ಜಮ್ಮು ಕಾಶ್ಮೀರದಲ್ಲಿ ಈ ವರ್ಷದಲ್ಲಿ ಭಯೋತ್ಪಾದಕ-ಸಂಬಂಧಿತ ಹಿಂಸಾಚಾರ ಎಂದು ಆರೋಪಿಸಲಾಗಿರುವ ಘಟನೆಗಳಲ್ಲಿ, 40 ನಾಗರಿಕರು ಮತ್ತು ಕನಿಷ್ಠ 35 ಸೇನಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಒಕ್ಕೂಟ ಸರ್ಕಾರ ಲೋಕಸಭೆಯಲ್ಲಿ ಹೇಳಿದೆ. ಮಂಗಳವಾರ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಈ ಅಂಕಿಅಂಶಗಳನ್ನು ಬಹಿರಂಗಪಡಿಸಿದ್ದಾರೆ.
ಅದೇ ಹಿಂಸಾಚಾರದಲ್ಲಿ ಕನಿಷ್ಠ 72 ನಾಗರಿಕರು ಗಾಯಗೊಂಡಿದ್ದು, ಸೇನೆ ಮತ್ತು ಭದ್ರತಾ ಸಿಬ್ಬಂದಿಗಳ ಗಾಯಗೊಂಡವರ ಸಂಖ್ಯೆ 86 ಕ್ಕೆ ಏರಿದೆ ಎಂದು ಸರ್ಕಾರ ಹೇಳಿದೆ. ಈ ಎಲ್ಲಾ ಅಂಕಿ ಅಂಶಗಳು ಈ ವರ್ಷ ನವೆಂಬರ್ 15 ರವರೆಗೆ ವರದಿಯಾದ ಸಾವುಗಳು ಮತ್ತು ಗಾಯಗೊಂಡವರದ್ದಾಗಿದೆ.
ಇದನ್ನೂ ಓದಿ:ಜಮ್ಮು ಕಾಶ್ಮೀರ: ಹೈದರ್ಪೋರಾ ಎನ್ಕೌಂಟರ್ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ
ಕಳೆದ ಮೂರು ವರ್ಷಗಳಲ್ಲಿ ಜಮ್ಮು ಕಾಶ್ಮೀರದಲ್ಲಿ 1,033 ಭಯೋತ್ಪಾದಕರ ದಾಳಿಯ ಘಟನೆಗಳು ನಡೆದಿವೆ ಎಂದು ಸರ್ಕಾರ ಸೋಮವಾರ ರಾಜ್ಯಸಭೆಗೆ ತಿಳಿಸಿದೆ. ರಕ್ಷಣಾ ಖಾತೆಯ ರಾಜ್ಯ ಸಚಿವ ಅಜಯ್ ಭಟ್ ಒದಗಿಸಿದ ವಿವರಗಳ ಪ್ರಕಾರ 2019 ರಲ್ಲಿ 594 ಘಟನೆಗಳು ವರದಿಯಾಗಿದ್ದು, ಇದು ಮೂರು ವರ್ಷಗಳಲ್ಲೆ ಅತಿ ಹೆಚ್ಚು ಘಟನೆಗಳು ನಡೆದ ವರ್ಷವಾಗಿದೆ.
ಈ ವರ್ಷ ನವೆಂಬರ್ 15 ರವರೆಗೆ 196 ಘಟನೆಗಳು ನಡೆದಿವೆ ಎಂದು ಅವರು ದೇಶಕ್ಕೆ ವಿವರಿಸಿದ್ದಾರೆ.
ಭಯೋತ್ಪಾದಕರಿಗೆ ನೆರವು ನೀಡುವವರನ್ನು ಹತ್ತಿಕ್ಕುವುದು, ರಾತ್ರಿ ಗಸ್ತು ತಿರುಗುವುದು, ಭದ್ರತಾ ಏಜೆನ್ಸಿಗಳ ನಡುವೆ ಉತ್ತಮ ಸಮನ್ವಯತೆ ಮತ್ತು ಭಯೋತ್ಪಾದಕರಿಗೆ ಧನಸಹಾಯ ಒದಗಿಸುವವರ ವಿರುದ್ಧ ಕಾನೂನುಬದ್ಧವಾಗಿ ನಡೆಯುವುದು ಸೇರಿದಂತೆ ಭಯೋತ್ಪಾದಕರನ್ನು ಎದುರಿಸುವಾಗ ಜಮ್ಮು ಕಾಶ್ಮೀರದಲ್ಲಿನ ಪ್ರಾಣಹಾನಿಯನ್ನು ಕಡಿಮೆ ಮಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಸಚಿವ ನಿತ್ಯಾನಂತ ರೈ ಸಂಸತ್ತಿಗೆ ಭರವಸೆ ನೀಡಿದ್ದಾರೆ.
ಇದನ್ನೂ ಓದಿ:‘ನನ್ನ ತಂದೆಯನ್ನು ಕೊಂದು, ನನ್ನನ್ನು ನೋಡಿ ನಗುತ್ತಿದ್ದರು’ – ಕಾಶ್ಮೀರಿ ಬಾಲಕಿ
ಇತ್ತೀಚಿನ ವರ್ಷಗಳಲ್ಲಿ ಭಯೋತ್ಪಾದಕ ದಾಳಿಗಳು ಕಡಿಮೆಯಾಗಿವೆ ಎಂದು ಸಚಿವ ಅಜಯ್ ಭಟ್ ರಾಜ್ಯಸಭೆಯಲ್ಲಿ ಹೇಳಿದ್ದು, ಮಿಲಿಟರಿ ಸಿಬ್ಬಂದಿಗಳ ಜೀವಹಾನಿ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.
“ಅಕ್ಟೋಬರ್ ತಿಂಗಳ ಬಹುಪಾಲು ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆಯು ಶಂಕಿತ ಎಲ್ಇಟಿ ಉಗ್ರರೊಂದಿಗೆ ಚಕಮಕಿಯಲ್ಲಿ ತೊಡಗಿದೆ. ನವೆಂಬರ್ 13 ರಂದು ಚುರಾಚಂದ್ಪುರ ಜಿಲ್ಲೆಯ ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ಅಸ್ಸಾಂ ರೈಫಲ್ಸ್ ಬೆಂಗಾವಲು ಪಡೆಯ ಮೇಲೆ ಶಂಕಿತ ಬಂಡುಕೋರರು ದಾಳಿ ಹಾಕಿದ್ದರು. ಈ ಘಟನೆಯಲ್ಲಿ ಅಸ್ಸಾಂ ರೈಫಲ್ಸ್ನ 5 ಸಿಬ್ಬಂದಿ ಮತ್ತು 2 ನಾಗರಿಕರು ಸೇರಿದಂತೆ ಏಳು ಜನರು ಪ್ರಾಣ ಕಳೆದುಕೊಂಡಿದ್ದಾರೆ, 6 ಅಸ್ಸಾಂ ರೈಫಲ್ಸ್ ಸಿಬ್ಬಂದಿ ಗಾಯಗೊಂಡಿದ್ದಾರೆ” ಎಂದು ಸಚಿವ ನಿತ್ಯಾನಂದ ರೈ ವರದಿ ಮಾಡಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕಸಿದುಕೊಂಡು ಎರಡು ವರ್ಷಗಳು ಕಳೆದಿವೆ. ಅಲ್ಲಿನ ಜನರ ಸಂಕಷ್ಟಕಗಳನ್ನು ಕಳೆದು ಒಳ್ಳೆಯ ದಿನಗಳು ಬರಲಿವೆ ಎಂದು ದೇಶದ ಜನರಿಗೆ ತಿಳಿಸಲಾಗಿತ್ತು. ಆದರೆ ಅಲ್ಲಿನ ಜನರಿಗೆ ಸುಮಾರು ಒಂದು ವರ್ಷಗಳ ಕಾಲ ಲಾಕ್ಡೌನ್ ಶಿಕ್ಷೆ ನೀಡಲಾಗಿತ್ತು. ಜೊತೆಗೆ ರಾಜಕೀಯ ನಾಯಕರನ್ನು ಗೃಹಬಂಧನ ಹಾಗೂ ಜೈಲಿಗೆ ಅಟ್ಟಲಾಗಿತ್ತು.
ಇದನ್ನೂ ಓದಿ:ಜಮ್ಮು ಕಾಶ್ಮೀರ: 2019 ರಿಂದ 2,300 ಕ್ಕೂ ಹೆಚ್ಚು ಜನರ ಮೇಲೆ UAPA ಅಡಿ ಪ್ರಕರಣ