ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಯುವಕನೊಬ್ಬನ ಮೇಲೆ ಛತ್ತೀಸ್ ಘಡದ ಸೂರಜ್ಪುರ್ ಜಿಲ್ಲೆಯ ಜಿಲ್ಲಾಧಿಕಾರಿಯು ಹಲ್ಲೆ ಮಾಡುವ ಮತ್ತು ಆತನ ಮೊಬೈಲ್ ಅನ್ನು ನೆಲಕ್ಕೆ ಬಡಿದು ಹಾಳು ಮಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾದ ನಂತರ ಆ ಐಎಎಸ್ ಅಧಿಕಾರಿ ಕ್ಷಮೆಯಾಚಿಸಿದ್ದಾರೆ. ಆದರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಛತ್ತೀಸ್ ಘಡ ಸಿಎಂ ಭೂಪೇಶ್ ಬಾಘೇಲ್, ಅಧಿಕಾರಿಯನ್ನು ಆ ಸ್ಥಾನದಿಂದ ತೆಗೆದುಹಾಕುವಂತೆ ಸೂಚಿಸಿದ್ದಾರೆ.
ನಡೆದುದ್ದೇನು?
ಕೋವಿಡ್ ಲಾಕ್ಡೌನ್ ಕಾರಣಕ್ಕೆ ಛತ್ತೀಸ್ ಘಡದ ಸೂರಜ್ಪುರ್ ಜಿಲ್ಲೆಯಲ್ಲಿ ಸಾರ್ವಜನಿಕರ ಓಡಾಟವನ್ನು ನಿಷೇಧಿಸಲಾಗಿದೆ. ಆದರೆ ಈ ಸಂದರ್ಭದಲ್ಲಿ ಯುವಕನೊಬ್ಬ ಮನೆಯಿಂದ ಹೊರಬಂದಿದ್ದನ್ನು ಪೊಲೀಸರು ಜಿಲ್ಲಾಧಿಕಾರಿಯ ಸಮ್ಮುಖದಲ್ಲಿ ಪ್ರಶ್ನಿಸಿದ್ದಾರೆ. ಯುವಕನು ಮಗುವನ್ನು ಟೆಸ್ಟ್ ಮಾಡಿಸಲು ಕರೆದೊಯ್ಯುತ್ತಿದ್ದೇನೆ ಎಂದು ಚೀಟಿ ಮತ್ತು ತನ್ನ ಮೊಬೈಲ್ನಲ್ಲಿ ಏನನ್ನೋ ತೋರಿಸಲು ಮುಂದಾಗಿದ್ದಾನೆ. ಆದರೆ ಜಿಲ್ಲಾಧಿಕಾರಿ ರಣಭೀರ್ ಶರ್ಮಾ ಅದನ್ನು ನೋಡದೇ ಮೊಬೈಲ್ ಅನ್ನು ಕಿತ್ತು ನೆಲಕ್ಕೆ ಬಡಿದಿದ್ದಾರೆ. ನಂತರ ಯುವಕನ ಕಪಾಳಕ್ಕೆ ಬಾರಿಸಿದ್ದಾರೆ. ಕೂಡಲೇ ಪೊಲೀಸರಿಬ್ಬರು ಲಾಠಿಯಿಂದ ಯುವಕನ ಮೇಲೆ ಹಲ್ಲೆ ಮಾಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.
मारो मारो मारो !!
यही गुंडई करनी थी तो IAS काहे बने बाबू ? @RanbirSharmaIAS pic.twitter.com/uiuiJmWtTB
— Vinod Kapri (@vinodkapri) May 22, 2021
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ದೌರ್ಜನ್ಯವೆಸಗಿದ ಆ ಜಿಲ್ಲಾಧಿಕಾರಿಯ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ. ಇದರಿಂದ ಆ ಐಎಎಸ್ ಅಧಿಕಾರಿಯನ್ನು ಜಿಲ್ಲಾಧಿಕಾರಿ ಸ್ಥಾನದಿಂದ ತೆಗೆಯುವಂತೆ ಸಿಎಂ ಸೂಚಿಸಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲಾಧಿಕಾರಿ ರಣಭೀರ್ ಶರ್ಮಾ ಕ್ಷಮೆಯಾಚಿಸಿದ್ದಾರೆ. ಹೇಳಿಕೆಯೊಂದನ್ನು ಬಿಡುಗಡೆ ಮಾಡಿ “ಘಟನೆಗೆ ಕ್ಷಮೆಯಾಚಿಸುತ್ತೇನೆ. ಆ ಯುವಕನನ್ನು ಅವಮಾನಿಸುವ ಉದ್ದೇಶ ನನಗಿರಲಿಲ್ಲ” ಎಂದಿದ್ದಾರೆ.
ನಾನು ಕೋವಿಡ್ನಿಂದ ಚೇತರಿಸಿಕೊಂಡಿದ್ದೇನೆ, ಆದರೆ ನಮ್ಮ ತಾಯಿ ಇನ್ನು ಬಳಲುತ್ತಿದ್ದಾರೆ. ಹಾಗಾಗಿ ಸಾರ್ವಜನಿಕರು ಲಾಕ್ಡೌನ್ ನಿಯಮಗಳನ್ನು ಪಾಲಿಸಬೇಕೆಂದು ಮನವಿ ಮಾಡಿದ್ದಾರೆ. ಅಲ್ಲದೇ ಹಲ್ಲೆಗೊಳಗಾದ ಯುವಕ ಅಪ್ರಾಪ್ತ ಎಂಬ ದೂರು ಕೇಳಿಬಂದಿದೆ. ಅದು ಸುಳ್ಳು ಆತನಿಗೆ 23 ವರ್ಷ ವಯಸ್ಸಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಕೋವಿಡ್ -19 ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆ ವ್ಯಕ್ತಿಯ ಮೇಲೆ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Despicable behaviour Mr DM.Totally condemnable.I hear you have given an apology ! No apology can take away the insult you inflicted on the unsuspecting person. You have jeopardised the committed work of hundreds of civil servants working day & night.Shame #Collector #Apology pic.twitter.com/tUzTeSgIl6
— Supriya Sahu IAS (@supriyasahuias) May 23, 2021
ಜಿಲ್ಲಾಧಿಕಾರಿಯ ಈ ನಡವಳಿಕೆಯನ್ನು ಐಎಎಸ್ ಅಸೋಸಿಯೇಷನ್ ತೀವ್ರವಾಗಿ ಖಂಡಿಸಿದೆ. ಈ ವರ್ತನೆ ಸ್ವೀಕಾರಾರ್ಹವಲ್ಲ ಮತ್ತು ಸೇವೆ ಮತ್ತು ನಾಗರಿಕತೆಯ ಮೂಲ ಸಿದ್ಧಾಂತಗಳಿಗೆ ವಿರುದ್ಧವಾಗಿದೆ. ಅಧಿಕಾರಿಗಳಿಗೆ ಅನುಭೂತಿ ಇರಬೇಕು ಎಂದು ತಿಳಿಸಿದೆ.
ಇದನ್ನೂ ಓದಿ: ದಲಿತ ಯುವಕನಿಗೆ ಮೂತ್ರ ಕುಡಿಸಿ ದೌರ್ಜನ್ಯ: ಹೇಯ ಕೃತ್ಯ ಎಸಗಿದ ಪಿಎಸ್ಐ ಅಮಾನತ್ತಿಗೆ ಆಗ್ರಹ