Homeಮುಖಪುಟಆಂತರಿಕ ಚುನಾವಣೆ ನಡೆಯದಿದ್ದರೆ, ಕಾಂಗ್ರೆಸ್ ಗೆ ಇನ್ನೂ 50 ವರ್ಷ ವಿರೋಧಪಕ್ಷದ ಸ್ಥಾನವೇ ಗತಿ!: ಗುಲಾಮ್...

ಆಂತರಿಕ ಚುನಾವಣೆ ನಡೆಯದಿದ್ದರೆ, ಕಾಂಗ್ರೆಸ್ ಗೆ ಇನ್ನೂ 50 ವರ್ಷ ವಿರೋಧಪಕ್ಷದ ಸ್ಥಾನವೇ ಗತಿ!: ಗುಲಾಮ್ ನಬೀ

"ತನಗೆ ಯಾವುದೇ ವೈಯಕ್ತಿಕ ಮಹತ್ವಾಕಾಂಕ್ಷೆಗಳಿಲ್ಲ ಆದರೂ ಪಕ್ಷಕ್ಕೆ ನಿಷ್ಠನಾಗಿರುತ್ತೇನೆ ಎಂದು ಒತ್ತಿ ಹೇಳಿದ ಅವರು, “ನಾನು ಒಮ್ಮೆ ಸಿಎಂ, ಕೇಂದ್ರ ಕ್ಯಾಬಿನೆಟ್ ಮಂತ್ರಿ, ಸಿಡಬ್ಲ್ಯೂಸಿ ಸದಸ್ಯ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದೆ. ಹಾಗಾಗಿ ನನಗೆ ಏನೂ ಬೇಡ.

- Advertisement -
- Advertisement -

ಪಕ್ಷದಲ್ಲಿ ಆಂತರಿಕ ಚುನಾವಣೆ ನಡೆಯದಿದ್ದರೆ, ಕಾಂಗ್ರೆಸ್ ಇನ್ನೂ 50 ವರ್ಷಗಳ ಕಾಲ ವಿರೋಧ ಪಕ್ಷದ ಸ್ಥಾನದಲ್ಲೇ ಇರಬೇಕಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬೀ ಆಜಾದ್ ಹೇಳಿದ್ದಾರೆ. ನೇರವಾಗಿ ನೇಮಕಗೊಳ್ಳುವ ಕಾಂಗ್ರೆಸ್ ಅಧ್ಯಕ್ಷರಿಗೆ ಪಕ್ಷದಲ್ಲಿ ಶೇ.1ರಷ್ಟು ಬೆಂಬಲವೂ ಇಲ್ಲದಿರಬಹುದು ಎಂದು ನಿನ್ನೆ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದರು. ಈ ಹೇಳಿಕೆಯ ಕುರಿತು ರಾಜ್ಯ ಕಾಂಗ್ರೆಸ್‌ನ ವಕ್ತಾರರುಗಳು ಮತ್ತು ರಾಜಕೀಯ ವಿಶ್ಲೇಷಕರನ್ನು ನಾನುಗೌರಿ.ಕಾಂ ಮಾತಾಡಿಸಿತು. ಆಶ್ಚರ್ಯಕರವೆಂಬಂತೆ ರಾಜ್ಯ ಕಾಂಗ್ರೆಸ್‌ನ ಪ್ರಮುಖ ವಕ್ತಾರರೊಬ್ಬರು ಗುಲಾಂ ನಬಿ ಅವರ ಹೇಳಿಕೆಯನ್ನು ಸ್ವಾಗತಿಸಿದರು. ಈ ಕುರಿತ ಪ್ರತಿಕ್ರಿಯೆಗಳಿಗೆ ಹೋಗುವ ಮುನ್ನ ಮಾಧ್ಯಮ ಸಂಸ್ಥೆಗಳು  ವರದಿ ಮಾಡಿರುವ ಗುಲಾಂ ನಬಿ ಅವರ ಹೇಳಿಕೆಯ ಪೂರ್ಣಪಾಠವನ್ನು ನೋಡೋಣ.

‘ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಮತ್ತು ರಾಜ್ಯದ ಪ್ರಮುಖ ಸಾಂಸ್ಥಿಕ ಹುದ್ದೆಗಳಿಗೆ ಚುನಾವಣೆಗೆ ಮುಂದಾದರೆ, ಕೆಲವರಿಗೆ ತಮ್ಮ ಸ್ಥಾನಗಳನ್ನು ಕಳೆದುಕೊಳ್ಳುವ ಭಯವಿದೆ’ ಎಂದು ಹೇಳಿದರು.

“ಚುನಾವಣೆಯ ಮೂಲಕ ಆಯ್ಕೆಯಾದವರು ಪಕ್ಷವನ್ನು ಮುನ್ನಡೆಸಿದರೆ ಪಕ್ಷದ ಭವಿಷ್ಯವು ಉತ್ತಮವಾಗಿರುತ್ತದೆ. ಇಲ್ಲದಿದ್ದರೆ ಮುಂದಿನ 50 ವರ್ಷಗಳ ಕಾಲ ಕಾಂಗ್ರೆಸ್ ಪ್ರತಿಪಕ್ಷದ ಸ್ಥಾನದಲ್ಲಿಯೇ ಕುಳಿತುಕೊಳ್ಳುವುದನ್ನು ಮುಂದುವರಿಸಬೇಕಾಗುತ್ತದೆ” ಎಂದು ಹೇಳಿದರು.

‘ನೀವು ಚುನಾವಣೆಗೆ ಸ್ಪರ್ಧಿಸಿದಾಗ, ನಿಮ್ಮ ಪರವಾದ ಮತಗಳು ಶೇಕಡಾ 51ರಷ್ಟು ಇರಬೇಕಾಗುತ್ತದೆ. ಶೇಕಡಾ 51ರಷ್ಟು ಮತಗಳನ್ನು ಪಡೆಯುವ ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತದೆ. ಚುನಾವಣೆ ಗೆದ್ದಮೇಲೆ ಪಕ್ಷದ ಉಸ್ತುವಾರಿ ವಹಿಸುವ ವ್ಯಕ್ತಿಯೊಂದಿಗೆ ಶೇಕಡಾ 51ರಷ್ಟು ಜನ ಇದ್ದಾರೆ ಎಂದು ಭಾವಿಸಬಹುದು. ಆದರೆ ಇದೀಗ, ನೇಮಕಾತಿಯ ಮೂಲಕ ಪಕ್ಷದ ಅಧ್ಯಕ್ಷರಾಗುವ ವ್ಯಕ್ತಿಗೆ ಶೇಕಡಾ 1 ರಷ್ಟೂ ಬೆಂಬಲವೂ ಇಲ್ಲದೇ ಹೋಗಬಹುದು! ಎಂದು ಗುಲಾಮ್ ನಬೀ ಎಎನ್‌ಐಗೆ ತಿಳಿಸಿದರು ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.

“ಎರಡನೇ, ಮೂರನೇ ಅಥವಾ ನಾಲ್ಕನೇ ಹಂತದಲ್ಲಿರುವ ಇತರರು ‘ನಾವು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇವೆ, ಪಕ್ಷವನ್ನು ಬಲಪಡಿಸಬೇಕು ಮತ್ತು ಮುಂದಿನ ಬಾರಿ ಗೆಲ್ಲುತ್ತೇವೆ’ ಎಂದು ಭಾವಿಸಿರುತ್ತಾರೆ. ಆದರೆ, ಈಗ ನೇರವಾಗಿ ಚುನಾಯಿತರಾಗಿರುವ ಅಧ್ಯಕ್ಷರಿಗೆ ಪಕ್ಷದ ಕಾರ್ಯಕರ್ತರಲ್ಲಿ ಶೇಕಡಾ 1 ರಷ್ಟು ಬೆಂಬಲವೂ ಇಲ್ಲದಿರಬಹುದು. ಹಾಗಾಗಿ ಚುನಾವಣೆಗಳು ಪಕ್ಷದ ಅಡಿಪಾಯವನ್ನು ಬಲಪಡಿಸುತ್ತವೆ” ಎಂದು ಮತ್ತೊಮ್ಮೆ ಹೇಳಿದರು.

ಚುನಾವಣೆ ನಡೆಸದೇ ಅಧ್ಯಕ್ಷರು ಅಥವಾ ಇತರರನ್ನು ಆಯ್ಕೆ ಮಾಡಿದರೆ ಭವಿಷ್ಯದಲ್ಲಾಗುವ ತೊಂದರೆಗಳನ್ನು ವಿವರಿಸಿದರು. ʼಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಯಾರನ್ನಾದರೂ ಪಕ್ಷದ ಅಧ್ಯಕ್ಷರಾಗಿ ನೇಮಕ ಮಾಡುತ್ತದೆ. ಅವರಿಗೆ ಪಕ್ಷದ ಉನ್ನತ ನಾಯಕರು ಶಿಫಾರಸು ಮಾಡುತ್ತಾರೆʼ ಎಂದು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ; ’ಭಿನ್ನಮತೀಯ’ ಪತ್ರದ ಬಗ್ಗೆ ಭಾರಿ ಚರ್ಚೆ

ಸೋನಿಯಾ ಗಾಂಧಿಯವರಿಗೆ ಬರೆಯಲಾಗಿದ್ದ, ಭಿನ್ನಮತೀಯ ಪತ್ರಕ್ಕೆ ಸಹಿ ಹಾಕಿದವರಲ್ಲಿ ಪ್ರಮುಖರಾದ ಆಜಾದ್, ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯುಸಿ) ಉನ್ನತ ಸಭೆ ನಡೆದ ನಾಲ್ಕು ದಿನಗಳ ನಂತರ ಈ ಹೇಳಿಕೆಯನ್ನು ನೀಡಿದ್ದಾರೆ.

“ನೇರವಾಗಿ ನೇಮಕಗೊಳ್ಳುವ ವ್ಯಕ್ತಿಗಳಿಗೆ ಶೇಕಡಾ 1 ಅಥವಾ 100 ರಷ್ಟು ಬೆಂಬಲವಿದೆಯೇ ಎಂಬುದು ನಮಗೆ ತಿಳಿದಿಲ್ಲ. ಶೇಕಡಾ 1 ರಷ್ಟೂ ಬೆಂಬಲವನ್ನು ಹೊಂದಿರದ ಅನೇಕರು ಇದ್ದಾರೆ. ನೇರವಾಗಿ ನೇಮಕಗೊಂಡ ವ್ಯಕ್ತಿಯನ್ನು ತೆಗೆದುಹಾಕಬಹುದು, ಆದರೆ ಚುನಾಯಿತ ವ್ಯಕ್ತಿಯನ್ನು ತೆಗೆದುಹಾಕಲಾಗುವುದಿಲ್ಲ” ಎಂದರು.

ಚುನಾವಣೆಯನ್ನು ವಿರೋಧಿಸುವವರನ್ನು ತೀವ್ರವಾಗಿ ಟೀಕಿಸಿ, ನಿಷ್ಠಾವಂತರು ಎಂದು ಹೇಳಿಕೊಳ್ಳುತ್ತಿರುವ ಜನರು ನಿಜವಾಗಿ ಅಗ್ಗದ ರಾಜಕೀಯ ಮಾಡುತ್ತಿದ್ದಾರೆ. ಪಕ್ಷದ ಹಿತಾಸಕ್ತಿಗೆ ಮತ್ತು ರಾಷ್ಟ್ರಕ್ಕೆ ಹಾನಿಕರವಾಗಿದ್ದಾರೆ’ ಎಂದು ಗುಲಾಮ್ ನಬೀ ಆಜಾದ್ ಆಕ್ರೋಷ ವ್ಯಕ್ತಪಡಿಸಿದರು.

“ನಾವು ನೀಡಿದ ಹೇಳಿಕೆ ಅಥವಾ ನಮ್ಮ ಅಭಿಪ್ರಾಯದ ಮೇಲೆ ದಾಳಿ ನಡೆಸುತ್ತಿರುವ ಪದಾಧಿಕಾರಿಗಳು, ರಾಜ್ಯ ಘಟಕದ ಅಧ್ಯಕ್ಷರು, ಜಿಲ್ಲಾ ಅಧ್ಯಕ್ಷರು ಮುಂತಾದವರು ಚುನಾವಣೆಯ ಸಂದರ್ಭದಲ್ಲಿ ಎಲ್ಲಿಯೂ ಕಾಣಸಿಗುವುದಿಲ್ಲ. ಕಾಂಗ್ರೆಸ್ ನಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡವರು ನಮ್ಮ ಪತ್ರವನ್ನು ಖಂಡಿತಾ ಸ್ವಾಗತಿಸುತ್ತಾರೆ. ಪಕ್ಷದ ರಾಜ್ಯ, ಜಿಲ್ಲೆ ಮತ್ತು ಬ್ಲಾಕ್ ಅಧ್ಯಕ್ಷರನ್ನು ಪಕ್ಷದ ಕಾರ್ಯಕರ್ತರು ಆಯ್ಕೆ ಮಾಡಬೇಕು ಎಂದು ನಾನು ಹೇಳಿದ್ದೇನೆ. ಇದರಲ್ಲಿ ತಪ್ಪೇನಿದೆ” ಎಂದು ಅವರು ಹೇಳಿದರು.

“ಕಳೆದ ಹಲವು ದಶಕಗಳಿಂದ ಪಕ್ಷದಲ್ಲಿ ಚುನಾವಣೆ ನಡೆಸದಿರುವುದಕ್ಕೆ ವಿಷಾದಿಸುತ್ತಾ, ಕಳೆದ ಹಲವು ದಶಕಗಳಿಂದ ನಾವು ಪಕ್ಷದಲ್ಲಿ ಚುನಾಯಿತರನ್ನು ಹೊಂದಿಲ್ಲ. ಬಹುಶಃ ನಾವು 10-15 ವರ್ಷಗಳ ಹಿಂದೆಯೇ ಇದಕ್ಕೆ ಮುಂದಾಗಿರಬೇಕಿತ್ತು. ಈಗ ನಾವು ಒಂದು ಚುನಾವಣೆಯ ನಂತರ ಮತ್ತೊಂದು ಚುನಾವಣೆಯಲ್ಲೂ ಸೋತಿದ್ದೇವೆ. ಹಾಗಾಗಿ ನಾವು ಮತ್ತೆ ಪಕ್ಷವನ್ನು ಬಲಪಡಿಸಬೇಕಾದರೆ ಚುನಾವಣೆಗಳನ್ನು ನಡೆಸುವ ಮೂಲಕ ಮಾತ್ರ ಸಾಧ್ಯ” ಎಂದು ಹೇಳಿದರು.

“ಮುಂದಿನ 50 ವರ್ಷಗಳವರೆಗೆ ನಮ್ಮ ಪಕ್ಷವು ವಿರೋಧ ಪಕ್ಷದಲ್ಲಿರಲು ಬಯಸಿದರೆ, ಪಕ್ಷದೊಳಗೆ ಚುನಾವಣೆಯ ಅಗತ್ಯವಿಲ್ಲ” ಎಂದು ಅವರು ಹೇಳಿದರು.

“ಕಾಂಗ್ರೆಸ್ ಅನ್ನು ಸಕ್ರಿಯ ಮತ್ತು ಬಲಶಾಲಿಯನ್ನಾಗಿ ಮಾಡುವುದು ಮಾತ್ರ ನನ್ನ ಉದ್ದೇಶ” ಎಂದು ಹೇಳುತ್ತಾ, “ಸರಳವಾಗಿ ‘ಅಪಾಯಿಂಟ್ಮೆಂಟ್ ಕಾರ್ಡ್’ ಪಡೆದವರು ನಮ್ಮ ಪ್ರಸ್ತಾಪವನ್ನು ವಿರೋಧಿಸುತ್ತಲೇ ಇದ್ದಾರೆ. ಪಕ್ಷದಲ್ಲಿ ನಿಗದಿತ ಅಧಿಕಾರಾವಧಿಯನ್ನು ಹೊಂದಿರುವ ಸಿಡಬ್ಲ್ಯೂಸಿ ಸದಸ್ಯರನ್ನು ಆಯ್ಕೆ ಮಾಡುವುದರಿಂದ ಏನು ಹಾನಿ” ಪ್ರಶ್ನಿಸಿದರು.

“ಕಾಂಗ್ರೆಸ್ ನ ಆಂತರಿಕ ಕ್ರಿಯಾತ್ಮಕತೆಯಲ್ಲಿ ನಿಜವಾದ ಆಸಕ್ತಿಯನ್ನು ಹೊಂದಿರುವ ಯಾರಾದರೂ, ಪ್ರತಿ ರಾಜ್ಯದ ಮತ್ತು ಜಿಲ್ಲೆಯ ಅದ್ಯಕ್ಷರು ಚುನಾಯಿತರಾಗಬೇಕು ಎಂಬ ನಮ್ಮ ಪ್ರಸ್ತಾಪವನ್ನು ಸ್ವಾಗತಿಸುತ್ತಾರೆ. ಇಡೀ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು ಮರು ಆಯ್ಕೆ ಮಾಡಬೇಕು” ಎಂದು ಆಜಾದ್ ಹೇಳಿದರು.

“ತನಗೆ ಯಾವುದೇ ವೈಯಕ್ತಿಕ ಮಹತ್ವಾಕಾಂಕ್ಷೆಗಳಿಲ್ಲ. ಆದರೂ ಪಕ್ಷಕ್ಕೆ ನಿಷ್ಠನಾಗಿರುತ್ತೇನೆ ಎಂದು ಒತ್ತಿ ಹೇಳಿದ ಅವರು, “ನಾನು ಒಮ್ಮೆ ಸಿಎಂ, ಕೇಂದ್ರ ಕ್ಯಾಬಿನೆಟ್ ಮಂತ್ರಿ, ಸಿಡಬ್ಲ್ಯೂಸಿ ಸದಸ್ಯ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದೆ. ಹಾಗಾಗಿ ನನಗೆ ಏನೂ ಬೇಡ. ಮುಂದಿನ 5 ರಿಂದ 7 ವರ್ಷಗಳವರೆಗೆ ನಾನು ಸಕ್ರಿಯ ರಾಜಕೀಯದಲ್ಲಿ ಉಳಿಯುತ್ತೇನೆ. ನಾನು ಪಕ್ಷದ ಅಧ್ಯಕ್ಷನಾಗಲು ಬಯಸುವುದಿಲ್ಲ. ನಿಜವಾದ ಕಾಂಗ್ರೆಸ್ಸಿಗನಾಗಿ, ಪಕ್ಷದ ಸುಧಾರಣೆಗಾಗಿ ಪಕ್ಷದೊಳಗೆ ಚುನಾವಣೆಗಳನ್ನು ನಾನು ಬಯಸುತ್ತೇನೆ” ಎಂದು ಹೇಳಿದರು.

ಆಗಸ್ಟ್ 24 ರಂದು, ಸಂಸದರು ಮತ್ತು ಮಾಜಿ ಮಂತ್ರಿಗಳು ಸೇರಿದಂತೆ 23 ಕಾಂಗ್ರೆಸ್ ಮುಖಂಡರು ಪಕ್ಷದ ಹಂಗಾಮಿ ಮುಖ್ಯಸ್ಥೆ ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ, ‘ವ್ಯಾಪಕ ಸುಧಾರಣೆ, ನ್ಯಾಯಯುತ ಆಂತರಿಕ ಚುನಾವಣೆ, ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಪೂರ್ಣಕಾಲಿಕ ನಾಯಕತ್ವ’ದ ಬಗ್ಗೆ ಬೇಡಿಕೆ ಇಟ್ಟಿದ್ದರು.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯುಸಿ) ಸಭೆಯಲ್ಲಿ ಪತ್ರ ಬರೆದಿರುವವರ ಮೇಲೆ ವಾಗ್ದಾಳಿ ಮಾಡಲಾಯಿತು. ಈ ಸಭೆಯಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಹಾಜರಿದ್ದರು. ಪತ್ರ ಬರೆದಿರುವವರನ್ನು ಖಂಡಿಸಿದ್ದನ್ನು ಬಿಟ್ಟರೆ, ಪತ್ರದಲ್ಲಿನ ವಿಷಯಗಳ ಚರ್ಚೆ ಮುನ್ನೆಲೆಗೆ ಬರಲೇ ಇಲ್ಲ. ಭಿನ್ನಮತೀಯ ಪತ್ರಕ್ಕೆ ದೇಶದಾದ್ಯಂತ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ.

ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧಿವೇಶನ ನಡೆಯುವವರೆಗೂ ಸೋನಿಯಾ ಗಾಂಧಿ ಮಧ್ಯಂತರ ಮುಖ್ಯಸ್ಥರಾಗಿ ಉಳಿಯುತ್ತಾರೆ ಎಂದು ಘೋಷಿಸುವುದರೊಂದಿಗೆ ಅಂದಿನ ಸಭೆ ಕೊನೆಗೊಂಡಿತ್ತು.

ಈ ಕುರಿತು, ಕೆಪಿಸಿಸಿ ವಕ್ತಾರರಾದ ನಟರಾಜ್ ಗೌಡ ನಾನುಗೌರಿ.ಕಾಂ ಗೆ ಪ್ರತಿಕ್ರಿಯಿಸಿ, “ಪಕ್ಷದೊಳಗೆ ಆಂತರಿಕ ಚುನಾವಣೆ ನಡೆಯಬೇಕು ಎನ್ನುವುದು ಕಾಂಗ್ರೆಸ್ ಪಕ್ಷದ ಬೈಲಾದಲ್ಲಿಯೇ ಇದೆ. ಹಾಗಾಗಿ ಇದುವರೆಗೂ ಕೂಡ ಹಾಗೆಯೇ ಆಯ್ಕೆ ಪ್ರಕ್ರಿಯೆ ನಡೆದುಕೊಂಡು ಬಂದಿದೆ. ಬೂತ್, ಬ್ಲಾಕ್ ಮಟ್ಟದಿಂದ ಹಿಡಿದು ಪಕ್ಷದ ಅಧ್ಯಕ್ಷ ಸ್ಥಾನದವರೆಗೂ ಎಲ್ಲರೂ ಚುನಾವಣೆಯ ಮೂಲಕವೇ ಆಯ್ಕೆಯಾಗಬೇಕು. ಆಗ ಸ್ಥಳೀಯ ಮಟ್ಟದಲ್ಲಿ ಅಲ್ಲಿನ ಕಾರ್ಯಕರ್ತರ ಭಾಗವಹಿಸುವಿಕೆಯೊಂದಿಗೆ, ಪಕ್ಷವು ತನ್ನದು ಎನ್ನುವ ಭಾವನೆ ಪ್ರತಿಯೊಬ್ಬರಲ್ಲೂ ಬೆಳೆಯುತ್ತದೆ. ಹಾಗಾಗಿ ಇದು ಪಕ್ಷಕ್ಕೆ ಒಳ್ಳೆಯದು. ಹಾಗಾಗಿ ಗುಲಾಮ್ ನಬೀ ಅವರ ಹೇಳಿಕೆಯಲ್ಲಿ ತಪ್ಪಿಲ್ಲ” ಎಂದು ಹೇಳಿದರು.

ರಾಜಕೀಯ ವಿಶ್ಲೇಷಕರಾದ ಎ.ನಾರಾಯಣ ನಾನುಗೌರಿ.ಕಾಂ ಗೆ ಪ್ರತಿಕ್ರಿಯಿಸಿ, “ಮೊದಲನೆಯದಾಗಿ, ಪ್ರತಿಯೊಂದು ಪಕ್ಷದಲ್ಲಿಯೂ ಆಂತರಿಕ ಪ್ರಜಾಪ್ರಭುತ್ವ ಮುಖ್ಯ. ಆದರೆ ಇಂದು ನಮ್ಮ ದೇಶದ ಯಾವುದೇ ಪಕ್ಷದಲ್ಲಿಯೂ ಆಂತರಿಕ ಪ್ರಜಾಪ್ರಭುತ್ವ ಇಲ್ಲ (ಕೆಲವು ಪಕ್ಷಗಳನ್ನು ಹೊರತುಪಡಿಸಿ). ಎರಡನೆಯದಾಗಿ, ಕಾಂಗ್ರೆಸ್ ನ ಈಗಿನ ದುಸ್ಥಿತಿಗೆ ಆಂತರಿಕ ಚುನಾವಣೆ ನಡೆಯದಿರುವುದೇ ಕಾರಣವಲ್ಲ. ಅಥವಾ ಆಂತರಿಕ ಚುನಾವಣೆ ನಡೆದರೆ ಕಾಂಗ್ರೆಸ್ ನಲ್ಲಿರುವ ಈಗಿನ ಎಲ್ಲಾ ಸಮಸ್ಯೆಗಳೂ ಸರಿಹೋಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಇನ್ನೊಂದು ಪ್ರಮುಖ ಅಂಶ, ಈ ಭಿನ್ನಮತೀಯರಿಗೆ ಆಂತರಿಕ ಚುನಾವಣೆ ನಡೆಯದಿರುವುದು ಸಮಸ್ಯೆಯೋ ಅಥವಾ ಗಾಂಧಿ ಕುಟುಂಬದ ನಾಯಕತ್ವದಲ್ಲಿ ಸಮಸ್ಯೆಯೋ ಎಂಬುದು ಗೊತ್ತಿಲ್ಲ. ಆಂತರಿಕ ಚುನಾವಣೆ ನಡೆದರೆ ಮತ್ತೆ ಗಾಂಧಿ ಕುಟುಂಬದವರೇ ಆಯ್ಕೆಯಾದರೆ ಇವರು ಒಪ್ಪುತ್ತಾರೆಯೇ? ಹಾಗಾಗಿ ಈಗಿನ ದುಸ್ಥಿತಿಗೆ ಇದೇ ಕಾರಣ ಎಂದು ದೂಷಿಸುವುದು ಸರಿಯಲ್ಲ. ಅದಾಗ್ಯೂ ಆಂತರಿಕ ಪ್ರಜಾಪ್ರಭುತ್ವ ಮತ್ತು ಚುನಾವಣೆಗಳು ಅತ್ಯಂತ ಮಹತ್ವದ್ದು” ಎಂದು ಹೇಳಿದರು.

ಕಾಂಗ್ರೆಸ್ ನ ಮುಖಂಡರಾದ ಕವಿತಾ ರೆಡ್ಡಿ ಪ್ರತಿಕ್ರಿಯಿಸಿ, “ಪಕ್ಷದೊಳಗೆ ಆಂತರಿಕ ಚುನಾವಣೆಯನ್ನು ಇದುವರೆಗೂ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಸೇರಿದಂತೆ ಯಾರೂ ವಿರೋಧಿಸಿಲ್ಲ. ಹಾಗಾಗಿ ಇದು ಚುನಾವಣೆಯ ಸಮಸ್ಯೆಯೇ ಇಲ್ಲ. ಈಗ ಇವರಿಗೇನೋ ಸಮಸ್ಯೆ ಎಂದಾಕ್ಷಣ ಇದನ್ನೇ ಮುಂದಿಟ್ಟುಕೊಂಡು ಮಾತನಾಡುತ್ತಿದ್ದಾರೆ ಅಷ್ಟೆ. ಆದಾಗ್ಯೂ ಅಂದು ಯೂತ್ ಕಾಂಗ್ರೆಸ್ ಗೆ ಚುನಾವಣೆ ನಡೆಸಬೇಕು ಎಂದಾಗ, ಈಗ ಪತ್ರ ಬರೆದಿರುವ ಶಶಿ ತರೂರ್ ಅವರೇ ಅಂದು ವಿರೋಧಿಸಿದ್ದರು. ಈಗ ಇವರೇ ಆಂತರಿಕ ಚುನಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಈಗ ಪತ್ರ ಬರೆದು, ಹೇಳಿಕೆ ನೀಡುತ್ತಿರುವವರೇ ಅಂದು ಸೋನಿಯಾ ಗಾಂಧಿಯವರಿಗೆ ಆಹ್ವಾನ ನೀಡಿ, ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದು. ಆದರೆ ಸೋನಿಯಾ ಗಾಂಧಿ ಪಕ್ಷದ ಪ್ರಭಾವಿ ನಾಯಕಿಯಾಗಿದ್ದುಕೊಂಡು, ವಾಜಪೇಯಿ ಕಾಲದಲ್ಲಿಯೂ ಪಕ್ಷದ ವರ್ಚಸ್ಸನ್ನು ಹೆಚ್ಚಿಸುವುದಕ್ಕೆ ಪ್ರಯತ್ನ ಪಟ್ಟಿದ್ದರು. ಹೀಗೆ ದಶಕಗಳ ಕಾಲ ಪಕ್ಷವನ್ನು ಮುನ್ನಡೆಸಿದವರಿಗೆ ಈಗ ಗೌರವಯುತವಾದ ಬೀಳ್ಕೊಡುಗೆ ಕೊಡುವುದನ್ನು ಬಿಟ್ಟು ಪಕ್ಷದ ಅಧೋಗತಿಗೆ ಇವರೇ ಕಾರಣ ಎಂದು ಹೇಳುತ್ತಿರುವುದು ನಿಜಕ್ಕೂ ವಿಷಾದನೀಯ” ಎಂದು ಹೇಳಿದರು.

‘ಗಾಂಧಿ ಕುಟುಂಬದ ನಾಯಕತ್ವವನ್ನು ಪ್ರಶ್ನಿಸುವವರು ಅದಕ್ಕೆ ಪರ್ಯಾಯವನ್ನೂ ಸೂಚಿಸಬೇಕು. ಉತ್ತರದವರು ಅಧ್ಯಕ್ಷರಾದರೆ ದಕ್ಷಿಣದವರು ಒಪ್ಪುವುದಿಲ್ಲ. ದಕ್ಷಿಣದವರು ಅಧ್ಯಕ್ಷರಾದರೆ ಉತ್ತರದವರು ಒಪ್ಪುವುದಿಲ್ಲ. ಹಾಗಾಗಿಯೆ ಎಲ್ಲರನ್ನೂ ಬೆಸೆಯುವ ಶಕ್ತಿಯಾಗಿ ಗಾಂಧಿ ಕುಟುಂಬದ ಅಧ್ಯಕ್ಷತೆ ಪಕ್ಷಕ್ಕೆ ಬೇಕು. ಭಾವನಾತ್ಮಕವಾಗಿಯಾದರೂ ಪಕ್ಷದೊಟ್ಟಿಗೆ ಜನರು ನಿಲ್ಲುತ್ತಾರೆ. ಹಾಗಾಗಿಯೇ ಗಾಂಧಿ ಕುಟುಂಬದವರೇ ಅಧ್ಯಕ್ಷರಾಗಬೇಕೆಂಬುದು ಹಲವರ ಅಭಿಪ್ರಾಯವಾಗಿದೆ’ ಎಂದೂ ಹೇಳಿದರು.

‘ಕಾಂಗ್ರೆಸ್ ಪಕ್ಷದೊಳಗೆ ಪ್ರಜಾಪ್ರಭುತ್ವ ತರಲು ರಾಹುಲ್ ಗಾಂಧಿ ಶತಪ್ರಯತ್ನಪಡುತ್ತಿದ್ದಾರೆ. ಆದರೆ ಈಗ ಪತ್ರ ಬರೆದವರು ಅಂದು ರಾಹುಲ್ ಗಾಂಧಿಯವರನ್ನು ನೋಡಿ ನಗುತ್ತಿದ್ದರು. ಇವರಲ್ಲಿರುವ ಸಮಸ್ಯೆಯನ್ನು ಮರೆಮಾಚಲು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಮೇಲೆ ಅಪವಾದ ಹೊರಿಸುತ್ತಿದ್ದಾರೆ’ ಎಂದು ಹೇಳಿದರು.


ಇದನ್ನೂ ಓದಿ: ನೇರವಾಗಿ ನೇಮಕಗೊಳ್ಳುವ ಅಧ್ಯಕ್ಷರಿಗೆ 1% ಬೆಂಬಲವೂ ಇಲ್ಲದಿರಬಹುದು!: ಗುಲಾಮ್ ನಬೀ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...