HomeಮುಖಪುಟCAA, NRC: ಬೆಟ್ಟ ಅಗೆದು ಇಲಿ ಹಿಡಿಯುವ ಕೆಲಸ!. ಪರಿಣಾಮ- ಅಂಕಿಅಂಶಗಳ ಸಂಗ್ರಹಕ್ಕೆ ಮರ್ಮಾಘಾತ..

CAA, NRC: ಬೆಟ್ಟ ಅಗೆದು ಇಲಿ ಹಿಡಿಯುವ ಕೆಲಸ!. ಪರಿಣಾಮ- ಅಂಕಿಅಂಶಗಳ ಸಂಗ್ರಹಕ್ಕೆ ಮರ್ಮಾಘಾತ..

ಸಿಎಎ, ಎನ್‌ಆರ್‌ಸಿಯಿಂದ ದೇಶಕ್ಕಾಗುವ ಸರಿಪಡಿಸಲಾಗದ ಅಪಾಯಗಳ ಕುರಿತು ಈ ಲೇಖನ ಬೆಳಕು ಚೆಲ್ಲುತ್ತದೆ.

- Advertisement -
- Advertisement -

ಮೂಲ:  ಎಸ್‌.ಎ. ಅಯ್ಯರ್, ಟೈಮ್ಸ್‌ ಆಫ್‌ ಇಂಡಿಯಾ.

ಅನುವಾದ: ನಿಖಿಲ್ ಕೋಲ್ಪೆ

ಬಾಂಗ್ಲಾದೇಶಿ ನುಸುಳುಕೋರರನ್ನು ಹಿಡಿಯುವ ನೆಪದಲ್ಲಿ ಸರಕಾರ ಇಡೀ ದೇಶದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮತ್ತು ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಜಾರಿಗೊಳಿಸಲು ಹೊರಟು ಕೋಮುವಾದಿ ವಿಷವನ್ನು ಹೆಚ್ಚಿಸಿದೆ. ಆರ್ಥಿಕ ಪ್ರಗತಿಗೆ ಅತ್ಯಂತ ಅನಿವಾರ್ಯವಾಗಿರುವ ಸಾಮಾಜಿಕ ಸಾಮರಸ್ಯವನ್ನು ನೆಲಕ್ಕಪ್ಪಳಿಸಲಾಗಿದೆ. ಇದರ ಅನಿರೀಕ್ಷಿತ ಅಡ್ಡ ಪರಿಣಾಮ ಎಂದರೆ, ಭಾರತದ ಅಂಕಿಅಂಶಗಳಲ್ಲಿ ಒಂದು ಕಪ್ಪುರಂಧ್ರ. ಇದರಿಂದಾಗಿ ಎಲ್ಲಾ ನಿರ್ಧಾರಗಳು ಕೇವಲ ಊಹಾಪೋಹಗಳಾಗುತ್ತವೆಯೇ ಹೊರತು ವಾಸ್ತವದ ನೆಲೆಗಟ್ಟಿನಲ್ಲಿ ಇರುವುದಿಲ್ಲ. ಅಂಕಿಅಂಶಗಳ ವಾಸ್ತವದ ಮೇಲೆ ಮಂಜು ಕವಿದರೆ, ದೇಶದಲ್ಲಿ ಯಾವುದು ಸರಿಯಾಗಿ ನಡೆಯುತ್ತಿದೆ, ಯಾವುದು ಸರಿಯಾಗಿ ನಡೆಯುತ್ತಿಲ್ಲ ಅಥವಾ ಅದನ್ನು ಸರಿಪಡಿಸುವುದು ಹೇಗೆ ಎಂಬುದೂ ತಿಳಿಯುವುದಿಲ್ಲ.

ಎನ್ಆರ್‌ಸಿ ಮತ್ತು ಸಿಎಎ ವಿರುದ್ಧದ ಪ್ರತಿಭಟನೆಗಳು ಏಕಾಏಕಿಯಾಗಿ ಕೆಲವು ರಾಜ್ಯಗಳಲ್ಲಿ ಅಂಕಿಅಂಶಗಳ ಸಂಗ್ರಹವನ್ನೇ ಅಸಾಧ್ಯ ಕೆಲಸವನ್ನಾಗಿ ಮಾಡಿದೆ. 2021ರ ಜನಗಣತಿ, ಎನ್‌ಆರ್‌ಸಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್)- ಈ ಮೂರೂ ಅಧ್ವಾನವಾಗಲಿವೆ. ಜನಗಣತಿಯ ಮನೆಮನೆ ಸಮೀಕ್ಷೆ ಎನ್‌ಪಿಆರ್ ಜೊತೆಯಲ್ಲಿಯೇ ನಡೆಯಲಿದೆ. ಆದರೆ, ಈಗ ತಮ್ಮ ಪೌರತ್ವ ಕಳೆದುಕೊಳ್ಳುವ ಭೀತಿಯಿಂದ ಬಹಳಷ್ಟು ಜನರು ಯಾವುದೇ ಮಾಹಿತಿ ನೀಡಲು ಸಿದ್ಧರಿಲ್ಲ ಮತ್ತು ಸಮೀಕ್ಷೆಗೆ ಹೋದವರನ್ನೇ ಥಳಿಸಬಹುದು.

ಎನ್‌ಆರ್‌ಸಿ ಮತ್ತು ಸಿಎಎ ವಿವಾದಾತ್ಮಕವಾಗಿದ್ದು, ಜನಗಣತಿಗೆ ಅದೇ ಗತಿಯಾಗಬಾರದು. ಆದರೆ, ಜನಸಾಮಾನ್ಯರು ಯಾವುದೇ ಸಮೀಕ್ಷೆಗಳ ನಡುವಿನ ವ್ಯತ್ಯಾಸಗಳನ್ನು ಸುಲಭದಲ್ಲಿ ಗುರುತಿಸಲಾರರು. ಆಂಧ್ರಪ್ರದೇಶದಲ್ಲಿ ನ್ಯಾಷನಲ್ ಸ್ಯಾಂಪಲ್ ಸರ್ವೇ ಆರ್ಗನೈಸೇಷನ್‌ (ಎನ್‌ಎಸ್‌ಎಸ್‌ಓ)ನ ಅಧಿಕಾರಿಗಳ ಮೇಲೆ ಕೇವಲ ಸಾಮಾಜಿಕ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ ಗ್ರಾಮಸ್ಥರು ದಾಳಿ ಮಾಡಿದ್ದರು. ಯಾಕೆಂದರೆ ಅದು ಯಾವುದೋ ರೀತಿಯಲ್ಲಿ ಎನ್‌ಆರ್‌ಸಿಯ ಜೊತೆ ಸಂಬಂಧ ಹೊಂದಿದೆ ಎಂದು ಅವರು ನಂಬಿದ್ದರು.

ಪಶ್ಚಿಮ ಬಂಗಾಳದಲ್ಲಿ ಎನ್‌ಎಸ್‌ಎಸ್‌ಓ ಮಾಹಿತಿ ಸಂಗ್ರಾಹಕರು ಕೇವಲ ಶಿಕ್ಷಣ, ಶುಚಿತ್ವ ಮತ್ತು ಉದ್ಯೋಗದ ಕುರಿತ ಮಾಹಿತಿ ಸಂಗ್ರಹಕ್ಕೆ ತಿಣುಕಾಡುತ್ತಿದ್ದಾರೆ. ಭಯಗೊಂಡ ಗ್ರಾಮಸ್ಥರ ಪ್ರತಿರೋಧ ಎಷ್ಟು ಹೆಚ್ಚಾಗುತ್ತಿದೆಯೆಂದರೆ, ಸ್ವಾತಂತ್ರ್ಯೋತ್ತರದಲ್ಲಿ ಮೊದಲ ಬಾರಿಗೆ ಈ ಸಮೀಕ್ಷೆಯನ್ನೇ ಹಿಂತೆಗೆದುಕೊಳ್ಳುವ ಸಾಧ್ಯತೆಯಿದೆ. ಜನರಲ್ಲಿ ಬೆಳೆಯುತ್ತಿರುವ ಅಪನಂಬಿಕೆ ಮತ್ತು ಆಕ್ರೋಶ ಎಷ್ಟರ ಮಟ್ಟಿಗೆ ಇದೆಯೆಂದರೆ, ಎನ್‌ಎಸ್‌ಎಸ್‌ಓ ಸಿಬ್ಬಂದಿಗೆ ಪೊಲೀಸ್ ರಕ್ಷಣೆ ಅನಿವಾರ್ಯವಾಗಿದೆ. ಒಂದು ವೇಳೆ ರಕ್ಷಣೆ ನೀಡಿದರೂ ಜನರು ಬೇಕೆಂದೇ ಸುಳ್ಳು ಹೇಳಿದರೆ, ಅಥವಾ ಮಾಹಿತಿ ನೀಡಲು ನಿರಾಕರಿಸಿದರೆ, ಇಡೀ ಸಮೀಕ್ಷೆಯೇ ನಿಷ್ಪ್ರಯೋಜಕವಾಗುತ್ತದೆ.

ಉತ್ತಮ ಆಡಳಿತಕ್ಕಾಗಿ ಸರಕಾರ ಮತ್ತು ಜನರ ನಡುವೆ ಕನಿಷ್ಟ ಮಟ್ಟದ ನಂಬಿಕೆಯಾದರೂ ಬೇಕಾಗುತ್ತದೆ. ಅದೀಗ ವೇಗವಾಗಿ ಕರಗುತ್ತಿದೆ. ದಿಲ್ಲಿಯ ಶಹೀನ್‌ಬಾಗ್‌ನಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ಮುಸ್ಲಿಂ ಮಹಿಳೆಯರು “ಐ ಲವ್ ಇಂಡಿಯಾ” ಎಂಬ ಪಟ್ಟಿಯನ್ನು ತಲೆಗೆ ಕಟ್ಟಿಕೊಂಡಿದ್ದಾರೆ. ಭಾರತದ ಧ್ವಜವನ್ನು ಎತ್ತಿಹಿಡಿದಿದ್ದಾರೆ, ರಾಷ್ಟ್ರಗೀತೆ ಹಾಡುತ್ತಿದ್ದಾರೆ. ಸಂವಿಧಾನವು ನೀಡಿರುವ ಸಮಾನತೆಯ ಹಕ್ಕುಗಳನ್ನು ರಕ್ಷಿಸುವ ಮತ್ತು ಅದನ್ನು ದಮನಿಸುತ್ತಿರುವ ಅಧಿಕಾರಸ್ಥರ ವಿರುದ್ದ ಹೋರಾಡುವ ಪಣ ತೊಟ್ಟಿದ್ದಾರೆ. ಆದರೂ ಬಿಜೆಪಿಯ ಹಿರಿಯ ನಾಯಕರೇ ಈ ಪ್ರತಿಭಟನಕಾರರನ್ನು ಭಯೋತ್ಪಾದಕರು, ದೇಶವಿರೋಧಿಗಳು, ಪಾಕಿಸ್ತಾನದ ಪರವಾಗಿರುವವರು, ದೇಶವನ್ನು ಒಡೆಯಬಯಸುವ “ತುಕ್ಡೇ ತುಕ್ಡೇ ಗ್ಯಾಂಗ್” ಎಂದೆಲ್ಲಾ ಕರೆಯುತ್ತಿದ್ದಾರೆ. ಇಂತಹಾ ಕೋಮುವಾದಿ ಸುಳ್ಳುಗಳು ಸರಕಾರ ಮತ್ತು ಜನರ ಮಧ್ಯೆ ಇರುವ ಅಲ್ಪಸ್ವಲ್ಪ ನಂಬಿಕೆಯನ್ನೂ ಹಾಳುಗೆಡವಬಹುದು. ನ್ಯಾಯ ವ್ಯವಸ್ಥೆ, ಆರ್ಥಿಕತೆ ಮತ್ತು ಅಂಕಿಸಂಕಿಗಳ ವ್ಯವಸ್ಥೆಗಳೇ ಕುಸಿದು ಬೀಳುವಂತೆ ಮಾಡಬಹುದು.

ಮೊದಲೇ ಎನ್‌ಎಸ್‌ಎಸ್‌ಓ ಸಮೀಕ್ಷೆದಾರರು ಗ್ರಾಮಗಳಿಗೆ ಭೇಟಿ ನೀಡುವುದೇ ಇಲ್ಲ; ಹತ್ತಿರದ ಚಹಾದ ಅಂಗಡಿಗಳಲ್ಲಿ ಕುಳಿತು ಮನಬಂದಂತೆ ಪ್ರಶ್ನಾವಳಿಗಳನ್ನು ತುಂಬುತ್ತಾರೆ ಎಂದು ಟೀಕಾಕಾರರು ಹೇಳುತ್ತಾರೆ. ಸಂಶಯ ತುಂಬಿದ ಗುಂಪುಗಳು ಸಮೀಕ್ಷೆದಾರರನ್ನು ಹೊಡಿಬಡಿಯಲು ಶುರುಮಾಡಿದರೆ, ಇದು ಇನ್ನಷ್ಟು ತೀವ್ರವಾಗಿ ಬಿಗಡಾಯಿಸಬಹುದು.

ಮಹಾರಾಷ್ಟ್ರ, ಕೇರಳ, ಪಂಜಾಬ್, ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ಮುಂತಾದ ಹಲವಾರು ರಾಜ್ಯಗಳು ಸಿಎಎ, ಎನ್‌‌ಆರ್‌ಸಿ, ಎನ್‌ಪಿಆರ್ ಈ ಮೂರರಲ್ಲಿ ಒಂದೆರಡನ್ನು ಅಥವಾ ಮೂರನ್ನೂ ಜಾರಿಗೊಳಿಸಲು ನಿರಾಕರಿಸಿವೆ. ಬಿಜೆಪಿಯು ಕೆಲವು ಪ್ರಶ್ನೆಗಳನ್ನು- ಉದಾಹರಣೆಗೆ ಹೆತ್ತವರ ಜನ್ಮಸ್ಥಾನದ ಕುರಿತ ಪ್ರಶ್ನೆಗಳನ್ನು ಕೈಬಿಡುವ ಪ್ರಸ್ತಾಪ ಮುಂದಿಟ್ಟಿದೆ.  ಜನರ ಕೋಪ- ಭಯವನ್ನು ಶಮನ ಮಾಡಲು ಅಖಿಲ ಭಾರತ ಮಟ್ಟದಲ್ಲಿ ಎನ್‌ಆರ್‌ಸಿ ಕುರಿತು ಇನ್ನೂ ನಿರ್ಧಾರ ಮಾಡಲಾಗಿಲ್ಲ ಎಂದು ಹೇಳುತ್ತಿದೆ. ಆದರೆ, ಅಮಿತ್ ಶಾ ಅದು ನಡೆಯಲಿದೆ ಎಂದು ದೃಢವಾಗಿ ಶಪಥ ಮಾಡಿದಂದಿನಿಂದ ಹೆಚ್ಚಿನವರಿಗೆ ಅದು ನಡೆಯಲಿದೆ ಎಂದು ಖಚಿತವಾಗಿದೆ ಮತ್ತು ಅದನ್ನು ವಿಫಲಗೊಳಿಸಲು ಜನರು ಸಜ್ಜಾಗಿದ್ದಾರೆ.

ಬಿಜೆಪಿಯು ಬಾಂಗ್ಲಾದೇಶದಿಂದ ಬಂದ ಮುಸ್ಲಿಂ “ಗೆದ್ದಲು ಹುಳುಗಳನ್ನು” ಮತ್ತು “ನುಸುಳುಕೋರರನ್ನು” ದೇಶದಿಂದ ಹೊರದಬ್ಬುವ ಭರವಸೆ ನೀಡುವ ಮೂಲಕ ಮತಗಳನ್ನು ಗಳಿಸಲು ಯತ್ನಿಸುತ್ತಿದೆ. ಆದರೆ, ಅಸ್ಸಾಮಿನಲ್ಲಿಯೇ 19 ಲಕ್ಷದಷ್ಟು ಭಾರೀ ಪ್ರಮಾಣದ ಜನರು ತಾವು ಭಾರತೀಯರು ಎಂದು ಸಾಬೀತುಪಡಿಸಲು ವಿಫಲರಾದರು. ಅವರಲ್ಲಿ 12 ಲಕ್ಷ ಹಿಂದೂಗಳು, ಆರು ಲಕ್ಷ ಮುಸ್ಲಿಮರು ಮತ್ತು ಒಂದು ಲಕ್ಷ ಆದಿವಾಸಿಗಳು. ಇದರಿಂದಾಗಿ ಈ ಸಮೀಕ್ಷೆಯು ದಾಖಲೆ ಇಲ್ಲದವರನ್ನು ಪತ್ತೆಹಚ್ಚಿದೆಯೇ ಹೊರತು, ಕಾನೂನು ಬಾಹಿರವಾಗಿ ವಾಸಿಸುತ್ತಿರುವವರನ್ನಲ್ಲ ಎಂಬುದು ಸ್ಪಷ್ಟವಾಗಿದೆ.

ಸಿಎಎ ತ್ವರಿತವಾಗಿ ಎಲ್ಲಾ ಮುಸ್ಲಿಮೇತರರನ್ನು ಸಿಂಧುಗೊಳಿಸುವ ಭರವಸೆ ನೀಡುತ್ತದೆ. ಅಂದರೆ, ಕೇವಲ ಮುಸ್ಲಿಮರನ್ನು ಮಾತ್ರ ದೇಶಭ್ರಷ್ಟರೆಂದು ಘೋಷಿಸಿ, ನಿರಾಶ್ರಿತರ ಶಿಬಿರಗಳಿಗೆ ತಳ್ಳಲಾಗುತ್ತದೆ. ಅಸ್ಸಾಮಿನ ಅನುಭವದ ಪ್ರಕಾರ ರಾಷ್ಟ್ರೀಯ ಮಟ್ಟದಲ್ಲಿ ಒಂದು ಕೋಟಿ ಮುಸ್ಲಿಮರೂ ಸೇರಿದಂತೆ ಎಂಟು ಕೋಟಿ ಜನರನ್ನು ಹಿಡಿಯಲು 50,000 ಕೋಟಿ ರೂ. ಖರ್ಚಾಗುತ್ತದೆ. ಅಷ್ಟು ಜನರನ್ನು ನಿರಾಶ್ರಿತರ ಶಿಬಿರಗಳಿಗೆ ತಳ್ಳಿದರೆ ಅದೊಂದು ಮಹಾ ಮಾನವಹಕ್ಕು ಕರ್ಮಕಾಂಡವಾಗಿ ಅಂತರರಾಷ್ಟ್ರೀಯವಾಗಿ ಭಾರತದ ಮುಖಕ್ಕೆ ಮಸಿಬಳಿಯಲಿದೆ ಮತ್ತು ಜಾಗತಿಕವಾಗಿ ದಿಗ್ಬಂಧನವನ್ನೂ ಎದುರಿಸಬೇಕಾದೀತು.

ಇವೆಲ್ಲದರ ಅಡ್ಡಪರಿಣಾಮ ಎಂದರೆ, ಅಂಕಿಅಂಶಗಳ ಸಂಗ್ರಹ ಮತ್ತು ವಿಶ್ಲೇಷಣಾ ವ್ಯವಸ್ಥೆಗೆ ಸಂಪೂರ್ಣ ಹಾನಿ ಮತ್ತು ಅಭಿವೃದ್ಧಿ ಕುರಿತ ಸುಳ್ಳುಗಳಿಗೆ ಹಾದಿ. ದೇಶದ ಜಿಡಿಪಿಯನ್ನು 2.5 ಶೇಕಡಾದಷ್ಟು ಹೆಚ್ಚಾಗಿ ತೋರಿಸಲಾಗಿದೆ ಎಂದು ಇತ್ತೀಚೆಗೆ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಹ್ಮಣ್ಯಂ ಹೇಳಿದ್ದರು. ಇತ್ತೀಚಿನ ಸಮೀಕ್ಷೆಯೊಂದು ನಿರುದ್ಯೋಗವು ಮೂರುಪಟ್ಟು ಹೆಚ್ಚಳವಾಗಿ 6.1 ಶೇಕಡಾ ತಲುಪಿದೆ ಎಂದು ಹೇಳಿತ್ತು. ಆದರೆ ಈ ವರದಿಯನ್ನು ತಡೆಹಿಡಿದ ಸರಕಾರ ನಂತರ ಅದು ದೋಷಪೂರಿತ ಎಂದು ತಳ್ಳಿಹಾಕಿತ್ತು. ನಂತರ ಎನ್‌ಎಸ್‌ಎಸ್‌ಓ ಸಮೀಕ್ಷೆಯು ಜನರ ತಲಾವಾರು ಕೊಳ್ಳುವ ಶಕ್ತಿಯಲ್ಲಿ ಕುಸಿತವಾಗಿದೆ ಮತ್ತು ಜಿಡಿಪಿಯ “ಪವಾಡಸದೃಶ” ಹೆಚ್ಚಳದ ಹೊರತಾಗಿಯೂ ಬಡತನದಲ್ಲಿ ತೀವ್ರ ಹೆಚ್ಚಳವಾಗಿದೆ ಎಂದು ಹೇಳಿದಾಗ, ಈ ವರದಿಯನ್ನೂ ಮೊದಲಿಗೆ ಮುಚ್ಚಿಹಾಕಿ, ನಂತರ ದೋಷಪೂರಿತವಾಗಿದೆ ಎಂದು ತಿರಸ್ಕರಿಸಲಾಗಿತ್ತು.

ಅಂಕಿಅಂಶ ವ್ಯವಸ್ಥೆಯನ್ನು ಸುಧಾರಿಸಿ ಪುನರ್ರಚನೆ ಮಾಡಲು ಗೌರವಾನ್ವಿತ ಅರ್ಥಶಾಸ್ತ್ರಜ್ಞ ಪ್ರೊಣಬ್ ಸೇನ್ ನೇತೃತ್ವದಲ್ಲಿ ಹೊಸ ಸಮಿತಿಯನ್ನು ರಚಿಸಲಾಯಿತು. ಆದರೆ, ಕೋಮುವಾದಿ ಧ್ರುವೀಕರಣದಿಂದಾಗಿ ಸಮೀಕ್ಷೆದಾರರಿಗೆ ನಾಗರಿಕರು ಹೊಡೆದರೆ, ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರೆ, ರಾಜ್ಯ ಸರಕಾರಗಳು  ಸಮೀಕ್ಷೆಗಳನ್ನು ಜಾರಿಗೊಳಿಸಲು ನಿರಾಕರಿಸಿದರೆ ಪ್ರೊಣಬ್ ಸೇನ್ ಅಸಹಾಯಕರಾಗುತ್ತಾರೆ. ಸುಪ್ರೀಂಕೋರ್ಟ್ ಈ ಸಿಎಎಯನ್ನು ರದ್ದುಗೊಳಿಸಿ, ಇತಿಹಾಸದ ಅತ್ಯಂತ ಕರಾಳ ಅಧ್ಯಾಯವೊಂದನ್ನು ಕೊನೆಗೊಳಿಸುತ್ತದೆ ಎಂದು ಆಶಿಸಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....