಪ್ರತಿಭಟನೆ ನಡೆಸುವುದಾಗಿ ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ.


