ಎಲ್ಲಾ ಧರ್ಮ ಮತ್ತು ಜಾತಿಗಳ ಜನರನ್ನು ಒಟ್ಟಿಗೆ ಕರೆದುಕೊಂಡು ಹೋಗದೆ ಭಾರತದ ಆರ್ಥಿಕತೆಯು ನಡೆಯಲು ಸಾಧ್ಯವಿಲ್ಲ. ಲೋಕಸಭೆಯಲ್ಲಿ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಪ್ರತಿಯೊಬ್ಬ ಭಾರತೀಯರ ಧ್ವನಿ ಕೇಳುವವರೆಗೆ ನಿರುದ್ಯೋಗ ಮತ್ತು ಆರ್ಥಿಕ ಸ್ಥಿತಿಯ ಬಗ್ಗೆ ಏನೂ ಮಾಡಲಾಗುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಛತ್ತೀಸ್ಘಡದ ರಾಯಪುರದಲ್ಲಿ ನಡೆದ ರಾಷ್ಟ್ರೀಯ ಬುಡಕಟ್ಟು ನೃತ್ಯ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು “ಈ ಅನನ್ಯ ಉತ್ಸವವು ನಮ್ಮ ಶ್ರೀಮಂತ ಬುಡಕಟ್ಟು ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸುವ ಮತ್ತು ರಕ್ಷಿಸುವ ಪ್ರಮುಖ ಹೆಜ್ಜೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ರೈತರ ಸಮಸ್ಯೆ, ಆತ್ಮಹತ್ಯೆ, ನಿರುದ್ಯೋಗದಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಬೇಕಾಗಿದೆ. ಹಾಗಾಗಿ ಈ ಎಲ್ಲಾ ವಿಚಾರಗಳು ವಿಧಾನಸಭೆ, ಲೋಕಸಭೆಯಲ್ಲಿ ಚರ್ಚೆಯಾಗಬೇಕು. ಎಲ್ಲಾ ಧರ್ಮ, ಎಲ್ಲಾ ಜಾತಿ, ಆದಿವಾಸಿ ದಲಿತರನ್ನು ಒಳಗೊಳ್ಳದಿದ್ದರೆ ಭಾರತದ ಆರ್ಥಿಕತೆ ನಡೆಯುವುದಿಲ್ಲ. ದೇಶದ ಪ್ರತಿಯೊಬ್ಬರ ದನಿಯೂ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಕೇಳಿಸಬೇಕು. ಇಲ್ಲದಿದ್ದರೆ ದೇಶ ಮುನ್ನಡೆಯುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನೋಟು ರದ್ಧತಿ ಮತ್ತು ದೋಷಪೂರಿತ ಜಿಎಸ್ಟಿಯಿಂದ ದೇಶ ನರಳುವಂತಾಗಿದೆ. ಇಂತಹ ಸಂದರ್ಭದಲ್ಲಿ ಮೋದಿಯವರು ಜನರ ಮಾತು ಕೇಳಬೇಕಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.