ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು (ಮಾ.14) ವೀಲ್ ಚೇರ್ ಮೂಲಕವೇ ಚುನಾವಣಾ ಪ್ರಚಾರ ಆರಂಭಿಸಿದ್ದು, “ನಾನು ಎಂದಿಗೂ ತಲೆ ಬಾಗುವುದಿಲ್ಲ. ನೆನಪಿರಲಿ ಗಾಯಗೊಂಡ ಹುಲಿ ಹೆಚ್ಚು ಅಪಾಯಕಾರಿ” ಎಂದು ಹೇಳಿದ್ದಾರೆ.
ನಂದಿಗ್ರಾಮದಲ್ಲಿ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿದ ನಂತರ ಮಮತಾ ಬ್ಯಾನರ್ಜಿ ಮೊದಲಬಾರಿಗೆ ಸಮಾವೇಶವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವಾಗಲೇ ಹೇಳಿಕೆ ನೀಡಿದ್ದ ಮಮತಾ ಬ್ಯಾನರ್ಜಿ, ಬೆಂಬಲಿಗರಲ್ಲಿ ಶಾಂತಿ ಕಾಪಾಡುವಂತೆ ಕರೆ ನೀಡಿದ್ದರು. ಅಲ್ಲದೆ ಒಂದೆರಡು ದಿನಗಳಲ್ಲಿ ಪ್ರಚಾರಕ್ಕೆ ಹಿಂತಿರುಗಲಿದ್ದು, ಅಗತ್ಯವಿದ್ದರೆ ವೀಲ್ ಚೇರ್ ಬಳಕೆ ಮಾಡುವುದಾಗಿ ಘೋಷಿಸಿದ್ದರು.
ಇಂದು (ಮಾ.14) ಗಾಂಧಿ ಮೂರ್ತಿಯಿಂದ ಹಜ್ರಾಕ್ಕೆ ವೀಲ್ ಚೇರ್ನಲ್ಲಿಯೇ ರೋಡ್ ಶೋ ನಡೆಸಿದ ಅವರು ನಂತರ ಮಧ್ಯಾಹ್ನ ಹಜ್ರಾದಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.
“ನಾವು ಧೈರ್ಯದಿಂದ ಹೋರಾಡುತ್ತೇವೆ! ನಾನು ಇನ್ನೂ ಸಾಕಷ್ಟು ನೋವಿನಲ್ಲಿದ್ದೇನೆ. ಆದರೆ ನನ್ನ ಜನರ ನೋವು ನನಗಿಂತಲೂ ದೊಡ್ಡದು ಎಂದು ಭಾವಿಸುತ್ತೇನೆ. ನಮ್ಮ ಪುಣ್ಯ ಭೂಮಿಯನ್ನು ರಕ್ಷಿಸುವ ಈ ಹೋರಾಟದಲ್ಲಿ, ನಾವು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದೇವೆ. ಹೆಚ್ಚು ತೊಂದರೆಗಳನ್ನು ಅನುಭವಿಸಿದ್ದೇವೆ. ಆದರೆ ನಾವು ಎಂದಿಗೂ ಹೇಡಿಯಂತೆ ತಲೆಬಾಗುವುದಿಲ್ಲ!” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆಂಧ್ರ ಪ್ರದೇಶ ಸ್ಥಳೀಯ ಸಂಸ್ಥೆಗಳ ಚುನಾವಣೆ: ಜಗನ್ ಪಕ್ಷಕ್ಕೆ ಭಾರೀ ಮುನ್ನಡೆ
We will continue to fight boldly!
I'm still in a lot of pain, but I feel the pain of my people even more.
In this fight to protect our revered land, we have suffered a lot and will suffer more but we will NEVER bow down to COWARDICE!
— Mamata Banerjee (@MamataOfficial) March 14, 2021
ಈ ವಾರದ ಆರಂಭದಲ್ಲಿ ಗಾಯಗೊಂಡಿದ್ದ ಮಮತಾ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿಕಿತ್ಸೆಯ ಬಳಿಕ ಮಾರ್ಚ್ 12 ರಂದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.
ಪ್ರಾಥಮಿಕ ವೈದ್ಯಕೀಯ ಪರೀಕ್ಷೆಗಳ ಪ್ರಕಾರ, ಅವರ ಎಡ ಪಾದದ ಮೂಳೆಗೆ ತೀವ್ರವಾದ ಗಾಯಗಳಾಗಿದ್ದು, ಬಲ ಭುಜ, ಮುಂದೋಳು ಮತ್ತು ಕುತ್ತಿಗೆಗೂ ಗಾಯಗಳಾಗಿದೆ ಎಂದು ಸರ್ಕಾರಿ ಎಸ್ಎಸ್ಕೆಎಂ ಆಸ್ಪತ್ರೆಯ ಹಿರಿಯ ವೈದ್ಯರು ತಿಳಿಸಿದ್ದಾರೆಂದು ಪಿಟಿಐ ವರದಿ ಮಾಡಿತ್ತು.
ಮುಂಬರುವ ವಿಧಾನಸಭಾ ಚುನಾವಣೆಗೆ ನಂದಿಗ್ರಾಮದಲ್ಲಿ ಮಾರ್ಚ್ 10ರಂದು ನಾಮಪತ್ರ ಸಲ್ಲಿಸಿದ ಕೆಲವೇ ಗಂಟೆಗಳ ಅಂತರದಲ್ಲಿ ಅವರ ಮೇಲೆ ದಾಳಿ ಸಂಭವಿಸಿದೆ ಎನ್ನಲಾಗಿದೆ. ಕೆಲವು ಅಪರಿಚಿತ ಜನರು ಮಮತಾ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಆದರೆ ಚುನಾವಣಾ ವೀಕ್ಷಕರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ವರದಿಯಲ್ಲಿ, “ಮಮತಾ ಬ್ಯಾನರ್ಜಿ ಅವರ ಗಾಯಕ್ಕೆ ನಂದಿಗ್ರಾಮದಲ್ಲಿ ನಡೆದಿರುವ ಘಟನೆ ಕಾರಣವಲ್ಲ. ಅದು ಆಕಸ್ಮಿಕವಾಗಿದ್ದು, ಇದೊಂದು ಯೋಜಿತ ದಾಳಿಯಾಗಿರಲಿಲ್ಲ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕುಂಭಮೇಳಕ್ಕೆ ಬರುವ ಭಕ್ತಾದಿಗಳಿಗೆ ಕೊರೊನಾ ನೆಗೆಟಿವ್ ವರದಿ ಅಗತ್ಯವಿಲ್ಲ: ಉತ್ತರಾಖಂಡ್ ಸಿಎಂ
ವಿಶೇಷ ವೀಕ್ಷಕ ಅಜಯ್ ನಾಯಕ್, ರಾಜ್ಯ ಚುನಾವಣೆಗಾಗಿ ಪಶ್ಚಿಮಬಂಗಾಳದ ವಿಶೇಷ ಪೊಲೀಸ್ ವೀಕ್ಷಕರಾಗಿರುವ ವಿವೇಕ್ ದುಬೆ ವರದಿ ಸಿದ್ಧಪಡಿಸಿದ್ದರು ಎಂದು ಸಿಇಒ ಕಚೇರಿಯ ಮೂಲಗಳು ತಿಳಿಸಿವೆ.
ಆಕಸ್ಮಿಕ ಘಟನೆಯಿಂದಾಗಿ ಮಮತಾ ಅವರು ಗಾಯಗೊಂಡಿದ್ದಾರೆ. ಘಟನೆಯು ಯೋಜಿತ ದಾಳಿಯಾಗಿರಲಿಲ್ಲ. ಇದು ಆಕಸ್ಮಿಕವಾಗಿ ನಡೆದಿದೆ ಎಂದು ವರದಿಯನ್ನು ಉಲ್ಲೇಖಿಸಿ ಮೂಲಗಳು ತಿಳಿಸಿವೆ. ಘಟನೆಯ ಸಮಯದಲ್ಲಿ ಹಾಜರಿದ್ದ ಪ್ರತ್ಯಕ್ಷ ಸಾಕ್ಷಿಗಳು ಒದಗಿಸಿದ ವಿವರಗಳು ಹಾಗೂ ಅವರಿಂದ ಸಂಗ್ರಹಿಸಿದ ವೀಡಿಯೊವನ್ನು ವರದಿಯು ಗಣನೆಗೆ ತೆಗೆದುಕೊಂಡಿದೆ.
ಸ್ಥಳೀಯ ಪೊಲೀಸರು ಹಾಗೂ ಸಿಎಂ ಭದ್ರತಾ ಸಿಬ್ಬಂದಿ ಜನಸಂದಣಿಯನ್ನು ನಿಯಂತ್ರಿಸಲು ವಿಫಲವಾಗಿದ್ದರು. ಇದು ಅನಪೇಕ್ಷಿತ ಪರಿಸ್ಥಿತಿಗೆ ಕಾರಣವಾಯಿತು ಎಂದು ಮೂಲಗಳು ವರದಿಯನ್ನು ಉಲ್ಲೇಖಿಸಿ ತಿಳಿಸಿವೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲಿನ ದಾಳಿಯು ಟಿಎಂಸಿ ಹಾಗೂ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ನಡುವೆ ಜಟಾಪಟಿಗೆ ಕಾರಣವಾಗಿತ್ತು.
ಇದನ್ನೂ ಓದಿ: ಬಿಜೆಪಿ ಆಡಳಿತದಲ್ಲಿ ಸದ್ದು ಮಾಡುವುದು ಎರಡೇ; ಒಂದು ಲಂಚ, ಮತ್ತೊಂದು ಮಂಚ – ಕಾಂಗ್ರೆಸ್…