ದೇಶದಲ್ಲಿ ಉದ್ಭವಿಸಿರುವ ಕೋವಿಡ್ ಎರಡನೇ ಅಲೆಯಿಂದಾಗಿ ದೇಶದ ಆರೋಗ್ಯ ವ್ಯವಸ್ಥೆ ಬಿಕ್ಕಟ್ಟಿಗೆ ಸಿಲುಕಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಿದಂತೆಲ್ಲಾ ಬೆಡ್ಗಳ ಕೊರತೆ, ಆಕ್ಸಿಜನ್, ರೆಮ್ಡಿಸಿವಿರ್, ಲಸಿಕೆ ಕೊರತೆಯ ಆಹಾಕಾರ ಎದ್ದಿದೆ. ಕೊರೊನಾ ದೇಶಕ್ಕೆ ಪರಿಚಯವಾಗಿ 15 ತಿಂಗಳಾದರೂ ಏಕೆ ಸರ್ಕಾರಗಳು ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲಿಲ್ಲ ಎಂಬ ಗಂಭೀರ ಪ್ರಶ್ನೆಗಳು ಕೇಳಿಬಂದಿವೆ. ಇದೇ ಸಂದರ್ಭದಲ್ಲಿ 2017ರಲ್ಲಿಯೇ ಆಕ್ಸಿಜನ್ ಕೊರತೆ ಬಗ್ಗೆ ದನಿಯೆತ್ತಿದ್ದೆ, ಆದರೆ ನನ್ನನ್ನು ಜೈಲಿಗೆ ಹಾಕಲಾಯಿತು ಎಂದು ಉತ್ತರ ಪ್ರದೇಶದ ಜನಪರ ವೈದ್ಯ ಡಾ.ಕಫೀಲ್ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸೋಮವಾರ ರಾತ್ರಿ ಟ್ವೀಟ್ ಮಾಡಿರುವ ಅವರು, “2017ರಲ್ಲಿ ಆಕ್ಸಿಜನ್ ಸಂಗ್ರಹ ಕೊರತೆಯ ಬಿಕ್ಕಟ್ಟಿನ ಬಗ್ಗೆ ಪ್ರಶ್ನೆ ಎತ್ತಿದ್ದಾಗ ಯಾರೂ ನನ್ನನ್ನು ಗಂಭೀರವಾಗಿ ಪರಿಗಣಿಸಲಿಲ್ಲ, ಬದಲಿಗೆ ನನ್ನನ್ನು ಜೈಲಿಗೆ ಹಾಕಲಾಯಿತು. ಅಂದಿನಿಂದಲೂ ಹಲವಾರು ಜನ ‘ಎಲ್ಲರಿಗೂ ಉತ್ತಮ ಆರೋಗ್ಯ ವ್ಯವಸ್ಥೆ ಮತ್ತು ನೀತಿಗಾಗಿ’ ಒತ್ತಾಯಿಸುತ್ತಲೇ ಇದ್ದೇವೆ. ಇಂದು ಇಡೀ ದೇಶವು ಆಕ್ಸಿಜನ್ ಕೊರತೆಯಿಂದ ಬಳಲುತ್ತಿದೆ. ಆರೋಗ್ಯ ಸಚಿವ ಹರ್ಷವರ್ಧನ್ರವರೆ ದಯವಿಟ್ಟು ಎಚ್ಚರಗೊಳ್ಳಿ” ಎಂದು ಮನವಿ ಮಾಡಿದ್ದಾರೆ.
In 2017,When I raised th issue of crisis in procurement of Oxygen, nobody took me seriously.
instead thrown in Jail?Since then have been demanding better health policy – #HealthForAll
Today the whole nation is suffering due to oxygen shortage -plz wake up ?@drharshvardhan pic.twitter.com/cL4R83YwtT
— Dr Kafeel Khan (@drkafeelkhan) April 19, 2021
2017ರಲ್ಲಿ ಗೋರಖ್ ಪುರದ ಬಿಆರ್ಡಿ ವೈದ್ಯಕೀಯ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯುಂಟಾಗಿ ತಾಯಂದಿರ ಎದುರೇ 70 ಎಳೆಗೂಸುಗಳು ಜೀವಬಿಟ್ಟಿದ್ದವು. ತಮ್ಮ ಮಕ್ಕಳನ್ನು ಬದುಕಿಸಿಕೊಡುವಂತೆ ತಾಯಂದಿರು ಗೋಗರೆಯುತ್ತಿದ್ದರು, ಆದರೆ ಒಂದೇ ಒಂದು ಸಿಲಿಂಡರ್ ಇತ್ತು ಹೀಗಾಗಿ ಕೆಲ ಮಕ್ಕಳನ್ನು ಮಾತ್ರವೇ ಬದುಕಿಸಲಾಯಿತು ಮತ್ತು ಇತರ ಮಕ್ಕಳು ಸಾವನಪ್ಪಿದ್ದರು. ಈ ಮಕ್ಕಳ ದುರಂತದ ಪ್ರಕರಣದಲ್ಲಿ ಬಿಆರ್ಡಿ ವೈದ್ಯಕೀಯ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ ಮತ್ತು ವೈದ್ಯಕೀಯ ನಿರ್ಲಕ್ಷ್ಯದ ಆರೋಪದ ಮೇಲೆ ಡಾ. ಕಫೀಲ್ ಖಾನ್ ಅವರು ಅಮಾನತು ಮತ್ತು 9 ತಿಂಗಳ ಜೈಲುವಾಸಕ್ಕೆ ಒಳಗಾಗಿದ್ದರು. ಆದರೆ ನ್ಯಾಯಾಲಯ ಅವರು ಅಮಾಯಕರು ಮತ್ತು ಉದ್ದೇಶಪೂರ್ವಕವಾಗಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿ ಪ್ರಕರಣ ಕೈಬಿಟ್ಟಿತ್ತು.
ಇದನ್ನೂ ಓದಿ: ಬಿಆರ್ಡಿ ಆಸ್ಪತ್ರೆಯಲ್ಲಿ ಮಕ್ಕಳ ಸಾವಿನ ದುರಂತ: ಡಾ.ಕಫೀಲ್ ಖಾನ್ ಆರೋಪಮುಕ್ತ. ಆದರೆ…
ಆಗ ಡಾ.ಕಫೀಲ್ ಖಾನ್ ದೇಶಾದ್ಯಂತದ ಎಲ್ಲಾ ಆಸ್ಪತ್ರೆಗಳಲ್ಲಿ ಆಕ್ಸಿಜನ ಕೊರತೆ ನೀಗಿಸಲು ದೊಡ್ಡ ಮಟ್ಟದ ಸಂಗ್ರಹಕ್ಕೆ ಆಗ್ರಹಿಸಿದ್ದರು. ಅಲ್ಲದೇ ಜನಪರ ಆರೋಗ್ಯ ನೀತಿಗಾಗಿ ಒತ್ತಾಯಿಸಿದ್ದರು. ಆದರೆ ಸಿಎಎ ವಿರುದ್ಧ ಅವರು ಮಾತನಾಡಿದ್ದಕ್ಕಾಗಿ ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ ಅವರನ್ನು ಮತ್ತೊಮ್ಮೆ ಜೈಲಿಗೆ ಹಾಕಲಾಗಿತ್ತು. ತದನಂತರವು ಅವರು ನಿರಪರಾಧಿಗಳಾಗಿ ಬಿಡುಗಡೆಯಾಗಿದ್ದಾರೆ.
ಈಗ ಕೊರೊನಾ ಸಾಂಕ್ರಾಮಿಕ ಉಲ್ಭಣಿಸಿರುವ ಹಿನ್ನೆಲೆಯಲ್ಲಿ ಆಕ್ಸಿಜನ್ ಕೊರತೆ ವಿಷಯ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಆಕ್ಸಿಜನ್ ಇಲ್ಲದ ಕಾರಣಕ್ಕಾಗಿಯೇ ಸಾವಿರಾರು ಜನ ಪ್ರಾಣ ಬಿಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಕೊರತೆ: ಸರ್ಕಾರ ಮಾಡುತ್ತಿರುವುದೇನು? ಮಾಡಬೇಕಾದುದ್ದೇನು?
Also Read: Dr. Kafeel Khan: Shocking status of Indian Health System- Solutions and Approach