2008ರಲ್ಲಿ ಮಾಲೆಗಾಂವ್ ನಲ್ಲಿ ನಡೆದ ಬಾಂಬ್ ಸ್ಫೋಟದ ಸಂಚಿನ ಭಾಗವೆಂದು, ಭಯೋತ್ಪಾದಕ ಕೃತ್ಯದ ಆರೋಪ ಹೊತ್ತಿರುವ ಪ್ರಗ್ಯಾ ಸಿಂಗ್ ಠಾಕೂರ್ ಹೇಳಿಕೆಯನ್ನು ಐಪಿಎಸ್ ಅಧಿಕಾರಿಗಳ ಸಂಘ ತೀವ್ರವಾಗಿ ಖಂಡಿಸಿದೆ. ಸದರಿ ಪ್ರಗ್ಯಾಸಿಂಗ್ ಅನಾರೋಗ್ಯದ ನಿಮಿತ್ತ ಜಾಮೀನಿನ ಮೇಲೆ ಹೊರಬಿದ್ದಿರುವ ಆರೋಪಿ ಅಷ್ಟೇ ಆಗಿದ್ದರೆ, ಅದಕ್ಕೆ ಮಹತ್ವವಿರುತ್ತಿರಲಿಲ್ಲ. ಆದರೆ, ಆಕೆಯನ್ನು ಬಿಜೆಪಿಯು ಭೋಪಾಲ್ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿಸಿದೆ.
ತನ್ನನ್ನು ಬಂಧಿಸಿದ ಮುಂಬೈನ ಭಯೋತ್ಪಾದಕ ವಿರೋಧಿ ಪಡೆಯ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆಯ ವಿರುದ್ಧ ಆಕೆ ನಿನ್ನೆ ಹೇಳಿಕೆ ನೀಡಿದ್ದರು. ತನ್ನನ್ನು ಬಂಧಿಸಿದ್ದ ಹೇಮಂತ್ ಕರ್ಕರೆಯವರಿಗೆ ಶಾಪ ನೀಡಿದ್ದೆ, ಹಾಗಾಗಿಯೇ ಅವರನ್ನು ಕೊಲ್ಲಲಾಯಿತು ಎಂಬುದು ಪ್ರಗ್ಯಾ ಹೇಳಿಕೆ. ಇದಕ್ಕೆ ಪ್ರತಿಕ್ರಿಯಿಸಿರುವ ಐಪಿಎಸ್ ಅಧಿಕಾರಿಗಳ ಸಂಘ, ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ‘ಅಶೋಕ ಚಕ್ರ ಪುರಸ್ಕೃತ ಶ್ರೀ ಹೇಮಂತ್ ಕರ್ಕರೆಯವರು ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಅತ್ಯಂತ ದೊಡ್ಡ ತ್ಯಾಗವನ್ನು ಮಾಡಿದ್ದಾರೆ. ಅಭ್ಯರ್ಥಿಯೊಬ್ಬರು ಅವರನ್ನು ನಿಂದಿಸುವ ಹೇಳಿಕೆ ಮಾಡಿರುವುದನ್ನು ಸಮವಸ್ತ್ರಧಾರಿಗಳಾದ ನಾವೆಲ್ಲರೂ ಖಂಡಿಸುತ್ತೇವೆ ಮತ್ತು ಎಲ್ಲಾ ಹುತಾತ್ಮರಿಗೂ ಗೌರವ ಸಲ್ಲಿಸಬೇಕೆಂದು ಒತ್ತಾಯಿಸುತ್ತೇವೆ’ ಎಂದು ಟ್ವೀಟ್ ಮಾಡಿದೆ.
Ashok Chakra awardee late Sri Hemant Karkare, IPS made the supreme sacrifice fighting terrorists. Those of us in uniform condemn the insulting statement made by a candidate and demand that sacrifices of all our martyrs be respected.
— IPS Association (@IPS_Association) April 19, 2019
ಇದಕ್ಕೆ ಪ್ರತಿಕ್ರಿಯಿಸಿರುವ ಸಾರ್ವಜನಿಕರು, ನಿಮಗೆ ಆ ಅಭ್ಯರ್ಥಿಯ ಹೆಸರು ಹೇಳಲು ಭಯವೇಕೆ, ಆಕೆ ಭಯೋತ್ಪಾದಕಿ ಪ್ರಗ್ಯಾ ಸಿಂಗ್ ಠಾಕೂರ್, ಭೋಪಾಲ್.ನಿಂದ ಬಿಜೆಪಿಯ ಅಭ್ಯರ್ಥಿ ಎಂದಿದ್ದಾರೆ.
ಇದನ್ನೂ ಓದಿ: ಬೇಲ್ ಪಡೆದು ಹೊರಗಿರುವ ಪ್ರಗ್ಯಾ ಸಿಂಗ್ ಎಲೆಕ್ಷನ್ ಸ್ಪರ್ಧಿಸಲು ಸಾಧ್ಯವೇ?
ಮಧ್ಯಪ್ರದೇಶದ ಮುಖ್ಯ ಚುನಾವಣಾ ಆಯುಕ್ತರು ಈ ಕುರಿತು ತಾವು ಸ್ವೀಕರಿಸಿದ ದೂರಿನ ಕುರಿತು ತನಿಖೆ ನಡೆಸುತ್ತಿದ್ದಾರೆಂದು ಎಎನ್ಐ ವರದಿ ಮಾಡಿದೆ.