67 ವರ್ಷಗಳಲ್ಲಿ 14 ಪ್ರಧಾನಿಗಳು ಅಧಿಕಾರ ನಡೆಸಿದರೂ ದೇಶದ ಸಾಲ 55 ಲಕ್ಷ ಕೋಟಿ ರೂ. ಆಗಿತ್ತು. ಆದರೆ ಕಳೆದ 9 ವರ್ಷಗಳ ಅವಧಿಯಲ್ಲಿ ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ ದೇಶದ ಸಾಲ 155 ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ ಎಂದು ಕಾಂಗ್ರೆಸ್ ಶನಿವಾರ ಹೇಳಿಕೊಂಡಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ ಅವರು, ಮೋದಿ ಅವಧಿಯಲ್ಲಾದ ಸಾಲದ ಕುರಿತು ಮಾಹಿತಿ ನೀಡಿದರು. ”2014ರಲ್ಲಿ ದೇಶದ ಸಾಲ 55 ಲಕ್ಷ ಕೋಟಿ ರೂಪಾಯಿ ಇತ್ತು ಆದರೆ, ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶದ ಸಾಲ ಮೂರು ಪಟ್ಟು ಹೆಚ್ಚಾಗಿದೆ. ಸದ್ಯ ದೇಶದ ಸಾಲ 155 ಲಕ್ಷ ಕೋಟಿ ರೂಪಾಯಿ ಇದೆ. ಒಂಬತ್ತು ವರ್ಷದಲ್ಲಿಯೇ 100 ಲಕ್ಷ ಕೋಟಿ ರೂಪಾಯಿ ಸಾಲ ಮಾಡಲಾಗಿದೆ” ಎಂದು ಅಂಕಿ ಅಂಶಗಳ ಸಮೇತ ಕುಟುಕಿದರು.
“ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ಸರ್ಕಾರವನ್ನು ತೆಗಳುತ್ತಿದ್ದರು ಭ್ರಷ್ಟ ಅಸಮರ್ಥ ಎಂದೆಲ್ಲ ಟೀಕಿಸುತ್ತಿದ್ದರು. ಆದರೆ, ಒಂಬತ್ತು ವರ್ಷದಲ್ಲಿ ದೇಶದ ಸಾಲದ ಪ್ರಮಾಣ ಏರಿಕೆಯಾಗಿದ್ದು ನೋಡಿದರೆ, ಟೀಕೆಗಳು ಮೋದಿ ಅವರಿಗೇ ಹೆಚ್ಚು ಸಮಂಜಸ ಎನಿಸುತ್ತವೆ, ದೇಶದ ಆರ್ಥಿಕತೆ ಹಾಳು ಮಾಡಿದ್ದು, ನಿರುದ್ಯೋಗ ಪ್ರಮಾಣ ಗಣನೀಯವಾಗಿ ವರಿಕೆಯಾಗಿದ್ದು ಹಣದುಬ್ಬರ ಹೆಚ್ಚಳ ಸೇರಿ ಹಲವು ದಿಸೆಯಲ್ಲಿ ದೇಶವನ್ನು ಮೋದಿ ಸರ್ಕಾರ ಹಾಳುಮಾಡಿದೆ. ಎಲ್ಲ ನಕಾರಾತ್ಮಕ ಏರಿಕೆಗಳು ಎಚ್ಚರಿಕೆಯ ಗಂಟೆಗಳಾಗಿವೆ” ಎಂದು ಹೇಳಿದರು.
”ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕದ 67 ವರ್ಷದಲ್ಲಿ 14 ಪ್ರಧಾನಿಗಳು 55 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದರು. ಆದರೆ, ಮೋದಿ ಅವರೊಬ್ಬರೇ.100 ಕೋಟಿ ರೂಪಾಯಿ ಸಾಲ ಮಾಡಿರುವುದು ಅಪಾಯಕಾರಿ ಸಂಗತಿಯಾಗಿದೆ. ಸದ್ಯದ ಆರ್ಥಿಕ ಬೆಳವಣಿಗೆಯ ಕುರಿತ ಮಾಹಿತಿಯು ಹೆಡ್ಲೈನ್ ಮ್ಯಾನೇಜ್ಮೆಂಟ್ ರೀತಿಯೇ ಆಗಿದೆ ಇದರಿಂದ ದೇಶದ ವಿತ್ತೀಯ ಸ್ಥಿತಿ ಸುಧಾರಣೆಯಾಗುವುದಿಲ್ಲ” ಎಂದು ತಿಳಿಸಿದರು.
”ಆರ್ಥಿಕ ನಿರ್ವಹಣೆಯು ಮುಖ್ಯಾಂಶ ನಿರ್ವಹಣೆಯಂತೆ ಅಲ್ಲ” ಎಂದು ಶ್ರೀನೇಟ್ ಹೇಳಿದರು. ”ಇದನ್ನು ಟೆಲಿಪ್ರಾಂಪ್ಟರ್ಗಳ ಮೂಲಕ ಮಾಡಲು ಸಾಧ್ಯವಿಲ್ಲ ಮತ್ತು ಖಂಡಿತವಾಗಿಯೂ ವಾಟ್ಸಾಪ್ ಫಾರ್ವರ್ಡ್ಗಳ ಮೂಲಕ ಅಲ್ಲ. ನಾವು ಭಾರತೀಯ ಆರ್ಥಿಕತೆಯ ಬಗ್ಗೆ ಶ್ವೇತಪತ್ರವನ್ನು ಕೋರುತ್ತೇವೆ ಏಕೆಂದರೆ ದೋಷಗಳ ಪಟ್ಟಿ ದೊಡ್ಡದಿದೆ” ಎಂದರು.
”ದೇಶದ ಸಂಪತ್ತಿನ 3% ಅನ್ನು ಹೊಂದಿರುವ 50% ಭಾರತೀಯರು ಸರಕು ಮತ್ತು ಸೇವಾ ತೆರಿಗೆಯ 64% ಅನ್ನು ಪಾವತಿಸಿದರೆ, ದೇಶದ 80% ಸಂಪನ್ಮೂಲಗಳನ್ನು ಹೊಂದಿರುವ 10% ಶ್ರೀಮಂತರು ಅದರಲ್ಲಿ 3% ಮಾತ್ರ ಪಾವತಿಸಿದ್ದಾರೆ” ಎಂದು ಕಾಂಗ್ರೆಸ್ ವಕ್ತಾರರು ಆರೋಪಿಸಿದ್ದಾರೆ.
ದೇಶದ ಜನಸಂಖ್ಯೆಯ ಕೆಳಭಾಗದ 50% ಜನರು ಅಗ್ರ 10% ಕ್ಕೆ ಹೋಲಿಸಿದರೆ ಆದಾಯದ ಶೇಕಡಾವಾರು ಪ್ರಮಾಣದಲ್ಲಿ ಆರು ಪಟ್ಟು ಹೆಚ್ಚು ಪರೋಕ್ಷ ತೆರಿಗೆಯನ್ನು ಪಾವತಿಸುತ್ತಾರೆ ಎಂದು ವರದಿ ಹೇಳಿದೆ. ಆಹಾರ ಮತ್ತು ಆಹಾರೇತರ ವಸ್ತುಗಳಿಂದ ಸಂಗ್ರಹಿಸಲಾದ ಒಟ್ಟು ತೆರಿಗೆಗಳಲ್ಲಿ, 64.3% ಜನಸಂಖ್ಯೆಯ ಕೆಳಭಾಗದ 50% ರಿಂದ ಭರಿಸಲಾಗಿದೆ.
ಇದನ್ನೂ ಓದಿ: ಒರಿಸ್ಸಾ ರೈಲು ದುರಂತಕ್ಕೆ ಮೋದಿ ಸರ್ಕಾರ ಹೊಣೆಯಲ್ಲವೇ?
“ಈ ಹೆಚ್ಚುತ್ತಿರುವ ಸಾಲವನ್ನು ಪಾವತಿಸಲು ಭಾರತವು ವಾರ್ಷಿಕ 11 ಲಕ್ಷ ಕೋಟಿ ರೂಪಾಯಿಗಳ ಬಡ್ಡಿ ಪಾವತಿಯನ್ನು ಭರಿಸುತ್ತಿದೆ” ಎಂದು ಶ್ರೀನೇಟ್ ಶನಿವಾರ ಹೇಳಿದರು.
”ಸಿಎಜಿ [ಕಂಟ್ರೋಲರ್ ಮತ್ತು ಆಡಿಟರ್ ಜನರಲ್] ವರದಿಯ ಪ್ರಕಾರ, 2020ರಲ್ಲಿ ನಮ್ಮ ಸಾಲದ ಸ್ಥಿರತೆ ಋಣಾತ್ಮಕವಾಗಿದೆ ಮತ್ತು ನಂತರ ಜಿಡಿಪಿಗೆ ಸಾಲವು ಕೇವಲ 52.5% ರಷ್ಟಿತ್ತು, ಈಗ ಅದು 84% ರಷ್ಟಿದೆ” ಎಂದು ಅಂಕಿಅಂಶಗಳನ್ನು ನೀಡಿದರು.
ಭಾರತವು ಪ್ರತಿ ವರ್ಷ ತನ್ನ ಒಟ್ಟು ಆಂತರಿಕ ಉತ್ಪನ್ನದ 15% ರಷ್ಟು ಸಾಲವನ್ನು ಪಡೆಯಬೇಕಾಗಿರುವುದು ಗಮನಾರ್ಹವಾಗಿದೆ ಎಂದು IMF ಹೇಳಿತ್ತು. ಸರ್ಕಾರ ಸಾಲವನ್ನು ಹೇಗೆ ಬಳಸಿಕೊಳ್ಳುತ್ತಿದೆ ಎಂದು ಶನಿವಾರ ಕಾಂಗ್ರೆಸ್ ಪ್ರಶ್ನೆ ಎತ್ತಿತ್ತು.
”ಬಡವರು ಅಥವಾ ಮಧ್ಯಮ ವರ್ಗದವರು ಈ ಸಾಲದಿಂದ ಯಾವುದೇ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆಯೇ” ಎಂದು ಶ್ರೀನೇಟ್ ಕೇಳಿದರು. ಈ ಸಾಲದ ಲಾಭವನ್ನು ಕೈಗಾರಿಕೋದ್ಯಮಿಗಳು ಮಾತ್ರ ಪಡೆಯುತ್ತಿದ್ದಾರೆ. ಸಾಲದ ಹೊರತಾಗಿಯೂ 23 ಕೋಟಿ ಜನರು ಬಡತನ ರೇಖೆಗಿಂತ ಕೆಳಗಿರುವ ವರ್ಗಕ್ಕೆ ಪ್ರವೇಶಿಸಿದ್ದಾರೆ, 83% ಜನರ ಆದಾಯ ಕಡಿಮೆಯಾಗಿದೆ, 11 ಸಾವಿರಕ್ಕೂ ಹೆಚ್ಚು ಸಣ್ಣ-ಮಧ್ಯಮ ಕೈಗಾರಿಕೆಗಳು ಮುಚ್ಚಲ್ಪಟ್ಟವು, ಆದರೆ ಕೋಟ್ಯಾಧಿಪತಿಗಳ ಸಂಖ್ಯೆ ಹೆಚ್ಚಾಗಿದೆ. ಮೋದಿಯವರ ಆಪ್ತರು ಮಾತ್ರ ಈ ಸಾಲದ ಪ್ರತಿಫಲವನ್ನು ಪಡೆಯುತ್ತಿದ್ದಾರೆ” ಎಂದು ಹೇಳಿದರು.
ಆಕ್ಸ್ಫ್ಯಾಮ್ ವರದಿಯ ಪ್ರಕಾರ, ಭಾರತದಲ್ಲಿ ಒಟ್ಟು ಬಿಲಿಯನೇರ್ಗಳ ಸಂಖ್ಯೆ 2020 ಲ್ಲಿ 102 ರಿಂದ 2021 ರಲ್ಲಿ 142 ಮತ್ತು 2022 ರಲ್ಲಿ 166ಕ್ಕೆ ಏರಿದೆ.