ರಾಜ್ಯ ಬಿಜೆಪಿ ಸರ್ಕಾರ ಎಂದಿನಂತ ಚುನಾವಣೆಯ ಹೊಸ್ತಿಲಲ್ಲಿ ಒಳಮೀಸಲಾತಿ ವರ್ಗೀಕರಣ ಮಾಡಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವುದಾಗಿ ಹೇಳಿದೆ. ಆದರೆ ಒಳಮೀಸಲಾತಿ ಜಾರಿ ಎಂದೇ ಸುಳ್ಳು ಪ್ರಚಾರ ಮಾಡುತ್ತಿದೆ. ಇದರ ಹಿನ್ನೆಲೆಯಲ್ಲಿ ದಲಿತ ಬಾಂಧವರು ಕುಣಿದು ಕುಪ್ಪಳಿಸಿದ್ದಾರೆ. ಸಂತೋಷ. ಆದರೆ ಈ ಒಳಮೀಸಲಾತಿ ಶಿಫಾರಸ್ಸು ಜಾರಿಯಾಗುವುದೇ ಅಥವಾ ಕೇವಲ ಬಿಜೆಪಿ ಗಿಮಿಕ್ ಮಾತ್ರವೇ ಎಂಬುದನ್ನು ತಿಳಿಯಬೇಕಿದೆ.
1. ಒಳಮೀಸಲಾತಿ ವರ್ಗೀಕರಣ ಶಿಫಾರಸ್ಸು ಮಾದಿಗ ಸಮುದಾಯ ನಡೆಸಿದ 30 ವರ್ಷಗಳ ಹೋರಾಟದ ಪ್ರತಿಫಲವೇ ಹೊರತು ಯಾವುದೋ ಒಂದು ಸರ್ಕಾರದ ಸಾಧನೆಯಲ್ಲ.
2. ಜಸ್ಟೀಸ್ ಸದಾಶಿವ ಆಯೋಗ ಮಾಡಿದ ವರ್ಗೀಕರಣವು ಶೇ. 15 ರ ಮೀಸಲಾತಿಯನ್ನು ಆಧರಿಸಿತ್ತು. ಹಲವು ವರ್ಷಗಳ ಕಾಲ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಮಾಡಿ ಎಡಗೈ ಸಂಬಂಧಿತ ಜಾತಿಗಳಿಗೆ 6%, ಬಲಗೈ ಸಂಬಂಧಿತ ಜಾತಿಗಳಿಗೆ 5%, ಸ್ಪೃಶ್ಯ ಜಾತಿಗಳಿಗೆ 3%, ಇತರೆ ಪರಿಶಿಷ್ಟರಿಗೆ 1% ಮೀಸಲಾತಿ ನಿಗಧಿಗೊಳಿಸಿತ್ತು. ಈಗ ಬಿಜೆಪಿ ಸರ್ಕಾರ ಪರಿಶಿಷ್ಟರಿಗೆ ಹೆಚ್ಚಳಗೊಳಿಸಬೇಕೆಂದಿರುವ 17% ಮೀಸಲಾತಿಯಲ್ಲಿ ಮೇಲಿನಂತೆ ಕ್ರಮವಾಗಿ 6%, 5.5%, 4.5% ಮತ್ತು 1% ವರ್ಗೀಕರಿಸಿ ಆದೇಶಿಸಿದೆ. ಇದಕ್ಕೆಯಾವುದೇ ಸಮೀಕ್ಷೆಗಳು ಆಗಿಲ್ಲ. ಅದಕ್ಕೆ ಪುರಾವೆಗಳನ್ನೂ ಸಹ ಸರ್ಕಾರ ನೀಡಿಲ್ಲ. ಯಾವ ಆಧಾರದಲ್ಲಿ ಸ್ಪೃಶ್ಯ ಜಾತಿಗಳಿಗೆ ಹೆಚ್ಚುವರಿಯಾಗಿ 1.5% ನೀಡಿತೋ ತಿಳಿಯದಾಗಿದೆ. ಈ ಅನ್ಯಾಯವನ್ನು ಮುಚ್ಚಿಡಲು ಹೊಲೆಯರ ಮೂಗಿಗೆ 0.5% ಹೆಚ್ಚುವರಿ ತುಪ್ಪ ಸವರಿದೆ. ಹೆಚ್ಚಳ ಮಾಡುತ್ತೇವೆ ಎಂದಿರುವ 17% ನಲ್ಲಿ ಮಾದಿಗರಿಗೆ ಬಹುದೊಡ್ಡ ಅನ್ಯಾಯವಾಗಿದೆ.
3. ಆಯ್ತು, ಈಗಾಗಿರುವ ವರ್ಗೀಕರಣವನ್ನೇ ಒಪ್ಪಿಕೊಂಡರೂ ಅದು ಜಾರಿಯಾಗುತ್ತದೆಯೇ? ನೋಡೋಣ ಬನ್ನಿ. ಪರಿಶಿಷ್ಟರ ಮೀಸಲಾತಿಯನ್ನು 15% ನಿಂದ 17% ಗೆ ಹೆಚ್ಚಿಸಬೇಕೆಂದು ಆದೇಶ ಮಾಡಿರುವ ಬಿಜೆಪಿ ಸರ್ಕಾರದ ನಡೆ ಸಂಪೂರ್ಣ ವಂಚನೆಯಿಂದ ಕೂಡಿದೆ. ಪರಿಶಿಷ್ಟರಿಗೆ 17% ಗೆ ಮೀಸಲಾತಿ ಹೆಚ್ಚಳವಾದರೆ ಅದು ಸುಪ್ರೀಂ ಕೋರ್ಟ್ ವಿಧಿಸಿರುವ 50% ಮಿತಿ ದಾಟುತ್ತದೆ. ಹಾಗಾಗಿ 17% ಊರ್ಜಿತವಾಗಬೇಕೆಂದರೆ ದೆಹಲಿಯ ಸಂಸತ್ತಿನಲ್ಲಿ ಸಂವಿಧಾನದ 9 ನೇ ಶೆಡ್ಯೂಲಿಗೆ ಕಾಯ್ದೆ ಮಾಡಿ ಸೇರಿಸಬೇಕಿದೆ. ತಮಿಳುನಾಡು ಹೀಗೇ ಜಾರಿ ಮಾಡಿಕೊಂಡದ್ದು. ಮಹಾವಂಚನೆ ಏನೆಂದರೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಈ ಪ್ರಸ್ತಾವವನ್ನೇ ಕಳಿಸಿಲ್ಲ. ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿ ಪರಿಶಿಷ್ಟರ ಮೀಸಲಾತಿ ಹೆಚ್ಚಳದ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದೆ ಇಲ್ಲವೆಂದು ಹೇಳಿದ್ದಾರೆ. ಅಲ್ಲಿಗೆ 17% ಕತೆ ಮುಗಿಯಿತು. 17% ಗೇ ಮೀಸಲಾತಿ ಹೆಚ್ಚಳವಾಗಲ್ಲ ಎಂದರೆ 17% ವರ್ಗೀಕರಣ ಮಾಡಿರುವ ಒಳಮೀಸಲಾತಿ ಹೇಗೆ ಜಾರಿಯಾಗುತ್ತದೆ? ಸಾಧ್ಯವಿಲ್ಲ.
4. ಒಳಮೀಸಲಾತಿ ಜಾರಿ ಮಾಡಲು ರಾಜ್ಯ ಸರ್ಕಾರದ ಕೈಯಲ್ಲಿಲ್ಲವೇ? ಹೌದು ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸುವುದು ಅಸಾಧ್ಯ. ಹಿಂದೆ ಪಂಬಾಬ್ ನ ಧರ್ವಿಂದರ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ 5 ಜನ ನ್ಯಾಯಾಧೀಶರ ಪೀಠ ಒಳಮೀಸಲಾತಿ ಜಾರಿಗೊಳಿಸುವ ಹಕ್ಕು ರಾಜ್ಯಗಳಿಗಿಲ್ಲ ಎಂದಿತ್ತು. ಆದರೆ 2020 ರಲ್ಲಿ ಅರುಣ್ ಮಿಶ್ರಾ ಅವರನ್ನು ಒಳಗೊಂಡ 5 ಜನ ನ್ಯಾಯಾಧೀಶರ ಪೀಠವು ಒಳಮೀಸಲಾತಿ ಜಾರಿಗೊಳಿಸುವ ಹಕ್ಕು ರಾಜ್ಯಕ್ಕಿದೆ ಎಂದು ತೀರ್ಪು ನೀಡಿದೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ 5 ಜನ ನ್ಯಾಯಾಧೀಶರು ನೀಡಿದ ತೀರ್ಪನ್ನು ಮತ್ತೊಂದು 5 ಜನ ನ್ಯಾಯಾಧೀಶರ ಪೀಠವು ಅನೂರ್ಜಿತಗೊಳಿಸಲಾರದು. ಹಾಗಾಗಿ 7 ಜನ ನ್ಯಾಯಾಧೀಶರ ಪೀಠದ ಮುಂದೆ ಈ ವಿಷಯ ಹೋಗಬೇಕು. ದುರಂತವೆಂದರೆ ಮೂರು ವರ್ಷವಾದರೂ 7 ಜನ ನ್ಯಾಯಾಧೀಶರ ಪೀಠವನ್ನು ರಚಿಸಿಲ್ಲ.
5. ಹಾಗಾದರೆ ಒಳಮೀಸಲಾತಿ ಜಾರಿ ಅಸಾಧ್ಯವೇ? ಇಲ್ಲ ಸಾಧ್ಯವಾಗುತ್ತದೆ. 2008 ರಲ್ಲಿ ಉಷಾ ಮೆಹ್ರಾ ಸಮಿತಿಯು ಸಂವಿಧಾನ ವಿಧಿ 341 ಕ್ಕೆ 3 ನೇ ತಿದ್ದುಪಡಿ ತರುವ ಮೂಲಕ ಒಳಮೀಸಲಾತಿಯನ್ನು ಜಾರಿಗೆ ತರಬಹುದಾಗಿದೆ ಎಂದು ವರದಿ ನೀಡಿದೆ. EWS ಮಾದರಿಯಲ್ಲಿ ಮೂರೇ ದಿನದಲ್ಲಿ ಈ ಕೆಲಸವನ್ನು ಮೋದಿ ಸರ್ಕಾರ ಮಾಡಬಹುದು. ಆದರೆ ಪ್ರತಿಯೊಂದಕ್ಕೂ ಚುನಾವಣೆಯ ಗಿಮಿಕ್ ಮಾಡುವ ಮೋದಿ ಸರ್ಕಾರ ಇದನ್ನು 2024 ರ ಲೋಕಸಭಾ ಚುನಾವಣೆಯವರೆಗೆ ತಳ್ಳುತ್ತ ಬ್ಲಾಕ್ಮೇಲ್ ಮಾಡುತ್ತದೆ. 2024 ಕ್ಕೆ ಮೋದಿ ಸರ್ಕಾರ ಬಂದರೆ ಅಂಬೇಡ್ಕರ್ ಸಂವಿಧಾನವನ್ನೇ ಬದಲಾಯಿಸುವುದು ಖಚಿತ. ಆಗ ಒಳಮೀಸಲಾತಿ ಮಾತ್ರವಲ್ಲ ಮೀಸಲಾತಿಯೇ ಇರುವುದಿಲ್ಲ.
ಒಟ್ಟಾರೆ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಒಳಮೀಸಲಾತಿ ಹೋರಾಟಗಾರರಿಗೆ ಅದರಲ್ಲೂ ಮಾದಿಗ ಸಂಬಂಧಿ ಜಾತಿಗಳ ಮೂರು ದಶಕದ ಹೋರಾಟಕ್ಕೆ ಮೋಸ ಮಾಡಿದೆ. ಚುನಾವಣಾ ಹೊಸ್ತಿಲಲ್ಲಿ ಓಟಿನ ಮೇಲೆ ಕಣ್ಣಿಟ್ಟು ಒಳಮೀಸಲಾತಿ ಹೋರಾಟಗಾರರನ್ನು ಕಣ್ಕಟ್ಟಿನ ಮೂಲಕ ವಂಚಿಸಲು ಹವಣಿಸಿದೆ. 2023 ರ ವಿಧಾನಸಭೆ ಚುನಾವಣೆ ಮತ್ತು 2024 ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬ್ಲಾಕ್ಮೇಲ್ ತಂತ್ರಕ್ಕೆ ಕೈ ಹಾಕಿದೆ. ದಲಿತರೇ ಎಚ್ಚರ. ಸುಳ್ಳು ಹೇಳುವುದು ಹಾಗೂ ಬರಿಗೈ ಮ್ಯಾಜಿಕ್ ಮಾಡುವುದೇ ಬಿಜೆಪಿಯ ಚಾಣಕ್ಯ ತಂತ್ರ.
– ಸಾಕ್ಯ ಸಮಗಾರ
ಇದನ್ನೂ ಓದಿ; ಒಳಮೀಸಲಾತಿ: ಮಾದಿಗ ಸಮುದಾಯಕ್ಕೆ ಮತ್ತೆ ಮೋಸ