Homeಅಂಕಣಗಳುನಿಮಗಿದು ಗೊತ್ತೆ? ಎಳನೀರು ಕಿತ್ತರೆ ಫಸಲು ಹೆಚ್ಚುತ್ತದೆ ಹೊರತು ಕಡಿಮೆಯಾಗುವುದಿಲ್ಲ!

ನಿಮಗಿದು ಗೊತ್ತೆ? ಎಳನೀರು ಕಿತ್ತರೆ ಫಸಲು ಹೆಚ್ಚುತ್ತದೆ ಹೊರತು ಕಡಿಮೆಯಾಗುವುದಿಲ್ಲ!

ಎಷ್ಟು ಎಳನೀರು ಕಿತ್ತು ಕುಡಿದರೂ ಆ ಮರಗಳಲ್ಲಿನ ಎಳನೀರನ್ನು ಖಾಲಿ ಮಾಡಲು ಆಗುತ್ತಿಲ್ಲ. ಈ ಮರಗಳಿಗೆ ನೆಲದಿಂದ ನೀರನ್ನು ತಮ್ಮ ಕಾಂಡದ ಜೀವದಿಂದ ಮೇಲಕ್ಕೆತ್ತಿ ಎಳನೀರು ಮಾಡುವುದೊಂದೇ ಕೆಲಸ.

- Advertisement -
- Advertisement -

ನಮ್ಮ ತೋಟದ ಸಾಲಿಗೆ ನೀವೂ ಬನ್ನಿ…: ಭಾಗ-12

ನಿಮ್ಮ ಮೂರು ಮರಗಳು ಮಾತ್ರ ಎಳನೀರು ಬಿಡುತ್ತವೆ, ಬೇರೆ ತೆಂಗಿನ ಮರಗಳು ಎಳನೀರು ಕೊಡುವುದಿಲ್ಲವೇ ಎಂದು ಯಾರಾದರೂ ಕೇಳಿಬಿಡಬಹುದು. ಎಲ್ಲಾ ತೆಂಗಿನ ಮರಗಳು ಖಂಡಿತ ಎಳನೀರು ಬಿಡುತ್ತವೆ, ಅವು ಎಳನೀರಿನ ಮರಗಳಾಗಲು ಆ ಮರಗಳಿಂದ ಎಳನೀರು ಕುಡಿದರೆ ತಾನೇ?, ಇಲ್ಲದಿದ್ದರೆ ಅವು ಅಲ್ಲೆ ನಾವು ಇಲ್ಲೆ. ಇಲಿಗಳು ಯಾದಗಳು ಅವುಗಳ ಎಳನೀರು ಕುಡಿಯುತ್ತವೆ, ಆರೋಗ್ಯದಿಂದ ನೆಗೆದಾಡುತ್ತವೆ, ಅವು ಬಿಟ್ಟ ಎಳನೀರು ಕಾಯಿಗಳಾಗುತ್ತವೆ.

ಬಹುತೇಕ ತೆಂಗಿನ ಬೆಳೆಗಾರರು ಕೆಳಗಿನಿಂದಲೇ ಎಳನೀರು ನೋಡಿ ಆನಂದಿಸುತ್ತಾರೆ. ಸದರಿ ಮಾತಿನಲ್ಲಿ ವ್ಯಂಗ್ಯವಿರುವುದು ಸುಳ್ಳಲ್ಲ. ಬಯಲು ಸೀಮೆಗಳಲ್ಲಿ ತೆಂಗು ಬೆಳೆಯುವ ರೈತರು ಎಳನೀರು, ಕೊಬ್ಬರಿ ಇವೆರಡನ್ನು ಬಳಸುವುದು ತುಂಬಾ ಕಮ್ಮಿ. ತೆಂಗನ್ನು ಅಷ್ಟಾಗಿ ಬೆಳೆಯದ ಉತ್ತರ ಕರ್ನಾಟಕದ ಜನರು ಎಳನೀರನ್ನು ಕುಡಿಯುತ್ತಾರೆ. ಉತ್ತರ ಭಾರತದ ಜನ ಕೊಬ್ಬರಿಯನ್ನು ಯತೇಚ್ಚವಾಗಿ ತಿನ್ನುತ್ತಾರೆ, ಆದರೆ ತೆಂಗು ಬೆಳೆಯುವವರು ಮಾತ್ರ ದಿನಕ್ಕೆ ಒಂದು ಓಳು ಕಾಯನ್ನು ಬಳಸುವುದಕ್ಕೂ ಹಿಂದೆಮುಂದೆ ನೋಡುತ್ತಾರೆ. ಇದಲ್ಲವೆ ವಿಚಿತ್ರ. ಇತ್ತೀಚಿನವರೆಗೂ ಕೊಬ್ಬರಿ ಎಣ್ಣೆಯ ಬಳಕೆಯ ಸುದ್ದಿಯೇ ಇರಲಿಲ್ಲ, ಇದನ್ನು ತಲೆಗೆ ಹಚ್ಚುವುದನ್ನು ಸ್ವಲ್ಪ ರೂಢಿ ಮಾಡಿಕೊಂಡಿದ್ದಾರೆ ಅದೂ ಪ್ಯಾರಾ ಚೂಟ್‌ ನಕಲಿ ಕೊಬ್ಬರಿ ಎಣ್ಣೆಯನ್ನು. ಈಗ ಕೆಟ್ಟಮೇಲೆ ಬುದ್ಧಿ ಬಂದಿದೆ. ಕೊಬ್ಬರಿ ಎಣ್ಣೆಯನ್ನು ಊಟಕ್ಕೆ ಬಳಸಲು ಕೆಲವು ಜನರಾದರೂ ಆರಂಭಿಸಿರುವುದು ಶುಭ ಸೂಚನೆಯಾಗಿದೆ.

ಜಗತ್ತಿನ ಶ್ರೇಷ್ಟ ಪಾನೀಯಗಳಲ್ಲಿ ಎಳನೀರಿಗೆ ಅಗ್ರ ಸ್ಥಾನವಿದೆ. ಪ್ರಾಕೃತಿಕವಾಗಿ ಪ್ಯಾಕ್‌ ಆಗಿ ಸೀಲಾದ ಎಳನೀರನ್ನು ಕುಡಿಯುವ ಪರಿಪಾಠ ಬೆಳೆಯಲೇ ಇಲ್ಲ. ನಮ್ಮ ತಿಪಟೂರು ಸೀಮೆಯಲ್ಲಿ ಯಾರಾದರೂ ಸತ್ತರೆ ಅವರ ಗುಡ್ಡೆಯ ನಾಲ್ಕು ಮೂಲೆಗೆ ಕಟ್ಟಲು ನಾಲ್ಕು ಎಳನೀರನ್ನು ಬಳಸುವುದನ್ನು ಬಿಟ್ಟರೆ, ಶಿವರಾತ್ರಿಯಲ್ಲಿ ಎರಡು, ಕಾಯಿ ಕೆಡವಿದಾಗ ನಾಲ್ಕು ಇಷ್ಟೆ ನಮ್ಮ ಬಳಕೆ.

PC : India Gardening

ತಿಂಗ ತಿಂಗಳಿಗೂ ಹೊಂಬಾಳೆ ಅರಳಿಸಿ, ಹಾಗೇ ತಿಂಗ ತಿಂಗಳಿಗೂ ಫಸಲು ಕೊಡುವ ಈ ಮರದಲ್ಲಿ ಎಳನೀರು ಹೆಚ್ಚು ಕಡಿಮೆ ಇದ್ದೆ ಇರುತ್ತವೆ. ಎಳನೀರು ಕಿತ್ತರೆ ಮರಕ್ಕೆ ತೊಂದರೆಯಾಗುತ್ತದೆ ಎಂಬುದು ಕೆಲವು ಜನರ ನಂಬಿಕೆ, ಎಳನೀರನ್ನೇ ಕಿತ್ತು ಮಾರುವ ಕಾಸರಗೋಡಿನ ಡಾ ಚೌಟವರು ತಮ್ಮ ತೋಟದ ತೆಂಗಿನ ಮರಗಳು ಇನ್ನೂ ಹೆಚ್ಚು ಫಸಲು ಬಿಡುತ್ತವೆ ಎನ್ನುತ್ತಾರೆ. ನಮ್ಮ ಸುತ್ತಲ್ಲೂ ಕೆಲವರು ಎಳನೀರನ್ನೇ ಮಾರುವವರ ಅನುಭವವವೂ ಇದೇ ಆಗಿದೆ.

ಈಗ ನಮ್ಮ ಮೂರು ಎಳನೀರಿನ ಮರಗಳ ವಿಚಾರ. ನಾವು ಬಿಳಿಗೆರೆಯಲ್ಲಿ ಎರಡು ದಿನಗಳ ಎಳನೀರಿನ ಮೇಳವೊಂದನ್ನು ಮಾಡಿದ್ದೆವು. ಎಳನೀರಿನ ಹೆಚ್ಚುಗಾರಿಕೆ, ಮಾರುಕಟ್ಟೆ, ಮಾರಾಟ ಇತ್ಯಾದಿ ವಿಚಾರಗಳನ್ನು ತಿಳಿಸುವುದು, ಎಲ್ಲದಕ್ಕೂ ಮುಖ್ಯವಾಗಿ ಎಳನೀರು ಕುಡಿಯುವ ರೂಢಿ ಹುಟ್ಟು ಹಾಕುವುದು ಇದರ ಆಶಯವಾಗಿತ್ತು. ಈ ಸಂದರ್ಭದಲ್ಲಿ ಶ್ರಿಪಡ್ರೆ, ಚೌಟ, ಅಡಕೆ ಪತ್ರಿಕೆ ಕಾರಂತ, ಜಿ ಎನ್‌ ಎಸ್‌ ರೆಡ್ಡಿ, ಡಾ ನಂಜಪ್ಪ, ಶಿವನಂಜಯ್ಯ ಮುಂತಾದವರೆಲ್ಲ ಬಿಳಿಗೆರೆಗೆ ಬಂದಿದ್ದರು. ತಮ್ಮ ಅನೇಕ ಕೃಷಿ ಅನುಭವಗಳನ್ನು ಹಂಚಿಕೊಂಡಿದ್ದರು. ಎಳನೀರು ಕೇಂದ್ರ ಸ್ಥಾನಕ್ಕೆ ಬಂದು ಚರ್ಚೆಗೆ ಗ್ರಾಸವಾಗಿತ್ತು.

ಎಳನೀರು, ತೆಂಗು ಬೆಳೆಯುವುದರ ಜೊತೆ ಅವುಗಳನ್ನು ಉಪಯೋಗಿಸುವುದನ್ನು ಹೆಚ್ಚು ಮಾಡುವದಕ್ಕೆ ಹಲವು ಸಲಹೆಗಳು ಬಂದವು. ಎಳನೀರು, ಕಡುಬುಗಾಯಿ, ತೆಂಗಿನ ಕಾಯಿ, ತೆಂಗಿನ ಹಾಲು, ಕೊಬ್ಬರಿ, ಕಾಯಿ ಎಣ್ಣೆ, ಕೊಬ್ಬರಿ ಎಣ್ಣೆಗಳನ್ನು ಬಳಸಲು ಸಲಹೆಗಳು ಬಂದವು. ತೆಂತಾ ಮತ್ತು ಕೊಬ್ಬರಿ ಎಣ್ಣೆ ಗಾಣಗಳನ್ನು ಹೋಬಳಿಗೊಂದರಂತೆ ಆರಂಭಿಸುವುದು, ಎಳನೀರು, ನೀರಾ ಘಟಕಗಳನ್ನು ತೆರೆಯುವುದೂ ಸೇರಿದಂತೆ ಇನ್ನಿತರ ವಿಚಾರಗಳು ಮೇಳದ ರುಚಿ ಹೆಚ್ಚಿಸಿದ್ದನ್ನು ನೆನಪಿಸಿಕೊಳ್ಳಲೇಬೇಕು.

ಈ ಮೇಳದಿಂದ ಆಕರ್ಷಿತರಾಗಿ ಕರ್ನಾಟಕದ ಬಹುಭಾಗದಿಂದ ಎರಡು ಸಾವಿರ ಜನ ಆಸಕ್ತರು ಸೇರಿಕೊಂಡಿದ್ದರು, ಆರು ಸಾವಿರಕ್ಕೂ ಹೆಚ್ಚು ಎಳನೀರನ್ನು ಕೊಚ್ಚಿ ಕುಡಿಸಿದೆವು. ಸಾಂಕೇತಿಕ ಐದು ರೂಪಾಯಿ ನಿಗದಿ ಮಾಡಿದ್ದೆವು. ಬಿಡುತ್ತಾರೆಯೇ, ನಮ್ಮೂರಿನ ಜನರು ಬಲು ಉತ್ಸಾಹದಿಂದ ತಾವೇ ಅರ್ಧಕ್ಕೂ ಹೆಚ್ಚು ಎಳನೀರುನ್ನು ಕುಡಿದು ಪ್ರೋತ್ಸಾಹಿಸಿದರು. ಅಂದರೆ ಕೈಗೆ ಸಿಕ್ಕಿದರೆ ಎಲ್ಲರೂ ಎಳನೀರು ಕುಡಿಯುತ್ತಾರೆ ಎಂಬುದು ಆಗ ನಮಗೆ ತಿಳಿಯಿತು. ಆದರೆ ಯಾರು ತಾನೆ ತಿಂಗಳಿಗೊಂದು ಎಳನೀರು ಮೇಳ ಮಾಡಿ ನಾವು ಒಮ್ಮೆ ಮಾತ್ರ ಕೊಟ್ಟಂತೆ, ಐದು ರೂಪಾಯಿಗೆ ಒಂದು ಎಳನೀರನ್ನು ನಿಂಬೆರಸ, ಮೆಣಸು, ಉಪ್ಪು, ಜೇನು ಬೆರಸಿ ಕೊಡುತ್ತಾರೆ ಹೇಳಿ?

ನನ್ನ ಹುಡುಕಾಟವಿದ್ದದ್ದು ಜನ ಯಾವ ಕಾರಣಗಳಿಗೆ ತಮ್ಮ ತೋಟದಲ್ಲಿ ಎಳನೀರು ಕುಡಿಯುವುದಿಲ್ಲ ಎಂಬುದರ ಬಗೆಗೆ. ಒಂದು, ಎಳನೀರು ಕುಡಿಯುವುದು ನಮ್ಮಲ್ಲಿ ಆಹಾರ ಸಂಸ್ಕ್ರತಿಯ ಭಾಗವಾಗದಿರುವುದು, ಎರಡು ಎಳನೀರಿನ ಹೆಚ್ಚುಗಾರಿಕೆಯ ಅರಿವಿನ ಕೊರತೆ, ಕೊಬ್ಬರಿಯ ಆರ್ಥಿಕತೆ, ತೆಂಗಿನ ಮರಗಳು ಎಳನೀರನ್ನು ಬುಡದಲ್ಲಿ ಬಿಡದಿರುವುದು ಇತ್ಯಾದಿ ಕಾರಣಗಳನ್ನು ಪಟ್ಟಿ ಮಾಡಬಹುದು.

ಈಗ ಇರುವ ಪ್ರಶ್ನೆ ಎಳನೀರನ್ನು ಹತ್ತಿರ ಕರೆಯುವುದು, ಆರೋಗ್ಯದಾಯಿ ಎಳನೀರನ್ನು ಕುಡಿಯುವುದು ಹೇಗೆ, ಹಿತ್ತಲ ಗಿಡವನ್ನು ಮದ್ದಾಗಿ ಬಳಸುವುದಕ್ಕಿರುವ ಉಪಾಯವೇನು ಎಂಬುದು.

ನಮ್ಮ ತೋಟದಲ್ಲಿ ಎರಡು ಮೂರು ಚಿಕ್ಕ ಮರಗಳನ್ನು ಎಳನೀರಿನ ಮರಗಳೆಂದು ಘೋಷಿಸಬೇಕು. ಎಳನೀರು ಮರಗಳು ಮತ್ತು ನಮ್ಮ ನಡುವೆ ಒಂದು ಸೇತುವೆ ನಿರ್ಮಾಣ ಮಾಡಿಕೊಳ್ಳಬೇಕು, ಮರ ಹತ್ತಿ ಎಳನೀರು ಕೀಳುವ ದಾತರು ಈಗ ಇಲ್ಲ, ಬಿದಿರಿನ ಜವಣಿಗೆ (ರೋಟಿ ಕಡ್ಡಿ,ಗಳ) ನಮ್ಮ ಸಹಾಯಕ್ಕೆ ಬರುತ್ತದೆ. ಅದರ ತುದಿಗೆ ಕೊನೆಕತ್ತಿ ಕುಡ್ಲನ್ನು ಕಟ್ಟಿದರೆ, ನಮ್ಮ ಮತ್ತು ಎಳನೀರಿನ ನಡುವೆ ಸೇತುವೆ ಸಿದ್ದ. ಎಳನೀರು ನೆಟಕುತ್ತವೆ, ಆಗ ಎಳನೀರಿನ ದ್ರಾಕ್ಷಿ ಹುಳಿಯಾಗದೆ ಸಿಹಿಯಾಗಿ ಪರಿಣಮಿಸುತ್ತವೆ.

ನಿಜ ಆ ಜವಣಿಗೆಯನ್ನು ಮಳೆ ಬಿಸಿಲಿನಿಂದ ಕಾಪಾಡುವುದು, ಯಾರೋ ಹೊತ್ತೊಯ್ಯುವುದು, ಗೆದ್ದಲು ಹಿಡಿಯದಂತೆ ರಕ್ಷಿಸುವುದು ಎಲ್ಲ ಕಷ್ಟವೇ, ಏನು ಮಾಡುವುದು ಬೇರೆ ದಾರಿ ಇಲ್ಲ. ಸಂತೆಶಿವರ ಬಸವರಾಜು ಜವಣಿಗೆಯನ್ನು ರಕ್ಷಿಸಿಡಲು ಒಂದು ಉಪಾಯ ಕಂಡುಕೊಂಡಿದ್ದಾರೆ. ಪಿವಿಸಿ ಪೈಪ್‌ ನ್ನು ನೆಲಕ್ಕೆ ಹೂಳಿ ಅದರೊಳಕ್ಕೆ ಸದರಿ ಜವನಿಗೆಯನ್ನು ಸರಿದು ಇರಿಸುವುದು, ಎರಡೂ ಕಡೆ ಎಂಡ್‌ ಕ್ಯಾಪ್‌ ಹಾಕಿ ಭದ್ರಪಡಿಸಿದರೆ ಒಣಗುವ, ನೆನೆಯುವ, ಗೆದ್ದಲು ಹಿಡಿಯುವ ಅಪಾಯ ಇರುವುದಿಲ್ಲ. ಎಳನೀರು ಮೇಳ ಯಾರಿಗೆ ಎಷ್ಟು ಉಪಯುಕ್ತವಾಯಿತೋ ಗೊತ್ತಿಲ್ಲ. ನನಗೆ ಈ ದಾರಿ ಹಿಡಿಯಲು ಅನುವಾಯಿತು.

ಈ ಎಳನೀರಿನ ದಾರಿ ನನಗೆ ಎಷ್ಟು ಅನುಕೂಲ ಮಾಡಿತೆಂದರೆ ಎಳನೀರು  ಆ ಮೂರು ಮರಗಳಲ್ಲಿ ಯಾವಾಗಲೂ ಎಳನೀರು ಕೈಗೆಟುಕುವಂತಾಯಿತು. ಮನೆ ಜನರು ಎಳನೀರಿನ ಸುಖವನ್ನು ಅನುಭವಿಸತೊಡಗಿದರು. ಮನೆಗೆ ಬಂದವರಿಗೂ ಎಳನೀರು ಸೇವೆ ಆರಂಭವಾಯಿತು. ತೋಟಕ್ಕೆ ಬರುವ ಗೆಳೆಯರಿಗೆ ಅಮ್ಗಳ ಎಳನೀರು ಕುಡಿಸುವುದು ಸಾಧ್ಯವಾಯಿತು. ಸ್ವಲ್ಪ ಬಲಿತ ಎಳನೀರನ್ನು ಅಂದರೆ ಕಡುಬುಗಾಯನ್ನು ಬಳಸಿ ರುಚಿಕರ ನೀರ್ ದೋಸೆ ಮಾಡಲು‌ ಶುರುಮಾಡಿದೆವು. ಎಳನೀರಿನ ಜೊತೆ ಪಾನೀಯ ಸೇವನೆಯು ನಡೆಯುತ್ತಿದೆ.

ಆ ಮೂರು ಮರಗಳಲ್ಲಿ ಯತೇಚ್ಚವಾಗಿ ಎಳನೀರು ಕುಡಿಯ ತೊಡಗಿದ ಮೇಲೆ ಫಸಲು ಮೂರುಪಟ್ಟು ಹೆಚ್ಚಿದೆ. ಎಷ್ಟು ಎಳನೀರು ಕಿತ್ತು ಕುಡಿದರೂ ಆ ಮರಗಳಲ್ಲಿನ ಎಳನೀರನ್ನು ಖಾಲಿ ಮಾಡಲು ಆಗುತ್ತಿಲ್ಲ. ಎಳನೀರು ಕಿತ್ತರೆ ಫಸಲು ಹೆಚ್ಚುತ್ತದೆ ಎಂಬ ಚೌಟವರ ಮಾತು ದೃಢಪಟ್ಟಿದೆ. ಈ ಮರಗಳಿಗೆ ನೆಲದಿಂದ ನೀರನ್ನು ತಮ್ಮ ಕಾಂಡದ ಜೀವದಿಂದ ಮೇಲಕ್ಕೆತ್ತಿ ಎಳನೀರು ಮಾಡುವುದೊಂದೇ ಕೆಲಸ. ಅದಕ್ಕೆ ಇರಬೇಕು ಇವು ಈನಾಡಿ ಎಳನೀರು ಬಿಡುವುದು. ಎಳನೀರು ಕೆಡವಿದಾಗ ಬಿದ್ದು ಒಡೆದುಹೋಗದಂತೆ ಕಾಪಾಡುತ್ತಿರುವ ಅದರಡಿಯ ಒಂದು ಅಡಿ ಎತ್ತರದ ಮಲ್ಚಿಂಗ್‌ (ತೆಂಗಿನ ಮರದ ಗರಿ, ಎಡೆಮಟ್ಟೆ, ಕುರಂಬಳೆ, ಸೀಬಿ, ಎಳನೀರಿನ ಬುಲ್ಡೆ ಇತ್ಯಾದಿಗಳಿಂದ ಆದ ಮುಚ್ಚಿಕೆ)ಗೆ ಶರಣು ಹೇಳಿ ಬರಹ ಮುಗಿಸುವೆ.

  • ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ -6: ತೆಂಗಿನ ಗರಿಗಳ ಲೀಲೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್‌ ಶಾ

0
ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಮರನ್ನೇ ಟಾರ್ಗೆಟ್‌ ಮಾಡಿಕೊಂಡು ದ್ವೇಷದ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರು ಹಿಂದೂ ಸಮುದಾಯದ ಜನರ ಓಲೈಕೆ ರಾಜಕೀಯ ಮಾಡುತ್ತಿರುವುದು ವ್ಯಾಪಕವಾಗಿದೆ. ಇದರ ಮುಂದುವರಿದ ಭಾಗವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು...