Homeಮುಖಪುಟ'ದೊರೆ ಸದಾ ಜೊತೆಗಿದ್ದಾರೆ ಎಂದೇ ಭಾವಿಸಿದ್ದೇನೆ' : ಭಗವಾನ್

‘ದೊರೆ ಸದಾ ಜೊತೆಗಿದ್ದಾರೆ ಎಂದೇ ಭಾವಿಸಿದ್ದೇನೆ’ : ಭಗವಾನ್

ಇಂದು ದೊರೆ ಅವರ ಜನ್ಮದಿನ. ತಮ್ಮ ಯಶಸ್ವೀ ಸಿನಿಮಾ ಪಯಣದುದ್ದಕ್ಕೂ ಜೊತೆಯಾಗಿದ್ದ ಆತ್ಮೀಯ ಸ್ನೇಹಿತನನ್ನು ಭಗವಾನ್ ಅವರು ಇಲ್ಲಿ ಸ್ಮರಿಸಿಕೊಂಡಿದ್ದಾರೆ.

- Advertisement -
- Advertisement -

ದೊರೆ – ಭಗವಾನ್, ಕನ್ನಡ ಚಿತ್ರರಂಗದ ಪ್ರಭಾವಿ ನಿರ್ದೇಶಕದ್ವಯರು. ಸದಭಿರುಚಿಯ ಮತ್ತು ಕಾದಂಬರಿ ಆಧರಿಸಿದ ಚಿತ್ರಗಳ ಟ್ರೆಂಡ್ ಭದ್ರಗೊಳಿಸಿದ ಖ್ಯಾತಿ ಇವರದು. ಇಂದು ದೊರೆ ಅವರ ಜನ್ಮದಿನ. ತಮ್ಮ ಯಶಸ್ವೀ ಸಿನಿಮಾ ಪಯಣದುದ್ದಕ್ಕೂ ಜೊತೆಯಾಗಿದ್ದ ಆತ್ಮೀಯ ಸ್ನೇಹಿತನನ್ನು ಭಗವಾನ್ ಅವರು ಇಲ್ಲಿ ಸ್ಮರಿಸಿಕೊಂಡಿದ್ದಾರೆ.

***

ನಿರೂಪಣೆ: ಶಶಿಧರ ಚಿತ್ರದುರ್ಗ

ದೊರೆ ರಾಜ್ ನನಗೆ ಪರಿಚಯವಾಗಿದ್ದು 1956ರಲ್ಲಿ. ಅವರು ಪರಿಚಯದ ನಂತರ ನನ್ನ ಸಿನಿಮಾ ಬದುಕಿಗೆ ಹೊಸ ದಿಕ್ಕು ಸಿಕ್ಕಿತು. ಅಲ್ಲಿಂದ ಮುಂದೆ ಸುಮಾರು ಐದು ದಶಕಗಳ ಕಾಲ ನಾವಿಬ್ಬರು ಆತ್ಮೀಯ ಸ್ನೇಹಿತರಾಗಿದ್ದೆವು. ಸಾಕಷ್ಟು ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದರೂ ಎಂದೂ ಇಬ್ಬರ ಮಧ್ಯೆ ಒಡಕು ಬಂದಿಲ್ಲ. ಮೂಲತಃ ಛಾಯಾಗ್ರಾಹಕರಾದ ಅವರಿಗೆ ಕ್ಯಾಮರಾ ಬಗ್ಗೆ ಉತ್ತಮ ಸೆನ್ಸ್ ಇತ್ತು. ಮಿತಭಾಷಿಯಾದ ಅವರಿಗೆ ಓದು ಪ್ರಮುಖ ಹವ್ಯಾಸ. ನಮ್ಮಿಬ್ಬರ ಮಧ್ಯೆ ಸೂಕ್ತ ಹೊಂದಾಣಿಕೆ ಇದ್ದುದರಿಂದಲೇ ನಮ್ಮಿಂದ ಉತ್ತಮ ಮತ್ತು ಯಶಸ್ವೀ ಚಿತ್ರಗಳನ್ನು ನೀಡಲು ಸಾಧ್ಯವಾಯ್ತು ಎಂದು ನಾನು ಭಾವಿಸುತ್ತೇನೆ. 2000ದಲ್ಲಿ ಅವರು ಅಗಲಿದರೂ ನನ್ನ ಭಾಗಕ್ಕೆ ಅವರು ಹೋಗಿಲ್ಲ. ಸದಾ ಜೊತೆಯಲ್ಲೇ ಇದ್ದಾರೆ.

ದೊರೆ ಮೂಲತಃ ಮೈಸೂರಿನವರು. ಅವರ ತಂದೆ ಬಾಬು ನಾಯ್ಡು ದೊಡ್ಡ ಚಿತ್ರಕಲಾವಿದ. ನಗರದ ಮಂಡಿ ಮೊಹಲ್ಲಾದಲ್ಲಿ ಅವರ ಮನೆ. ಗುಬ್ಬಿ ಕಂಪನಿ ಸೇರಿದಂತೆ ಹಲವು ಪ್ರಮುಖ ನಾಟಕ ಕಂಪನಿಗಳಿಗೆ ಅವರು ನಾಟಕದ ಪರದೆಗಳನ್ನು ಬರೆಯುತ್ತಿದ್ದರು. ಅಪ್ಪನ ಚಿತ್ರಕಲೆ ಪುತ್ರ ದೊರೆಗೂ ಬಂದಿತ್ತು. ಓದಿನ ಜೊತೆ ಚಿತ್ರಕಲೆಯಲ್ಲೂ ಅವರು ಪಳಗಿದ್ದರು. ಆರ್ಥಿಕ ಅನುಕೂಲತೆಗಳು ಇಲ್ಲದ್ದರಿಂದ ದೊರೆ ಇಂಟರ್‍ಮೀಡಿಯಟ್‍ಗೆ ಓದು ನಿಲ್ಲಿಸಿದರು. ಆಗ ಅದೇಕೆ ಅವರಿಗೆ ಹಾಗನ್ನಿಸಿತೋ, ಮೈಸೂರಿನಲ್ಲಿದ್ದ ನವಜ್ಯೋತಿ ಶೂಟಿಂಗ್ ಸ್ಟುಡಿಯೋದಲ್ಲಿ ಕೆಲಸ ಕೇಳಲೆಂದು ಹೋದರು. ಅದೃಷ್ಟಕ್ಕೆ ಅಲ್ಲಿ ಛಾಯಾಗ್ರಾಹಕ ಜಾನಕಿರಾಮ್ ತಮ್ಮ ಸಹಾಯಕನಾಗಿ ಕೆಲಸ ಮಾಡುವಂತೆ ದೊರೆ ಅವರಿಗೆ ಅವಕಾಶ ಕಲ್ಪಿಸಿದರು.

ಒಮ್ಮೆ ಪ್ರೇಮ್‍ನಜೀರ್ ಹೀರೋ ಆಗಿ ನಟಿಸುತ್ತಿದ್ದ ಮಲಯಾಳಂ ಚಿತ್ರಕ್ಕೆ ಜಾನಕಿರಾಮ್ ಅವರು ಛಾಯಾಗ್ರಾಹಕರಾಗಿ ಕೆಲಸ ಮಾಡಬೇಕಿತ್ತು. ಆಗ ಜಾನಕಿರಾಮ್ ಬೇರೆ ಚಿತ್ರದಲ್ಲಿ ಬ್ಯುಸಿಯಾಗಿದ್ದರು. ಆ ವೇಳೆಗಾಗಲೇ ಕ್ಯಾಮರಾ ಕಲೆಗಳನ್ನು ಅರಗಿಸಿಕೊಂಡಿದ್ದ ದೊರೆ ಅವರನ್ನು ಮಲಯಾಳಂ ಸಿನಿಮಾಗೆ ಕೆಲಸ ಮಾಡಲು ಕಳುಹಿಸಿಕೊಟ್ಟರು. ಅಲ್ಲಿಂದ ಮುಂದೆ ದೊರೆ ಸ್ವತಂತ್ರ್ಯ ಛಾಯಾಗ್ರಾಹಕನಾಗಿ ಗುರುತಿಸಿಕೊಂಡರು. ಮೈಸೂರಿನಲ್ಲಿ ನವಜ್ಯೋತಿ ಸ್ಟುಡಿಯೋದಲ್ಲಿ ಶೂಟಿಂಗ್ ಚಟುವಟಿಕೆಗಳು ಕಡಿಮೆಯಾಗುತ್ತಿದ್ದಂತೆ ದೊರೆ ಮದರಾಸಿಗೆ ತೆರಳಿದರು. ಕನ್ನಡದವರು ಎನ್ನುವ ಅಭಿಮಾನದಿಂದ ಜಿ.ವಿ.ಅಯ್ಯರ್ ತಮ್ಮ ‘ಸೋದರಿ’ ಚಿತ್ರದ ಛಾಯಾಗ್ರಹಣದ ಹೊಣೆಯನ್ನು ದೊರೆ ಹೆಗಲಿಗೆ ಹೊರಿಸಿದರು. ಈ ಚಿತ್ರದೊಂದಿಗೆ ದೊರೆಗೆ ರಾಜಕುಮಾರ್ ಅವರು ಆತ್ಮೀಯರಾದರು.

ದೊರೆ ಛಾಯಾಗ್ರಹಣ ಮಾಡುತ್ತಿದ್ದ ಚಿತ್ರಗಳಿಗೆ ನಾನು ಸಹ ನಿರ್ದೇಶಕನಾಗಿರುತ್ತಿದ್ದೆ. ಸಾಮಾನ್ಯವಾಗಿ ಚಿತ್ರದ ಛಾಯಾಗ್ರಾಹಕ ಮತ್ತು ಸಹನಿರ್ದೇಶಕನ ಮಧ್ಯೆ ಒಳ್ಳೆಯ ಒಡನಾಟ ಇರುತ್ತದೆ. ಅದರಲ್ಲೂ ನಮ್ಮಿಬ್ಬರ ಅಭಿರುಚಿ, ಹವ್ಯಾಸಗಳಲ್ಲೂ ಸಾಮ್ಯತೆಯಿತ್ತು. ಇಬ್ಬರೂ ಸಾಹಿತ್ಯಾಸಕ್ತರೇ. ಇದು ನಮ್ಮಿಬ್ಬರ ಬಾಂಧವ್ಯ ಹೆಚ್ಚಿಸಿತು. ‘ಸಂಧ್ಯಾರಾಗ’, ‘ರಾಜದುರ್ಗದ ರಹಸ್ಯ’ ಚಿತ್ರಗಳಿಗೆ ನಾನು ಸಹನಿರ್ದೇಶಕನಾದರೆ, ಅವರು ಛಾಯಾಗ್ರಾಹಕ. ಮುಂದೆ ಇಬ್ಬರೂ ಸೇರಿ ಏನಾದರೂ ಮಾಡಬೇಕು ಎಂದು ನಿರ್ಧರಿಸಿದೆವು.

ಶೂಟಿಂಗ್ ಇಲ್ಲದಿದ್ದಾಗ ಮದರಾಸಿನಲ್ಲಿ ನಾವಿಬ್ಬರೂ ಸಿನಿಮಾಗಳನ್ನು ವೀಕ್ಷಿಸಲು ಹೋಗುತ್ತಿದ್ದೆವು. ರಾಜಕುಮಾರ್ ಮತ್ತು ವರದಪ್ಪ ಇಬ್ಬರೂ ನಮಗೆ ಜೊತೆಯಾಗುತ್ತಿದ್ದರು. ಒಮ್ಮೆ ಶಾನ್ ಕಾನರಿ ನಟಿಸಿದ್ದ ‘ಡಾ.ನೋ’ ಬಾಂಡ್ ಸಿನಿಮಾ ನೋಡಿದೆವು. ಸಿನಿಮಾ ವೀಕ್ಷಣೆ ನಂತರ ವುಡ್‍ಲ್ಯಾಂಡ್ ಹೋಟೆಲ್‍ನಲ್ಲಿ ಮಸಾಲೆ ದೋಸೆ ತಿನ್ನುತ್ತಿದ್ದಾಗ, “ನಾವೇಕೆ ಕನ್ನಡದಲ್ಲಿ ರಾಜಕುಮಾರ್ ಅವರಿಗೆ ಬಾಂಡ್ ಸಿನಿಮಾ ಮಾಡಬಾರದು?” ಎಂದು ಪ್ರಸ್ತಾಪಿಸಿದೆವು. ರಾಜಕುಮಾರ್ ಜೋರಾಗಿ ನಗುತ್ತಾ, “ಇಂಗ್ಲಿಷ್ ಸಿನಿಮಾ ನೋಡಿ ಕನ್ನಡ ಸಿನಿಮಾ ಮಾಡೋಕೆ ಆಗುತ್ತದೆಯೇ? ಎಲ್ಲಾದರೂ ಸಾಧ್ಯವೇ?” ಎಂದರು. “ನೀವು ಹೂ ಅನ್ನಿ. ನಾವು ಮಾಡುತ್ತೀವಿ” ಎಂದು ಆತ್ಮವಿಶ್ವಾಸದಿಂದ ಹೇಳುತ್ತಿದ್ದಂತೆ ರಾಜ್ ಓಕೆ ಎಂದರು. ಆಗ ರೂಪುಗೊಂಡಿದ್ದೇ ‘ಜೇಡರ ಬಲೆ’ ಸಿನಿಮಾ.

ಫೋಟೋ ಕೃಪೆ: ಪ್ರಗತಿ ಅಶ್ವತ್ಥ ನಾರಾಯಣ,”ಬಾಡದ ಹೂವು’ ಚಿತ್ರೀಕರಣ ಸಂದರ್ಭದಲ್ಲಿ…

ಮುಂದೆ ನಾನು ಮತ್ತು ದೊರೆ ಇಬ್ಬರೂ ಸಾಲು, ಸಾಲು ಚಿತ್ರಗಳನ್ನು ಮಾಡಿದೆವು. ರಾಜಕುಮಾರ್ ಅವರಿಗೇ ಹದಿನಾರು ಸಿನಿಮಾಗಳನ್ನು ಮಾಡಿದೆವು. ದೊರೆ ಅವರ ಬಗ್ಗೆ ರಾಜ್ ಅವರಿಗಂತೂ ವಿಶೇಷ ಅಭಿಮಾನ. ನಮ್ಮ ನಿರ್ದೇಶನದ ಚಿತ್ರವೆಂದರೆ ಅವರು ನಿರಾಳವಾಗಿರುತ್ತಿದ್ದರು. ನಮ್ಮಿಬ್ಬರ ನಿರ್ದೇಶನ, ನಿರ್ಮಾಣದಲ್ಲಿ ನಲವತ್ತು ಸಿನಿಮಾಗಳು ತಯಾರಾಗಿವೆ. ಯಾವುದೇ ಹಂತದಲ್ಲೂ ನಮ್ಮಿಬ್ಬರ ಮಧ್ಯೆ ಮನಸ್ತಾಪ ತಲೆದೋರಿಲ್ಲ. ಪ್ರತಿಯೊಂದು ವಿಚಾರದಲ್ಲಿಯೂ ಪರಸ್ಪರ ಸಲಹೆ, ಸೂಚನೆಗಳೊಂದಿಗೆ ಮುಂದುವರಿಯುತ್ತಿದ್ದೆವು. ಇದರಿಂದಾಗಿ ಒಳ್ಳೆಯ ಸಿನಿಮಾಗಳನ್ನು ಮಾಡಲು ಸಾಧ್ಯವಾಯ್ತು. ಅವರು ಈಗಲೂ ನನ್ನೊಂದಿಗಿದ್ದಾರೆ ಎಂದೇ ನಾನು ಭಾವಿಸಿದ್ದೇನೆ.

ದೊರೆ ಲವ್‍ಸ್ಟೋರಿ

ಎಚ್.ಎಲ್.ಎನ್.ಸಿಂಹ ನಿರ್ದೇಶನದ ’ಅಬ್ಬಾ ಆ ಹುಡುಗಿ’ (1959) ಸಿನಿಮಾ ತಯಾರಾಗುತ್ತಿದ್ದ ಸಂದರ್ಭ. ಮದ್ರಾಸ್‍ನ ವಾಹಿನಿ ಸ್ಟುಡಿಯೋದಲ್ಲಿ ಶೂಟಿಂಗ್ ನಡೆಯುತ್ತಿತ್ತು. ನಿರ್ದೇಶಕ ಸಿಂಹ ಅವರಿಗೆ ನಾನು ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದೆ. ದೊರೆರಾಜ್ ಚಿತ್ರದ ಕ್ಯಾಮರಾಮನ್. ಈ ಚಿತ್ರದೊಂದಿಗೆ ರಾಜಾಶಂಕರ್ ಮತ್ತು ಲೀಲಾಂಜಲಿ, ನಾಯಕ – ನಾಯಕಿಯಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಆಗಿನ್ನೂ ಛಾಯಾಗ್ರಾಹಣ ಮಾಡುತ್ತಿದ್ದ ದೊರೆ ತಮ್ಮದೇ ಆದ ವಿಶಿಷ್ಟ ಕ್ಯಾಮರಾ ತಂತ್ರಗಳಿಗೆ ಹೆಸರಾಗಿದ್ದರು. ಸ್ಪೆಷಲ್ ಲೈಟಿಂಗ್‍ನಲ್ಲಿ ಅವರು ಸೆರೆಹಿಡಿಯುತ್ತಿದ್ದ ಕ್ಲೋಸ್‍ಅಪ್ ಶಾಟ್‍ಗಳು ಗಮನ ಸೆಳೆಯುತ್ತಿದ್ದವು.

ಚಿತ್ರೀಕರಣ ಆರಂಭವಾಗಿ ಕೆಲವು ದಿನಗಳಾಗಿತ್ತಷ್ಟೆ. ಛಾಯಾಗ್ರಾಹಕ ದೊರೆ, ನೂತನ ನಟಿ ಲೀಲಾಂಜಲಿ ಅವರಲ್ಲಿ ಅನುರಕ್ತರಾಗಿದ್ದರು! ಆಗ ಅವರು ನಟಿಯ ಕ್ಲೋಸ್‍ಅಪ್ ಶಾಟ್‍ಗಳನ್ನು ತೆಗೆದದ್ದೇ ತೆಗೆದದ್ದು!  ನಟಿ ಲೀಲಾಂಜಲಿ ಅವರ ಮನೆ ಮದರಾಸಿನ ಪಟೇಲ್ ಸ್ಟ್ರೀಟ್‍ನಲ್ಲಿತ್ತು. ಸಂಜೆ ಶೂಟಿಂಗ್ ಮುಗಿಯುತ್ತಲೇ ದೊರೆ, ಪಟೇಲ್ ಸ್ಟ್ರೀಟ್‍ನತ್ತ ಹೆಜ್ಜೆ ಹಾಕುತ್ತಿದ್ದರು! ಒಂದಷ್ಟು ದಿನ ಈ ಒನ್‍ವೇ ಪ್ರೀತಿ ಹೀಗೇ ಮುಂದುವರೆಯಿತು. ಅದೊಂದು ದಿನ ದೊರೆ ಧೈರ್ಯ ಮಾಡಿ ಲೀಲಾಂಜಲಿ ಅವರಿಗೆ ತಮ್ಮ ಪ್ರೀತಿ ನಿವೇದಿಸಿಕೊಂಡರು. ಮೈಸೂರಿನ ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದವರು ಲೀಲಾಂಜಲಿ. ಅವರಿಗೆ ಕೂಡ ಸಿನಿಮಾದಲ್ಲಿ ಮುಂದುವರೆಯುವುದು ಇಷ್ಟವಿರಲಿಲ್ಲ. ಅಲ್ಲದೆ ದೊರೆಗೆ ಆಗ ಒಳ್ಳೆಯ ಹೆಸರಿತ್ತು. ಒಳ್ಳೆಯ ಘಳಿಗೆಯೊಂದರಲ್ಲಿ ದೊರೆ ಪ್ರೀತಿಯನ್ನು ಲೀಲಾಂಜಲಿ ಒಪ್ಪಿಕೊಂಡರು. ಹಾಗೆ, ಚಿತ್ರೀಕರಣ ಪೂರ್ಣಗೊಳ್ಳುವ ವೇಳೆಗೆ ದೊರೆ ಲವ್‍ಸ್ಟೋರಿಯೂ ಸುಖಾಂತ್ಯಗೊಂಡಿತು.

ಮುಂದೆ ಇವರಿಬ್ಬರಿಗೂ ಮದುವೆ ಮಾಡಿಸಬೇಕಾದ ಜವಾಬ್ದಾರಿ ನಮ್ಮ ಹೆಗಲೇರಿತು. ದೊರೆಗೆ ಮದುವೆ ಮಾಡಿಕೊಳ್ಳುವ ಧೈರ್ಯವೇನೋ ಇತ್ತು. ಆದರೆ ಹಣಕಾಸಿನ ಅನುಕೂಲತೆ ಇರಲಿಲ್ಲ. ಆಗ ನಮಗೆಲ್ಲಾ ಮಾರ್ಗದರ್ಶಕರಾಗಿದ್ದ ನಿರ್ದೇಶಕ ಜಿ.ವಿ.ಅಯ್ಯರ್ ನೆರವಿಗೆ ಧಾವಿಸಿದರು. ಅವರ ನೇತೃತ್ವದಲ್ಲಿ ತಿರುಪತಿಯಲ್ಲಿ ಮದುವೆ ಮಾಡಿಸುವುದೆಂದು ತೀರ್ಮಾನವಾಯ್ತು. ತಿರುಪತಿಯ ಛತ್ರದಲ್ಲಿ ಪುರೋಹಿತರ ಸಮಕ್ಷಮದೊಂದಿಗೆ ದೊರೆ – ಲೀಲಾಂಜಲಿ ವಿವಾಹ ನೆರವೇರಿತು. ’ಅಬ್ಬಾ ಆ ಹುಡುಗಿ’, ನಟಿ ಲೀಲಾಂಜಲಿ ಅವರ ಮೊದಲ ಮತ್ತು ಕಡೆಯ ಚಿತ್ರವಾಯ್ತು. ಮುಂದೆ ದೊರೆ-ಲೀಲಾಂಜಲಿ ಆದರ್ಶ ದಂಪತಿಯಾಗಿ ಬಾಳ್ವೆ ನಡೆಸಿದರು.


ಇದನ್ನೂ ಓದಿ: ಕನ್ನಡಿಗರು ಎಂದೂ ಮರೆಯದ ಡಾ.ರಾಜ್‌ ಅವರ ಟಾಪ್‌-5 ಚಿತ್ರಗಳು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....