ಐಸಿಸಿ ಟಿ20 ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿದ್ದ ಭಾರತ ತಂಡವು ತನ್ನ ಆರಂಭಿಕ ಎರಡು ಪಂದ್ಯಗಳಲ್ಲಿ ಸೋತು, ಇನ್ನೆರೆಡು ಪಂದ್ಯಗಳಲ್ಲಿ ಗೆದ್ದಿದೆ. ಗ್ರೂಪ್ ಎರಡರಲ್ಲಿ ಪಾಕಿಸ್ತಾನವು 4ಕ್ಕೆ 4 ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ತಲುಪಿದೆ. ಈ ಗ್ರೂಪ್ನಲ್ಲಿ ಇನ್ನೊಂದು ತಂಡಕ್ಕೆ ಮಾತ್ರ ಸೆಮಿಫೈನಲ್ ತಲುಪುವ ಅವಕಾಶವಿದ್ದು ಅದಕ್ಕಾಗಿ ಆಫ್ಘಾನಿಸ್ತಾನ, ನ್ಯೂಜಿಲೆಂಡ್, ಭಾರತ ತಂಡಗಳು ತೀವ್ರ ಪೈಪೋಟಿ ನಡೆಸುತ್ತಿವೆ. ಭಾರತ ಟಿ20 ವಿಶ್ವಕಪ್ ಸೆಮಿಫೈನಲ್ ತಲುಪುವುದು ಕಷ್ಟಸಾಧ್ಯವಿದೆ. ಅದು ಹೇಗೆ ಎಂಬ ವಿವರ ಇಲ್ಲಿದೆ.
ಸದ್ಯದ ಗ್ರೂಪ್ 2 ರ ಪಾಯಿಂಟ್ಸ್ ಪಟ್ಟಿಯಲ್ಲಿ ಸತತ ನಾಲ್ಕು ಗೆಲುವುಗಳೊಂದಿಗೆ 8 ಪಾಯಿಂಟ್ ಪಡೆದು ಪಾಕಿಸ್ತಾನ ಅಗ್ರಸ್ಥಾನದಲ್ಲಿದೆ ಮತ್ತು ಸೆಮಿಫೈನಲ್ ತಲುಪಿದೆ. ನ್ಯೂಜಿಲೆಂಡ್ ತಂಡವು 4 ಪಂದ್ಯಗಳಲ್ಲಿ 3 ನ್ನು ಜಯಿಸಿ +1.277 ನೆಟ್ ರನ್ ರೇಟ್ ಪಡೆದು ಎರಡನೇ ಸ್ಥಾನದಲ್ಲಿದೆ. ಭಾರತ ಎರಡು ಪಂದ್ಯ ಗೆದ್ದು 4 ಪಾಯಿಂಟ್ ಮತ್ತು ಉತ್ತಮ ನೆಟ್ ರನ್ ರೇಟ್ (+1.619) ಹೊಂದಿದೆ. ಆಫ್ಘಾನಿಸ್ತಾನವು 4 ಪಂದ್ಯಗಳಲ್ಲಿ 2 ಅನ್ನು ಗೆದ್ದು 4 ಪಾಯಿಂಟ್ ಮತ್ತು ಉತ್ತಮ ನೆಟ್ ರನ್ರೇಟ್ನೊಂದಿಗೆ (+1.481) ನಾಲ್ಕನೇ ಸ್ಥಾನದಲ್ಲಿದೆ.
ಭಾರತ ಹೇಗೆ ಸೆಮಿಫೈನಲ್ ತಲುಪಬಹುದು?
ನ್ಯೂಜಿಲೆಂಡ್ ಮತ್ತು ಆಫ್ಘಾನಿಸ್ತಾನದ ಕೊನೆಯ ಪಂದ್ಯ ನವೆಂಬರ್ 7 ರಂದು ನಡೆಯಲಿದೆ. ಅಂದು ನ್ಯೂಜಿಲೆಂಡ್ ಗೆದ್ದರೆ ಭಾರತದ ಕನಸು ನುಚ್ಚು ನೂರಾಗುತ್ತದೆ. ಏಕೆಂದರೆ 8 ಪಾಯಿಂಟ್ ಪಡೆದು ಅದು ಸೆಮಿಫೈನಲ್ ಪ್ರವೇಶಿಸುತ್ತದೆ. ಒಂದು ವೇಳೆ ನ್ಯೂಜಿಲೆಂಡ್ ಕಡಿಮೆ ಅಂತರದಲ್ಲಿ ಸೋತರೆ, ಭಾರತಕ್ಕೆ ಅವಕಾಶ ತೆರೆದುಕೊಳ್ಳುತ್ತದೆ. ಏಕೆಂದರೆ ಆಗ ನ್ಯೂಜಿಲೆಂಡ್ 6 ಪಾಯಿಂಟ್, ಆಫ್ಘಾನಿಸ್ತಾನ 6 ಪಾಯಿಂಟ್ ಪಡೆದಿರುತ್ತವೆ (ನೆಟ್ ರನ್ ರೇಟ್ +1.481). ಅದೇ ರೀತಿಯಾಗಿ ಭಾರತವು ನಮೀಬಿಯಾ ಎದುರಿನ ಕೊನೆಯ ಪಂದ್ಯದಲ್ಲಿ ಭಾರೀ ಅಂತರದಿಂದ ಗೆದ್ದರೆ ಅದು ಸಹ 6 ಪಾಯಿಂಟ್ ಗಳಿಸುತ್ತದೆ. ಭಾರತದ ನೆಟ್ ರನ್ ರೇಟ್ ಮತ್ತಷ್ಟು ಹೆಚ್ಚಾಗುವುದರಿಂದ ಸೆಮಿಫೈನಲ್ ತಲುಪುವ ಅವಕಾಶವಿದೆ.
ಆದರೆ ಇಷ್ಟೆಲ್ಲಾ ಆಗಬೇಕಾದರೆ ಎರಡು ಹೆಜ್ಜೆ ಭಾರತಕ್ಕೆ ಪ್ರಮುಖವಾಗುತ್ತವೆ. 1. ನ್ಯೂಜಿಲೆಂಡ್ ನವೆಂಬರ್ 7 ರಂದು ಆಫ್ಘಾನಿಸ್ತಾನ ಎದುರು ಕಡಿಮೆ ಅಂತರದಿಂದ ಸೋಲಲೇಬೇಕು ಮತ್ತು ಭಾರತವು ನಮೀಬಿಯಾ ಎದುರು ಭಾರೀ ಅಂತರದಿಂದ ಗೆಲ್ಲಲೇಬೇಕು. ಕ್ರಿಕೆಟ್ ನಲ್ಲಿ ಎಂತಹ ಪವಾಡಗಳು ಸಹ ನಡೆಯಬಹುದು. ಅದು ಸಾಧ್ಯವೇ ಎಂಬುದು ನವೆಂಬರ್ 7 ರಂದು ತೀರ್ಮಾನವಾಗಲಿದೆ. ಅಲ್ಲಿಯವರೆಗೂ ಕಾಯೋಣ.
ಭಾರತಕ್ಕೆ ಭರ್ಜರಿ ಜಯ
ತನ್ನ ನಾಲ್ಕನೇ ಪಂದ್ಯದಲ್ಲಿ ಭಾರತ ಸ್ಕಾಟ್ಲೆಂಡ್ ಎದುರು ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ 85 ರನ್ಗಳಿಗೆ ಆಲೌಟ್ ಆಯಿತು. ಭಾರತದ ಪರ ಮೊಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜಾ ತಲಾ ಮೂರು ವಿಕೆಟ್ ಪಡೆದು ಮಾರಕ ದಾಳಿ ನಡೆಸಿದರೆ, ಜಸ್ಪ್ರಿತ್ ಬೂಮ್ರ ಎರಡು ವಿಕೆಟ್ ಪಡೆದು ಮಿಂಚಿದರು. ನಂತರ ಬ್ಯಾಟ್ ಮಾಡಿದ ಭಾರತ ಕೇವಲ 39 ಎಸೆತಗಳಲ್ಲಿ 89 ರನ್ ಗಳಿಸಿ 8 ವಿಕೆಟ್ಗಳ ಬೃಹತ್ ಗೆಲುವು ದಾಖಲಿಸಿತು. ಆರಂಭಿಕ ಆಟಗಾರರಾದ ಕೆ.ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಆಕ್ರಮಣಕಾರಿ ಆಟವಾಡಿದರು.
ಕೆ.ಎಲ್ ರಾಹುಲ್ ಕೇವಲ 19 ಎಸೆತಗಳಲ್ಲಿ 50 ರನ್ ಚಚ್ಚಿದರೆ, ರೋಹಿತ್ ಶರ್ಮಾ 16 ಎಸೆತಗಳಲ್ಲಿ 30 ರನ್ ಬಾರಿಸಿದರು. ಇವರಿಬ್ಬರೂ ಔಟ್ ಆದ ನಂತರ ವಿರಾಟ್ ಕೊಹ್ಲಿ ಎರಡು ರನ್ ಗಳಿಸಿದರು. ಕೊನೆಗೆ ಬಂದ ಸೂರ್ಯಕುಮಾರ್ ಯಾದವ್ ಗೆಲುವಿಗೆ 2 ರನ್ ಬೇಕಿದ್ದಾಗ ಭರ್ಜರಿ ಸಿಕ್ಸರ್ ಎತ್ತಿ ಗೆಲುವಿಗೆ ಸಹಕರಿಸಿದರು.
ಇದನ್ನೂ ಓದಿ: ‘ಇಡೀ ಭಾರತ ನಿನ್ನ ಹಿಂದೆ ಇದೆ’: ಸ್ಕಾಟ್ಲೆಂಡ್ ವಿಕೆಟ್ಕೀಪರ್ ಹೇಳಿಕೆ ಸ್ಟಂಪ್ ಮೈಕ್ನಲ್ಲಿ ಸೆರೆ: ವಿಡಿಯೊ ನೋಡಿ!
Sir NZ bagladeshad virudha kadime antardinda alla hechhu antardinda solabeku.. pls correct ur lines